ದೇವರ ಹೆಸರಿನ ನಂಬರ್ಪ್ಲೇಟ್ ತೆಗೆಯಲು ನಿರಾಕರಣೆ, ಮುಂದೆ ನಡೆದಿದ್ದೇನು?
ಸಂಚಾರಿ ನಿಯಮಗಳು ಹೆಚ್ಚಿನ ಪ್ರಮಾಣದಲ್ಲಿ ಉಲ್ಲಂಘನೆಯಾಗುವ ದೇಶಗಳಲ್ಲಿ ಭಾರತವೂ ಒಂದು. ಹೆಚ್ಚಿನ ಅಪಘಾತಗಳಾಗುವ ಪಟ್ಟಿಯಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ಈ ಅಪಘಾತಗಳ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಪಘಾತಗಳ ಹೆಚ್ಚಳಕ್ಕೆ ಸಂಚಾರ ಉಲ್ಲಂಘನೆಯು ಒಂದು ಪ್ರಮುಖ ಅಂಶವಾಗಿದೆ.

ಸಂಚಾರ ನಿಯಮಗಳ ಉಲ್ಲಂಘನೆಯನ್ನು ತಡೆಗಟ್ಟುವುದಕ್ಕಾಗಿ ದೇಶಾದ್ಯಂತ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಲಾಯಿತು.

ಈ ಕಾಯ್ದೆಯ ಪ್ರಕಾರ ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ. ಆದರೆ ನಿಯಮಗಳ ಉಲ್ಲಂಘನೆಯ ಪ್ರಮಾಣ ಕಡಿಮೆಯಾಗಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಹುತೇಕ ಎಲ್ಲಾ ರಾಜ್ಯಗಳಲ್ಲಿ ನಿಯಮಗಳ ಉಲ್ಲಂಘನೆಯನ್ನು ತಡೆಗಟ್ಟಲು ಟ್ರಾಫಿಕ್ ಸೆನ್ಸಾರ್ಶಿಪ್ ಬಳಸಲಾಗುತ್ತಿದೆ.

ವಾಹನಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಆಫ್ಟರ್ ಮಾರ್ಕೆಟ್ ಬಿಡಿಭಾಗಗಳ ಬಳಕೆಯನ್ನು ನಿಷೇಧಿಸಲಾಗಿದೆ. ವಿವಿಧ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.

ಇದೇ ರೀತಿಯ ಘಟನೆಯೊಂದು ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ಮೀರತ್ನಲ್ಲಿರುವ ಬಾರ್ಡರ್ ಪೊಲೀಸ್ ಠಾಣೆಯ ಪೊಲೀಸರು ಮೆಡಿಕಲ್ ಕಾಲೇಜಿನ ಬಳಿ ತಪಾಸಣೆ ನಡೆಸುತ್ತಿದ್ದಾಗ ಫ್ಯಾನ್ಸಿ ನಂಬರ್ ಪ್ಲೇಟ್ ಹೊಂದಿದ್ದ ಬಿಳಿ ಬಣ್ಣದ ವರ್ನಾ ಕಾರು ಕಣ್ಣಿಗೆ ಬಿದ್ದಿದೆ.

ಈ ನಂಬರ್ಪ್ಲೇಟ್ನಲ್ಲಿ ರಾಮ್ ಎಂದು ಹಿಂದಿ ಅಕ್ಷರಗಳಲ್ಲಿ ಬರೆಯಲಾಗಿತ್ತು. ಮೋಟಾರು ವಾಹನ ಕಾಯ್ದೆಯ ಪ್ರಕಾರ ಈ ರೀತಿಯ ಫ್ಯಾನ್ಸಿ ನಂಬರ್ ಹೊಂದುವುದು ಅಪರಾಧವಾಗಿದೆ. ಈ ಕಾರ್ ಅನ್ನು ತಡೆದ ಪೊಲೀಸರು ಕಾರಿನ ದಾಖಲೆಗಳನ್ನು ಕೇಳಿದ್ದಾರೆ.

ಇದರ ಜೊತೆಗೆ ನಂಬರ್ ಪ್ಲೇಟ್ ಮೇಲೆ ಫ್ಯಾನ್ಸಿ ನಂಬರ್ ಹೊಂದಿರುವ ಬಗ್ಗೆ ವಿಚಾರಿಸಿದ್ದಾರೆ. ಆದರೆ ಕಾರಿನಲ್ಲಿದ್ದವರು ಸರಿಯಾದ ಉತ್ತರ ನೀಡಿಲ್ಲ. ಪೊಲೀಸರು ಈ ನಂಬರ್ ಪ್ಲೇಟ್ ಅನ್ನು ತೆಗೆದು ಹಾಕುವಂತೆ ಹೇಳಿದ್ದಾರೆ. ಇದಕ್ಕೆ ನಿರಾಕರಿಸಿದ ವ್ಯಕ್ತಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ.

ಈ ರೀತಿಯ ನಂಬರ್ ಪ್ಲೇಟ್ ಅಳವಡಿಸಲು ರೂ.31,000 ಖರ್ಚು ಮಾಡಿರುವ ಕಾರಣಕ್ಕೆ ಇದನ್ನು ತೆಗೆಯಲು ಸಾಧ್ಯವಿಲ್ಲವೆಂದು ತಿಳಿಸಿದ್ದಾನೆ. ರಾಮ್ ಎಂದು ದೇವರ ಹೆಸರಿರುವ ಕಾರಣಕ್ಕೆ ಎಂದಿಗೂ ಈ ನಂಬರ್ ಪ್ಲೇಟ್ ತೆಗೆಯುವುದಿಲ್ಲವೆಂದು ಹೇಳಿದ್ದಾನೆ.

ದಂಡ ಪಾವತಿಸುತ್ತೇನೆ ಆದರೆ ಈ ನಂಬರ್ ಪ್ಲೇಟ್ ತೆಗೆಯುವುದಿಲ್ಲವೆಂದು ಹೇಳಿದ್ದಾನೆ. ಇದರಿಂದ ಶಾಕ್ ಆದ ಪೊಲೀಸರು ದಂಡ ವಿಧಿಸಿದ್ದಾರೆ. ಆ ವ್ಯಕ್ತಿಯು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಕಾರಣಕ್ಕೆ ಕೆಲ ಸಮಯ ಆ ಪ್ರದೇಶದಲ್ಲಿ ಉದ್ರಿಕ್ತ ಪರಿಸ್ಥಿತಿ ಉಂಟಾಗಿತ್ತು. ವಾಹನ ಸವಾರನಿಗೆ ದಂಡ ವಿಧಿಸಿದ ನಂತರ ಪರಿಸ್ಥಿತಿ ತಣ್ಣಗಾಗಿದೆ.

ಭಾರತೀಯ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಈ ರೀತಿಯ ನಂಬರ್ಪ್ಲೇಟ್ಗಳನ್ನು ಬಳಸುವಂತಿಲ್ಲ. ಒಂದು ರಾಜ್ಯಕ್ಕೆ ಮಾತ್ರ ಸೀಮಿತವಾಗಿರುವ ಸಂಖ್ಯೆಯ ವಾಹನವನ್ನು ಇನ್ನೊಂದು ರಾಜ್ಯದಲ್ಲಿ ಬಳಸಿದಾಗ ಆ ಸಂಖ್ಯೆಯನ್ನು ಗುರುತಿಸುವಲ್ಲಿ ಸಮಸ್ಯೆಯಾಗುತ್ತದೆ.

ಈ ಕಾರಣಕ್ಕೆ ಸ್ಥಳೀಯ ಭಾಷೆಯ ಬಳಕೆಯನ್ನು ವಾಹನದಲ್ಲಿ ಬಳಸದಂತೆ ನಿಷೇಧ ಹೇರಲಾಗುತ್ತಿದೆ. ಸಂಚಾರಿ ನಿಯಮಗಳ ಪ್ರಕಾರ ಸ್ಟೈಲಿಶ್ ಆಗಿರುವ ನಂಬರ್ಗಳನ್ನು ಸಹ ವಾಹನಗಳಲ್ಲಿ ಬಳಸುವಂತಿಲ್ಲ. ಇದರ ಜೊತೆಗೆ ನಂಬರ್ಪ್ಲೇಟ್ಗಳಲ್ಲಿ ಯಾವುದೇ ಬೇರೆ ಸ್ಟಿಕ್ಕರ್ಗಳನ್ನು ಬಳಸುವಂತಿಲ್ಲ.

ಈ ನಿಯಮವು ಭಾರತದಲ್ಲಿರುವ ಎಲ್ಲಾ ವಾಹನಗಳಿಗೂ ಅನ್ವಯಿಸುತ್ತದೆ. ಆದರೆ ಕೆಲವು ಕಿಡಿಗೇಡಿ ಚಾಲಕರು ನಿಯಮ ಉಲ್ಲಂಘಿಸಿಯೂ ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಾರೆ. ವಾಹನ ಸವಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯುತ್ತಿರುವುದು ಇದೇ ಮೊದಲ ಸಲವೇನಲ್ಲ. ಈ ಹಿಂದೆಯೂ ಸಹ ಹಲವು ಬಾರಿ ಮಾತಿನ ಚಕಮಕಿಗಳು ನಡೆದಿವೆ.
ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.


Click it and Unblock the Notifications








