ರೆಡ್ ಲೈಟ್ ಆನ್, ಎಂಜಿನ್ ಆಫ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಸರ್ಕಾರ
ಚಳಿಗಾಲ ಆರಂಭವಾಗುವುದಕ್ಕೂ ಮುನ್ನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯವನ್ನು ಎದುರಿಸುವ ಪ್ರಯತ್ನಗಳು ತೀವ್ರಗೊಂಡಿವೆ. ಒಂದು ಕಡೆ ವಾಹನಗಳಿಗೆ ಮಾನ್ಯವಾದ ಪಿಯುಸಿ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲಾಗಿದೆ. ಮತ್ತೊಂದೆಡೆ ಟ್ರಾಫಿಕ್ ನಲ್ಲಿ ನಿಂತಿರುವಾಗ ವಾಹನಗಳ ಎಂಜಿನ್ ಅನ್ನು ಆಫ್ ಮಾಡುವಂತೆ ವಾಹನ ಸವಾರರಿಗೆ ಸೂಚನೆ ನೀಡಲಾಗಿದೆ.

ದೆಹಲಿಯ ಸಾರಿಗೆ ಇಲಾಖೆಯು ಸೋಮವಾರ ದೆಹಲಿಯಲ್ಲಿ ರೆಡ್ ಲೈಟ್ ಆನ್, ಎಂಜಿನ್ ಆಫ್ ಅಭಿಯಾನವನ್ನು ಆರಂಭಿಸಿದೆ. ದೆಹಲಿಯಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಈ ಅಭಿಯಾನವನ್ನು ಒಂದು ತಿಂಗಳು ದೆಹಲಿಯ 100 ಪ್ರಮುಖ ಟ್ರಾಫಿಕ್ ಸಿಗ್ನಲ್ ಗಳಲ್ಲಿ ನಡೆಸಲಾಗುತ್ತದೆ. 2,500 ಕ್ಕೂ ಅಧಿಕ ನಾಗರಿಕ ರಕ್ಷಣಾ ಸ್ವಯಂಸೇವಕರನ್ನು ಈ ಅಭಿಯಾನದಲ್ಲಿ ನಿಯೋಜಿಸಲಾಗಿದೆ.

ನವೆಂಬರ್ 18 ರವರೆಗೆ ನಡೆಯಲಿರುವ ಈ ಅಭಿಯಾನದಲ್ಲಿ ಸ್ವಯಂ ಸೇವಕರು ನಗರದ 100 ಟ್ರಾಫಿಕ್ ಜಂಕ್ಷನ್ ಗಳಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಹಾಗೂ ಮಧ್ಯಾಹ್ನ 2 ರಿಂದ ರಾತ್ರಿ 8 ರವರೆಗೆ ಎರಡು ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಸ್ವಯಂಸೇವಕರು ಮಾಲಿನ್ಯದ ಬಗ್ಗೆ ವಾಹನ ಸವಾರರಿಗೆ ಜಾಗೃತಿ ಮೂಡಿಸುತ್ತಾರೆ. ಇದರ ಜೊತೆಗೆ ಟ್ರಾಫಿಕ್ ದೀಪಗಳು ಕೆಂಪು ಬಣ್ಣಕ್ಕೆ ತಿರುಗಿದಾಗ ಎಂಜಿನ್ ಸ್ವಿಚ್ ಆಫ್ ಮಾಡುವಂತೆ ವಾಹನ ಸವಾರರಿಗೆ ತಿಳಿಸಲಿದ್ದಾರೆ.

ಅಭಿಯಾನವನ್ನು ಆರಂಭಿಸುವ ಸಲುವಾಗಿ ದೆಹಲಿಯ ಪರಿಸರ ಖಾತೆ ಸಚಿವರಾದ ಗೋಪಾಲ್ ರೈ ರವರು ಐಟಿಒ ಕ್ರಾಸಿಂಗ್ಗೆ ಭೇಟಿ ನೀಡಿದ್ದರು. ಈ ವೇಳೆ ಮಾಲಿನ್ಯದ ವಿರುದ್ಧದ ಹೋರಾಟದಲ್ಲಿ ಯಶಸ್ಸನ್ನು ಸಾಧಿಸಲು ಬೆಂಬಲ ನೀಡುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಚಳಿಗಾಲದ ತಿಂಗಳುಗಳಲ್ಲಿ, ದೆಹಲಿಯಲ್ಲಿ ವಾಯು ಮಾಲಿನ್ಯವು ಅಪಾಯದ ಮಟ್ಟವನ್ನು ಮೀರುತ್ತದೆ.

ಪೆಟ್ರೋಲಿಯಂ ಕನ್ಸರ್ವೇಷನ್ ರಿಸರ್ಚ್ ಅಸೋಸಿಯೇಶನ್ (ಪಿಸಿಆರ್ಎ) ದ ಡೇಟಾವನ್ನು ಉಲ್ಲೇಖಿಸಿ ಮಾತನಾಡಿದ ಸಚಿವ ಗೋಪಾಲ್ ರೈ ರವರು, ವಾಹನ ಸವಾರರು ಟ್ರಾಫಿಕ್ ಸಿಗ್ನಲ್ಗಳಲ್ಲಿ ಎಂಜಿನ್ಗಳನ್ನು ಆಫ್ ಮಾಡಿದರೆ ಮಾಲಿನ್ಯವನ್ನು 13% ನಿಂದ 20% ವರೆಗೂ ಕಡಿಮೆ ಮಾಡಬಹುದು ಎಂದು ಹೇಳಿದರು. ಇದು ಸಾರ್ವಜನಿಕ ಅಭಿಯಾನವಾಗಿದ್ದು, ಮಾಲಿನ್ಯವನ್ನು ಹೊಡೆದೊಡಿಸಲು ನಾವೆಲ್ಲರೂ ಒಟ್ಟಾಗಿ ಹೋರಾಡಬೇಕು.

ಈ ಅಭಿಯಾನವನ್ನು ಬೆಂಬಲಿಸುವಂತೆ ನಾನು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು. ಕಳೆದ ವರ್ಷವೂ ಇದೇ ರೀತಿಯ ಅಭಿಯಾನವನ್ನು ದೆಹಲಿಯಲ್ಲಿ ಆಯೋಜಿಸಲಾಗಿತ್ತು. ದೆಹಲಿಯಲ್ಲಿ ಚಳಿಗಾಲ ಶುರುವಾಗುವ ಮುನ್ನ ಮಾಲಿನ್ಯವನ್ನು ನಿಯಂತ್ರಿಸಲು ಹಾಗೂ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕಳೆದ ತಿಂಗಳಷ್ಟೇ ವಾಹನಗಳು ಪಿಯುಸಿ ಪ್ರಮಾಣ ಪತ್ರ ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ. ಇನ್ನು ಮುಂದೆ ದೆಹಲಿಯಲ್ಲಿ ಮಾನ್ಯವಾದ ಪಿಯುಸಿ ಪ್ರಮಾಣ ಪತ್ರವಿಲ್ಲದೇ ವಾಹನ ಚಾಲನೆ ಮಾಡಿದರೆ ರೂ. 10,000 ಗಳವರೆಗೆ ದಂಡ ವಿಧಿಸಬಹುದು. ದೆಹಲಿಯಲ್ಲಿ ಸಾರಿಗೆ ಇಲಾಖೆಯಿಂದ ಅನುಮೋದಿಸಲ್ಪಟ್ಟ 900 ಕ್ಕೂ ಹೆಚ್ಚು ಮಾಲಿನ್ಯ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.

ಈ ಕೇಂದ್ರಗಳನ್ನು ನಗರದಾದ್ಯಂತವಿರುವ ಪೆಟ್ರೋಲ್ ಬಂಕ್ ಹಾಗೂ ವರ್ಕ್ ಶಾಪ್ ಗಳಲ್ಲಿ ಸ್ಥಾಪಿಸಲಾಗಿದೆ. ದೆಹಲಿ ಸರ್ಕಾರವು ಎಲ್ಲಾ ವಾಹನ ಸವಾರರು ಈ ಕೇಂದ್ರಗಳಲ್ಲಿ ತಮ್ಮ ವಾಹನಗಳನ್ನು ಪರೀಕ್ಷಿಸಿ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಪಡೆಯುವಂತೆ ಸೂಚಿಸಿದೆ. ವಾಹನಗಳು ಕಾರ್ಬನ್ ಮಾನಾಕ್ಸೈಡ್ ಹಾಗೂ ಕಾರ್ಬನ್ ಡೈಆಕ್ಸೈಡ್ ನಂತಹ ವಿವಿಧ ಮಾಲಿನ್ಯಕಾರಕ ಅಂಶಗಳನ್ನು ಹೊರಸೂಸುತ್ತವೆ.

ಈ ಅಂಶಗಳನ್ನು ಕಾಲ ಕಾಲಕ್ಕೆ ಪರೀಕ್ಷೆಗೊಳಪಡಿಸಿ, ಪಿಯುಸಿ ಪ್ರಮಾಣಪತ್ರ ನೀಡಲಾಗುತ್ತದೆ. ಕೇಂದ್ರ ಮೋಟಾರು ವಾಹನ ಕಾಯಿದೆ, 1989 ರ ಅಡಿಯಲ್ಲಿ ಪಿಯುಸಿ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಪಿಯುಸಿ ಪ್ರಮಾಣ ಪತ್ರಗಳನ್ನು ನೀಡಲು ಪೆಟ್ರೋಲ್ ಬಂಕ್ ಗಳಲ್ಲಿ ಆಟೋಮ್ಯಾಟಿಕ್ ಪಿಯುಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ, ಈ ಕೇಂದ್ರಗಳಲ್ಲಿ ವಾಹನಗಳನ್ನು ಪರಿಶೀಲಿಸಿ ತಕ್ಷಣವೇ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

ಒಂದು ವೇಳೆ ವಾಹನಗಳು ಹೊರಸೂಸುವಿಕೆ ಮಿತಿಯನ್ನು ಮೀರಿದರೆ ನಿರಾಕರಣೆ ಚೀಟಿ ನೀಡಲಾಗುತ್ತದೆ. ರಸ್ತೆ ಮತ್ತು ಸಾರಿಗೆ ಇಲಾಖೆಯು ಈ ವರ್ಷದ ಜೂನ್ ತಿಂಗಳಿನಲ್ಲಿ ಈ ಕುರಿತು ಅಧಿಸೂಚನೆಯನ್ನು ಹೊರಡಿಸಿತ್ತು. ವಾಹನಗಳ ಪಿಯುಸಿ ಪ್ರಮಾಣ ಪತ್ರಕ್ಕಾಗಿ ಕೇಂದ್ರ ಸರ್ಕಾರವು ಸೆಂಟ್ರಲ್ ಡೇಟಾಬೇಸ್ ಸಿದ್ಧಪಡಿಸುತ್ತಿದೆ ಎಂದು ಹೇಳಲಾಗಿದೆ. ದೇಶಾದ್ಯಂತ ಏಕರೂಪ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ (ಪಿಯುಸಿ) ಅಳವಡಿಸಲಾಗುವುದು.

ವಾಹನಗಳ ಡೇಟಾಬೇಸ್ ಅನ್ನು ರಾಷ್ಟ್ರೀಯ ರಿಜಿಸ್ಟರ್ಗೆ ಲಿಂಕ್ ಮಾಡಲಾಗುತ್ತದೆ. ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ಆರ್ಟಿಒಗಳ ಹೆಚ್ಚಿನ ಸೇವೆಗಳನ್ನು ಆನ್ಲೈನ್ ಮೂಲಕ ನೀಡಲಾಗುತ್ತಿದೆ. ಲರ್ನರ್ ಲೈಸೆನ್ಸ್, ನೋಂದಣಿ ಪ್ರಮಾಣಪತ್ರ, ಪರವಾನಗಿ ಹಾಗೂ ರಸ್ತೆ ತೆರಿಗೆಗೆ ಸಂಬಂಧಿಸಿದ ಎಲ್ಲಾ ಸೇವೆಗಳನ್ನು ಆನ್ಲೈನ್ ಮೂಲಕ ನೀಡಲಾಗುತ್ತಿದೆ. ಚಾಲನಾ ಪರವಾನಗಿಗೆ ಅಗತ್ಯವಿರುವ ವೈದ್ಯಕೀಯ ಪ್ರಮಾಣಪತ್ರ ಒದಗಿಸುವ ಪ್ರಕ್ರಿಯೆಯನ್ನು ಸಹ ಆನ್ಲೈನ್ ಮಾಡಲಾಗಿದೆ.


Click it and Unblock the Notifications