ಮಾಡಿಫೈ ಎಕ್ಸಾಸ್ಟ್ ಬಳಸಿದ ಸವಾರನಿಗೆ ಬಿತ್ತು ಭಾರೀ ದಂಡ
ರಾಯಲ್ ಎನ್ಫೀಲ್ಡ್ ಬೈಕುಗಳು ಭಾರತದ ಬೈಕ್ ಸಂಸ್ಕೃತಿಯ ಭಾಗವಾಗಿವೆ. ರಾಯಲ್ ಎನ್ಫೀಲ್ಡ್ ಬೈಕ್ ಹೊಂದಿರುವ ಬಹುತೇಕ ಮಾಲೀಕರು ತಮ್ಮ ಬೈಕುಗಳನ್ನು ಮಾಡಿಫೈಗೊಳಿಸುತ್ತಲೇ ಇರುತ್ತಾರೆ. ಸಾಮಾನ್ಯವಾಗಿ ತಮ್ಮ ಬೈಕುಗಳಲ್ಲಿರುವ ಎಕ್ಸಾಸ್ಟ್ ಗಳನ್ನು ಮಾಡಿಫೈಗೊಳಿಸುತ್ತಾರೆ.

ಈ ರೀತಿಯಾಗಿ ಮಾಡಿಫೈಗೊಳ್ಳುವ ಬೈಕುಗಳು ಹೆಚ್ಚು ಶಬ್ದವನ್ನುಂಟು ಮಾಡುತ್ತವೆ. ಆದರೆ ಈ ರೀತಿಯ ಎಕ್ಸಾಸ್ಟ್ ಗಳನ್ನು ಅಳವಡಿಸಿಕೊಳ್ಳುವುದು ಭಾರತದಲ್ಲಿ ಕಾನೂನುಬಾಹಿರ. ಇದನ್ನು ಮೋಟಾರು ವಾಹನ ಕಾಯ್ದೆಯನ್ವಯ ನಿಷೇಧಿಸಲಾಗಿದೆ.

ಇದೇ ರೀತಿಯಾಗಿ ಮಾಡಿಫೈ ಮಾಡಲಾದ ಎಕ್ಸಾಸ್ಟ್ ಸಿಸ್ಟಂ ಅನ್ನು ತನ್ನ ರಾಯಲ್ ಎನ್ಫೀಲ್ಡ್ ಬೈಕಿನಲ್ಲಿ ಅಳವಡಿಸಿಕೊಂಡಿದ್ದ ಸವಾರನಿಗೆ ಭಾರೀ ಪ್ರಮಾಣದ ದಂಡ ವಿಧಿಸಿದ ಪ್ರಕರಣ ಹರಿಯಾಣದಲ್ಲಿ ನಡೆದಿದೆ. ಈ ಘಟನೆಯು ಹರಿಯಾಣದ ಗೋಹಾನದಲ್ಲಿ ನಡೆದಿದೆ.

ಈ ಘಟನೆಯಲ್ಲಿ ತನ್ನ ರಾಯಲ್ ಎನ್ಫೀಲ್ಡ್ ಬೈಕಿನಲ್ಲಿ ಹೆಚ್ಚು ಶಬ್ದ ಮಾಡುವ ಪಟಾಕ ಎಂದು ಕರೆಯಲಾಗುವ ಎಕ್ಸಾಸ್ಟ್ ಸಿಸ್ಟಂ ಅನ್ನು ಅಳವಡಿಸಲಾಗಿತ್ತು. ಹೆಲ್ಮೆಟ್ ಧರಿಸದೇ ಹಾಗೂ ಹೆಚ್ಚು ಶಬ್ದ ಮಾಡುತ್ತಾ ಬೈಕ್ ಚಲಾಯಿಸುತ್ತಿದ್ದ ಸವಾರನನ್ನು ಪೊಲೀಸರು ತಡೆದಿದ್ದಾರೆ.

ಆದರೆ ಬೈಕ್ ನಿಲ್ಲಿಸುವಂತೆ ಸೂಚಿಸಿದರೂ ಅದನ್ನು ಲೆಕ್ಕಿಸದೇ ಬೈಕ್ ಸವಾರ ಅಲ್ಲಿಂದ ಪರಾರಿಯಾಗಿದ್ದಾನೆ. ತಕ್ಷಣವೇ ಪೊಲೀಸರು ಈ ಮಾಹಿತಿಯನ್ನು ಬೇರೆ ಚೆಕ್ಪೋಸ್ಟ್ ಗಳಿಗೆ ನೀಡಿದ್ದಾರೆ. ಈ ಮಾಹಿತಿಯ ನಂತರ ಆ ರಾಯಲ್ ಎನ್ಫೀಲ್ಡ್ ಬೈಕ್ ಸವಾರನನ್ನು ಬೇರೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ನಂತರ ಮಧ್ಯರಸ್ತೆಯಲ್ಲಿ ಆತನನ್ನು ಹಿಡಿದಿದ್ದಾರೆ. ತಕ್ಷಣ ಆತನ ಬೈಕಿನಲ್ಲಿದ್ದ ಕೀಗಳನ್ನು ಹೊರಕ್ಕೆ ತೆಗೆದು ಆತನು ಅಲ್ಲಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಂಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಆತನ ಬೈಕಿಗೆ ಸಂಬಂಧಪಟ್ಟ ದಾಖಲೆಗಳನ್ನು ಕೇಳಿದ್ದಾರೆ.

ತಾನೇ ಆ ಬೈಕಿನ ನಿಜವಾದ ಮಾಲೀಕ ಎಂದು ಸಾಬೀತುಪಡಿಸುವ ಯಾವುದೇ ದಾಖಲೆಗಳನ್ನು ಆ ಸವಾರನು ಪೊಲೀಸರಿಗೆ ನೀಡಲು ಸಾಧ್ಯವಾಗಿಲ್ಲ. ನಂತರ ಪೊಲೀಸರು ಆ ಬೈಕಿನ ಉಳಿದ ಲೋಪ ದೋಷಗಳನ್ನು ಪತ್ತೆ ಹಚ್ಚಿದ್ದಾರೆ.

ಆ ಬೈಕಿನಲ್ಲಿ ದೋಷಪೂರಿತವಾದ ನಂಬರ್ ಪ್ಲೇಟ್ ಹಾಗೂ ಮಾಡಿಫೈಗೊಳಿಸಲಾಗಿರುವ ಎಕ್ಸಾಸ್ಟ್ ಸಿಸ್ಟಂಗಳು ಕಂಡು ಬಂದಿವೆ. ಈ ಹಿನ್ನೆಲೆಯಲ್ಲಿ ಆ ಸವಾರನಿಗೆ ದಂಡ ವಿಧಿಸಲಾಗಿದೆ. ಒಟ್ಟು ರೂ.32,500 ದಂಡ ವಿಧಿಸಲಾಗಿದೆ.

ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ, ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಇಲ್ಲದಿರುವುದು, ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಬೈಕ್ ಚಾಲನೆ, ಇನ್ಶೂರೆನ್ಸ್ ಇಲ್ಲದಿರುವುದು, ಮಾಲಿನ್ಯ ಪ್ರಮಾಣ ಪತ್ರ ಇಲ್ಲದಿರುವುದು, ಎಕ್ಸಾಸ್ಟ್ ಮಾಡಿಫೈಗೊಳಿಸಿರುವುದು ಹಾಗೂ ದೋಷ ಪೂರಿತ ನಂಬರ್ ಪ್ಲೇಟ್ ಹೊಂದಿರುವುದು. ಈ ಎಲ್ಲಾ ಉಲ್ಲಂಘನೆಗಳಿಗೆ ದಂಡ ವಿಧಿಸಲಾಗಿದೆ.

ಭಾರತದಲ್ಲಿ ಹೊಸ ಮೋಟಾರು ವಾಹನ ಕಾಯ್ದೆಯನ್ವಯ ದಂಡದ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಇದರಿಂದಾಗಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದು ಕಡಿಮೆಯಾಗಲಿದೆ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ.

ಈ ರಾಯಲ್ ಎನ್ಫೀಲ್ಡ್ ಬೈಕ್ ಸವಾರನಿಗೆ ಹೊಸ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ದಂಡ ವಿಧಿಸಲಾಗಿದೆ. ಇದರಿಂದಾಗಿ ಇಷ್ಟೊಂದು ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗಿದೆ. ಕೆಲವು ಕಡೆ ವಾಹನದ ಮೊತ್ತಕ್ಕಿಂತ ಹೆಚ್ಚಿನ ಮೊತ್ತದ ದಂಡವನ್ನು ವಾಹನ ಸವಾರರಿಗೆ ವಿಧಿಸಲಾಗಿದೆ.
ಭಾರೀ ದಂಡವನ್ನು ವಿಧಿಸಿದ ಕಾರಣಕ್ಕೆ ಬೈಕ್ ಸವಾರನೊಬ್ಬ ತನ್ನ ಬೈಕಿಗೆ ಬೆಂಕಿಯಿಟ್ಟ ಘಟನೆ ದೆಹಲಿಯಲ್ಲಿ ನಡೆದಿತ್ತು. ಭಾರತದಲ್ಲಿ ಅಪಘಾತಗಳನ್ನು ತಡೆಗಟ್ಟಲು ಯಾವಾಗಲೂ ಸಂಚಾರಿ ನಿಯಮಗಳನ್ನು ಪಾಲಿಸುವುದು ಅವಶ್ಯಕ.

ಪ್ರಪಂಚದಲ್ಲಿ ಹೆಚ್ಚು ಅಪಘಾತಗಳು ನಡೆಯುವ ದೇಶದಲ್ಲಿ ಭಾರತವೂ ಒಂದಾಗಿದೆ. ಇಲ್ಲಿ ನಡೆಯುವ ಅಪಘಾತಗಳು ಕೆಲವೊಮ್ಮೆ ಪ್ರಾಣವನ್ನು ತೆಗೆಯುತ್ತವೆ. ಹೊಸ ಕಾಯ್ದೆಯನ್ನು ಜಾರಿಗೊಳಿಸಿದಾಗ ವಾಹನ ಸವಾರರು ಭಾರೀ ಪ್ರತಿಭಟನೆಯನ್ನು ನಡೆಸಿದ್ದರು. ಆದರೆ ಸಂಚಾರಿ ನಿಯಮಗಳನ್ನು ಪಾಲಿಸುವುದು ನಮ್ಮ ಹಾಗೂ ಇತರರ ಪ್ರಾಣಕ್ಕೆ ಹಿತಕರ.


Click it and Unblock the Notifications








