ಆನಂದ್ ಆಸ್ನೋಟಿಕರ್ ಬಸ್ ಉದ್ಘಾಟನೆಯಲ್ಲಿ ದುರ್ಘಟನೆ
ಮಣಿಪಾಲ ಮತ್ತು ಹಾಸನಕ್ಕೆ ನೂತನ ಬಸ್ ಸೇವೆ ಆರಂಭಿಸಲು ಕಾರವಾರದ ಮಾನ್ಯ ಸಚಿವರಾದ ಆನಂದ್ ಆಸ್ನೋಟಿಕರ್ ನಿನ್ನೆ(ಸೋಮವಾರ) ಆಗಮಿಸಿದ್ದರು. ಪೂಜೆ ಮುಗಿದ ನಂತರ ಸೇವೆ ಉದ್ಘಾಟನೆಯ ಸಮಯ. ಸುಮ್ನೆ ರಿಬನ್ ಕಟ್ ಮಾಡೋದು ಓಲ್ಡ್ ಸ್ಟೈಲ್, ನೀವೇ ಸ್ಟಿಯರಿಂಗ್ ಹಿಡಿದು ಸ್ವಲ್ಪ ದೂರ ಬಸ್ ಚಲಾಯಿಸಿ "ಹೊಸ ಸ್ಟೈಲ್" ಮೂಲಕ ಬಸ್ ಸೇವೆ ಉದ್ಘಾಟಿಸುವಂತೆ ಹಿಂಬಾಲಕರು ಸಚಿವರಿಗೆ ಪೂಸಿ ಹೊಡೆದಿದ್ದಾರೆ.
ನನ್ನಲ್ಲಿ ಹೆವಿ ವೆಹಿಕಲ್ ಲೈಸನ್ಸ್ ಇಲ್ಲಪ್ಪ, ನನಗೆ ಇಂತಹ ವಾಹನ ಬಿಟ್ಟು ಅಭ್ಯಾಸನೂ ಇಲ್ಲವೆಂದು ಆಸ್ನೋಟಿಕರ್ ಹೇಳಿದ್ರೂ ಹಿಂಬಾಲಕರು ಕೇಳಿಲ್ಲ. ಹಿಂಬಾಲಕರ ಒತ್ತಾಯಕ್ಕೆ ಮಣಿದು ಕೊನೆಗೂ ಬಸ್ ಹತ್ತಿ ಸ್ಟಿಯರಿಂಗ್ ವೀಲ್ ಮುಂದೆ ಕುಳಿತರು. ಹಿರಿಯ ಕೆಎಸ್ಆರ್ಟಿಸಿ ಅಧಿಕಾರಿಯೊಬ್ಬರು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರು.
ಬಸ್ ಚಾಲನೆ ಮಾಡಿ ವಿನೂತನವಾಗಿ ಉದ್ಘಾಟಿಸುವ ಸಚಿವರಿಗೆ ಬಹುಪರಾಕ್ ಎನ್ನುತ ಹಿಂಬಾಲಕರು ಬಸ್ ಹತ್ತಿದ್ರು. ಸಚಿತ್ರ ವರದಿ ಮಾಡಲು ಮಾಧ್ಯಮ ಮಿತ್ರರು ಬಸ್ ಒಳಗೆ ಪ್ರವೇಶಿಸಿದರು. ಸರಿ ಡ್ರೈವಿಂಗ್ ಗೊತ್ತಿಲ್ಲದ ಆನಂದ್ ಅಸ್ನೋಟಿಕರ್ ಬಸ್ ಸ್ಟಾರ್ಟ್ ಮಾಡಿದ್ರು...
ಹೊಸ ಬಸ್ ಆದ ಕಾರಣ ಹೆಚ್ಚು ಕಿರಿಕ್ ಎನ್ನದೇ ಬಸ್ ಸ್ಟಾರ್ಟ್ ಆಯ್ತು. ಗೇರ್ ಚೇಂಜ್ ಮಾಡಿದಾಗ ಬಸ್ ಒಂದು ಫಸ್ಟ್ ಕ್ಲಾಸ್ ಜರ್ಕ್ ಹೊಡೆದು ಮುಂದಕ್ಕೆ ಸಾಗಿದಾಗ ಒಳಗೆ ಕುಳಿತಿದ್ದವರ ಮನದಲ್ಲಿ ಛಳಕ್ಕೆಂದು ಭಯದ ಸುಳಿಯೊಂದು ಹಾದು ಹೋಯ್ತು. ಸಚಿವರ ಪಕ್ಕದಲ್ಲಿದ್ದ ಡ್ರೈವರ್ ಗೇರ್ ಚೇಂಜ್ ಮಾಡುತ್ತಿದ್ದ.
ಸ್ಟಿಯರಿಂಗ್ ಹಿಡಿದುಕೊಂಡು ಆಕ್ಸಿಲರೇಟರ್ ಮೇಲೆ ಕಾಲಿಟ್ಟಿದ್ದ ಸಚಿವರ ಕಂಟ್ರೋಲ್ ತಪ್ಪಿ ಬಸ್ ವೇಗವಾಗಿ ಗೂಳಿಯಂತೆ ಮುನ್ನುಗಿತ್ತು. ಒಮ್ಮೆಗೆ ವೇಗಗೊಂಡ ಬಸ್ ನೋಡಿ ಪಾದಚಾರಿಗಳು ಎದ್ದೇವೋ ಬಿದ್ದೇವೋ ಎಂಬಂತೆ ಓಡಿದರು. ಆದರೆ ಅಲ್ಲೇ ಯು ಟರ್ನ್ ತೆಗೆದುಕೊಳ್ಳುತ್ತಿದ್ದ ಗೂಡ್ಸ್ ರಿಕ್ಷಾಕ್ಕೆ ಈ ಬಸ್ ಡಿಕ್ಕಿ ಹೊಡೆಯಿತು. ರಿಕ್ಷಾದಿಂದ ಹಾರಿ ಡ್ರೈವರ್ ಜೀವ ಉಳಿಸಿಕೊಂಡ.
ಬಸ್ ನೊಳಗಿದ್ದವರೆಲ್ಲ ಅತ್ತಿತ್ತ ತೂರಾಡುತ್ತ ಜೀವಭಯದಿಂದ ಇರಲು ಡ್ರೈವರ್ ಕಷ್ಟಪಟ್ಟು ಬಸ್ ನಿಲ್ಲಿಸುವಲ್ಲಿ ಕೊನೆಗೂ ಯಶಸ್ವಿಯಾದಾಗ ಎಲ್ಲರಿಗೂ ಹೋದ ಜೀವ ವಾಪಸ್ ಬಂದಿತ್ತು. ರಿಕ್ಷಾ ಚಾಲಕನಿಗೆ ಪರಿಹಾರ ನೀಡುವುದಾಗಿ ಸಚಿವರು ಭರವಸೆ ನೀಡಿದ್ರು.
ರಿಕ್ಷಾ ಚಾಲಕ ಮತ್ತು ಸಚಿವರು ಘಟನೆಯನ್ನು ರಾಜಿಯಲ್ಲಿ ಪರಿಹರಿಸಿದ ಕಾರಣ ಸಚಿವರ ವಿರುದ್ಧ ಯಾವುದೇ ಕೇಸ್ ದಾಖಲಿಸುವುದಿಲ್ಲವೆಂದು ಅಲ್ಲೇ ಇದ್ದ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಆದ್ರೆ ಪರವಾನಿಗೆ ಇಲ್ಲದೇ ಡ್ರೈವಿಂಗ್ ಮಾಡಿರೋ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಪೊಲೀಸ್ ಅಧಿಕಾರಿ ನಿರಾಕರಿಸಿದ್ದಾರೆ. ಜನಸಾಮಾನ್ಯರು ಇಂತಹ ತಪ್ಪು ಮಾಡಿದ್ರೆ ಕಡಿಮೆಯಂದ್ರೂ 20 ಸಾವಿರ ರು. ದಂಡ ಪಾವತಿಸಬೇಕಿತ್ತು.
ಟ್ರಾಫಿಕ್ ಪೊಲೀಸರಿಗೆ ಎಷ್ಟು ದಂಡ ಪಾವತಿಸಬೇಕು?>>>>


Click it and Unblock the Notifications









