ಹೆಚ್ಚುವರಿ ಎಲೆಕ್ಟ್ರಿಕ್ ಬಸ್ಸುಗಳನ್ನು ಘೋಷಿಸಿದ ಸಿಎಂ
ಈಗ ಎಲ್ಲೆಡೆ ಎಲೆಕ್ಟ್ರಿಕ್ ವಾಹನಗಳದ್ದೇ ಸದ್ದು. ದ್ವಿಚಕ್ರ ವಾಹನಗಳಾದ ಬೈಕ್, ಸ್ಕೂಟರ್ಗಳಿಂದ ಹಿಡಿದು ನಾಲ್ಕು ಚಕ್ರದ ಕಾರುಗಳವರೆಗೆ ಬಹುತೇಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಮಾರುತಿ ಸುಜುಕಿಯಂತಹ ಕಂಪನಿಗಳು ಸಹ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುತ್ತಿವೆ.

ಮಾರುತಿ ಸುಜುಕಿಯು ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರ್ ಅನ್ನು ಮುಂಬರುವ ದಿನಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಹ್ಯುಂಡೈ ಕಂಪನಿಯು ತನ್ನ ಎಲೆಕ್ಟ್ರಿಕ್ ಕಾರ್ ಆದ ಕೋನಾವನ್ನು ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಬೆಂಗಳೂರು ಮೂಲದ ಅಥೆರ್ ಎನರ್ಜಿ ಈಗಾಗಲೇ ತನ್ನ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ದೇಶದ ಮೊಟ್ಟ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹೊಂದಿರುವ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಅನ್ನು ಕೆಲ ತಿಂಗಳ ಹಿಂದಷ್ಟೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಇನ್ನು ಹಲವಾರು ಸಣ್ಣ ಪುಟ್ಟ ಸ್ಟಾರ್ಟ್ ಅಪ್ ಕಂಪನಿಗಳೂ ಸಹ ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಲೇ ಇವೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯಲ್ಲಿ ಸರ್ಕಾರಗಳೂ ಸಹ ಹಿಂದೆ ಬಿದ್ದಿಲ್ಲ. ಹಲವು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ಬಸ್ಸುಗಳನ್ನು ಬಳಸುತ್ತಿವೆ.

ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ರವರು ಶೀಘ್ರದಲ್ಲೇ 50 ಎಲೆಕ್ಟ್ರಿಕ್ ಬಸ್ಸುಗಳನ್ನು ಸಾರ್ವಜನಿಕ ಸಾರಿಗೆಗೆ ಸೇರಿಸಲಾಗುವುದು ಎಂದು ಹೇಳಿದ್ದಾರೆ. ಭುವನೇಶ್ವರದಲ್ಲಿ ಮೊ ಬಸ್ ಸೇವೆಯ ಮೊದಲ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಬಿಜು ಪಟ್ನಾಯಕ್ ವಿಮಾನ ನಿಲ್ದಾಣದಿಂದ ಜಯದೇವ್ ಭವನಕ್ಕೆ ಮೊ ಬಸ್ನಲ್ಲಿ ಪ್ರಯಾಣಿಸಿದ ನಂತರ ಪಟ್ನಾಯಕ್ ಈ ಘೋಷಣೆ ಮಾಡಿದ್ದಾರೆ.

ಅಂದ ಹಾಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ರವರು ಟಿಕೆಟ್ ಖರೀದಿಸಿ ಈ ಬಸ್ಸಿನಲ್ಲಿ ಪ್ರಯಾಣಿಸಿದ್ದು ವಿಶೇಷ. ಈ ವೇಳೆ ಅವರು ಸಹ ಪ್ರಯಾಣಿಕರೊಂದಿಗೆ ಸೆಲ್ಫಿಗೆ ಫೋಸ್ ನೀಡಿದರು. ಜೊತೆಗೆ ಕೆಲವರಿಗೆ ಆಟೋಗ್ರಾಫ್ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನವೀನ್ ಪಟ್ನಾಯಕ್ರವರು ಮೊ ಬಸ್ ಸೇವೆಯು ಭುವನೇಶ್ವರದಲ್ಲಿ, ಬೃಹನ್ ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್ ಪೋರ್ಟ್ (ಬೆಸ್ಟ್) ಬಸ್ಸುಗಳು ಮುಂಬೈನಲ್ಲಿ, ಮೆಟ್ರೋ ರೈಲುಗಳು ದೆಹಲಿ ಹಾಗೂ ಕೋಲ್ಕತ್ತಾದಲ್ಲಿರುವಂತೆ ಜನರ ಜೀವನಾಡಿಯಾಗಬೇಕೆಂದು ಬಯಸುತ್ತೇನೆಂದು ಹೇಳಿದರು.

ರಾಜಧಾನಿ ಭುವನೇಶ್ವರದಲ್ಲಿ ಮೊ ಬಸ್ ಒಂದು ಪ್ರಮುಖ ಸಾಮೂಹಿಕ ಸಾರಿಗೆ ಸೌಲಭ್ಯವಾಗಿದೆ ಎಂದು ಹೇಳಿದ ಅವರು, ನಾಗರಿಕರು ಪ್ರಯಾಣಕ್ಕಾಗಿ ಮೊ ಬಸ್ ಗಳಲ್ಲಿ ಸಂಚರಿಸುವುದನ್ನು ನೋಡಿದರೆ ಹೃದಯ ತುಂಬಿ ಬರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ, ಪಟ್ನಾಯಕ್ರವರು ಮ್ಯಾಸ್ಕಾಟ್ ಮೊಬಿ (ಮೊ ಬಸ್ ಫಾರ್ ಬೆಟರ್ ಯು) ಯನ್ನು ಅನಾವರಣಗೊಳಿಸಿದರು. ಅಕ್ಟೋಬರ್ನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಮ್ಯಾಸ್ಕಾಟ್ ಅನ್ನು ಆಯ್ಕೆ ಮಾಡಲಾಗಿದೆ. ಕ್ಯಾಪಿಟಲ್ ರೀಜನ್ ಅರ್ಬನ್ ಟ್ರಾನ್ಸ್ಪೋರ್ಟ್ (ಸಿಆರ್ಯುಟಿ) ವ್ಯವಸ್ಥಾಪಕ ನಿರ್ದೇಶಕರಾದ ಅರುಣ್ ಬೋತ್ರಾರವರು ಮಾತನಾಡಿ, ಮೊ ಬಸ್ನ ಮೊದಲ ವರ್ಷದ ಪ್ರಯಾಣವು ಸವಾಲಿನ ಜೊತೆಗೆ ಸಿಆರ್ಯುಟಿ ತಂಡಕ್ಕೆ ಕಲಿಕೆಯ ಅನುಭವದಿಂದ ಕೂಡಿತ್ತು.

ಕಾರ್ಯಾಚರಣೆಯನ್ನು ಆರಂಭಿಸಿದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ನಾವು 1 ಲಕ್ಷ ಪ್ರಯಾಣಿಕರನ್ನು ತಲುಪಿದ ರೀತಿ ಒಂದು ದೊಡ್ಡ ಸಾಧನೆಯಾಗಿದೆ. ಸೇವೆಯ ಪ್ರಾರಂಭದಿಂದಲೂ ನಮ್ಮನ್ನು ನಂಬಿದ ಹಾಗೂ ಸುಧಾರಣೆಗೆ ನಿರಂತರ ಪ್ರತಿಕ್ರಿಯೆಯನ್ನು ನೀಡಿದ ಪ್ರಯಾಣಿಕರಿಗೆ ಈ ಮೈಲಿಗಲ್ಲಿನ ಕ್ರೆಡಿಟ್ ಹೋಗುತ್ತದೆ ಎಂದು ಬೋತ್ರಾರವರು ಹೇಳಿದರು.


Click it and Unblock the Notifications