ಬಿಎಸ್ III ಇಂಜಿನ್ ದ್ವಿಚಕ್ರ ವಾಹನ ಕೊಳ್ಳಲು ಮುಗಿ ಬಿದ್ದ ಜನತೆ... ಏನಿದು ಆಫರ್ ತಿಳ್ಕೊಳಿ
ಬಿಎಸ್- III ಮಾದರಿಯ ಬೈಕುಗಳ ಸ್ಟಾಕ್ ತೆರವುಗೊಳಿಸುವ ನಿಟ್ಟಿನಲ್ಲಿ ಭಾರತೀಯ ದ್ವಿಚಕ್ರ ತಯಾರಕರು ಹೆಚ್ಚಿನ ಮಟ್ಟದ ರಿಯಾಯಿತಿಗಳು ಘೋಷಣೆ ಮಾಡಿದ್ದು, ಇದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಎಲ್ಲರಿಗೂ ತಿಳಿದಿರುವಂತೆ ಭಾರತ ಸರ್ಕಾರ ಏಪ್ರಿಲ್ 1 ರಿಂದ ಬಿಎಸ್ III ಎಂಜಿನ್ ಹೊಂದಿರುವ ವಾಹನಗಳ ಮಾರಾಟವನ್ನು ಸ್ಥಗಿತಗೊಳಿಸಿದ್ದು, ದ್ವಿಚಕ್ರ ವಾಹನ ಸಂಸ್ಥೆಗಳು ತಮ್ಮ ಬಳಿ ಉಳಿದುಕೊಂಡಿರುವ ಬಿಎಸ್ III ಎಂಜಿನ್ ಹೊಂದಿರುವ ಬೈಕ್ ಮತ್ತು ಸ್ಕೂಟರ್ಗಳನ್ನು ಮಾರಾಟ ಮಾಡುವ ತವಕದಲ್ಲಿವೆ.

ದ್ವಿಚಕ್ರ ವಾಹನ ಮಾರಾಟದಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಹೀರೋ ಹಾಗೂ ಹೋಂಡಾ ಮೋಟಾರ್ ಸೈಕಲ್ಸ್ ಮತ್ತು ಸ್ಕೂಟರ್ ಸಂಸ್ಥೆಗಳು ಸರಿ ಸುಮಾರು ರೂ. 13,000 ಸಾವಿರದ ರಿಯಾಯಿತಿ ಘೋಷಣೆ ಮಾಡಿವೆ.

ಸದ್ಯ ಬಂದಿರುವ ಮಾಹಿತಿ ಪ್ರಕಾರ, ಹೀರೋ ಮೋಟೋಕಾರ್ಪ್ ಸ್ಕೂಟರ್ಗಳ ಮೇಲೆ ₹13,000 ಹಾಗೂ ಪ್ರೀಮಿಯಮ್ ಬೈಕ್ ಗಳ ಮೇಲೆ ₹7,500 ರಿಯಾಯಿತಿ ನೀಡುತ್ತಿದೆ.

ಹೋಂಡಾ ಕಂಪನಿಯ ಸ್ಕೂಟರ್ಗಳಾದ ಆಕ್ಟಿವಾ ಡಿಯೊ ಹಾಗು ಏವಿಯೇಟರ್ ವಾಹನಗಳು ಸಾಮಾನ್ಯ ಬೆಲೆಗಿಂತ 14,000 ರೂ ಕಡಿಮೆ ಬೆಲೆಗೆ ನೀಡುತ್ತಿದೆ.

ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ₹10,000 ಸಾವಿರ ನೇರ ರಿಯಾಯಿತಿ ಪ್ರಕಟಿಸಿದ್ದು, ಸ್ಟಾಕ್ ಇರುವವರೆಗೂ ಅಥವಾ ಮಾ.31ರ ವರೆಗೂ ಈ ರಿಯಾಯಿತಿ ಅನ್ವಯವಾಗಲಿದೆ ಎಂದು ಹೇಳಿದೆ.

ಮಾರ್ಚ್ 31ರ ಬಳಿಕ ಬಿಎಸ್ III (ಭಾರತ್ ಸ್ಟೇಜ್ III) ಎಂಜಿನ್ ಹೊಂದಿರುವ ವಾಹನಗಳ ನೋಂದಣಿ ಪ್ರಕ್ರಿಯೆ ನಿಲ್ಲಿಸುವಂತೆ ಸರ್ಕಾರಕ್ಕೆ ಆದೇಶಿಸಿ ತೀರ್ಪನ್ನು ನೀಡಿತ್ತು.

ಕಳೆದ ವರ್ಷ ಈ ಬಿಎಸ್ III ಎಂಜಿನ್ ಹೊಂದಿರುವ ವಾಹನಗಳಿಂದ ಪರಿಸರಕ್ಕೆ ಆಗುತ್ತಿರುವ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು.

ಸದ್ಯ ಉತ್ಪಾದನೆಗೊಂಡು ಮಾರಾಟಕ್ಕೆ ಸಿದ್ಧವಾಗಿರುವ ಬರೋಬ್ಬರಿ 8 ಲಕ್ಷ ಬಿಎಸ್ III ವಾಹನಗಳಲ್ಲಿ, 6.71 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಏಪ್ರಿಲ್ 1ರೊಳಗೆ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಗುರಿಯನ್ನು ಡೀಲರ್ಗಳು ಇಟ್ಟುಕೊಂಡಿದ್ದರು ಎನ್ನಲಾಗಿದೆ.

ಅರ್ಜಿ ಬಗ್ಗೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಮದನ್ ಬಿ ಲೋಕುರ್ ಮತ್ತು ದೀಪಕ್ ಗುಪ್ತಾ ಬೆಂಚ್, ವಾಣಿಜ್ಯ ಹಿತಾಸಕ್ತಿಗಿಂತ ಲಕ್ಷಾಂತರ ಜನರ ಆರೋಗ್ಯದ ಹಿತಾಸಕ್ತಿ ಮುಖ್ಯ ಎಂಬ ತೀರ್ಪು ನೀಡಿತ್ತು.

ಆಟೋಮೊಬೈಲ್ ಡೀಲರ್ಸ್ ಒಕ್ಕೂಟದ ಅಂತರರಾಷ್ಟ್ರೀಯ ವ್ಯವಹಾರಗಳ ನಿರ್ದೇಶಕರಾದ ನಿಕುಂಜ್ ಸಾಂಘಿ ಪ್ರಕಾರ, ಪ್ರಸ್ತುತ ಪ್ರಕಟಿಸಿರುವ ರಿಯಾಯಿತಿ ದ್ವಿಚಕ್ರ ವಾಹನ ಉದ್ಯಮದಲ್ಲಿ ಎಂದಿಗೂ ಕೇಳಿಲ್ಲವಂತೆ.

ಭಾರತ್ ಸ್ಟೇಜ್ ಬಗ್ಗೆ ತಿಳಿದುಕೊಳ್ಳಿ :
ಭಾರತ್ ಸ್ಟೇಜ್ ಅಂದರೆ ವಾಹನಗಳಲ್ಲಿನ ಮಾಲಿನ್ಯ ಮಟ್ಟವನ್ನು ಗುರುತಿಸುವ ವ್ಯವಸ್ಥೆ ಅಥವಾ ಮೋಟಾರು ವಾಹನಗಳ ವಾಯುಮಾಲಿನ್ಯ ಪರಿಮಿತಿ ಮಾನದಂಡವಾಗಿದೆ.

ಈ ಪರಿಸರ ಮಾಲಿನ್ಯ ನಿಯಂತ್ರಣದ ಮಾನದಂಡಗಳನ್ನು ಅನುಸರಿಸಲು ವಾಹನಗಳ ಎಂಜಿನ್ ಗುಣಮಟ್ಟ ಅತ್ಯಾಧುನಿಕವಾಗಿದ್ದರೆ ಸಾಲದು, ಇಂಧನದ ಗುಣಮಟ್ಟವೂ ಹೆಚ್ಚಗೆ ಇರಬೇಕು ಎಂಬುದು ಈ ಕಾಯ್ದೆ ಹೇಳುತ್ತದೆ.

ಈ ಮಾನದಂಡಗಳ ಜಾರಿ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳು, ವೆಚ್ಚ, ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಯೂರೋಪ್ನಲ್ಲಿ ಜಾರಿಯಲ್ಲಿರುವ ಮಾನದಂಡಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎರಡು ಸಮಿತಿಗಳನ್ನು ರಚಿಸಿ ಅಧ್ಯಯನ ಕೈಗೊಳ್ಳಲು ಆದೇಶಿಸಿತ್ತು.

ಯುರೋಪ್ ನಲ್ಲಿ ಜಾರಿಗೆ ಬಂದಿರುವುದಕ್ಕೆ ಸಮಾನವಾಗಿ ಭಾರತದಲ್ಲೂ ಭಾರತ್ ಸ್ಟೇಜ್ ಸುರಕ್ಷಾ ಗುಣಮಟ್ಟತೆಯನ್ನು ಅನುಸರಿಸಲಾಗುತ್ತಿದೆ.

ಹೊಸದಾಗಿ ನಿರ್ಮಾಣವಾಗುವ ಪ್ರತಿಯೊಂದು ವಾಹನವು ಈ ಸುರಕ್ಷಾ ಮಾಪನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.

2000ನೇ ಇಸವಿಯಲ್ಲಿ ಭಾರತ್ ಸ್ಟೇಜ್ ವಾಹನ ಹೊಗೆ ಮಾಲಿನ್ಯ ನಿಯಂತ್ರಣವು ಮೊದಲ ಬಾರಿಗೆ ಜಾರಿಗೆ ಬಂದಿತ್ತು. ಟು ಸ್ಟ್ರೋಕ್ ಬೈಕ್ ಹಾಗೂ ಮಾರುತಿ 800 ನಿರ್ಮಾಣ ಪ್ರಕ್ರಿಯೆ ಸ್ಥಗಿತಗೊಂಡಿರುವುದು ಇವೆಲ್ಲದರ ಭಾಗವಾಗಿದೆ.

ಭಾರತವೀಗ ಭಾರತ್ ಸ್ಟೇಜ್ IV (ಬಿಎಸ್ IV) ಎಮಿಷನ್ ಸ್ಟ್ಯಾಂಡರ್ಡ್ ಗೆ ಕಾಲಿಡುತ್ತಿದ್ದು, 2017 ಎಪ್ರಿಲ್ ಒಂದರಂದು ಜಾರಿಗೆ ಬರಲಿದೆ.

ಸಮೀತಿ ಶಿಫಾರಸ್ಸಿನಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಾಣಿಜ್ಯ ಹಿತಾಸಕ್ತಿಗಿಂತ ಲಕ್ಷಾಂತಕ ಜನರ ಆರೋಗ್ಯದ ಹಿತಾಸಕ್ತಿ ಮುಖ್ಯ ಎಂದು ಹೇಳಿತ್ತು.

ಸದ್ಯ, ಮೋಟಾರು ವಾಹನಗಳ ವಾಯುಮಾಲಿನ್ಯ ಪರಿಮಿತಿ ಮಾನದಂಡ ಬಿಎಸ್ IV ಏಪ್ರಿಲ್ 1ರಿಂದ ಜಾರಿಗೆ ಬರುವ ಹಿನ್ನೆಲೆಯಲ್ಲಿ ಮಾಲಿನ್ಯಕಾರಕ ಬಿಎಸ್ III ವಾಹನಗಳ ನೋಂದಣಿ ಮತ್ತು ಮಾರಾಟವನ್ನು ಸುಪ್ರೀಂಕೋರ್ಟ್ ನಿಷೇಧಿಸಿದೆ.


Click it and Unblock the Notifications








