ಕೋವಿಡ್ಗೆ ಬಲಿಯಾದ ಉದ್ಯೋಗಿಗಳ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದ ಟಿವಿಎಸ್ ಮೋಟಾರ್
ಕೋವಿಡ್ಗೆ ದೇಶಾದ್ಯಂತ ದಿನಂಪ್ರತಿ ಸಾವಿರಾರು ಜನ ಪ್ರಾಣಕಳೆದುಕೊಳ್ಳುತ್ತಿದ್ದು, ಮನೆ ಯಜಮಾನನ್ನು ಕಳೆದಕೊಂಡಿರುವ ಅದೆಷ್ಟೊ ಕುಟುಂಬಗಳು ಅಕ್ಷರಶಃ ಅನಾಥವಾಗಿವೆ. ಹೀಗಿರುವಾಗ ಟಿವಿಎಸ್ ಮೋಟಾರ್ ಕಂಪನಿಯು ತನ್ನ ಉದ್ಯೋಗಿಗಳ ಕುಟುಂಬಸ್ಥರಿಗೆ ಹೊಸ ಯೋಜನೆಯೊಂದನ್ನು ಪ್ರಕಟಿಸುವ ಮೂಲಕ ಆತ್ಮಸ್ಥೈರ್ಯ ತುಂಬಿದೆ.

ಜೀವ ಮತ್ತು ಜೀವನ ಭದ್ರತೆ ಪ್ರತಿಯೊಬ್ಬರಿಗೂ ಮುಖ್ಯವಾಗಿರುವಾಗ ದುಡಿವ ಸ್ಥಳಗಳಲ್ಲಿ ವೈರಸ್ ಹರಡುವಿಕೆಯಿಂದ ಅದೆಷ್ಟೋ ಜೀವಗಳು ಬಲಿಯಾಗಿದ್ದು, ಟಿವಿಎಸ್ ಕಂಪನಿಯಲ್ಲಿ ದುಡಿಯುತ್ತಿರುವ ಸಾವಿರಾರು ಉದ್ಯೋಗಿಗಳಿಗೂ ಕೋವಿಡ್ ಹರಡಿಕೊಳ್ಳುತ್ತಿದೆ. ಸಮಯಕ್ಕೆ ಸರಿಯಾದ ಚಿಕಿತ್ಸೆಯ ಪರಿಣಾಮ ಕೋವಿಡ್ನಿಂದಾಗಿ ಬಹುತೇಕ ಉದ್ಯೋಗಿಗಳು ಗುಣಮುಖರಾದರೂ ಇನ್ನು ಕೆಲವು ಉದ್ಯೋಗಿಗಳು ಪ್ರಾಣಕಳೆದುಕೊಂಡಿದ್ದು, ಮನೆ ಯಜಮಾನನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ.

ಕೋವಿಡ್ನಿಂದ ಪ್ರಾಣಕಳೆದುಕೊಂಡಿರುವ ಉದ್ಯೋಗಿಗಳ ಕುಟುಂಬಗಳ ಕಷ್ಟಕ್ಕೆ ಸ್ಪಂದಿಸಿರುವ ಟಿವಿಎಸ್ ಕಂಪನಿಯು ಮೃತ ಉದ್ಯೋಗಿ ಕುಟುಂಬಸ್ಥರಿಗೆ ಆರ್ಥಿಕ ಸಂಕಷ್ಟದ ನಡುವೆಯೂ ಸಂಬಳವನ್ನು ನಿಲ್ಲಿಸದೆ ಮುಂದಿನ ಮೂರು ವರ್ಷಗಳ ಕಾಲ ಮುಂದುವರಿಸುವುದಾಗಿ ಹೇಳಿಕೊಂಡಿದೆ.

ಜೊತೆಗೆ ಟಿವಿಎಸ್ ಗ್ರೂಪ್ ನೌಕರರಿಗೆ ಆರ್ಥಿಕ ಸಹಾಯ ಮಾಡಲು ಕುಟುಂಬ ಕಲ್ಯಾಣ ನಿಧಿಯನ್ನು ರಚಿಸುವುದಾಗಿ ಘೋಷಿಸಿದ್ದು, ಸೋಂಕು ತಗುಲಿರುವ ಉದ್ಯೋಗಿಗಳ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಕಂಪನಿಯೇ ಭರಿಸುವ ಜವಾಬ್ದಾರಿ ಹೊತ್ತುಕೊಂಡಿದೆ.

ಜೊತೆಗೆ ಹೆಚ್ಚುತ್ತಿರುವ ಕೋವಿಡ್ 2ನೇ ಅಲೆಯನ್ನು ತಗ್ಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿದ್ದು, ಸರ್ಕಾರದ ಜೊತೆ ಕೈಜೋಡಿಸಿರುವ ವಿವಿಧ ಆಟೋ ಕಂಪನಿಗಳು ಕೂಡಾ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್ಆರ್) ನೀತಿ ಅಡಿಯಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ವಾಹನ ಉತ್ಪಾದನೆ ಸ್ಥಗಿತವಾಗಿರುವುದರಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದ ನಡುವೆಯೂ ಆಟೋ ಕಂಪನಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆಗೂಡಿ ಕೋವಿಡ್ ನಿಯಂತ್ರಣಕ್ಕೆ ವಿವಿಧ ರೀತಿಯ ಸಹಕಾರ ನೀಡುತ್ತಿದ್ದು, ದೇಶದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಟಿವಿಎಸ್ ಮೋಟಾರ್ ಕಂಪನಿಯು ಸಹ ವೈರಸ್ ನಿಯಂತ್ರಣಕ್ಕಾಗಿ ಹಲವಾರು ರೀತಿಯ ನೆರವು ನೀಡುತ್ತಿದೆ.
MOST READ: ಪ್ರತಿ ಚಾರ್ಜ್ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳದಿಂದಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಸರ್ಕಾರಗಳ ಪ್ರಯತ್ನಕ್ಕೆ ವಿವಿಧ ಆಟೋ ಉತ್ಪಾದನಾ ಕಂಪನಿಗಳು ವಿವಿಧ ಮಾದರಿಯ ಸಹಕಾರ ನೀಡುತ್ತಿವೆ.

ಟಿವಿಎಸ್ ಗ್ರೂಪ್ ಕಂಪನಿಯು ಸಹ ಕೋವಿಡ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರಕ್ಕೆ 40 ಕೋಟಿ ಹಣಕಾಸು ನೆರವು ನೀಡಿದ್ದು, ಕೋವಿಡ್ ವಿರುದ್ದ ಹೋರಾಟಕ್ಕಾಗಿ ಕರ್ನಾಟಕ ರಾಜ್ಯಕ್ಕೂ ಅಗತ್ಯ ಹಣಕಾಸು ನೆರವು ನೀಡಿದೆ.
MOST READ: ಕೋವಿಡ್ ಭೀತಿ: ಕಾರು ಉತ್ಪಾದನೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ ಎಂಜಿ ಮೋಟಾರ್

ಕರ್ನಾಟಕಕ್ಕೆ ರೂ.4 ಕೋಟಿ ಪರಿಹಾರ ನಿಧಿ ಘೋಷಣೆ ಮಾಡಿರುವ ಟಿವಿಎಸ್ ಕಂಪನಿಯ ಸಾಮಾಜಿಕ ಸೇವಾ ವಿಭಾಗವಾದ ಶ್ರೀನಿವಾಸನ್ ಸರ್ವಿಸ್ ಟ್ರಸ್ಟ್ ಸುಮಾರು ರೂ. 1 ಕೋಟಿ ನಗದು ದೇಣಿಗೆ ಮತ್ತು ರೂ.3 ಕೋಟಿ ಮೌಲ್ಯದ ವೈದ್ಯಕೀಯ ಉಪಕರಣಗಳ ಖರೀದಿಸಿ ಸರ್ಕಾರಕ್ಕೆ ಹಸ್ತಾಂತರ ಮಾಡಿದೆ.


Click it and Unblock the Notifications