ರಾಜ್ಯ ಸರ್ಕಾರಗಳು ದಂಡದ ಮೊತ್ತವನ್ನು ಇಳಿಸುವಂತಿಲ್ಲ..!
ಭಾರತದಲ್ಲಿ ರಸ್ತೆ ಅಪಘಾತಗಳು ಅಧಿಕವಾಗಿವೆ. ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದೇ ಈ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಕಡಿಮೆ ಪ್ರಮಾಣದ ದಂಡವೆಂಬ ಕಾರಣಕ್ಕೆ ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದು ಸಾಮಾನ್ಯವಾಗಿತ್ತು.

ಭಾರೀ ಪ್ರಮಾಣದ ದಂಡವನ್ನು ವಿಧಿಸಿದರೆ, ದಂಡಕ್ಕೆ ಹೆದರಿಯಾದರೂ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸುತ್ತಾರೆ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಹಳೆಯ ಮೋಟಾರು ವಾಹನ ಕಾಯ್ದೆಯನ್ನು ತಿದ್ದುಪಡಿಗೊಳಿಸಿತು.

ಹೊಸ ಮೋಟಾರು ವಾಹನ ಕಾಯ್ದೆಯನ್ನು ಸೆಪ್ಟೆಂಬರ್ 1ರಿಂದ ಜಾರಿಗೆ ತರಲಾಯಿತು. ಹೊಸ ಕಾಯ್ದೆಯನ್ನು ಜಾರಿಗೊಳಿಸಿದ ನಂತರ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಯಿತು.

ದಂಡದ ಮೊತ್ತವನ್ನು 10 ಪಟ್ಟು ಹೆಚ್ಚಿಸಲಾಗಿದ್ದು, ಕೆಲವು ಕಡೆ ವಾಹನದ ಬೆಲೆಗಿಂತ ಹೆಚ್ಚಿನ ಪ್ರಮಾಣದ ದಂಡವನ್ನು ವಿಧಿಸಲಾಯಿತು. ಈ ಕಾರಣಕ್ಕಾಗಿ ಜನರು ಕಡಿಮೆ ಪ್ರಮಾಣದ ದಂಡವನ್ನು ವಿಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ ಘಟನೆಗಳು ವರದಿಯಾಗಿದ್ದವು.

ದೆಹಲಿಯಲ್ಲಿ ಭಾರೀ ಪ್ರಮಾಣದ ದಂಡವನ್ನು ವಿಧಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ್ದ. ಈ ಭಾರೀ ಪ್ರಮಾಣದ ದಂಡವನ್ನು ಕಡಿಮೆಗೊಳಿಸುವಂತೆ ದೇಶದ ವಿವಿಧೆಡೆ ಜನರು ಪ್ರತಿಭಟನೆಯನ್ನು ನಡೆಸಿದರು.

ಜನರ ಪ್ರತಿಭಟನೆಗೆ ಮಣಿದ ಕರ್ನಾಟಕ, ಒಡಿಶಾ, ಅಸ್ಸಾಂ, ಗುಜರಾತ್, ಕೇರಳ, ಉತ್ತರಖಂಡ ಹಾಗೂ ಮಣಿಪುರ ರಾಜ್ಯ ಸರ್ಕಾರಗಳು ಮೋಟಾರು ವಾಹನ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ದಂಡದ ಪ್ರಮಾಣವನ್ನು ಕಡಿಮೆ ಮಾಡಿದವು.

ಈ ಸಂಬಂಧ ಕೇಂದ್ರ ಸರ್ಕಾರವು ಅಟಾರ್ನಿ ಜನರಲ್ರವರ ಅಭಿಪ್ರಾಯವನ್ನು ಕೇಳಿತ್ತು. ಇದಕ್ಕೆ ಉತ್ತರ ನೀಡಿರುವ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ರವರು ರಾಜ್ಯ ಸರ್ಕಾರಗಳು ದಂಡದ ಮೊತ್ತವನ್ನು ಕಡಿಮೆಗೊಳಿಸುವಂತಿಲ್ಲವೆಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ತನ್ನ ವ್ಯಾಪ್ತಿಯೊಳಗೆ ರಾಜ್ಯ ಸರ್ಕಾರಗಳಿಗೆ ತಾನು ಜಾರಿಗೆ ತಂದಿರುವ ಕಾನೂನನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಬಹುದೆಂದು ಹೇಳಿದ್ದಾರೆ. ಈ ಕಾಯ್ದೆಯಡಿಯಲ್ಲಿ 24 ಕಾಂಪೌಡೆಬಲ್ ಅಪರಾಧಗಳಿವೆ.

ಈ ಅಪರಾಧದನ್ವಯ ನಿಯಮಗಳನ್ನು ಉಲ್ಲಂಘಿಸುವವರು ಕೋರ್ಟಿಗೆ ಹೋಗುವ ಅವಶ್ಯಕತೆಯಿಲ್ಲ. ಸ್ಥಳದಲ್ಲಿಯೇ ದಂಡವನ್ನು ಪಾವತಿಸಬಹುದು. ಈ ಉಲ್ಲಂಘನೆಗಳಲ್ಲಿ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸುವುದು.

ಇನ್ಶೂರೆನ್ಸ್ ಇಲ್ಲದಿರುವುದು, ತುರ್ತು ವಾಹನಗಳಿಗೆ ಅಡ್ಡಿಪಡಿಸುವುದು ಸೇರಿವೆ. ಈ ಕಾಯ್ದೆಯ ಸೆಕ್ಷನ್ 200ರ ಪ್ರಕಾರ ರಾಜ್ಯ ಸರ್ಕಾರಗಳು ಈ ಕಾಯ್ದೆಯನ್ನು ಆಯಾ ರಾಜ್ಯಗಳಲ್ಲಿ ತಿದ್ದುಪಡಿ ಮಾಡಿ, ದಂಡದ ಮೊತ್ತವನ್ನು ಏರಿಕೆ ಮಾಡಬಹುದು, ಇಲ್ಲವೇ ಕಡಿಮೆ ಮಾಡಬಹುದು.

ಈ ಸಂಬಂಧ ತಮ್ಮ ಅಭಿಪ್ರಾಯವನ್ನು ನೀಡಿರುವ ಅಟಾರ್ನಿ ಜನರಲ್ರವರು ಮೋಟಾರು ವಾಹನ ಕಾಯ್ದೆಯು ಸಂಸತ್ತು ಜಾರಿಗೆ ತಂದಿರುವ ಕಾನೂನಾಗಿರುವ ಕಾರಣ, ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರವು ನಿಗದಿಪಡಿಸಿರುವ ದಂಡದ ಮೊತ್ತಕ್ಕಿಂತ ಕಡಿಮೆ ಮೊತ್ತವನ್ನು ನಿಗದಿಪಡಿಸುವಂತಿಲ್ಲವೆಂದು ಹೇಳಿದ್ದಾರೆ.

ತಮ್ಮ ಅಭಿಪ್ರಾಯದಲ್ಲಿ ಅಟಾರ್ನಿ ಜನರಲ್ರವರು ಕೇಂದ್ರ ಸರ್ಕಾರವು ಸಂವಿಧಾನದ 256ನೇ ವಿಧಿಯನ್ವಯ ರಾಜ್ಯ ಸರ್ಕಾರಗಳಿಗೆ ತಾನು ಜಾರಿಗೆ ತಂದಿರುವ ಕಾನೂನನ್ನು ಪಾಲಿಸುವಂತೆ ಸೂಚಿಸಬಹುದೆಂದು ಅಭಿಪ್ರಾಯ ಪಟ್ಟಿದ್ದಾರೆ.

ತನ್ನ ಸೂಚನೆಯನ್ನು ಪಾಲಿಸದ ರಾಜ್ಯ ಸರ್ಕಾರಗಳ ವಿರುದ್ಧ ಕೇಂದ್ರ ಸರ್ಕಾರವು ಸಂವಿಧಾನದ 356ನೇ ವಿಧಿಯನ್ವಯ ಕ್ರಮ ಕೈಗೊಳ್ಳಬಹುದೆಂದು ಹೇಳಿದ್ದಾರೆ. ಗುಜರಾತ್ ಹೊಸ ಮೋಟಾರು ವಾಹನ ಕಾಯ್ದೆಯನ್ನು ತಿದ್ದುಪಡಿ ಮಾಡಿದ ಮೊದಲ ರಾಜ್ಯ.

ಇದರ ನಂತರ ಹಲವು ರಾಜ್ಯಗಳು ಮೋಟಾರು ವಾಹನ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ದಂಡದ ಮೊತ್ತವನ್ನು ಕಡಿಮೆ ಮಾಡಿದವು. ಅಂದ ಹಾಗೆ ಮೋಟಾರು ವಾಹನ ಕಾಯ್ದೆಯು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ.

ಸಮವರ್ತಿ ಪಟ್ಟಿಯಲ್ಲಿರುವ ಕಾನೂನನ್ನು ಕೇಂದ್ರ, ರಾಜ್ಯ ಸರ್ಕಾರಗಳೆರಡೂ ತಿದ್ದುಪಡಿ ಮಾಡಬಹುದು. ಇದರ ಬಗ್ಗೆ ಏನಾದರೂ ಸಮಸ್ಯೆ, ವಿವಾದಗಳು ಕಂಡು ಬಂದಲ್ಲಿ ಕೇಂದ್ರ ಸರ್ಕಾರದ ನಿಯಮವೇ ಅಂತಿಮವಾಗಿರಲಿದೆ.

ಗುಜರಾತ್ ರಾಜ್ಯ ಸರ್ಕಾರವು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರು ಕೋರ್ಟಿನಲ್ಲಿ ಪಾವತಿಸಬೇಕಾದ ನಾನ್ ಕಂಪೌಂಡೆಬಲ್ ಅಪರಾಧಗಳನ್ನೂ ಸಹ ತಿದ್ದುಪಡಿಗೊಳಿಸಿ, ಸ್ಥಳದಲ್ಲಿಯೇ ದಂಡ ಪಾವತಿಸಲು ಅವಕಾಶ ನೀಡಿದೆ.

ಹೊಸ ಮೋಟಾರು ವಾಹನ ಕಾಯ್ದೆಯನ್ವಯ ಹೆಲ್ಮೆಟ್ ಧರಿಸದಿದ್ದರೇ ರೂ.1,000 ದಂಡ ವಿಧಿಸಲಾಗುತ್ತದೆ. ಆದರೆ ಗುಜರಾತ್ ಸರ್ಕಾರವು ಕಾಯ್ದೆಗೆ ತಿದ್ದುಪಡಿ ಈ ಮೊತ್ತವನ್ನು ರೂ.500ಗಳಿಗೆ ನಿಗದಿಪಡಿಸಿದೆ.


Click it and Unblock the Notifications








