ರಸ್ತೆ ಅಪಘಾತಕ್ಕಿರುವ ಪ್ರಮುಖ ಕಾರಣವೇನು ಗೊತ್ತೇ?
ದೇಶದ್ಯಾಂತ ರಸ್ತೆಗಳಲ್ಲಿ ದಿನಂಪ್ರತಿ ಸಾವಿರಾರು ಅಪಘಾತ ಪ್ರಕರಣಗಳು ನಡೆಯುತ್ತಿದ್ದು, ಅನೇಕ ಮಂದಿ ಸಾವಿಗೆ ಶರಣಾಗುತ್ತಿದ್ದಾರೆ. ಇನ್ನು ಅವಘಡಗಳಲ್ಲಿ ಸಂಭವಿಸುವ ಗಾಯಾಳುಗಳ ಸಂಖ್ಯೆಯು ಅತಿಯಾಗಿದೆ. ಆದರೆ ಇವೆಲ್ಲದಕ್ಕಿರುವ ಪ್ರಮುಖ ಕಾರಣವೇನು ಗೊತ್ತೇ?
ಸ್ವತ: ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬಿಚ್ಚಿಡುವ ಪ್ರಕಾರ, ಭ್ರಷ್ಟಾಚಾರವೇ ದೇಶದಲ್ಲಿ ನಡೆಯುತ್ತಿರುವ ಅಪಘಾತಕ್ಕಿರುವ ಪ್ರಮುಖ ಕಾರಣ ಎಂಬ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ದೇಶದಲ್ಲಿ ಕಳೆದೊಂದು ವರ್ಷದಲ್ಲಿ ನಡೆದಿರುವ ರಸ್ತೆ ಅಪಘಾತಗಳಲ್ಲಿ 1.5 ಲಕ್ಷದಷ್ಟು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಶೇಕಡಾ 80ರಷ್ಟು ಅಪಘಾತಗಳು ದೋಷಯುಕ್ತ ರಸ್ತೆ ಎಂಜಿನಿಯರಿಂಗ್, ಕೌಶಲ್ಯ ರಹಿತ ಚಾಲಕರು ಮತ್ತು ದೋಷಯುಕ್ತ ವಾಹನಗಳಿಂದಾಗಿ ಸಂಭವಿಸಿರುವುದಾಗಿ ವಿವರಿಸಿದ್ದಾರೆ.

ಆಂಧ್ರ ಪ್ರದೇಶ ಸಾರಿಗೆ ಇಲಾಖೆಯು ಆಯೋಜಿಸಿರುವ ರಸ್ತೆ ಸುರಕ್ಷತೆಯ ಮೇಲೆ ರಾಷ್ಟ್ರೀಯ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ನಿತಿನ್ ಗಡ್ಕರಿ, ಭ್ರಷ್ಟಾಚಾರವು ದೇಶದಲ್ಲಿ ಅತಿ ಹೆಚ್ಚು ಕೌಶಲ್ಯ ರಹಿತ ಚಾಲಕರನ್ನು ಸೃಷ್ಟಿ ಮಾಡುತ್ತಿದೆ ಎಂಬ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಸಾರಿಗೆ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಯಲು ಸರಕಾರ ಬದ್ಧವಾಗಿದೆ ಎಂದು ತಿಳಿಸಿರುವ ಗಡ್ಕರಿ, ನೂತನ ತಂತ್ರಜ್ಞಾನದ ಅವಿಷ್ಕಾರದ ಮೂಲಕ ಪಾದದರ್ಶಕ ತರುವುದಾಗಿ ಭರವಸೆ ಮೂಡಿಸಿದ್ದಾರೆ.

ನೂತನ ಚಾಲನಾ ಪರವಾನಗಿ, ಹೊಸ ವಾಹನಗಳ ದಾಖಲಾತಿ ಹೀಗೆ ಸಾರಿಗೆ ಇಲಾಖೆಯ ವಿಭಾಗದಲ್ಲಿ ಸಂಭವಿಸುವ ಭ್ರಷ್ಟಚಾರಗಳಿಗೆ ಕಡಿವಾಣ ಹಾಕಲಾಗುವುದು ಎಂದು ವಿವರಿಸಿದ್ದಾರೆ.

ಎಲ್ಲ ರಾಜ್ಯಗಳಲ್ಲೂ ಚಾಲಕ ಹಾಗೂ ಟ್ರಾಫಿಕ್ ಅಧ್ಯಯನ ಕೇಂದ್ರಗಳನ್ನು ತೆರೆಯುವುದಾಗಿಯೂ ತಿಳಿಸಿರುವ ಗಡ್ಕರಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಕೇಂದ್ರ ಹಾಗೂ ಅಂಬುಲೆನ್ಸ್ ಗಳನ್ನು ನಿಯೋಜಿಸಲಾಗುವುದು ಎಂದಿದ್ದಾರೆ.

ಅದೇ ಹೊತ್ತಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ 786 'ಬ್ಲ್ಯಾಕ್ ಸ್ಪಾಟ್' ಗಳನ್ನು ಪತ್ತೆ ಹಚ್ಚಿರುವುದಾಗಿ ಗಡ್ಕರಿ ತಿಳಿಸಿದ್ದಾರೆ. ಅಲ್ಲದೆ ನಿಕಟ ಭವಿಷ್ಯದಲ್ಲೇ ಅಪಘಾತ ಪ್ರಕರಣಗಳನ್ನು ಅರ್ಧದಷ್ಟು ಇಳಿಸುವುದು ಇಲಾಖೆಯ ಗುರಿಯಾಗಿದೆ ಎಂದಿದ್ದಾರೆ.

ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವುದರ ನಿಟ್ಟಿನಲ್ಲಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕಾಗಿ 11,000 ಕೋಟಿ ರುಪಾಯಿಗಳನ್ನು ವ್ಯಯ ಮಾಡಲಿದೆ. ಹಾಗೆಯೇ ಅವಘಡಗಳನ್ನು ತಡೆ ಹಿಡಿಯಲು ನುರಿತ ರಸ್ತೆ ಎಂಜಿನಿಯರಿಂಗ್ ಅತ್ಯಗತ್ಯವಾಗಿದೆ ಎಂದಿದ್ದಾರೆ.

ಏತನ್ಮಧ್ಯೆ ಪಾನಮತ್ತ ಚಾಲನೆ, ವಾಹನಗಳಲ್ಲಿ ಅಮಿತ ಭಾರ, ಓವರ್ ಸ್ಪೀಡಿಂಗ್ ರಸ್ತೆ ಅಪಘಾತಕ್ಕಿರುವ ಇತರೆ ಎಂಬದನ್ನು ಬೊಟ್ಟು ಮಾಡಲಾಗಿದೆ. ಈ ಸಂಬಂಧ ಟ್ರಾಫಿಕ್ ನಿಯಮಗಳ ಬಗ್ಗೆ ಚಾಲಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಬೋಧನೆ ಮಾಡಬೇಕಾದ ಅಗತ್ಯವಿದೆ.


Click it and Unblock the Notifications








