ಮಹೀಂದ್ರ ಭೀಕರ ರಸ್ತೆ ಅಪಘಾತ; ಕೆಲಸಕ್ಕೆ ಬಾರದ ಸೇಫ್ಟಿ ಫೀಚರ್ಸ್?
ಇತ್ತೀಚೆಗಷ್ಟೇ ಕೇರಳದ ಕೊಚ್ಚಿಗೆ ಹಿಂತಿರುಗುತ್ತಿದ್ದ ಮಹೀಂದ್ರ ಎಕ್ಸ್ಯುವಿ 500 ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ನಲ್ಲಿ ಭಾರಿ ಅಪಘಾತಕ್ಕೀಡಾಗಿತ್ತು. ಆದರೆ ಅದೃಷ್ಟವಶಾತ್ ಕಾರಿನಲ್ಲಿ ಸಂಚರಿಸುತ್ತಿದ್ದ ಎಲ್ಲ ಐವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬುದು ತಿಳಿದು ಬಂದಿದೆ.
ಪ್ರಸ್ತುತ ಘಟನೆಯು ತಡವಾಗಿ ಬೆಳಕಿಗೆ ಬಂದಿದ್ದು, ಮಹೀಂದ್ರ ಎಕ್ಸ್ಯುವಿ 500 ಸುರಕ್ಷಾ ವೈಶಿಷ್ಟ್ಯಗಳು ಸಮಯಕ್ಕೆ ಸರಿಯಾಗಿ ಕೆಲಸ ಮಾಡದಿರುವುದು ಈ ಕಾರಿನ ಭದ್ರತೆಯ ಬಗ್ಗೆ ಭಾರಿ ಆತಂಕಕ್ಕೀಡು ಮಾಡಿದೆ.

ಘಟನೆ
ಸುರತ್ಕಲ್ ತಲುಪುವಾಗ ಗಂಟೆಗೆ 90 ಕೀ.ಮೀ. ವೇಗದಲ್ಲಿದ್ದ ಮಹೀಂದ್ರ ಎಕ್ಸ್ಯುವಿ 500 ಚಾಲಕ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿತ್ತು.

ಬಳಿಕ ರಸ್ತೆ ಬದಿಯಲ್ಲಿದ್ದ ತೆಂಗಿನ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸಂಭವನೀಯ ದೊಡ್ಡ ದುರಂತವೊಂದು ತಪ್ಪಿದೆ ಎಂದು ಚಾಲಕರು ವಿವರಿಸುತ್ತಾರೆ.

ಕಾರಿನಲ್ಲಿ ಒಟ್ಟು ಐದು ಮಂದಿ ಪ್ರಯಾಣಿಸುತ್ತಿದ್ದರು. ಇವೆಲ್ಲರೂ ಅಪಘಾತದಿಂದ ಪವಾಡ ಸದೃಶ ಪಾರಾಗಿದ್ದರು.

ಆದರೆ ಸೈಡ್ ಏರ್ ಬ್ಯಾಗ್ ಜೊತೆಗೆ ಮಹೀಂದ್ರ ಎಕ್ಸ್ಯುವಿ 500 ಕಾರಿನಲ್ಲಿ ಆಳವಡಿಸಲಾಗಿದ್ದ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ಪಿ), ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ), ಉರುಳುವಿಕೆ ನಿಯಂತ್ರಣ ಹೀಗೆ ಒಂದಲ್ಲ ಎರಡಲ್ಲ ಹಲವಾರು ಸುರಕ್ಷಾ ವೈಶಿಷ್ಟ್ಯಗಳನ್ನು ಲಗತ್ತಿಸಿದ್ದರೂ ಯಾವುದು ಕೆಲಸ ಮಾಡದಿರುವುದು ಹೆಚ್ಚಿನ ಆತಂಕವನ್ನುಂಟು ಮಾಡಿದೆ.

ಈ ಬಗ್ಗೆ ಮಹೀಂದ್ರ ಅಧಿಕೃತರ ಬಳಿ ದೂರು ದಾಖಲಿಸಿದರೂ ಯಾವುದೇ ಪ್ರತಿಕ್ರಿಯೆ ದೊರಕಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಕಾರಿನ ಮಾಲಿಕರು ಈಗ ವಿಮೆ ಕ್ಲೈಮ್ ಮಾಡುವ ಜಂಜಾಟದಲ್ಲಿ ತೊಡಗಿದ್ದಾರೆ.

ಇಲ್ಲಿ ಗಮನಾರ್ಹ ಅಂಶವೆಂದರೆ ಕೆಲವು ಸಮಯಗಳ ಹಿಂದೆಯಷ್ಟೇ ಹೊಸ ಚಕ್ರಗಳನ್ನು ಕಾರಿಗೆ ಜೋಡಣೆ ಮಾಡಲಾಗಿತ್ತು. ಇದು ಕೇವಲ 8000 ಕೀ.ಮೀ. ದೂರವನ್ನಷ್ಟೇ ಸಂಚರಿಸಿರುತ್ತದೆ.

ಈ ಎಲ್ಲ ವಿಚಾರಗಳನ್ನು ಗಮನಿಸಿ ನೋಡಿದಾಗ ಸ್ವದೇಶಿ ಸಂಸ್ಥೆಯಾಗಿರುವ ಮಹೀಂದ್ರ ಎಕ್ಸ್ಯುವಿ 500 ಡಬ್ಲ್ಯು8 ಕಾರಲ್ಲಿ ಇಂತಹದೊಂದು ತಾಂತ್ರಿಕ ಎಡವಟ್ಟು ಹೇಗೆ ಸಂಭವಿಸಿರಬಹುದೆಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಎಲ್ಲ ಗ್ರಾಹಕರು ಗರಿಷ್ಠ ಸುರಕ್ಷಾ ವೈಶಿಷ್ಟ್ಯಗಳುಳ್ಳ ಕಾರು ಖರೀದಿಗೆ ಆದ್ಯತೆ ಕೊಡುತ್ತಾರೆ. ಆದರೆ ಸಮಯಕ್ಕೆ ಸರಿಯಾಗಿ ಕೆಲಸ ಮಾಡದ ಇಂತಹ ಭದ್ರತಾ ವೈಶಿಷ್ಟ್ಯಗಳಿಂದಾಗಿ ಆಗುವ ನಷ್ಟವನ್ನು ಭರ್ತಿ ಮಾಡುವವರು ಯಾರು ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.
ಚಿತ್ರ ಕೃಪೆ: ಟೀಮ್ ಬಿಎಚ್ಪಿ ಡಾಟ್ ಕಾಮ್


Click it and Unblock the Notifications








