ಎಲೆಕ್ಟ್ರಿಕ್ ಸೈಕಲ್ ಅಭಿವೃದ್ಧಿಪಡಿಸಿದ ಮೆಕಾನಿಕಲ್ ಎಂಜಿನಿಯರ್
ಭಾರತದಲ್ಲಿ ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಫೇಮ್ 2 ಯೋಜನೆಯಡಿ ನೀಡುತ್ತಿದ್ದ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಿದೆ.

ಕೇಂದ್ರ ಸರ್ಕಾರ ಮಾತ್ರವಲ್ಲದೇ ವಿವಿಧ ರಾಜ್ಯ ಸರ್ಕಾರಗಳೂ ಸಹ ಸಬ್ಸಿಡಿ ಹಾಗೂ ತೆರಿಗೆ ರಿಯಾಯಿತಿಗಳ ಮೂಲಕ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳುತ್ತಿವೆ. ಇದರ ಪರಿಣಾಮವಾಗಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಗಣನೀಯವಾಗಿ ಹೆಚ್ಚಾಗುತ್ತಿದೆ.

ಸ್ವತಃ ತಯಾರಿಸಿರುವ ಎಲೆಕ್ಟ್ರಿಕ್ ಸೈಕಲ್'ನೊಂದಿಗೆ ಭಾಸ್ಕರನ್
ಈಗ ತಮಿಳುನಾಡಿನ ಯುವಕನೊಬ್ಬ ಸ್ವತಃ ತಾನೇ ಎಲೆಕ್ಟ್ರಿಕ್ ಸೈಕಲ್ ಅಭಿವೃದ್ಧಿಪಡಿಸಿರುವ ಬಗ್ಗೆ ವರದಿಯಾಗಿದೆ. ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಬಾಗಮೇಡು ಗ್ರಾಮದ ಮೆಕಾನಿಕಲ್ ಎಂಜಿನಿಯರಿಂಗ್ ಡಿಪ್ಲೋಮಾ ಪಡೆದಿರುವ ಭಾಸ್ಕರನ್'ರವರೇ ಎಲೆಕ್ಟ್ರಿಕ್ ಸೈಕಲ್ ಅಭಿವೃದ್ಧಿಪಡಿಸಿರುವ ಯುವಕ.

ಅವರು ಸದ್ಯಕ್ಕೆ ಕೃಷಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿ ಕೊಂಡಿದ್ದಾರೆ. ಕೋವಿಡ್ 19 ನಿಂದ ಕೆಲಸ ಕಳೆದುಕೊಂಡವರಲ್ಲಿ ಭಾಸ್ಕರನ್ ಸಹ ಒಬ್ಬರು. ಅಂದಿನಿಂದ ಅವರು ಪೂರ್ಣ ಪ್ರಮಾಣದ ಕೃಷಿಕರಾಗಿದ್ದಾರೆ.

ಕೃಷಿ ಕಾರ್ಯಗಳ ನಡುವೆ ಬಿಡುವಿನ ಸಮಯದಲ್ಲಿ ಭಾಸ್ಕರನ್ ಎಲೆಕ್ಟ್ರಿಕ್ ಸೈಕಲ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಎಲೆಕ್ಟ್ರಿಕ್ ಸೈಕಲ್ ಅಭಿವೃದ್ಧಿ ಪಡಿಸಲು ಅವರು ರೂ. 20 ಸಾವಿರ ಖರ್ಚು ಮಾಡಿದ್ದಾರೆ.

ರೂ. 2,000 ನೀಡಿ ಹಳೆಯ ಸೈಕಲ್ ಖರೀದಿಸಿದ ಅವರು ನಂತರ ರೂ.18,000 ಖರ್ಚು ಮಾಡಿ ಆ ಸೈಕಲ್ ಅನ್ನು ಎಲೆಕ್ಟ್ರಿಕ್ ಸೈಕಲ್ ಆಗಿ ಪರಿವರ್ತಿಸಿದ್ದಾರೆ. ಭಾಸ್ಕರನ್ ಅಭಿವೃದ್ಧಿಪಡಿಸಿರುವ ಈ ಎಲೆಕ್ಟ್ರಿಕ್ ಸೈಕಲ್ ಪೂರ್ತಿಯಾಗಿ ಚಾರ್ಜ್ ಆದ ನಂತರ 50 ಕಿ.ಮೀಗಳವರೆಗೆ ಚಲಿಸುತ್ತದೆ.

ಭಾಸ್ಕರನ್ ಅಭಿವೃದ್ಧಿಪಡಿಸಿರುವ ಈ ಎಲೆಕ್ಟ್ರಿಕ್ ಸೈಕಲ್ ಈಗ ಬಳಕೆಯಲ್ಲಿರುವ ಪೆಟ್ರೋಲ್ ದ್ವಿಚಕ್ರ ವಾಹನಗಳಿಗಿಂತ ಹೆಚ್ಚು ಹಣವನ್ನು ಉಳಿಸುತ್ತದೆ ಎಂದು ಹೇಳಲಾಗಿದೆ. ಭಾಸ್ಕರನ್ ಈ ಎಲೆಕ್ಟ್ರಿಕ್ ಸೈಕಲ್'ನಲ್ಲಿ ಎಲೆಕ್ಟ್ರಿಕ್ ಮೋಟರ್, ಬ್ಯಾಟರಿ, ಕನ್ವರ್ಟರ್ ಹಾಗೂ ಬ್ರೇಕ್ ಕಟ್-ಆಫ್ ಸ್ವಿಚ್'ಗಳನ್ನು ಅಳವಡಿಸಿದ್ದಾರೆ.

ಈ ಎಲೆಕ್ಟ್ರಿಕ್ ಸೈಕಲ್ ಪ್ರತಿ ಗಂಟೆಗೆ 30 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸೈಕಲ್ ಆಧಾರದ ಮೇಲೆ ಇನ್ನಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸಲು ಭಾಸ್ಕರನ್ ಮುಂದಾಗಿದ್ದಾರೆ.

ಅವರು ತಾವು ಅಭಿವೃದ್ಧಿಪಡಿಸಿರುವ ಎಲೆಕ್ಟ್ರಿಕ್ ಸೈಕಲ್'ಗೆ ಪೇಟೆಂಟ್ ಪಡೆಯಲು ಮುಂದಾಗಿದ್ದಾರೆ. ಅವರು ವಿಶೇಷ ಚೇತನರಿಗಾಗಿ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದ್ದಾರೆ.


Click it and Unblock the Notifications