ಕೆಂಪು ದೀಪ, ವಿಐಪಿ ಸಾಂಪ್ರದಾಯಕ್ಕೆ ಆಮ್ ಆದ್ಮಿ ಬ್ರೇಕ್
ಇನ್ನು ಮುಂದೆ ರಾಷ್ಟ್ರ ರಾಜಧಾನಿಯಲ್ಲಿ ಕೆಂಪು ದೀಪ ಹಾಗೂ ಸೈರನ್ ಬಾರಿಸುವ ವಾಹನಗಳನ್ನು ನೋಡಸಿಗಲಾರದು. ಹೌದು, ದೆಹಲಿ ರಾಜಕಾರಣದಲ್ಲಿ ರಾಜಕೀಯ ಬದಲಾವಣೆಯ ಗಾಳಿ ಬೀಸಿರುವ ಆಮ್ ಆದ್ಮಿ ಪಕ್ಷದ ನೇತಾರರು ಯಾವುದೇ ಕೆಂಪು ದೀಪದ ವಾಹನಗಳನ್ನು ಬಳಸದಿರಲು ನಿರ್ಧರಿಸಿದ್ದಾರೆ.
ಈ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸಚಿವ ಸಂಪುಟ ಶನಿವಾರದಂದು ಪ್ರಕಟಿಸಿದೆ. ಈಗಾಗಲೇ ಬುಲೆಟ್ ಪ್ರೂಪ್, ಝಡ್ ಪ್ಲಸ್ ಸೇರಿದಂತೆ ಬೆಂಗಾವಾಲು ವಾಹನ ಪಡೆಗೆ ಬ್ರೇಕ್ ಹಾಕಿರುವ ಕೇಜ್ರಿವಾಲ್ ಈ ಮೂಲಕ ವಿಐಪಿ ಸಾಂಪ್ರದಾಯಕ್ಕೂ ಇತಿಶ್ರೀ ಹಾಡಿದ್ದಾರೆ.

ದೆಹಲಿ ಕೇಂದ್ರಾಡಳಿತ ಪ್ರದೇಶದ ಯಾವುದೇ ಸಚಿವ ಅಥವಾ ಅಧಿಕಾರಿಗಳು ಕೆಂಪು ದೀಪದ ವಾಹನಗಳನ್ನು ಬಳಸಕೂಡದು. ಅಲ್ಲದೆ ದೈನಂದಿನ ಕೆಲಸ ಕಾರ್ಯಗಳಿಗೆ ತೆರಳುವಾಗ ಯಾವುದೇ ರಕ್ಷಣೆ ಲಭ್ಯವಿರುವುದಿಲ್ಲ. ಅಧಿಕಾರಿಗಳಿಗೆ ಅಂಗರಕ್ಷಕ ಪಡೆ, ವೈಯಕ್ತಿಕ ಭದ್ರತಾ ಅಧಿಕಾರಿಗಳು ಹಾಗೂ ಗೃಹರಕ್ಷಕರ ಸೌಲಭ್ಯ ಇರಲಾರದು. ಹಾಗೊಂದು ವೇಳೆ ಬೆದರಿಕೆಗಳಿದ್ದರೆ ಮಾತ್ರ ಭದ್ರತೆ ಒದಗಿಸಲಾಗುತ್ತದೆ. ಅಂಬುಲೆನ್ಸ್ ರೀತಿಯ ಅಗತ್ಯ ಸೇವೆಗಳಿಗಾಗಿ ಮಾತ್ರ ಬೀಕನ್ ವಾಹನಗಳನ್ನು ಬಳಕೆ ಮಾಡಬಹುದಾಗಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಮೇಲೆ ತಿಳಿಸಲಾದ ಎಲ್ಲ ಅಂಶಗಳನ್ನು ಮನಸಾ ವಾಚ ಪಾಲಿಸಿರುವ ಶಾಸಕರು, ವಿಧಾನಸಭೆಯಲ್ಲಿ ನಡೆದ ಮೊದಲ ದಿನದ ಕಲಾಪ ಕಾರ್ಯಕ್ಕೆ, ವೈಯಕ್ತಿ ವಾಹನ, ಸಾರ್ವಜನಿಕ ಮೆಟ್ರೋ, ಆಟೋ ರಿಕ್ಷಾ ಮತ್ತು ಬ್ಯಾಟರಿ ನಿಯಂತ್ರಿತ ರಿಕ್ಷಾಗಳಲ್ಲಿ ಆಗಮಿಸಿದ್ದರು.


Click it and Unblock the Notifications








