ಮುಂಬೈ ಮಹಾಮಳೆ: ಕಾರು ಮಾಲೀಕರ ನೆರವಿಗೆ ಬಂದ ಮಾರುತಿ ಸುಜುಕಿ
ವಾಣಿಜ್ಯನಗರಿ ಮುಂಬೈ ನಗರವು ಮಹಾಮಳೆಗೆ ಅಕ್ಷರಶಃ ತತ್ತರಿಸಿ ಹೋಗಿದೆ. ನಗರದ ವಿವಿಧಡೆ 100 ಮಿ.ಮೀ.ಗೂ ಹೆಚ್ಚು ಮಳೆಯಾಗಿದ್ದು, ಹಲವಾರು ಕಡೆ ಜನಜೀವನ ಅಸ್ತವ್ಯಸ್ತಗೊಂಡಿರುವುದಲ್ಲದೇ ರಸ್ತೆ, ರೈಲು ಮಾರ್ಗಗಳು ಮುಳುಗಿ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಹಿನ್ನಲೆಯಲ್ಲಿ ತನ್ನ ನೆಚ್ಚಿನ ಗ್ರಾಹಕರ ನೆರವಿಗೆ ಬಂದಿರುವ ಮಾರುತಿ ಸುಜುಕಿ ಸಂಸ್ಥೆಯು ಕಾರು ಮಾಲೀಕರಿಗೆ ಅಗತ್ಯ ನೆರವು ನೀಡುತ್ತಿದೆ.

1974ರ ಹಿಂದಿನ ದಾಖಲೆಯನ್ನು ಸರಿಗಟ್ಟಿರುವ ಮುಂಬೈ ವರ್ಷಧಾರೆಯು ಭಾರೀ ಅನಾಹುತಗಳಿಗೆ ಕಾರಣವಾಗಿದ್ದು, ತಗ್ಗುಪ್ರದೇಶದಲ್ಲಿರುವ ವಸತಿ ಪ್ರದೇಶಗಳು ಹೆಚ್ಚು ಹಾನಿಗಿಡಾಗಿವೆ. ಸೋಮವಾರ ಬೆಳಗ್ಗೆಯಿಂದಲೇ ಸುರಿದ ಮಳೆಗೆ ಹಲವರು ಪ್ರಾಣವನ್ನೇ ಕಳೆದುಕೊಂಡಿದ್ದು, ರಸ್ತೆ ಮತ್ತು ರೈಲು ಮಾರ್ಗಗಳು ಕೊಚ್ಚಿ ಹೋಗಿದ್ದರಿಂದ ಅಲ್ಲಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಜೊತೆಗೆ ಮಳೆನೀರಿನಲ್ಲಿ ಸಾವಿರಾರು ವಾಹನಗಳು ಮುಳುಗಡೆಯಾಗಿದ್ದು, ಇದೀಗ ಮಳೆ ಅಬ್ಬರ ತಗ್ಗಿರುವುದರಿಂದ ತುರ್ತು ಪರಿಹಾರ ಕಾರ್ಯಗಳು ಜೋರಾಗಿ ಸಾಗಿವೆ.

ಇದರಿಂದ ದೇಶದ ಅತಿದೊಡ್ಡ ಕಾರು ಮಾರಾಟ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸಂಸ್ಥೆಯು ಸಹ ತನ್ನ ನೆಚ್ಚಿನ ಗ್ರಾಹಕರಿಗೆ ಪರಿಹಾರ ಒದಗಿಸುತ್ತಿದ್ದು, ಮಹಾಮಳೆಯಿಂದ ಹಾನಿಗಿಡಾದ ಪ್ರದೇಶದಲ್ಲಿರುವ ಕಾರು ಮಾಲೀಕರಿಗೆ ಪ್ರತ್ಯೇಕವಾಗಿ ಸೇವಾ ಕೇಂದ್ರಗಳು ತೆರಿದಿದೆ.

ಇದುವರೆಗೆ 3.5 ಲಕ್ಷ ಗ್ರಾಹಕರಿಗೆ ಮಳೆಯಿಂದ ಕಾರಿಗೆ ಹಾನಿಯಾಗದಂತೆ ವಹಿಸಬಹುದಾದ ಅಗತ್ಯ ಕ್ರಮಗಳ ಕುರಿತು ನಿರಂತರ ಸಂದೇಶಗಳನ್ನು ರವಾನಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು, ಮಳೆ ನೀರಿನಲ್ಲಿ ಕೊಚ್ಚಿಹೋಗದಂತೆ ತಡೆಯಲು ಬೇಕಿರುವ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದೆ.

ಹಾಗೆಯೇ ಮಹಾಮಳೆಗೆ ಸಿಲುಕಿರುವ ವಾಹನ ಮಾಲೀಕರ ನೆರವಿಗಾಗಿ ಆಯ್ದ ಪ್ರದೇಶಗಳಲ್ಲಿ ತಾತ್ಕಾಲಿಕ 24x7 ಸೇವಾ ಕೇಂದ್ರಗಳನ್ನು ತೆರಿದಿರುವ ಮಾರುತಿ ಸುಜುಕಿ ಸಂಸ್ಥೆಯು, ಬೀಡಿಭಾಗಗಳು ಮತ್ತು ಎಂಜಿನ್ನಲ್ಲಿ ನೀರು ಸೇರಿಕೊಳ್ಳುವುದರಿಂದ ಆಗುವ ಸಮಸ್ಯೆಗಳಿಗೆ ತುರ್ತಾಗಿ ಪರಿಹಾರ ನೀಡಲು ಹೆಚ್ಚುವರಿ ಆಟೋ ತಜ್ಞರನ್ನು ನೇಮಕ ಮಾಡಿದೆ. ಹಾಗೆಯೇ ವಿಮಾ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಮಾರುತಿ ಸುಜುಕಿ ಸಂಸ್ಥೆಯು ಗ್ರಾಹಕರಿಗೆ ತೊಂದರೆಯಾಗದಂತೆ ಸಮಯಕ್ಕೆ ಸರಿಯಾಗಿ ವಿಮಾ ಪರಿಹಾರವನ್ನು ಬಿಡುಗಡೆಗೊಳಿಸುವಲ್ಲಿ ನೆರವಾಗುತ್ತಿದೆ.

ಇದರಿಂದ ಮಹಾಮಳೆಯಲ್ಲಿ ಸಿಲುಕಿದ್ದ ವಿವಿಧ ಪ್ರದೇಶಗಳಲ್ಲಿನ ಮಾರುತಿ ಸುಜುಕಿ ಗ್ರಾಹಕರಿಗೆ ಇದು ಅನುಕೂಲಕರವಾಗಿದ್ದು, ಮಳೆ ನಡುವೆಯೂ ತುರ್ತು ಸೇವೆ ಒದಗಿಸುತ್ತಿರುವ ಮಾರುತಿ ಸುಜುಕಿ ಕಾರ್ಯಕ್ಕೆ ಗ್ರಾಹಕರು ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಮಾರುತಿ ಸುಜುಕಿ ಸೇವಾ ವಿಭಾಗದ ಅಧ್ಯಕ್ಷ ಪಾರ್ಥೋ ಬೆನರ್ಜಿ ಅವರು, ಮುಂಬೈ ಮಹಾಮಳೆಯಲ್ಲಿ ಸಿಲುಕಿರುವ ಮಾರುತಿ ಸುಜುಕಿ ಗ್ರಾಹಕರಿಗೆ ಅಗತ್ಯ ನೆರವು ನೀಡಲು ತಾವು ಸದಾ ಸಿದ್ದರಿದ್ದೇವೆ ಎಂದಿದ್ದು, ವಿಶೇಷ ತಂಡಗಳ ರಚನೆದೊಂದಿಗೆ ಅಗತ್ಯ ಸೇವೆ ಒದಗಿಸಲು 24x7 ಮಾದರಿಯಲ್ಲಿ ಅಗತ್ಯಕ್ರಮ ಕೈಗೊಂಡಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನ ಪ್ರತಿಯೊಬ್ಬ ಕಾರು ಮಾಲೀಕರು ಕೂಡಾ ಮಳೆಗಾಲದ ಸಮಯದಲ್ಲಿ ಹೆಚ್ಚಿನ ಕಾಳಜಿ ವಹಿಸುವುದು ಒಳಿತು. ಯಾಕೇಂದ್ರೆ ತಗ್ಗುಪ್ರದೇಶಗಳಲ್ಲಿರುವ ಮನೆಗಳಿಗೆ ನುಗ್ಗುವ ಮಳೆ ನೀರಿನಿಂದಾಗಿ ವಾಹನಗಳ ಫ್ಯೂಲ್ ಟ್ಯಾಂಕ್ನಲ್ಲಿ ನೀರು ಹೋಗುವ ಸಾಧ್ಯತೆಗಳಿರುತ್ತವೆ. ಇದು ನೇರವಾಗಿ ವಾಹನಗಳ ಎಂಜಿನ್ ಮೇಲೆ ಪರಿಣಾಮ ಬೀರುತ್ತದೆ.

ಇದರಿಂದಾಗಿ ಇಂಧನದಲ್ಲಿ ನೀರಿನ ಮಿಶ್ರಣವಾಗಿ ಕಾರಿನ ಎಂಜಿನ್ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹೀಗಾಗಿ ನಿಮ್ಮ ವಾಹನಗಳಲ್ಲೂ ಇಂತದ್ದೆ ಸಮಸ್ಯೆಯಾಗಿದ್ದಲ್ಲಿ ಸ್ವಯಂ ಪ್ರೇರಿತವಾಗಿ ಪರಿಹಾರ ಕಂಡುಕೊಳ್ಳುವುದಕ್ಕಿಂತ ಕೂಡಲೇ ನುರಿತ ತಜ್ಞರಲ್ಲಿ ಪರಿಹಾರ ಕಂಡುಕೊಳ್ಳುವುದು ಒಳಿತು.


Click it and Unblock the Notifications