ಅಬಕಾರಿ ಸುಂಕ ವಿನಾಯಿತಿ ಅವಧಿ ವಿಸ್ತರಣೆಗೆ ಮನವಿ
ಮಂಕಾಗಿರುವ ವಾಹನೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಳೆದ ಕೇಂದ್ರ ಸರಕಾರವು ಅಬಕಾರಿ ಸುಂಕ ವಿನಾಯಿತಿಯನ್ನು ಘೋಷಿಸಿತ್ತು. ಬಳಿಕ ಆಡಳಿತಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಮಂಡಿಸಿದ ಮಧ್ಯಂತರ ಬಜೆಟ್ನಲ್ಲೂ 2014 ಡಿಸೆಂಬರ್ ವರೆಗೂ ಇದೇ ನೀತಿಯನ್ನು ಮುಂದುವರಿಸಿಕೊಂಡು ಹೋಗಲಾಗಿತ್ತು.
ಈಗ ಅಬಕಾರಿ ಸುಂಕ ವಿನಾಯಿತಿ ಕಾಲಾವಧಿ ಡಿಸೆಂಬರ್ 31ರಂದು ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಅಬಕಾರಿ ಸುಂಕ ವಿನಾಯ್ತಿ ಅವಧಿ ವಿಸ್ತರಣೆಗಾಗಿ ಎಲ್ಲ ವಾಹನ ತಯಾರಕ ಸಂಸ್ಥೆಗಳು ಒಕ್ಕೊರಲಿನಿಂದ ಕೇಂದ್ರ ಸರಕಾರವನ್ನು ವಿನಂತಿಸಿಕೊಂಡಿದೆ.

ಕಳೆದ ಜೂನ್ ತಿಂಗಳಲ್ಲಿ ವಾಹನಗಳ ಬೇಡಿಕೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಣ್ಣ ಕಾರು, ಕ್ರೀಡಾ ಬಳಕೆಯ ವಾಹನ ಹಾಗೂ ದ್ವಿಚಕ್ರ ವಾಹನಗಳಿಗೆ ಅಬಕಾರಿ ಸುಂಕ ವಿನಾಯ್ತಿ ನೀಡಲಾಗಿತ್ತು.
ಈ ನೀತಿಯನ್ನು ಸ್ವಾಗತಿಸಿರುವ ರನೊ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಆಗಿರುವ ಸುಮಿತ್ ಶೆನಾಯ್, "ಸರಕಾರವು ಅಬಕಾರಿ ಸುಂಕ ವಿನಾಯಿತಿಯನ್ನು ಇನ್ನಷ್ಟು ಸಮಯ ಮುಂದುವರಿಸಿಕೊಂಡು ಹೋಗಬೇಕು" ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪೂರಕವಾದ ನಿಲುವು ವ್ಯಕ್ತಪಡಿಸಿರುವ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ ಮುಖ್ಯಸ್ಥ ಆರ್ ಸಿ ಭಾರ್ಗವ, "ಈಗಿನ ಪರಿಸ್ಥಿತಿಯಲ್ಲಿ ಅಬಕಾರಿ ಸುಂಕ ಹೆಚ್ಚಿಸಿದ್ದಲ್ಲಿ ಕಾರು ಮಾರುಕಟ್ಟೆಗೆ ನಕರಾತ್ಮಕವಾಗಿ ಪರಿಣಮಿಸಲಿದೆ" ಎಂದಿದ್ದಾರೆ.
ಈ ಬಗ್ಗೆ ಹೇಳಿಕೆ ಕೊಟ್ಟಿರುವ ಭಾರತೀಯ ವಾಹನ ತಯಾರಕರ ಒಕ್ಕೂಟ (ಸಿಯಾಮ್) ಡೈರಕ್ಟರ್ ಜನರಲ್ ವಿಷ್ಣು ಮಾಥುರ್, "ವಾಹನೋದ್ಯಮ ಸಂಪೂರ್ಣ ಚೇತರಿಕೆಯಾಗುವ ನಿಟ್ಟಿನಲ್ಲಿ ಅಬಕಾರಿ ಸುಂಕ ವಿನಾಯಿತಿಯನ್ನು ಮುಂದುವರಿಸಿಕೊಂಡು ಹೋಗಲು ನಾವು ಸರಕಾರವನ್ನು ವಿನಂತಿಸಿಕೊಳ್ಳುತ್ತಿದ್ದೇವೆ. ಅಬಕಾರಿ ಸುಂಕ ವಿನಾಯಿತಿ ಮುಂದುವರಿಸಿದ್ದಲ್ಲಿ ವಾಹನೋದ್ಯಮ ಚೇತರಿಕೆಗೆ ಸಹಕಾರಿಯಾಗಲಿದೆ" ಎಂದಿದ್ದಾರೆ.
ಸತತ ನಾಲ್ಕು ತಿಂಗಳಲ್ಲಿ ಏರುಗತಿ ಕಂಡಿದ್ದ ದೇಶದ ವಾಹನದ್ಯೋಮ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಅನುಕ್ರಮವಾಗಿ ಶೇಕಡಾ 1.03 ಹಾಗೂ ಶೇಕಡಾ 2.33ರಷ್ಟು ಕುಸಿತ ಕಂಡಿತ್ತು.


Click it and Unblock the Notifications