ಎಚ್ಚರ! 10 ದಿನದೊಳಗೆ ಹಿಂಬದಿ ಸವಾರರಿಗೂ ಹೆಲ್ಮೆಟ್ ಬಳಕೆ ಕಡ್ಡಾಯ
ನೀವು ದಿನನಿತ್ಯ ಬೈಕ್ ಓಡಿಸುತ್ತಿರುವೀರಾ? ಕಚೇರಿ, ಶಾಂಪಿಂಗ್, ಕಾಲೇಜು, ಮಾರುಕಟ್ಟೆ ಇತ್ಯಾದಿ ಅಗತ್ಯ ಚಟುವಟಿಕೆಗಳಿಗಾಗಿ ತೆರಳುವಾಗ ಸ್ನೇಹಿತರನ್ನು ಅಥವಾ ಪತ್ನಿಯನ್ನು ಹಿಂದೆ ಕುಳ್ಳಿರಿಸಿ ತೆರಳುವ ಹವ್ಯಾಸವಿದ್ದಲ್ಲಿ ಈ ಕೂಡಲೇ ಹೆಚ್ಚುವರಿ ಹೆಲ್ಮೆಟ್ ವೊಂದನ್ನು ನಿಮ್ಮ ಬಳಿಯಿಟ್ಟುಕೊಳ್ಳಿ. ಇಲ್ಲವಾದ್ದಲ್ಲಿ ಅನಗತ್ಯ ಲಿಫ್ಟ್ ನೀಡುವ ಗೋಜಿಗೆ ಹೋಗದಿರಿ.
Also Read: ಹೆಲ್ಮೆಟ್ ಆಯ್ಕೆ ಕಷ್ಟವೇ? ಬನ್ನಿ ನಮ್ಮ ಸಲಹೆ ಪಡೆಯಿರಿ
ಯಾಕೆಂದರೆ ರಾಜ್ಯ ಸರಕಾರವು ಅತಿ ಶೀಘ್ರದಲ್ಲೇ ರಾಜ್ಯದೆಲ್ಲೆಡೆ ಹಿಂಬದಿ ಸವಾರರಿಗೂ ಹೆಲ್ಮೆಟ್ ಬಳಕೆಯನ್ನು ಕಡ್ಡಾಯಗೊಳಿಸಲಿದೆ. ಬಲ್ಲ ಮೂಲಗಳ ಪ್ರಕಾರ ಬಿಬಿಎಂಪಿ ಚುನಾವಣಾ ಹಿನ್ನೆಲೆಯಲ್ಲಿ ಸ್ವಲ್ಪ ವಿಳಂಬವಾಗಿರುವ ಹೆಲ್ಮೆಟ್ ನಿಯಮವು ಮುಂದಿನ 10 ದಿನಗಳಲ್ಲಾಗಿ ಯಾವ ಸಮಯ ಬೇಕಿದ್ದರೂ ಜಾರಿಯಾಗಬಹುದು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ಬಿ ರಾಮಲಿಂಗ ರೆಡ್ಡಿ "ಎಲ್ಲ ಅಗತ್ಯ ನಿಯಮಾನುಷ್ಠಾನವನ್ನು ಪೂರ್ಣಗೊಳಿಸಿದ್ದು, ಈ ನಿಯಮವನ್ನು ಜಾರಿಗೆ ತರಲು ಸರಿಯಾದ ಸಮಯಕ್ಕಾಗಿ ಕಾಯುತ್ತಿರುವೆವು" ಎಂದಿದ್ದಾರೆ. ಮಾತು ಮುಂದುವರಿಸಿದ ಅವರು ಮುಂದಿನ 10 ದಿನದೊಳಗಾಗಿ ಯಾವಾಗ ಬೇಕಾದರೂ ನಿಯಮ ಜಾರಿಗೆ ಬರಲಿದೆ ಎಂದಿದ್ದಾರೆ.

ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ನಿಯಮ ಜಾರಿಯಾಗುವುದರಲ್ಲಿ ವಿಳಂಬವಾಗಿದೆ. ನೂತನ ನಿಯಮದಂತೆ ಆರು ವರ್ಷಕ್ಕೂ ಮೇಲ್ಪಟ್ಟ ಎಲ್ಲ ಹಿಂಬದಿ ಸವಾರರಿಗೂ ಹೆಲ್ಮೆಟ್ ಬಳಕೆ ಕಡ್ಡಾಯವಾಗಲಿದೆ.

ಹಾಗೊಂದು ವೇಳೆ ನಿಯಮವನ್ನು ಉಲ್ಲಂಘನೆ ಮಾಡಿದ್ದಲ್ಲಿ ಕಟ್ಟುನಿಟ್ಟಿನ ಶಿಕ್ಷೆಯೂ ಜಾರಿಯಾಗಲಿದೆ. ಮೊದಲ ಬಾರಿ ತಪ್ಪು ಮಾಡಿದ್ದಲ್ಲಿ 100 ರು. ದಂಡ ಹಾಗೂ ಮೂರನೇ ಬಾರಿಯೂ ಇದನ್ನು ಪುನರಾವರ್ತಿಸಿದ್ದಲ್ಲಿ ನಿಮ್ಮ ಚಾಲನಾ ಪರವಾನಗಿ ಖುಲಾಸೆಗೊಳ್ಳಲಿದೆ.

ಈ ಬಗ್ಗೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕುಟುಂಬ ಸಮೇತ ಬೈಕ್ ನಲ್ಲಿ ತೆರಳುವಾಗ ಹೆಂಡ್ತಿ ಹಾಗೂ ಇಬ್ಬರು ಮಕ್ಕಳಿಗೆ ಹೆಲ್ಮೆಟ್ ಧರಿಸಲು ಹೇಗೆ ಸಾಧ್ಯ ಎಂದು ಗೃಹಸ್ಥರೊರ್ವರು ತಮ್ಮ ವ್ಯಥೆ ತೋಡಿಕೊಂಡಿದ್ದಾರೆ.

ಐಎಸ್ಐ ಮಾರ್ಕ್ ಪಡೆದ ಹೆಲ್ಮೆಟ್ ಗೆ ಸರಾಸರಿ 1000 ರು. ವೆಚ್ಚ ತಗಲುತ್ತದೆ. ಹಾಗಾಗಿ ತುರ್ತಾಗಿ ನಿಯಮ ಜಾರಿ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಕನಿಷ್ಠ ಪಕ್ಷ ಸದಾವಕಾಶವನ್ನು ನೀಡಬೇಕು ಎಂದು ಇನ್ನೋರ್ವ ಸವಾರ ಅಭಿಮತ ವ್ಯಕ್ತಪಡಿಸುತ್ತಾರೆ.

ಹಾಗಿದ್ದರೂ ನಿಮಯ ಜಾರಿಯಲ್ಲಿ ಯಾವುದೇ ಸಡಿಲಿಕೆಗೆ ಸರಕಾರವಾಗಲೀ ಅಥವಾ ಟ್ರಾಫಿಕ್ ಇಲಾಖೆಯಾಗಲಿ ತಯಾರಾಗುತ್ತಿಲ್ಲ. ಎರಡು ತಿಂಗಳ ಹಿಂದೆಯೇ ಅಧಿಸೂಚನೆ ಹೊರಡಿಸಲಾಗಿದ್ದು, ಬೇಕಾದಷ್ಟು ಮಾಧ್ಯಮ ಪ್ರಚಾರ ದೊರಕಿದೆ ಎಂದು ಸಚಿವರು ಅಭಿಪ್ರಾಯಪಡುತ್ತಾರೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಇತ್ತೀಚೆಗಷ್ಟೇ ನೆರೆಯ ತಮಿಳುನಾಡು ಹಾಗೂ ಕೇರಳದಲ್ಲಿ ಹಿಂಬದಿ ಸವಾರರಿಗೂ ಹೆಲ್ಮೆಟ್ ಬಳಕೆ ಕಡ್ಡಾಯಗೊಳಿಸಲಾಗಿತ್ತು. ಅಲ್ಲದೆ ರಾಜ್ಯದಲ್ಲಿ ಹೆಲ್ಮೆಟ್ ಲಭ್ಯತೆಯಲ್ಲಿ ಯಾವುದೇ ಕೊರತೆಯಿಲ್ಲ ಎಂದು ಸಚಿವರು ಸೇರಿಸಿದರು.

ತಜ್ಞರ ಪ್ರಕಾರ ರಸ್ತೆ ಸುರಕ್ಷತೆಯಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯ ಸಾಲಿನಲ್ಲಿ ಕಾಣಿಸಿಕೊಂಡಿದ್ದು, ಹೊಸ ನಿಯಮ ಜಾರಿಯಾಗುವುದರೊಂದಿಗೆ ವಾರ್ಷಿಕವಾಗಿ ಮತ್ತಷ್ಟು 1,000 ಜೀವಗಳ ರಕ್ಷಣೆಯಾಗಲಿದೆ ಎಂದಿದೆ. ಸಹ ಸವಾರನೂ ಹೆಲ್ಮೆಟ್ ಧರಿಸುವ ಮೂಲಕ ಅಪಘಾತದ ವೇಳೆಯಲ್ಲಿ ತಲೆಗೆ ಪೆಟ್ಟಾಗುವ ಪರಿಣಾಮವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬಹುದಾಗಿದೆ.

ಮೊದಲ ಹಂತವಾಗಿ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿ ನಗರಗಳಲ್ಲಿ ಹಿಂಬದಿ ಸವಾರರಿಗೂ ಹೆಲ್ಮೆಟ್ ಬಳಕೆಯನ್ನು ಕಡ್ಡಾಯ ಮಾಡಲಾಗುವುದು. ಬಳಿಕ ಯೋಜನೆಯನ್ನು ರಾಜ್ಯದೆಲ್ಲೆಡೆ ವಿಸ್ತರಿಸಲಾಗುವುದು.

ಅಷ್ಟಕ್ಕೂ ರಾಜ್ಯದಲ್ಲಿ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡುವ ಕುರಿತಂತೆ ನಿಮ್ಮ ಅಭಿಮತವೇನು? ಕೆಳಗಡೆ ಕೊಟ್ಟಿರುವ ಕಾಮೆಂಟ್ ಬಾಕ್ಸ್ನಲ್ಲಿ ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಮರೆಯದಿರಿ.

ಹೆಲ್ಮೆಟ್ ಸತ್ಯಾಸತ್ಯತೆ; ಇತಿಹಾಸದತ್ತ ಒಂದು ಪಯಣ


Click it and Unblock the Notifications








