ಗೇರ್ ಲಿವರ್ ಬದಲಾಗಿ ಬಿದಿರಿನ ಕೋಲು ಬಳಸಿದ ಡ್ರೈವರ್ ಅರೆಸ್ಟ್
ಸಂಚಾರಿ ನಿಯಮಗಳ ಉಲ್ಲಂಘನೆಯಿಂದಾಗಿ ದೇಶದಲ್ಲಿ ದಿನನಿತ್ಯ ನೂರಾರು ಸಾವು-ನೋವುಗಳು ಸಂಭವಿಸುತ್ತಿದ್ದು, ಇದಕ್ಕೆ ಪ್ರಮುಖ ಕಾರಣವೇ ವಾಹನ ಚಾಲನೆಯಲ್ಲಿ ಮಾಡುವ ಸಣ್ಣಪುಟ್ಟ ತಪ್ಪುಗಳೇ ದೊಡ್ಡ ದುರಂತಗಳಿಗೆ ಕಾರಣವಾಗುತ್ತಿವೆ ಎನ್ನುವುದಕ್ಕೆ ಈ ಇಂತಹ ಘಟನೆಗಳೇ ಸಾಕ್ಷಿ.

ವಾಹನ ಚಾಲನೆ ವೇಳೆ ಎಲ್ಲವೂ ಸರಿ ಇದ್ದರೂ ಕೆಲವೊಮ್ಮೆ ಅಪಘಾತ ಸಂಭವಿಸುತ್ತವೆ. ಆದ್ರೆ ಇಲ್ಲೊಬ್ಬ ಬಸ್ ಚಾಲಕ ಮಾತ್ರ ಗೇರ್ ಲಿವರ್ ಬಳಕೆಗೆ ಬದಲಾಗಿ ಬಿದಿರಿನ ಕೋಲು ಬಳಸಿ ಪೊಲೀಸರ ಅತಿಥಿಯಾಗಿದ್ದಾನೆ. ಅದು ಕೂಡಾ ಶಾಲಾ ವಾಹನದಲ್ಲೇ ಇಂತಹ ಪ್ರಮಾದ ನಡೆದಿದ್ದು, ಗೇರ್ ಲಿವರ್ ಕಿತ್ತು ಹೋದರೂ ಅದನ್ನು ಸರಿಪಡಿಸದೇ ಬಿದಿರಿನ ಕೋಲು ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ.

ಮುಂಬೈನ ಸಾಂತ ಕ್ರೂಝ್ನಲ್ಲಿರುವ ಪೊದಾರ್ ಶಿಕ್ಷಣ ಸಂಸ್ಥೆಗೆ ಸೇರಿದ ಬಸ್ ಇದಾಗಿದ್ದು, ಗೇರ್ ಸರಿಯಾಗಿ ಬೀಳದ ಕಾರಣ ಬಿಎಂಡಬ್ಲ್ಯು ಕಾರಿಗೆ ಡಿಕ್ಕಿ ಹೊಡೆದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಅಪಘಾತ ನಂತರ ಹಾಗೆಯೇ ಹೋಗುತ್ತಿದ್ದ ಬಸ್ ಅನ್ನು ಚೇಜ್ ಮಾಡಿ ಹಿಡಿದ ಕಾರು ಮಾಲೀಕನು ಬಸ್ಸಿನಲ್ಲಿ ಬಳಸಲಾಗುತ್ತಿದ್ದ ಬಿದಿರಿನ ಕೋಲು ಬಳಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.

ತಕ್ಷಣವೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ ಕಾರು ಮಾಲೀಕನು ಬಸ್ ಡ್ರೈವರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದ. ಆಗ ಸ್ಥಳಕ್ಕೆ ಬಂದ ಪೊಲೀಸರು ಬಿದಿರಿನ ಕೋಲು ಬಳಕೆ ಮಾಡುತ್ತಿರುವ ಮಾಹಿತಿ ಪಡೆದು ಡ್ರೈವರ್ನನ್ನು ವಶಕ್ಕೆ ಪಡೆದಿದ್ದಾರೆ.

ವಿಚಾರಣೆ ವೇಳೆ ಮತ್ತೊಂದು ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಬಸ್ ಚಾಲಕನು ಕಳೆದ ಒಂದು ವಾರದಿಂದಲೂ ಇದನ್ನೇ ಬಳಕೆ ಮಾಡುತ್ತಿರುವುದಾಗಿ ಬಾಯಿಬಿಟ್ಟಿದ್ದಾನೆ. ಆದ್ರೆ ಸಮಾಧಾನಕರ ವಿಚಾರ ಅಂದ್ರೆ ಅಪಘಾತದ ವೇಳೆ ಬಸ್ಸಿನಲ್ಲಿ ಶಾಲಾ ಮಕ್ಕಳು ಇರಲಿಲ್ಲ ಎನ್ನಲಾಗಿದೆ.


Click it and Unblock the Notifications








