ಸೀಟು ಬೆಲ್ಟ್ ಧರಿಸದಿರುವುದೇ ಸಚಿವ ಮುಂಡೆ ಸಾವಿಗೆ ಕಾರಣ?
ವಾಹನ ಸಂಚಾರ ವೇಳೆ ಸೀಟು ಬೆಲ್ಟ್ ಧರಿಸುವುದು ಎಷ್ಟು ಅಗತ್ಯವೆಂಬುದು ಮಗದೊಮ್ಮೆ ಸಾಬೀತಾಗಿದೆ. ತುಂಬಾ ಬೇಸರದ ವಿಷಯವೊಂದರಲ್ಲಿ ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಅವರು ಇಂದು (ಮಂಗಳವಾರ) ಬೆಳಗ್ಗೆ ನಡೆದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ್ ಮುಂಡೆ ಸಂಚರಿಸುತ್ತಿದ್ದ ಮಾರುತಿ ಸುಜುಕಿ ಎಸ್ಎಕ್ಸ್4 ಕಾರಿಗೆ ಮುಂಭಾಗದಿಂದ ಬಂದ ಟಾಟಾ ಇಂಡಿಕಾ ಢಿಕ್ಕಿಯಾಗಿತ್ತು. ಹಿಂದಿನ ಸೀಟಿನಲ್ಲಿ ಕುಳಿತು ಪಯಣಿಸುತ್ತಿದ್ದ ಮುಂಡೆ ಅವರು ಸೀಟು ಬೆಲ್ಟ್ ಧರಿಸಿರಲಿಲ್ಲ. ಇದು ಅಪಘಾತ ಸಂದರ್ಭದಲ್ಲಿ ಚಾಲಕ ತಕ್ಷಣ ಬ್ರೇಕ್ ಅದುಮಿದಾಗ ಮುಂಡೆ ಅವರ ಎದೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿರುವ ಸಾಧ್ಯತೆಯಿದೆ. ಬಳಿಕ ಆಸ್ಪತ್ರೆ ದಾಖಸಿದರೂ ಇದೇ ಕಾರಣದಿಂದಾಗಿ ಹೃದಾಯಾಘಾತ ಸಂಭವಿಸಿರಬಹುದು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

64ರ ಹರೆಯದ ಗೋಪಿನಾಥ್ ಮುಂಡೆ ಅವರ ಸಾವಿನ ಹಿಂದಿರುವ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ತಿಳಿದು ಬರಲಿದೆ. ಆದರೆ ವರದಿಗಳ ಪ್ರಕಾರ ಮುಂಡೆ ಅವರಿಗೆ ದೇಹಕ್ಕೆ ಹೆಚ್ಚಿನ ಗಾಯವಾಗಿಲ್ಲ. ಆದರೆ ಅಪಘಾತ ಸಂಭವಿಸಿರುವ ಆಘಾತದಲ್ಲಿ ಉಂಟಾಗಿರುವ ಹೃದಾಯಾಘಾತದಿಂದಾಗಿ ಸಾವನ್ನಪ್ಪಿರಬಹುದು.
(ಸಾಂದರ್ಭಿಕ ಚಿತ್ರದ ಬಳಕೆ)

ಇದರೊಂದಿಗೆ ಸೀಟು ಬೆಲ್ಟ್ ಮಹತ್ವ ಮಗದೊಮ್ಮೆ ಸಾಬೀತಾಗಿದೆ. ಸೀಟ್ ಬೆಲ್ಟ್ ಧರಿಸುವುದರಿಂದ ಸಡನ್ ಬ್ರೇಕ್ ಅಥವಾ ಅಪಘಾತದ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ಉಂಟಾಗುವ ಆಘಾತದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ದೇಹದ ಹೊರಗೆ ಹಾಗೂ ಆಂತರಿಕ ಭಾಗಗಳಿಗೆ ಉಂಟಾಗುವ ಆಘಾತದ ಪರಿಣಾಮವನ್ನು ಕಡಿಮೆ ಮಾಡುತ್ತದೆ.

ನಿಮಗಿಲ್ಲಿ ಹಾಸ್ಯ ಚಕ್ರವರ್ತಿ ಜಸ್ಪಾಲ್ ಭಟ್ಟಿ ನಿಧಾನವನ್ನು ನೆನಪಿಸಿಕೊಳ್ಳಬಹುದು. ಸರಿ ಸುಮಾರು ಎರಡು ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತವೊಂದರಲ್ಲಿ ಕಿರುತೆರೆಯ ಹಾಸ್ಯ ನಟ ಜಸ್ಪಾಲ್ ಭಟ್ಟಿ ಸೀಟ್ ಬೆಲ್ಟ್ ಧರಿಸದಿರುವುದೇ ಅಪಘಾತಕ್ಕೆ ಕಾರಣವಾಗಿತ್ತು.(ಇಲ್ಲಿದೆ ಓದಿ)

ಆದರೆ ವಿಪರ್ಯಾಸದ ವಿಷಯ ಏನೆಂದರೆ ದೇಶದಲ್ಲಿ ಹಿಂಭಾಗದ ಪ್ರಯಾಣಿಕರು ಕಡ್ಡಾಯವಾಗಿ ಸೀಟು ಬೆಲ್ಟ್ ಧರಿಸಬೇಕೆಂದಿಲ್ಲ. ಇದೀಗ ಮುಂಡೆ ಸಾವು ಮಗದೊಮ್ಮೆ ವಾಹನಗಳ ಸುರಕ್ಷತೆ ಬಗ್ಗೆ ಚರ್ಚೆಗಳಿಗೆ ಎಡೆ ಮಾಡಿಕೊಡುತ್ತಿವೆ.


Click it and Unblock the Notifications








