ಅಪಘಾತದಿಂದ ರಕ್ಷಣೆಗಾಗಿ ಅತಿಮಾನುಷ ತಂತ್ರಜ್ಞಾನ
ತಂತ್ರಜ್ಞಾನವು ಎಷ್ಟೇ ಮುಂದುವರಿದರೂ ರಸ್ತೆಗಳಲ್ಲಿ ಸಂಭವಿಸುತ್ತಿರುವ ಅಪಘಾತ ಪ್ರಮಾಣದಲ್ಲಿ ಮಾತ್ರ ಕಡಿಮೆಯಾಗಿಲ್ಲ. ವಿಶ್ವದ್ಯಾಂತ ನಡೆಯುತ್ತಿರುವ ರಸ್ತೆ ಅಪಘಾತಗಳಿಗೆ ಅನೇಕ ಬಡ ಜೀವಗಳು ಬಲಿಯಾಗುತ್ತಿದೆ. ಈ ನಿಟ್ಟಿನಲ್ಲಿ ವಾಹನ ಅಪಘಾತವನ್ನು ತಡೆಯಲು ನಿರಂತರ ಅಧ್ಯಯನವು ಜಾರಿಯಲ್ಲಿದೆ.
ಚಾಲಕ ಹಾಗೂ ಪ್ರಯಾಣಿಕರಿಗೆ ಏರ್ ಬ್ಯಾಗ್ ಗಳಂತಹ ಭದ್ರತಾ ವೈಶಿಷ್ಟ್ಯಗಳನ್ನು ಒದಗಿಸಿದರೂ ಒಂದು ಹಂತದ ವರೆಗೆ ಮಾತ್ರ ಇದರಿಂದ ರಕ್ಷಣೆ ಪಡೆಯಲು ಸಾಧ್ಯ. ಕಾರುಗಳ ವೇಗ ಜಾಸ್ತಿಯಾದಂತೆ ಅಪಘಡ ಸಾಧ್ಯತೆಯು ಹೆಚ್ಚುತ್ತದೆ. ಅಪಘಾತಗಳ ವೇಳೆ ಉಂಟಾಗುವ ಅತಿಯಾದ ಬಲವನ್ನು ಎದುರಿಸುವ ಶಕ್ತಿ ನಮ್ಮ ದೇಹಕ್ಕಿರುವುದಿಲ್ಲ. ಈ ನಿಟ್ಟಿನಲ್ಲಿ ಕಾರು ಅಪಘಾತದಿಂದ ಪಾರಾಗಲು ಅತಿ ನೂತನ 'ಗ್ರಹಾಂ' (Graham) ಎಂಬ ಅತಿಮಾನುಷ ಕಲ್ಪನೆಗೆ ರೂಪುರೇಷೆ ನೀಡಲಾಗಿದೆ.

ಮೊನಶ್ ವಿಶ್ವವಿದ್ಯಾಲಯದ ಅಪಘಾತ ಅಧ್ಯಯನ ಕೇಂದ್ರದ ಹಿರಿಯ ಸಂಶೋಧಕರಾಗಿರುವ ಡಾ. ಡೇವಿಡ್ ಲೋಗನ್, ರಾಯಲ್ ಮೆಲ್ಪರ್ನ್ ಆಸ್ಪತ್ರೆಯ ಮಾನಸಿಕ ಆಘಾತ ತಜ್ಞ ಕ್ರಿಸ್ಟಿಯನ್ ಕೆನ್ ಫೀಲ್ಡ್ ಮತ್ತು ಕಲಾವಿದೆ ಪ್ಯಾಟ್ರಿಸಿಯಾ ಪಿಸ್ಸಿನಿನಿ ಸಹಾಯದಿಂದ ಗ್ರಹಾಂ ಮಾನವ ಪ್ರತಿರೂಪವನ್ನು ರಚಿಸಲಾಗಿದೆ.

ಅಪಘಾತದ ವೇಳೆ ಚಾಲಕ, ಪ್ರಯಾಣಿಕ ಹಾಗೂ ಪಾದಚಾರಿಗಳಿಗೆ ಅತಿ ಹೆಚ್ಚು ಗಾಯಗಳನ್ನುಂಟು ಮಾಡುವ ಭೀತಿಯಿರುತ್ತದೆ. 25, 30 ಹಾಗೂ 35 ಕೀ.ಮೀ. ವೇಗದಲ್ಲೂ ಅವಘಡ ಸಂಭವಿಸಿದರೂ ಪ್ರಯಾಣಿಕರಿಗೆ ಗಾಯಗಳಾಗುವ ಸಾಧ್ಯತೆಯಿರುತ್ತದೆ.

ಸಂಶೋಧನಾ ವರದಿಯಿಂದ ತಿಳಿದು ಬರುವುದೇನೆಂದರೆ ಶೇಕಡಾ 50ರಷ್ಟು ಅಪಘಾತ ಪ್ರಕರಣಗಳಲ್ಲಿ ಚಾಲಕರಿಗೆ ಬ್ರೇಕ್ ಹಾಕುವ ಅವಕಾಶವೇ ಸಿಗುವುದಿಲ್ಲ. ಇದರಿಂದ ಅಪಘಾತಗಳು ಘಟಿಸಿ ಹೋಗುತ್ತದೆ.

ಅಪಘಾತಗಳ ವೇಳೆ ತಲೆಗೆ ಪೆಟ್ಟಾಗುವ ಸಾಧ್ಯತೆ ಜಾಸ್ತಿಯಿರುತ್ತದೆ. ಅಪಘಾತ ಸಂದರ್ಭದಲ್ಲಿ ತಲೆ ಸ್ಥಿರವಾಗಿ ನಿಲ್ಲುವ ಪ್ರಯತ್ನ ಮಾಡಿದರೂ ಒಳಗಡೆಯಿಂದ ಮೆದುಳು ಬಲವಾಗಿ ಮುಂದಕ್ಕೆ ತಳ್ಳಲ್ಪಡುತ್ತದೆ. ಇದರಿಂದಾಗಿ ಹಣೆಭಾಗಕ್ಕೆ ಪೆಟ್ಟಾಗುತ್ತದೆ. ಬಳಿಕ ಅಷ್ಟೇ ವೇಗದಲ್ಲಿ ಹಿಂದಕ್ಕೆ ಬಡಿಯುವುದರಿಂದ ತಲೆಯ ಹಿಂಭಾಗಕ್ಕೂ ಪೆಟ್ಟಾಗುತ್ತದೆ.

ಅಪಘಾತದ ವೇಳೆ ಬಲವಾದ ಸೆಳೆತ ಉಂಟಾಗುವುದರಿಂದ ದೃಢಕಾಯದ ವ್ಯಕ್ತಿಯಿಂದಲೂ ಇದನ್ನು ನಿಯಂತ್ರಿಸಲು ಅಸಾಧ್ಯ. ಹಾಗಾಗಿ ಇದರಿಂದ ಪಾರಾಗಲು ವಿಶೇಷ ದೇಹ ವಿನ್ಯಾಸ ರಕ್ಷಣೆ ಕುರಿತು ಚಿಂತನೆ ನಡೆಸಲಾಗಿದೆ. ಇದು ನಮ್ಮ ಸಮಾಜದ ಹಿತದೃಷ್ಟಿಯಿಂದ ಅನಿವಾರ್ಯವೆನಿಸಿದೆ.

ಕಾರು ಅವಘಡದಿಂದ ರಕ್ಷಣೆ ಪಡೆಯಲು ಗ್ರಹಾಂ ಎಂಬ ಉಬ್ಬಿದ, ಅಸಹ್ಯ ಕಾಣಿಸುವ ಅತಿಮಾನುಷ ವ್ಯಕ್ತಿಯ ಪ್ರತಿರೂಪವನ್ನು ರಚಿಸಲಾಗಿದೆ. ಇದು ಎಲ್ಲ ರೀತಿಯ ಕಾರು ಅಪಘಡಗಳಿಂದ ಪಾರಾಗುವಷ್ಟು ಸಮರ್ಥವಾಗಿದೆ.

ಗ್ರಹಾಂ ಸೂಪರ್ ಮ್ಯಾನ್ ಗೆ ಅತ್ಯಂತ ಸುರಕ್ಷಿತವಾದ ತಲೆಬುರುಡೆ ಕವಚವನ್ನು ರಚಿಸಲಾಗಿದೆ. ಇದರಿಂದ ಮೆದುಳಿಗೆ ಪೂರ್ಣ ಪ್ರಮಾಣದ ರಕ್ಷಣೆಯು ಸಿಗಲಿದೆ. ಇನ್ನು ದಪ್ಪವಾದ ಕುತ್ತಿಗೆ, ದೇಹ ರಚನೆಯಿಂದಾಗಿ ಮೂಳೆ ಮೂರಿದು ಹೋಗುವ ಭಯವೇ ಇರುವುದಿಲ್ಲ. ಒಟ್ಟಿನಲ್ಲಿ ಹೈ ಸ್ಪೀಡ್ ನಲ್ಲಿ ಅಪಘಾತ ಸಂಭವಿಸಿದರೂ ಯಾವುದೇ ತೊಂದರೆ ಎದುರಾಗದು.

ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ 2013ನೇ ವರ್ಷದಲ್ಲಿ ಜಾಗತಿಕವಾಗಿ 1.25 ದಶಲಕ್ಷ ಮಂದಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದರು. ಇವರೆಲ್ಲರೂ ಮಾನವರು ತಾವೇ ಮಾಡಿರುವ ತಪ್ಪಿನಿಂದಲೇ ಜೀವ ತೆರುವಂತಾಗಿದೆ.

ಮುಂದಿನ ಆಗಸ್ಟ್ 08ರ ವರೆಗೆ ವಿಕ್ಟೋರಿಯಾದ ಸ್ಟೇಟ್ ಲೈಬ್ರರಿಯಲ್ಲಿ ಗ್ರಹಾಂ ಪ್ರದರ್ಶನಕ್ಕಿಡಲಾಗುವುದು. ಬಳಿಕ ಆಸ್ಟ್ರೇಲಿಯಾ ಸಾರಿಗೆ ಅಪಘಾತ ಆಯೋಗ (ಟಿಎಸಿ) ಅಧಿಕೃತ ವೆಬ್ ಸೈಟ್ ನಲ್ಲಿ ಈ ಸೂಪರ್ ಮ್ಯಾನ್ ಬಗ್ಗೆ ವಿವರಗಳು ಸಿಗಲಿದೆ.

ರಸ್ತೆ ಸುರಕ್ಷತೆಯ ಭಾಗವಾಗಿ ಗ್ರಹಾಂ ಪ್ರತಿರೂಪವನ್ನು ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾ ಸಾರಿಗೆ ಅಪಘಾತ ಆಯೋಗವು ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಿದೆ.


Click it and Unblock the Notifications