ಹೊಸ ರೂಲ್ಸ್ನಿಂದಾಗಿ ಜಾಸ್ತಿಯಾಗಿರೋ ಕಾರು, ಬೈಕ್ಗಳ ಬೆಲೆಗಳನ್ನು ಕೇಳಿದ್ರೆ ತಲೆ ಸುತ್ತೋದು ಗ್ಯಾರೆಂಟಿ..!!
ಬಿಎಸ್-3 ಎಂಜಿನ್ ವಾಹನಗಳನ್ನು ನಿಷೇಧ ಮಾಡಿರುವ ಹಿನ್ನೆಲೆ ಬಿಎಸ್-IV ವಾಹನಗಳ ಬೆಲೆಗಳು ಗಗನಮುಖಿಯಾಗಿದ್ದು, ಬೈಕ್ ಮತ್ತು ಕಾರುಗಳ ಖರೀದಿ ಗ್ರಾಹಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಹೊಸ ಕಾಯ್ದೆ ಜಾರಿ ಮಾಡಿರುವ ಸುಪ್ರೀಂಕೋರ್ಟ್, ಭಾರತೀಯ ಮಾರುಕಟ್ಟೆಯಲ್ಲಿ ಬಿಎಸ್-3 ವಾಹನಗಳಿಗೆ ಬ್ರೇಕ್ ಹಾಕಿದೆ. ಇದರಿಂದಾಗಿ ಬೈಕ್ ಮತ್ತು ಕಾರುಗಳ ಬೆಲೆಗಳು ಏರಿಕೆಯಾಗಿದ್ದು, ಪ್ರಸ್ತುತ ನಿಯಮಗಳನ್ನು ಹೊಂದಿರುವ ವಾಹನ ಖರೀದಿಸುತ್ತಿರುವ ಗ್ರಾಹಕರಿಗೆ ಬೆಲೆ ಬಿಸಿ ತಟ್ಟುತ್ತಿದೆ.

ಮಾಲಿನ್ಯ ತಡೆ ಉದ್ದೇಶದಿಂದ ಭಾರತೀಯ ಆಟೋ ಉದ್ಯಮ ವಲಯಕ್ಕೆ ಹೊಸ ಕಾಯ್ದೆ ಜಾರಿ ಮಾಡಿರುವ ಸುಪ್ರೀಂಕೋರ್ಟ್, ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಬಿಎಸ್-3 ವಾಹನಗಳನ್ನು ನಿಷೇಧ ಮಾಡಿದೆ. ಇದರ ಬೆನ್ನಲ್ಲೇ ಬಿಎಸ್- IV ವಾಹನಗಳ ಬೆಲೆಗಳು ದುಬಾರಿಯಾಗಿವೆ.

ಹೊಸ ನಿಯಮದಿಂದ ಬಿಎಸ್-3 ಎಂಜಿನ್ ಆಧರಿತ ಹೊಸದಾಗಿ ಉತ್ಪಾದನೆಯಾಗಿದ್ದ 9 ಲಕ್ಷ ವಾಹನಗಳು ಮೂಲೆಗುಂಪಾಗಿವೆ. ಇದರಲ್ಲಿ 6.71 ಲಕ್ಷ ದ್ವಿಚಕ್ರ ವಾಹನಗಳು, 16 ಸಾವಿರ ಕಾರುಗಳು, 40 ಸಾವಿರ ತ್ರಿಚಕ್ರ ವಾಹನಗಳು ಮತ್ತು 96 ಸಾವಿರ ವಾಣಿಜ್ಯ ಉದ್ದೇಶಿತ ವಾಹನಗಳು ಉಪಯೋಗಕ್ಕೆ ಬಾರದಂತಾಗಿವೆ.

ಇನ್ನು ಸುಪ್ರೀಂಕೋರ್ಟ್ ಹೊಸ ನಿಯಮದಿಂದಾಗಿ ಆಟೋ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದ್ದು, ಅಂದಾಜು 3 ಲಕ್ಷ ಕೋಟಿ ನಷ್ಟವಾಗಿದೆ ಎನ್ನಲಾಗುತ್ತಿದೆ.

ಹೊಸ ಕಾಯ್ದೆ ಅನುಷ್ಠಾನದ ಬಗ್ಗೆ ಈ ಮೊದಲೇ ಆಟೋ ಉತ್ಪಾದಕರಿಗೆ ಎಚ್ಚರಿಕೆ ನೀಡಿದ್ದ ಸುಪ್ರೀಂಕೋರ್ಟ್, ಬಿಎಸ್-3 ಎಂಜಿನ್ ಸಾಮರ್ಥ್ಯದ ವಾಹನಗಳ ಉತ್ಪಾದನೆ ಮಾಡದಂತೆ ಸೂಚನೆ ನೀಡಿತ್ತು.

ಬಿಎಸ್-3 ಎಂಜಿನ್ ನಿಷೇಧದಿಂದಾಗಿ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳಿಗೆ ಹೆಚ್ಚು ನಷ್ಟವಾಗಿದ್ದು, ನಷ್ಟ ಸರಿದೂಗಿಸಲು ಬಿಎಸ್-4 ಎಂಜಿನ್ ವಾಹನಗಳ ಬೆಲೆಯನ್ನು ಹೆಚ್ಚಿಸುತ್ತಿವೆ. ಇದರಿಂದಾಗಿ ಗ್ರಾಹಕರಿಗೆ ಹೆಚ್ಚು ಹೊರೆಯಾಗುತ್ತಿದ್ದು, ವಾಹನ ಖರೀದಿಯೇ ಕಷ್ಟವಾಗುತ್ತಿದೆ.

ಹೊಸ ರೂಲ್ಸ್ ಜಾರಿಯಾದಾಗಿನಿಂದ ಬೈಕ್ ಮತ್ತು ಕಾರುಗಳ ಬೆಲೆಗಳಲ್ಲಿ ಭಾರೀ ವ್ಯತ್ಯಾಸವಾಗಿದ್ದು, ಶೇ.10ರಷ್ಟು ಬೆಲೆ ಏರಿಕೆ ಕಂಡುಬಂದಿದೆ. ಹೀಗಾಗಿ ಬಿಎಸ್-4 ವಾಹನ ಖರೀದಿ ಗ್ರಾಹಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

'ಭಾರತ್ ಸ್ಟೇಜ್ ಎಮಿಷನ್ ಸ್ಟ್ಯಾಂಡರ್ಡ್' (Bharat stage emission standards) ಎಂಬುದು ಆಂತರಿಕ ದಹನಕಾರಿ ಎಂಜಿನ್ (internal combustion engine) ವಾತಾವರಣಕ್ಕೆ ಬಿಡುಗಡೆ ಮಾಡುವ ಮಾಲಿನ್ಯಕಾರಕ ಹೊಗೆ ನಿಯಂತ್ರಿಸಲು ಭಾರತ ಸರಕಾರವು ಹೊರತಂದಿರುವ ಕಾನೂನಾತ್ಮಕ ಮಾಪನವಾಗಿದೆ.

ಹೊಸ ಕಾನೂನು ಪ್ರಕಾರ ಇನ್ಮುಂದೆ ಬಿಎಸ್-IV ಸಾಮರ್ಥ್ಯದ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಮಾತ್ರ ಅವಕಾಶವಿದ್ದು, ಸದ್ಯ ಚಾಲ್ತಿಯಲ್ಲಿರುವ ಬಿಎಸ್-3 ಎಂಜಿನ್ ಸಾಮರ್ಥ್ಯದ ಕಾರು ಮತ್ತು ವಾಹನಗಳಿಗೆ ಇದು ಯಾವುದೇ ರೀತಿಯಲ್ಲೂ ಅನ್ವಯವಾಗುದಿಲ್ಲ.

ವರ್ಷದಿಂದ ವರ್ಷಕ್ಕೆ ದೇಶದಲ್ಲಿ ವಾಹನಗಳ ಸಂಖ್ಯೆಯು ಗಣನೀಯವಾಗಿ ವರ್ಧನೆಯಾಗುತ್ತಿದ್ದು, ಮಿತಿ ಮೀರಿದ ವಾಯು ಮಾಲಿನ್ಯ ಸೃಷ್ಠಿಯಾಗುತ್ತಿದೆ. ಇದರಿಂದ ಸುಸ್ಥಿರ ಪರಿಸರಕ್ಕೆ ಮುಂದಾಗಿರುವ ಕೇಂದ್ರ ಪರಿಸರ ಮತ್ತು ಅರಣ್ಯಗಳ ಸಚಿವಾಲಯದ ಅಡಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಹೊಸ ಕಾಯ್ದೆಯನ್ನು ಜಾರಿಗೆ ಮಾಡಲಾಗಿದೆ.

ಕೇವಲ ಬಿಎಸ್-IV ಎಂಜಿನ್ ಕಡ್ಡಾಯ ಮಾತ್ರವಲ್ಲದೇ AHO(ಅಟೋಮೆಟಿಕ್ ಹೆಡ್ಲೈಟ್ ಆನ್) ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿರಬೇಕೆಂದು ಆದೇಶ ನೀಡಲಾಗಿದೆ.

ಒಂದು ವೇಳೆ ನೀವು ಈ ಮೇಲಿನ ಎರಡು ವ್ಯವಸ್ಥೆಗಳು ಇಲ್ಲದ ವಾಹನಗಳನ್ನು ಖರೀದಿ ಮಾಡಿದರೂ ಆರ್ಟಿಓಗಳಲ್ಲಿ ಇವುಗಳನ್ನು ನೋಂದಣಿ ಮಾಡಿಕೊಳ್ಳಲಾಗುವುದಿಲ್ಲ. ಅಲ್ಲದೇ ಅವುಗಳಿಗೆ ಮಾನ್ಯತೆ ಕೂಡಾ ಇರುವುದಿಲ್ಲ. ಹೀಗಾಗಿ ಖದೀರಿಗೂ ಮುನ್ನ ಈ ವಿಚಾರಗಳನ್ನು ತಿಳಿದುಕೊಂಡೇ ವಾಹನಗಳನ್ನು ಆಯ್ಕೆ ಮಾಡಿ.

ಈಗಾಗಲೇ ಮುಂದುವರಿದ ಅನೇಕ ರಾಷ್ಟ್ರಗಳಲ್ಲಿ ಈ ಕಾಯ್ದೆ ಜಾರಿಯಲ್ಲಿದ್ದು, ಹಗಲು ವೇಳೆಯೂ ಬೈಕ್ ಚಾಲನೆ ವೇಳೆ ಆಟೋಮೆಟಿಕ್ ಹೆಡ್ಲ್ಯಾಂಪ್ ಆನ್ ಮಾಡಿಕೊಂಡೇ ಇರಬೇಕಿರುವುದು ಕಡ್ಡಾಯವಾಗಿದೆ. ಜೊತೆಗೆ ಬಿಎಸ್-IV ಎಂಜಿನ್ ಹೊಂದಿರುವುದನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲಾಗಿದೆ.

ಕೇಂದ್ರದ ಹೊಸ ಕಾಯ್ದೆ ಬಗ್ಗೆ ಪ್ರತಿಕ್ರಿಯೆ ನೀಡಿರೋ ಪರಿಸರು ತಜ್ಞರು, ಹೊಸ ಕಾನೂನು ಜಾರಿಯಾದಲ್ಲಿ ಪರಿಸರ ಮಾಲಿನ್ಯ ತಗ್ಗಲಿದೆ ಎಂದಿದ್ದಾರೆ. ಜೊತೆಗೆ ಆಟೋ ಉದ್ಯಮ ತಜ್ಞರು ಕೂಡಾ ಹೊಸ ಕಾಯ್ದೆಯನ್ನು ಸ್ವಾಗತಿಸಿದ್ದು, ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ವಾಹನ ಉತ್ಪಾದನೆಗೆ ತಮ್ಮ ಸಹಕಾರ ಇದೆ ಎಂದಿದ್ದಾರೆ.

2000ನೇ ಇಸವಿಯಲ್ಲಿ ಭಾರತ್ ಸ್ಟೇಜ್ ವಾಹನ ಹೊಗೆ ಮಾಲಿನ್ಯ ನಿಯಂತ್ರಣವು ಮೊದಲ ಬಾರಿಗೆ ಜಾರಿಗೆ ಬಂದಿತ್ತು. ಟು ಸ್ಟ್ರೋಕ್ ಬೈಕ್ ಹಾಗೂ ಮಾರುತಿ 800 ನಿರ್ಮಾಣ ಪ್ರಕ್ರಿಯೆ ಸ್ಥಗಿತಗೊಂಡಿರುವುದು ಇವೆಲ್ಲದರ ಭಾಗವಾಗಿದೆ.

ವಾಯು ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಸುಪ್ರೀಂಕೋರ್ಟ್ ಈ ಹೊಸ ರೂಲ್ಸ್ ಜಾರಿಯಾಗಿದ್ದು, ಅದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೋ ಗೊತ್ತಿಲ್ಲ. ಆದ್ರೆ ಹೊಸ ಕಾಯ್ದೆಯಿಂದ ಈಗಾಗಲೇ ಉತ್ಪಾದನೆಗೊಂಡಿದ್ದ ಲಕ್ಷಾಂತರ ಬಿಎಸ್-3 ಎಂಜಿನ್ ವಾಹನಗಳು ಮೂಲೆಗುಂಪಾಗಿರುವುದು ಮಾತ್ರ ನಿಜ.

ರಾಜ್ಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಟಾಟಾ ವಿನೂತನ ಟಿಗೋರ್ ಕಾರಿನ ಚಿತ್ರಗಳಿಗಾಗಿ ಕೆಳಗಿನ ಫೋಟೋ ಗ್ಯಾಲರಿ ಕ್ಲಿಕ್ ಮಾಡಿ.


Click it and Unblock the Notifications








