ಎಂಟನೇ ನಗರದಲ್ಲಿ ಆಕ್ಸಿಜನ್ ಆನ್ ವ್ಹೀಲ್ಸ್ ಅಭಿಯಾನ ಆರಂಭಿಸಿದ ಮಹೀಂದ್ರಾ
ಕೋವಿಡ್ 19 ಎರಡನೇ ಅಲೆಯಲ್ಲಿ ಕರೋನಾ ವೈರಸ್ ಸೋಂಕಿಗೆ ತುತ್ತಾಗುತ್ತಿರುವ ಜನರು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಸಕಾಲಕ್ಕೆ ಆಕ್ಸಿಜನ್ ದೊರೆಯದೇ ದೇಶಾದ್ಯಂತ ಸಹಸ್ರಾರು ಜನರು ಸಾವನ್ನಪ್ಪಿದ್ದಾರೆ.

ಆಕ್ಸಿಜನ್ ಕೊರತೆಯನ್ನು ನೀಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಶ್ರಮಿಸುತ್ತಿವೆ. ಹಲವು ವಾಹನ ತಯಾರಕ ಕಂಪನಿಗಳು ಸಹ ಆಕ್ಸಿಜನ್ಕೊರತೆಯನ್ನು ಪರಿಹರಿಸಲು ತಮ್ಮ ಕೈಲಾದ ನೆರವು ನೀಡುತ್ತಿವೆ. ಭಾರತೀಯ ಮೂಲದ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ಅಂಡ್ ಮಹೀಂದ್ರಾ ಸಹ ಸೋಂಕಿತರಿಗೆ ನೆರವಾಗುತ್ತಿದೆ.

ಮಹೀಂದ್ರಾ ಕಂಪನಿಯು ಸೋಮವಾರ ಚೆನ್ನೈನಲ್ಲಿ ಆಕ್ಸಿಜನ್ ಆನ್ ವ್ಹೀಲ್ಸ್ ಅಭಿಯಾನವನ್ನು ಆರಂಭಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಂಪನಿಯ ಸಿಇಒ ಆನಂದ್ ಮಹೀಂದ್ರಾರವರು, ಆಕ್ಸಿಜನ್ ಆನ್ ವ್ಹೀಲ್ಸ್ ಅಭಿಯಾನವನ್ನು ಚೆನ್ನೈನಲ್ಲಿ ಆರಂಭಿಸುವ ಮೂಲಕ ಒಟ್ಟು 8 ನಗರಗಳಲ್ಲಿ ಈ ಅಭಿಯಾನವನ್ನು ಆರಂಭಿಸಿದಂತಾಗಿದೆ ಎಂದು ಹೇಳಿದ್ದಾರೆ.
MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್ಟಿಒ ಫಾರಂಗಳಿವು!

ಈ ಅಭಿಯಾನವನ್ನು ಮೊದಲು ಮಹಾರಾಷ್ಟ್ರದಲ್ಲಿ ಆರಂಭಿಸಲಾಯಿತು. ನಂತರ ದೆಹಲಿ ಹಾಗೂ ನೋಯ್ಡಾಗಳಲ್ಲಿ ಆರಂಭಿಸಲಾಯಿತು. ಆಕ್ಸಿಜನ್ ಆನ್ ವ್ಹೀಲ್ಸ್ ಅಭಿಯಾನದ ಮೂಲಕ ಮಹೀಂದ್ರಾ ಕಂಪನಿಯು ಆಸ್ಪತ್ರೆಗಳಿಗೆ ಹಾಗೂ ಸೋಂಕಿತರ ಮನೆಗಳಿಗೆ ಮೆಡಿಕಲ್ ಆಕ್ಸಿಜನ್ ಅನ್ನು ಉಚಿತವಾಗಿ ಪೂರೈಸುತ್ತದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾರವರು, ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕೇಂದ್ರಗಳಿಗೆ ಆಕ್ಸಿಜನ್ ಸಿಲಿಂಡರ್ಗಳನ್ನು ಪೂರೈಸಲು 8ನೇ ನಗರದಲ್ಲಿ ಆಕ್ಸಿಜನ್ ಆನ್ ವ್ಹೀಲ್ಸ್ ಅಭಿಯಾನವನ್ನು ಆರಂಭಿಸಲಾಗಿದೆ.
MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ನಗರಗಳಲ್ಲಿ ಈ ಅಭಿಯಾನವನ್ನು ಆರಂಭಿಸಲಾಗುವುದು. ಈ ಮೂಲಕ ನಾವು ಕರೋನಾ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿದ್ದೇವೆ ಎಂದು ಹೇಳಿದ್ದಾರೆ.

ಕಳೆದ ವಾರವಷ್ಟೇ ಮಹೀಂದ್ರಾ ಕಂಪನಿಯು ತನ್ನ ಆಕ್ಸಿಜನ್ ಆನ್ ವ್ಹೀಲ್ಸ್ ಅಭಿಯಾನವನ್ನು ಹೈದರಾಬಾದ್'ನಲ್ಲಿ ಆರಂಭಿಸಿತು. ಈ ಮೂಲಕ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಈ ಅಭಿಯಾನವನ್ನು ಆರಂಭಿಸಿತು.
MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕಂಪನಿಯು ಮುಂದಿನ ದಿನಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಇತರ ನಗರಗಳಿಗೂ ವಿಸ್ತರಿಸಲು ನಿರ್ಧರಿಸಿದೆ ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ. ಮಹೀಂದ್ರಾ ಕಂಪನಿಯು ಈ ಅಭಿಯಾನದಲ್ಲಿ ನೂರಾರು ಬೊಲೆರೊ ಪಿಕಪ್ ಟ್ರಕ್ಗಳನ್ನು ಬಳಸುತ್ತಿದೆ.

ಬೊಲೆರೊ ಪಿಕಪ್ ಟ್ರಕ್ಗಳನ್ನು ಈಗ ಆಕ್ಸಿಜನ್ ಸಿಲಿಂಡರ್ ವಿತರಣಾ ವ್ಯಾನ್ಗಳಾಗಿ ಬಳಸಲಾಗುತ್ತಿದೆ. ಮಹೀಂದ್ರಾ ಪ್ರಕಾರ, ಕಂಪನಿಯು ಇದುವರೆಗೂ 23,000ಕ್ಕೂ ಹೆಚ್ಚು ಆಕ್ಸಿಜನ್ ಸಿಲಿಂಡರ್ಗಳನ್ನು ಆಸ್ಪತ್ರೆಗಳಿಗೆ ಹಾಗೂ ಇತರ ವೈದ್ಯಕೀಯ ಸೌಲಭ್ಯಗಳಿಗೆ ಪೂರೈಸಿದೆ.
MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಕರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ಹೆಚ್ಚು ಪೀಡಿತವಾದ ರಾಜ್ಯಗಳಲ್ಲಿ ತಮಿಳುನಾಡು ಸಹ ಸೇರಿದೆ. ತಮಿಳುನಾಡಿನಲ್ಲಿ ಇದುವರೆಗೂ 4.40 ಲಕ್ಷಕ್ಕೂ ಹೆಚ್ಚು ಕರೋನಾ ಪ್ರಕರಣಗಳು ವರದಿಯಾಗಿದ್ದು, 5,764 ಜನರು ಸಾವನ್ನಪ್ಪಿದ್ದಾರೆ.

ಕರೋನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಆರೋಗ್ಯ ಮೂಲಸೌಕರ್ಯಗಳ ಮೇಲಿನ ಹೊರೆ ಹೆಚ್ಚುತ್ತಿದೆ. ಈ ಪರಿಸ್ಥಿತಿಯಲ್ಲಿ ಮಹೀಂದ್ರಾ ಕಂಪನಿಯು ಆರಂಭಿಸಿರುವ ಅಭಿಯಾನವು ಕರೋನಾ ಸೋಂಕಿತರಿಗೆ ವರದಾನವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.


Click it and Unblock the Notifications