ಹೊಗೆ ಉಗುಳುವ ಬಸ್ ಹಿಡ್ಕೊಡಿ ಬಹುಮಾನ ಗೆಲ್ಲಿರಿ!
ಪರಿಸರ ಮಾಲಿನ್ಯಕ್ಕೆ ತಡೆ ಹಾಕಲು ವಿನೂತನ ಮಾರ್ಗದೊಂದಿಗೆ ಮುಂದೆ ಬಂದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ತೀವ್ರವಾಗಿ ಹೊಗೆ ಉಗುಳುವ ಬಸ್ಸುಗಳನ್ನು ಪತ್ತೆಹಚ್ಚುವ ಸಾರ್ವಜನಿಕರಿಗೆ ಬಹುಮಾನ ನೀಡಲು ನಿರ್ಧರಿಸಿದೆ.
ಸಾರ್ವಜನಿಕರು ನೀಡುವ ದೂರಿನನ್ವಯ ಬಸ್ಸುಗಳನ್ನು ತಪಾಸಣೆಗೊಳಪಡಿಸಲಿರುವ ಅಧಿಕಾರಿಗಳು ಅಂತಹ ದೋಷಯುಕ್ತ ಬಸ್ಸುಗಳನ್ನು ಸೇವೆಯಿಂದಲೇ ವಜಾಗೊಳಿಸಲಿದೆ. ಅಲ್ಲದೆ ಪತ್ತೆ ಹಚ್ಚಿದ ಸಾರ್ವಜನಿಕನಿಗೆ 1000 ರು.ಗಳ ನಗದು ಬಹುಮಾನವನ್ನು ನೀಡಲಾಗುವುದು.

ನಗರದಲ್ಲಿ ಹೊಗೆ ಉಗುಳುವ ಬಸ್ಸುಗಳ ಬಗ್ಗೆ ಮಾಹಿತಿ ನೀಡುವಂತೆ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಸಾರ್ವಜನಿಕರನ್ನು ವಿನಂತಿಸಿಕೊಂಡಿದೆ. ಇದು 'ಗೊ ಗ್ರೀನ್' ಯೋಜನೆಯ ಭಾಗವಾಗಿರಲಿದೆ.

ಕೆಎಸ್ಆರ್ಟಿಸಿ ಅಧಿಕಾರಿಗಳು ನೀಡುವ ಮಾಹಿತಿಗಳ ಪ್ರಕಾರ, ಪ್ರಸಕ್ತ ಸಾಲಿನಲ್ಲಿ ಕಪ್ಪು ಹೊಗೆ ಹೊರಬಿಡುವ ಮೂರು ಬಸ್ಸುಗಳನ್ನು ನಾಗರಿಕರು ಪತ್ತೆ ಹಚ್ಚಿದ್ದಾರೆ. ಅವರಿಗೆ ಸೂಕ್ತವಾದ ಬಹುಮಾನ ನೀಡಲಾಗುವುದು ಎಂದಿದ್ದಾರೆ.

ಪ್ರಸ್ತುತ ಯೋಜನೆಯನ್ನು ಬೆಂಗಳೂರು ಸೇರಿದಂತೆ 15 ಜಿಲ್ಲೆಗಳಿಗೆ ವಿಸ್ತರಿಸಲಾಗುವುದು. ಈ ಎಲ್ಲದರ ಮುಖಾಂತರ ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ.

ಹೆಚ್ಚು ಹೊಗೆ ಉಗುಳುವುದು ಕಂಡುಬxದರೆ ನೀವು ಇಲಾಖೆಯ ಗಮನಕ್ಕೆ ತರಬಹುದಾಗಿದೆ. ಬಳಿಕ ಪರೀಶೀಲನೆಯಲ್ಲಿ 65 ಹಾರ್ಟ್ರಿಡ್ಜ್ ಸ್ಪೋಕ್ ಯುನಿಟ್ ಗಿಂತಲೂ ಹೆಚ್ಚು ಹೊಗೆ ಉಗುಳುವುದು ಕಂಡುಬಂದ್ದಲ್ಲಿ ತಕ್ಷಣವೇ ಸೇವೆಯಿಂದ ರದ್ದುಗೊಳಿಸಲಾಗುವುದು.

ಬಸ್ಸಿನಿಂದ ಹೊರಬಿಡುವ ಕಾರ್ಬನ್ ಮಾನಾಕ್ಸೈಡ್, ಕಾರ್ಬನ್ ಡೈಆಕ್ಸೈಡ್, ನೈಟ್ರೊಜನ್ ಆಕ್ಸೈಡ್ ಮತ್ತು ಪ್ರೊಮೆಥಿಯಮ್ ಪರಿಸರಕ್ಕೆ ಅತಿ ಹೆಚ್ಚು ಮಾರಾಕವೆನಿಸಿದೆ. ಅಂತಹ ಬಸ್ಸುಗಳನ್ನು ಬದಲಾಯಿಸಲು ನಾವು ಬದ್ಧರಾಗಿದ್ದೇವೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

ಹಾಗೊಂದು ವೇಳೆ ಮುಂದಿನ ಬಾರಿ ನಿಮ್ಮ ಕಣ್ಣಿಗೂ ಹೊಗೆ ಉಗುಳುವ ಬಸ್ ಸಿಕ್ಕಿ ಬಿದ್ದಲ್ಲಿ ಬಿಎಂಟಿಸಿ ಸಹಾಯವಾಣಿ ಸಂಖ್ಯೆಗೆ (1-800-425-1663) ಕರೆ ಮಾಡಲು ಮರೆಯದಿರಿ.


Click it and Unblock the Notifications








