ಟೆಸ್ಲಾಗೆ ಗುಡ್ ಬೈ ಹೇಳಿದ ಭಾರತೀಯ: ಮಾಲಿನ್ಯ ರಹಿತ ಭಾರತವೇ ಇವರ ಗುರಿ!
ಹೆಚ್ಚುತ್ತಿರುವ ಮಾಲಿನ್ಯವು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು, ಮಾಲಿನ್ಯ ನಿಯಂತ್ರಣಕ್ಕೆ ಇವಿ ವಾಹನ ಬಳಕೆಯೊಂದೆ ಸಮಸ್ಯೆ ಪರಿಹಾರವಾಗಿದೆ ಎನ್ನಬಹುದು. ಈ ನಿಟ್ಟಿನಲ್ಲಿ ಸ್ಟಾರ್ಟ್ಅಪ್ ಕಂಪನಿಗಳು ಇವಿ ವಾಹನ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಟೆಸ್ಲಾ ಮಾಜಿ ಉದ್ಯೋಗಿಯೊಬ್ಬರ ಹೊಸ ಸಂಕಲ್ಪವು ಭವಿಷ್ಯದ ದಿನಗಳಿಗೆ ಉತ್ತಮ ನಡೆಯಾಗಿದೆ.

ಅಮೆರಿಕಾ ಮೂಲದ ಟಾಪ್ ಎಲೆಕ್ಟ್ರಿಕ್ ಕಾರ್ ಕಂಪನಿಯಾದ ಟೆಸ್ಲಾದಲ್ಲಿ ಕೆಲಸ ಸಿಕ್ಕರೆ ಯಾರಾದರೂ ಬೇಡ ಎನ್ನುವವರು ಇದ್ದಾರೆಯೇ? ಆದರೆ ಈ ವಿಶೇಷ ವ್ಯಕ್ತಿಯು ತಿಂಗಳಿಗೆ ಲಕ್ಷಗಟ್ಟಲೆ ಸಂಬಳ, ಹಲವಾರು ಉಚಿತ ಸೌಲಭ್ಯ, ಐಷಾರಾಮಿ ಸೌಕರ್ಯಗಳನ್ನು ತ್ಯಜಿಸಿ ದೇಶಕ್ಕಾಗಿ, ತಾಯ್ನಾಡಿನ ಜನರಿಗಾಗಿ ಹೊಸದಾಗಿ ಏನಾದರು ಮಾಡಬೇಕೆಂಬ ಸಂಕಲ್ಪದೊಂದಿಗೆ ತನ್ನೂರಿಗೆ ಮರಳಿದ್ದು, ಮಾಲಿನ್ಯ ತಡೆಯುವ ಉದ್ದೇಶದೊಂದಿಗೆ ಹೊಸ ಯೋಜನೆ ಕೈ ಹಾಕಿದ್ದಾರೆ.

ಅಮೆರಿಕದಲ್ಲಿ ಟೆಸ್ಲಾ ಕಂಪನಿಯ ಅತ್ಯುತ್ತಮ ಹುದ್ದೆಯನ್ನು ತೊರೆದು ಭಾರತಕ್ಕೆ ಮರಳಿರುವ ಇವರು ಹೈದರಾಬಾದಿನ ರಾಣಿ ವೆಂಕಟೇಶ್ ಎನ್ನಲಾಗಿದ್ದು, ಇವರು ಮಾಲಿನ್ಯ ತಡೆ ಧ್ಯೇಯದೊಂದಿಗೆ ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ಈ ಸಂಚಲನಕ್ಕೆ ಕಾರಣರಾಗಿದ್ದಾರೆ.

ದೇಶವನ್ನು ಅಭಿವೃದ್ಧಿಪಡಿಸುತ್ತಿರುವ ಸ್ಟಾರ್ಟ್ಅಪ್ ಕಂಪನಿಗಳಲ್ಲಿ ರಾಣಿ ವೆಂಕಟೇಶ್ ಸ್ಥಾಪಿಸಿರುವ ಕಂಪನಿಯು ವಿಶೇಷ ಎನ್ನಬಹುದಾಗಿದ್ದು, ಮಾಲಿನ್ಯವನ್ನು ಪರಿಣಾಮಕಾರಿ ತಗ್ಗಿಸಲು ಅವರು ಸಿದ್ದಪಡಿಸಿಕೊಂಡಿರುವ ಪ್ರಮುಖ ಯೋಜನೆಗಳು ಭವಿಷ್ಯದಲ್ಲಿ ಹೊಸ ಬದಲಾವಣೆಗೆ ಕಾರಣವಾಗುವುದರಲ್ಲಿ ಎರಡು ಮಾತಿಲ್ಲ.

ಶ್ರೀನಿವಾಸ್ ಅವರು ಟೆಸ್ಲಾ ಕಂಪನಿಯಲ್ಲಿ ಹಿರಿಯ ಐಟಿ ಮ್ಯಾನೇಜರ್ ಹುದ್ದೆಯನ್ನು ನಿರ್ವಹಿಸಿ 2017 ರಲ್ಲಿ ಭಾರತಕ್ಕೆ ಮರಳಿದ್ದು, ಭಾರತಕ್ಕೆ ಮರಳಿದ ನಂತರ ದೇಶದಲ್ಲಿ ಪ್ರಮುಖ ನಗರಗಳಲ್ಲಿ ಮಾಲಿನ್ಯ ತಡೆಗಾಗಿ ಹೊಸ ಯೋಜನೆಯೊಂದನ್ನು ರೂಪಿಸಿದರು.

ಇಂಧನ ಬಳಕೆಯ ಬದಲಾಗಿ ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ಇನ್ನು ಹಲವು ವರ್ಷಗಳೇ ಬೇಕಿರುವುದರಿಂದ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್ಜಿಯಿಂದ ಚಲಿಸುವ ಆಟೋಗಳನ್ನೇ ಎಲೆಕ್ಟ್ರಿಕ್ ಆಟೋಗಳಾಗಿ ಪರಿವರ್ತಿಸಲು ಕನ್ವರ್ಶನ್ ಕಿಟ್ಗಳನ್ನು ಅಭಿವೃದ್ಧಿಪಡಿಸುವ ಜೀರೋ 21 ಎಂಬ ಸ್ಟಾರ್ಟ್ಅಪ್ ಕಂಪನಿಯನ್ನು ಹುಟ್ಟುಹಾಕಿದರು.

ದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಸಮಸ್ಯೆಯಿಂದ ಹುಟ್ಟಿಕೊಂಡ ಚಿಂತನೆ
ಶ್ರೀನಿವಾಸ್ ಅವರು ತಮ್ಮ 26 ವರ್ಷಗಳ ವೃತ್ತಿ ಜೀವನದಲ್ಲಿ ಸುಮಾರು 20 ದೇಶಗಳಲ್ಲಿ ಕೆಲಸ ಮಾಡಿದ್ದಾರೆ. 2014ರಲ್ಲಿ ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ಕಾರ್ ಕಂಪನಿಯಾದ ಟೆಸ್ಲಾದಲ್ಲಿ ಐಟಿ ಮ್ಯಾನೇಜರ್ ಆಗಿ ನೇಮಕಗೊಂಡು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಂತರ ಭಾರತದಲ್ಲಿ ವಾಹನಗಳಿಂದ ಉಂಟಾಗುವ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಭಾರತಕ್ಕೆ ಮರಳಿ ಸ್ಟಾರ್ಟ್ಅಪ್ ಕಂಪನಿ ಪ್ರಾರಂಭಿಸಲು ನಿರ್ಧರಿಸಿದರು.

ಪೂರ್ವ ನಿರ್ಧಾರದಂತೆ ಭಾರತಕ್ಕೆ ಮರಳಿ ಜೀರೋ 21 ರಿನ್ಯೂವಬಲ್ ಎನರ್ಜಿ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಥಾಪಿಸಿದರು. ಇಲ್ಲಿ ಶೂನ್ಯ 21 ಎಂದರೆ 21ನೇ ಶತಮಾನದಲ್ಲಿ ವಾಯು ಮತ್ತು ಶಬ್ದ ಮಾಲಿನ್ಯವನ್ನು ಸಂಪೂರ್ಣ ಶೂನ್ಯವಾಗಿಸುವುದು ಎಂದು ಸೂಚಿಸುತ್ತದೆ.

2018ರ ಆರಂಭದಲ್ಲಿ ಶ್ರೀನಿವಾಸ್ ತನ್ನ ಸ್ಟಾರ್ಟ್ಅಪ್ನ ಮೊದಲ ಉತ್ಪನ್ನವಾದ ಸ್ಮಾರ್ಟ್ ತ್ರಿ-ವೀಲರ್ ಎಲೆಕ್ಟ್ರಿಕ್ ಕಾರ್ಗೋವನ್ನು ಪರಿಚಯಿಸಿದರು. ಇದರ ವಿಶೇಷತೆ ಎಂದರೆ ಬ್ಯಾಟರಿ ಬದಲಾಯಿಸದೆ 10 ವರ್ಷಗಳವರೆಗೆ ಬಳಿಕೆ ಮಾಡಬಹುದಾಗಿದೆ.

ಈ ಎಲೆಕ್ಟ್ರಿಕ್ ಕಾರ್ಗೋ ವಾಹನವು 350-400 ಕೆ.ಜಿ ಸರಕು, ಸಾಮಗ್ರಿಯನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ. ಈ ಕಾರ್ಗೋ 160 Ah ಲಿಥಿಯಂ ಐಯಾನ್ ಫಾಸ್ಫೇಟ್ ಬ್ಯಾಟರಿ ಪ್ಯಾಕ್ ಸಹಾಯದಿಂದ ಕಾರ್ಯ ನಿರ್ವಹಿಸುತ್ತದೆ. ಪೂರ್ಣ ಚಾರ್ಜಿಂಗ್ನೊಂದಿಗೆ ಗರಿಷ್ಠ 120-130 ಕಿ.ಮೀ ಕ್ರಮಿಸಿಸಬಲ್ಲದು ಹಾಗೂ ಗಂಟೆಗೆ ಗರಿಷ್ಠ 30 ಕಿ.ಮೀ ವೇಗದಲ್ಲಿ ಚಲಿಸಬಲ್ಲದು.

ಜೀರೋ21 ಎಲೆಕ್ಟ್ರಿಕ್ ಕಾರ್ಗೋ ಗ್ರಾಹಕರಲ್ಲಿ ಅಡುಗೆ ಅನಿಲ ಮತ್ತು ವಾಟರ್ ಕ್ಯಾನ್ಗಳನ್ನು ಪೂರೈಸುವ ಕಂಪನಿಗಳು ಮತ್ತು ಲಾಸ್ಟ್ ಮೈಲ್ ಡೆಲಿವರಿ ನೀಡುವ ಇ-ಕಾಮರ್ಸ್ ಕಂಪನಿಗಳು ಸಹ ಇವೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ. ಕಂಪನಿಯು ಪ್ರಸ್ತುತ ಹೈದರಾಬಾದ್ನಲ್ಲಿ ಲಭ್ಯವಿರುವ ಮೂರು ಚಕ್ರಗಳ ಎಲೆಕ್ಟ್ರಿಕ್ ಪ್ರಯಾಣಿಕ ವಾಹನಗಳನ್ನು ಸಹ ಮಾರಾಟ ಮಾಡುತ್ತದೆ.

ಸಾಮಾನ್ಯ ಆಟೋ ಕೇವಲ ಮೂರು ಗಂಟೆಗಳಲ್ಲಿ ಇ-ಆಟೋ ಮಾದರಿಯಾಗಿ ಬದಲಾವಣೆ
ಕಂಪನಿಯು ಡೀಸೆಲ್ ಕಾರ್ಗೋ ಮತ್ತು ಪ್ಯಾಸೆಂಜರ್ ಆಟೋಗಳನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸುತ್ತಿದೆ. ಈ ನಿಟ್ಟಿನಲ್ಲಿ ಕಂಪನಿಯು ತನ್ನ ಸಂಶೋಧನೆಯಿಂದ ಅಭಿವೃದ್ಧಿಪಡಿಸಿದ ಎಲೆಕ್ಟ್ರಿಕ್ ರೆಟ್ರೊಫಿಟಿಂಗ್ ಕಿಟ್ ಮೂಲಕ ಕೇವಲ 3-4 ಗಂಟೆಗಳಲ್ಲಿ ಎಲೆಕ್ಟ್ರಿಕ್ ಆಟೋವನ್ನಾಗಿ ಪರಿವರ್ತಿಸುತ್ತಿದೆ.

ದೆಹಲಿ ಸರ್ಕಾರವು ಇತ್ತೀಚೆಗೆ ಎಲೆಕ್ಟ್ರಿಕ್ ರೆಟ್ರೋಫಿಟಿಂಗ್ ಕಿಟ್ಗಳನ್ನು ಕಾನೂನುಬದ್ಧಗೊಳಿಸಿದ ನಂತರ ಜೀರೋ21 ಕಂಪನಿಯನ್ನು ಭಾರತದಲ್ಲಿ ಸರ್ಟಿಫೈಡ್ ರೆಟ್ರೋಫಿಟ್ಟಿಂಗ್ ಕಂಪನಿಯಾಗಿ ನೋಂದಾಯಿಸಲಾಗಿದೆ.

ಎಲೆಕ್ಟ್ರಿಕ್ ರೆಟ್ರೊಫಿಟ್ಟಿಂಗ್ ಕಿಟ್ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಕೊಳ್ಳುವಿಕೆಯನ್ನು ವೇಗಗೊಳಿಸುತ್ತದೆ ಎಂದು ರಾಣಿ ಶ್ರೀನಿವಾಸ್ ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಕಿಟ್ಗಳು ಕಡಿಮೆ ವೆಚ್ಚವಷ್ಟೆ ಅಲ್ಲದೇ, ಕಂಪನಿಯು ಹೊಸ ಎಲೆಕ್ಟ್ರಿಕ್ ವಾಹನವನ್ನು ಖರೀದಿ ಮಾಡಿರುವಂತೆ ಸೇವಾ ವಾರಂಟಿಯನ್ನು ಸಹ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.


Click it and Unblock the Notifications