ಸೇತುವೆಯಲ್ಲಿ ನಿಯಂತ್ರಣ ತಪ್ಪಿದ ಸಾರಿಗೆ ಬಸ್; ತಪ್ಪಿದ ಭಾರಿ ಅನಾಹುತ
ಮಂಗಳವಾರ ಹುಬ್ಬಳ್ಳಿಯಿಂದ ಮಂಗಳೂರು ಕಡೆ ಆಗಮಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಕೊಟ್ಟಾರ ಸಮೀಪದ ಬಂಗ್ರಕೂಳೂರು ಬಳಿಯ ಕಿರು ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದು ನಿಂತ ಘಟನೆ ನಡೆದಿದೆ. ಇದರಿಂದ ಭಾರಿ ಅಪಘಾತ ತಪ್ಪಿದಂತಾಗಿದೆ.
ಹುಬ್ಬಳ್ಳಿಯಿಂದ ಮಂಗಳೂರಿಗೆ ಬರುತ್ತಿದ್ದ ಸಾರಿಗೆ ಬಸ್ ಬೆಳಗ್ಗಿನ ಜಾವ 5.45ರ ಸುಮಾರಿಗೆ ಕೂಳೂರು ಸೇತುವೆ ದಾಟುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದೆ. ಬಸ್ಸಿನಲ್ಲಿ ತಾಂತ್ರಿಕ ದೋಷ ಸಂಭವಿಸಿರುವುದು ಅಪಘಾತಕ್ಕೆ ಕಾರಣವೆನ್ನಲಾಗುತ್ತಿದೆ.
ಬಸ್ಸಿನ ಸ್ಟೀರಿಂಗ್ ವೀಲ್ ತುಂಡಾಗಿದ್ದು, ಚಾಲಕ ಸಾಧ್ಯವಾದಷ್ಟು ನಿಧಾನವಾಗಿ ಬಂಗ್ರಕೂಳೂರು ತನಕ ಚಲಾಯಿಸಿಕೊಂಡು ಬಂದರೂ ಈ ಸಂದರ್ಭದಲ್ಲಿ ಭಾರಿ ಮಳೆ ಬಂದಿದ್ದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡು ಬಸ್ ಕಿರು ಸೇತುವೆಗೆ ಬಂದಪ್ಪಳಿಸಿದೆ.
ಮೂಲಗಳ ಪ್ರಕಾರ ಬಸ್ಸಲ್ಲಿ 45ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಬಸ್ ವಾಲಿ ನಿಂತ ಕಾರಣ ಎಲ್ಲರೂ ಪವಾಡ ಸದೃಶ್ಯ ರೀತಿಯಾಗಿ ಪಾರಾಗುವಂತಾಗಿದೆ. ಒಂದು ವೇಳೆ ಬಸ್ ಸೇತುವೆಯಿಂದ ಕೆಳಗೆ ಬಿದ್ದಿದ್ದರೆ ಭಾರಿ ದೊಡ್ಡ ಅನಾಹುತ ಸಂಭವಿಸುತ್ತಿತ್ತು.
ಪ್ರಸ್ತುತ ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗಳಷ್ಟು ಹೊತ್ತು ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. ಸ್ಥಳೀಯ ನಿವಾಸಿಗಳ ಪ್ರಕಾರ ಕುಳೂರು ಸೇತುವೆ ತುಂಬಾ ಕಿರಿದಾಗಿದ್ದು, ಬಹಳ ಹಿಂದಿನಿಂದಲೇ ಪರ್ಯಾಯ ವ್ಯವಸ್ಥೆಗೆ ಬೇಡಿಕೆಯ ಕೂಗು ಕೇಳಿಬರುತ್ತಿದ್ದರೂ ಅಧಿಕಾರಿಗಳು ಮೌನ ವೃತ ಆಚರಿಸುತ್ತಿದ್ದಾರೆ. ಸೇತುವೆ ಇದೇ ಪರಿಸ್ಥಿತಿಯಲ್ಲಿ ಮುಂದುವರಿದರೆ ಅಪಾಯ ಕಟ್ಟಿಟ್ಟ ಬುತ್ತಿ!


Click it and Unblock the Notifications









