ಭಾರತದಲ್ಲಿ ಅತ್ಯಧಿಕ ಮೈಲೇಜ್ ನೀಡುವ ಜೈವಿಕ ಇಂಧನ ಆಧರಿತ ಕಾರುಗಳ ಬಿಡುಗಡೆಗೆ ಸಿದ್ದವಾದ ಮಾರುತಿ ಸುಜುಕಿ
ದೇಶದ ಅಗ್ರಗಣ್ಯ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿಯು ಸಾಂಪ್ರಾದಾಯಿಕ ಇಂಧನಗಳಿಗೆ ಪೈಪೋಟಿಯಾಗಿ ಹೊಸ ಇಂಧನ ಆಧರಿತ ಕಾರು ಉತ್ಪಾದನೆ ಮುಂದಾಗಿದ್ದು, ಭವಿಷ್ಯದಲ್ಲಿ ಜೈವಿಕ ಇಂಧನ ಆಧರಿತ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ.

ಹೆಚ್ಚುತ್ತಿರುವ ಮಾಲಿನ್ಯವನ್ನು ತಗ್ಗಿಸುವ ನಿಟ್ಟಿನಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯು ಡೀಸೆಲ್ ಮಾದರಿಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಮೂಲಕ ಪೆಟ್ರೋಲ್, ಸ್ಮಾರ್ಟ್ ಹೈಬ್ರಿಡ್ ಮತ್ತು ಸಿಎನ್ಜಿ ಕಾರುಗಳ ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಕಂಪನಿಯು ಸಾಂಪ್ರಾಯಿಕ ಇಂಧನ ಆಧರಿತ ಕಾರುಗಳ ಬದಲಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜೈವಿಕ ಇಂಧನ ಆಧರಿತ ಕಾರುಗಳ ಅಭಿವೃದ್ದಿಗೆ ಯೋಜನೆ ರೂಪಿಸಿದೆ.

ಸಾಂಪ್ರದಾಯಿಕವಾಗಿ ಮಾರುತಿ ಸುಜುಕಿಯ ಕಾರುಗಳು ಯಾವಾಗಲೂ ಹೆಚ್ಚು ಇಂಧನ ದಕ್ಷತೆಯ ಮಾದರಿಗಳಾಗಿ ಗುರುತಿಸಿಕೊಂಡಿದ್ದು, ಇದರಿಂದ ಕಂಪನಿಯು ಮುಂಬರುವ ದಿನಗಳಲ್ಲಿ ಜೈವಿಕ ಇಂಧನ ಮಾದರಿಗಳ ಮೂಲಕ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಇತರೆ ಕಾರು ಉತ್ಪಾದನಾ ಕಂಪನಿಗಳು ಸಾಂಪ್ರಾದಾಯಿಕ ಮಾದರಿಗಳ ಜೊತೆಗೆ ಎಲೆಕ್ಟ್ರಿಕ್ ಮಾದರಿಗಳತ್ತ ಗಮನಹರಿಸುತ್ತಿದ್ದು, ಮಾರುತಿ ಸುಜುಕಿ ಕಂಪನಿ ಮಾತ್ರ ಇನ್ನು ಕೆಲವು ವರ್ಷಗಳ ಕಾಲ ಎಲೆಕ್ಟ್ರಿಕ್ ವಿಭಾಗಕ್ಕೆ ಪೂರ್ತಿಯಾಗಿ ತೊಡಗಿಸಕೊಳ್ಳದಿರಲು ಮುಂದಾಗಿದೆ.

ಎಲೆಕ್ಟ್ರಿಕ್ ಕಾರುಗಳ ಸದ್ಯಕ್ಕೆ ಭಾರತೀಯ ಗ್ರಾಹಕರಿಗೆ ಸರಿಹೊಂದುವುದಿಲ್ಲ ಎನ್ನುತ್ತಿರುವ ಮಾರುತಿ ಸುಜುಕಿ ಕಂಪನಿಯು ಸಾಂಪ್ರಾದಾಯಿಕ ಇಂಧನಗಳ ಬದಲಾಗಿ ಭಾರತೀಯ ಗ್ರಾಹಕರಿಗೆ ಸರಿಹೊಂದುವ ರೀತಿಯಲ್ಲಿ ಜೈವಿಕ ಇಂಧನ, ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲು ಎದುರುನೋಡತ್ತಿದೆ.

ಹೆಚ್ಚು ಕಾರ್ಯಸಾಧ್ಯತೆ ಮತ್ತು ಪ್ರಾಯೋಗಿಕ ಪರ್ಯಾಯಗಳನ್ನು ಎದುರುನೋಡುತ್ತಿರುವ ಮಾರುತಿ ಸುಜುಕಿಯು ಜೈವಿಕ ಇಂಧನ ಚಾಲಿತ ಕಾರುಗಳನ್ನು ಅಭಿವೃದ್ದಿಪಡಿಸುತ್ತಿದ್ದು, ಹೊಸ ಜೈವಿಕ ಇಂಧನ ಆಧರಿತ ಕಾರುಗಳನ್ನು ಮುಂಬರುವ ವರ್ಷಗಳಲ್ಲಿ ಮಾರುಕಟ್ಟೆಗೆ ಪರಿಚಯಿಸುವುದಾಗಿ ಮಾರುತಿ ಸುಜುಕಿ ಅಧ್ಯಕ್ಷರಾದ ಆರ್.ಸಿ ಭಾರ್ಗವ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.

ಸಸ್ಯ ಬೀಜಗಳು, ಕೃಷಿ ತ್ಯಾಜ್ಯ, ಪ್ರಾಣಿಗಳ ಕೊಬ್ಬು, ಆಮ್ಲಜನಕ ರಹಿತ ಜೀರ್ಣಕ್ರಿಯೆ ಮೊದಲಾದವುಗಳಿಂದ ಪಡೆದ ಇಂಧನವೇ ಜೈವಿಕ ಇಂಧನವಾಗಿದ್ದು, ಇದು ಸಾಂಪ್ರಾಯಿಕ ಇಂಧನಗಳ ಮೇಲಿನ ಅಲಂಬಲನೆ ತಗ್ಗಿಸುವುದರ ಜೊತೆಗೆ ಸಾರಿಗೆ ಇಂಧನ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ.

ಈಗಾಗಲೇ ಬಳಕೆಯಲ್ಲಿರುವ ಎರಡು ಸಾಮಾನ್ಯ ರೀತಿಯ ಜೈವಿಕ ಇಂಧನಗಳೆಂದರೆ ಅದು ಎಥೆನಾಲ್ ಮತ್ತು ಜೈವಿಕ ಡೀಸೆಲ್ ಮಾದರಿಗಳದ್ದು, ಇವೆರಡೂ ಜೈವಿಕ ಇಂಧನಗಳು ಹೊಸ ತಂತ್ರಜ್ಞಾನದ ಮೊದಲ ಪೀಳಿಗೆಯ ಉತ್ಪನ್ನಗಳಾಗಿವೆ.

ಹೊಸ ತಂತ್ರಜ್ಞಾನದೊಂದಿಗೆ ಅಸ್ತಿತ್ವದಲ್ಲಿರುವ ಎಂಜಿನ್ಗಳಿಂದ ಹೆಚ್ಚಿನ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ಹೊರತೆಗೆಯಲು ಜೈವಿಕ ಇಂಧನಗಳು ಅನುವು ಮಾಡಿಕೊಡಲಿದ್ದು, ಸಿಎನ್ಜಿ ಮತ್ತು ಜೈವಿಕ ಇಂಧನವನ್ನು ಪೆಟ್ರೋಲ್ ಶಕ್ತಿಗೆ ಹಸಿರು ಸೇರ್ಪಡೆಗೆ ಪರ್ಯಾಯವಾಗಿ ನೋಡಲಾಗುತ್ತಿದೆ.

ಆರ್ಸಿ ಭಾರ್ಗವ ಪ್ರಕಾರ ಭವಿಷ್ಯದಲ್ಲಿ ಇವಿಗಳು ಪೋರ್ಟ್ಫೋಲಿಯೊ ಮೇಲ್ಮಟ್ಟದಲ್ಲಿರಲಿದ್ದು, ಜೈವಿಕ ಇಂಧನವನ್ನು ಕೆಳಮಟ್ಟದ ಪರಿಗಣಿಸುವುದರೊಂದಿಗೆ ಪೆಟ್ರೋಲ್ ಮೇಲಿನ ಅವಲಂಬನೆ ತಗ್ಗಿಸುವ ಸುಳಿವು ನೀಡಿದ್ದಾರೆ.

ಇನ್ನು ಸಾರ್ವಕಾಲಿಕ ದಾಖಲೆ ಕಾಣುತ್ತಿರುವ ಪೆಟ್ರೋಲ್ ಬೆಲೆಯಿಂದಾಗಿ ವಾಹನ ಸವಾರರು ಹೈರಾಣಾಗಿ ಹೋಗಿದ್ದು, ನಿಯಂತ್ರಣ ತಪ್ಪುತ್ತಿರುವ ಪೆಟ್ರೋಲ್ ಬೆಲೆ ತಗ್ಗಿಸಲು ಕೇಂದ್ರ ಸರ್ಕಾರವು ಹೊಸ ನಿರ್ಣಯದೊಂದಿಗೆ ಮಹತ್ವದ ಮುನ್ನಡೆ ಸಾಧಿಸುತ್ತಿದೆ.

ಪೆಟ್ರೋಲ್ ದರ ಇಳಿಕೆಗಾಗಿ 2025ರ ವೇಳೆಗೆ ಪೆಟ್ರೋಲ್ನಲ್ಲಿ ಎಥೆನಾಲ್ ಪ್ರಮಾಣವನ್ನು ಶೇ.20 ಹೆಚ್ಚಿಸುವ ಗುರಿ ಹೊಂದಿದ್ದು, ಎಥೆನಾಲ್ ಮಿಶ್ರಣ ಪ್ರಮಾಣವನ್ನು ಹಂತ-ಹಂತವಾಗಿ ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರವು ಇದೀಗ ಅವಧಿಗೂ ಮುನ್ನ ಶೇ.10 ಎಥೆನಾಲ್ ಮಿಶ್ರಣದ ಗುರಿಯನ್ನು ತಲುಪಿದೆ.

ಯೋಜನೆಯ ಪ್ರಕಾರ 2022ರ ಕೊನೆಯಲ್ಲಿ ಶೇ.5 ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಹೊಂದಲಾಗಿತ್ತು. ಆದರೆ ನಿಗದಿತ ಅವಧಿಗೂ ಮುನ್ನವೇ ಎಥೆನಾಲ್ ಪ್ರಮಾಣದ ಮಿಶ್ರಣವನ್ನು ಮೇ ಆರಂಭದಲ್ಲಿಯೇ ಗುರಿತಲುಪಲಾಗಿದ್ದು, ವರ್ಷಾಂತ್ಯಕ್ಕೆ ಇದರ ಪ್ರಮಾಣವು ಶೇ.12ಕ್ಕೆ ಹೆಚ್ಚಳವಾಗಬಹುದಾಗಿದೆ.

ಹೆಚ್ಚುತ್ತಿರುವ ಪೆಟ್ರೋಲ್ ಬೆಲೆ ಇಳಿಕೆ ಹೊಸ ಯೋಜನೆಯು ಸಾಕಷ್ಟು ಸಹಕಾರಿಯಾಗುತ್ತಿದ್ದು, ಹೊಸ ಗುರಿಸಾಧನೆಯೊಂದಿಗೆ ಸರ್ಕಾರವು ಮುಂದಿನ ಅಕ್ಟೋಬರ್ ವೇಳೆಗೆ ಪೆಟ್ರೋಲ್ ಮೇಲಿನ ಹಸಿರು ತೆರಿಗೆ ಇಳಿಕೆಯನ್ನು ಪ್ರತಿ ಲೀಟರ್ಗೆ ರೂ.2 ರಷ್ಟು ಇಳಿಕೆ ಮಾಡಬಹುದಾಗಿದೆ.

ದೇಶದಲ್ಲಿ ಎಥೆನಾಲ್ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ತೈಲ ಸಚಿವಾಲಯ ಮತ್ತು ಸರ್ಕಾರದ ನೀತಿ ಆಯೋಗವು ಜಂಟಿಯಾಗಿ ಸಿದ್ಧಪಡಿಸಿದ ಮಿಶ್ರಣದ ಮಾರ್ಗಸೂಚಿಯಂತೆ 2022ರ ಅಂತ್ಯದ ವೇಳೆಗೆ ಶೇ. 5 ರಷ್ಟು ಮತ್ತು 2025ರ ವೇಳೆಗೆ ಶೇ.20 ರಷ್ಟು ಮಿಶ್ರಣ ಮಾಡುವ ಗುರಿಯನ್ನು ಹೊಂದಿತ್ತು.

ಇದೀಗ ನಿಗದಿತ ಅವಧಿಗೂ ಮುನ್ನ ಎಥೆನಾಲ್ ಮಿಶ್ರಣ ಪ್ರಮಾಣವು ಹೆಚ್ಚಳವಾಗಿರುವುದರಿಂದ ಮುಂಬರುವ ಕೇಂದ್ರದ ಚಳಿಗಾಲ ಅಧಿವೇಶನದ ವೇಳೆ ಹೊಸ ತೆರಿಗೆ ಕಡಿತ ಕುರಿತಂತೆ ಅಧಿಕೃತ ಸುತ್ತೋಲೆ ಹೊರಡಿಸಲಿರುವ ಕೇಂದ್ರ ಸರ್ಕಾರವು ಪೆಟ್ರೋಲ್ ಹೊರೆಯನ್ನು ತಗ್ಗಿಸಲಿದೆ.


Click it and Unblock the Notifications