ಅಪಘಾತ ಮಾಡಿದ್ದ 17 ವರ್ಷ ಬಾಲಕನಿಗೆ ಕೋರ್ಟ್ ನೀಡಿದ ಶಿಕ್ಷೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ..!
ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಅಪ್ರಾಪ್ತ ಮಕ್ಕಳು ವಾಹನ ಚಲಾಯಿಸುವ ಪ್ರವೃತ್ತಿ ಹೆಚ್ಚುತ್ತಿದ್ದು, ಇದು ಅಪಘಾತಗಳಿಗೆ ಎಡೆ ಮಾಡಿಕೊಡುತ್ತಿದೆ. ಕಾನೂನು ಪ್ರಕಾರ ಅದು ತಪ್ಪು ಎಂದು ಗೊತ್ತಿದ್ದರೂ ಸಹ ಪೋಷಕರು ತಮ್ಮ ಮಕ್ಕಳಿಗೆ ದುಬಾರಿ ವಾಹನಗಳನ್ನು ನೀಡುತ್ತಿದ್ದಾರೆ. ಆದರೆ ಇನ್ನು ಮುಂದೆ ಹಾಗೆ ಮಾಡೋದಾದ್ರೆ ಈ ಘಟನೆಯ ಬಗ್ಗೆ ನೀವು ತಪ್ಪದೇ ತಿಳಿದುಕೊಳ್ಳಲೇಬೇಕು.

ನಾವು ವಾಹನ ಚಲಾಯಿಸುವಾಗ ಎಷ್ಟೇ ಎಚ್ಚರವಾಗಿದ್ದರೂ ಕೆಲವು ಬಾರಿ ಬೇರೆಯವರು ಮಾಡುವ ತಪ್ಪುಗಳಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ಯಾವ ಸಮಯದಲ್ಲಿ ಏನಾಗಬಹುದು ಎಂದು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಅಪ್ರಾಪ್ತ ಮಕ್ಕಳು ಚಾಲನೆ ಮಾಡುತ್ತಿರುವುದು ಹಲವು ದುರಂತಗಳಿಗೆ ಕಾರಣವಾಗುತ್ತಿದೆ.

ದಿನದಿಂದ ದಿನಕ್ಕೆ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು, ಹಲವಾರು ಅಪಘಾತಗಳು ಕುಡಿದು ಚಾಲನೆ ಮಾಡುವುದರಿಂದ ಮತ್ತು ಹೆಲ್ಮೆಟ್ ರಹಿತ ಚಾಲಕರಿಂದಾಗಿ ಸ್ಥಳದಲ್ಲಿಯೆ ಹಲವರು ಜೀವ ಕಳೆದುಕೊಳ್ಳುತ್ತಿದ್ದಾರೆ. ಅದಾಗ್ಯೂ ಈ ವರ್ಷ ಸುಮಾರು 1.50 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದಾರೆ.

ಇದಕ್ಕೆ ಮುಖ್ಯ ಕಾರಣವೇನೆಂದು ಕೇಳಿದಾಗ ಟ್ರಾಫಿಕ್ ಪೊಲೀಸರು ಕುಡಿದು ವಾಹನ ಚಾಲನೆ ಮಾಡುವುದರಿಂದ, ರಸ್ತೆ ನಿಯಮಗಳನ್ನು ಪಾಲಿಸದಿರುವುದರಿಂದ ಮತ್ತು ಹೆಲ್ಮೆಟ್ ರಹಿತ ವಾಹನ ಚಾಲನೆ ಇಂದ ಅಪಘಾತಗಳು ಸಂಭವಿಸುತ್ತಿವೆ ಎನ್ನಲಾಗಿದೆ.

ಜೊತೆಗೆ ದೇಶದಲ್ಲಿನ ಹಲವಾರು ಚಾಲಕರು ಲೈಸೆನ್ಸ್ ಇಲ್ಲದೆಯೆ ವಾಹನವನ್ನು ಚಲಾಯಿಸುತ್ತಿದ್ದಾರೆ. ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸರ್ಕಾರವು ಸಿಂಪಲ್ ಮಾರ್ಗಗಳನ್ನು ನೀಡುತ್ತಿದ್ದರೂ, ಇವರಿಂದಾಗಿ ಕೂಡಾ ಹಲವಾರು ರಸ್ತೆ ಅಪಘಾತಗಳು ಸಂಭವಿಸುತ್ತಿದೆ ಎಂದು ಹೇಳಬಹುದು.

ಇಂತಹ ಘಟನೆಯೆ ಚೆನ್ನೈ ನಗರದಲ್ಲಿ ಕೂಡಾ ನಡೆದಿದ್ದು, 17 ವರ್ಷದ ಬಾಲಕನೊಬ್ಬ ಲೈಸೆನ್ಸ್ ಇಲ್ಲದೆ ಬೈಕ್ ಸವಾರಿ ಮಾಡುತ್ತಿದ್ದಾಗ ಕಂಟ್ರೋಲ್ ತಪ್ಪಿ ಓರ್ವ ಮಹಿಳೆಗೆ ಗುದ್ದಿದ್ದಾನೆ. ಅದೃಷ್ಟವಶಾತ್ ಆ ಮಹಿಳೆಗೆ ಏನು ಆಗಿಲ್ಲವಾದರೂ, ಬಾಲಕನನ್ನ ವಶಕ್ಕೆ ಪಡೆದು ಕೋರ್ಟ್ಗೆ ಹಾಜರು ಪಡಿಸಿದ್ದರು.

ಈ ವಿಷಯದಲ್ಲಿ ಬಾಲಾಪರಾಧಿಗಳ ಕೋರ್ಟ್ ಚರ್ಚೆ ಮಾಡಿ, ಲೈಸೆನ್ಸ್ ಇಲ್ಲದೆಯೆ ವಾಹನ ಚಲಾಯಿಸಿ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿರುವುದಲ್ಲದೇ, ಒಂದು ಅಪಘಾತಕ್ಕೆ ಕಾರಣವಾದ ಬಾಲಕನನ್ನ ಟ್ರಾಫಿಕ್ ಕಂಟ್ರೋಲ್ ಅರಿವು ಮೂಡಿಸಲು ನಿಯೋಜನೆ ಮಾಡುವಂತೆ ಆದೇಶಿಸಿದೆ.

ಈ ಶಿಕ್ಷೆಯು ಕೇವಲ ಎರಡು ದಿನದ ವರೆಗೆ ನೀಡಲಾಗಿದ್ದು, ಅಧಿಕವಾಗಿ ಟ್ರಾಫಿಕ್ ಇರುವ ಪ್ರದೇಶಕ್ಕೆ ಹೋಗಿ, ಪೊಲೀಸರೊಂದಿಗೆ ಟ್ರಾಫಿಕ್ ನಿಯಂತ್ರಿಸಲು ಮತ್ತು ಅದೇ ರಸ್ತೆಯಲ್ಲಿ ಸಿಗ್ನಲ್ನ ವೇಳೆ ಟ್ರಾಫಿಕ್ ರೂಲ್ಸ್ ಫಾಲೊ ಮಾಡದೆ ವಾಹನ ಚಲಾಯಿಸುತ್ತಿರುವವರಿಗೆ ಅದರ ಬಗ್ಗೆ ತಿಳಿಸಬೇಕಾಗಿ ಆದೇಶಿಸಿದೆ.
ಮಾಹಿತಿಗಳ ಪ್ರಕಾರ, ಟ್ರಾಫಿಕ್ ಪೊಲೀಸರು ಜ್ಯುವಿನಲ್ ಕೋರ್ಟ್ ನೀಡಿದ ಆದೇಶವನ್ನು ಪರಿಗಣಿಸಿ, ಆ ಬಾಲಕನನ್ನು ರಸ್ತೆಗೆ ಕರೆದುಕೊಂಡು ಹೋಗಿ ಆದೇಶಿಸಲಾಗಿದ ಕೆಲಸವನ್ನು ಮಾಡಿಸಲಾಗುತ್ತಿದೆ. ಈ ಕುರಿತಾದ ವಿಡಿಯೋವನ್ನು ನೀವಿಲ್ಲಿ ಕಾಣಬಹುದಾಗಿದೆ.

ಪೊಲೀಸ್ ಅಧಿಕಾರಿಗಳನ್ನು ಈ ಪ್ರಕರಣದ ಬಗ್ಗೆ ಮಾತನಾಡಲು ಕೇಳಿದಾಗ ಅವರು 18 ವರ್ಷಕ್ಕಿಂತಾ ಕೆಳಗಿನವರು ರಸ್ತೆಯಲ್ಲಿ ಲೈಸೆನ್ಸ್ ಇಲ್ಲದೆಯೆ ವಾಹನ ಚಲಾಯಿಸುವುದು ತಪ್ಪು, ಮತ್ತು ಇಂತವರನ್ನು ಬೆಂಬಲಿಸುವ ಹಾಗು ಅವರ ಕೈಗೆ ವಾಹನ ನೀಡುವ ಪೋಷಕರಿಗೂ ಸರಿಯಾದ ಶಿಕ್ಷೆಯನು ನೀಡತಕ್ಕದ್ದು ಎಂದು ಹೇಳಿದ್ದಾರೆ.
MOST READ: ಇಂಧನಗಳ ಬೆಲೆ ಏರಿಳಿತದಲ್ಲಿ ಪ್ರಧಾನಿ ಮೋದಿ ಆಟ ಬಲ್ಲವರಾರು?

ಇದು ಚೆನ್ನೈ ನಗರದಲ್ಲಿ ನಡೆದ ಘಟನೆಯಾದರೆ ಇನ್ನು ಹೈದರಾಬಾದ್ ನಗರದಲ್ಲಿ18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕರಿಗೆ ವಾಹನ ನೀಡಿದ ಪೋಷಕರಿಗೆ ಅಲ್ಲಿನ ಸ್ಥಳೀಯ ಪೊಲೀಸರು ಸರಿಯಾದ ಪಾಠವನ್ನು ಕಲಿಸಿದ್ದಾರೆ, ಅದೇನು ಎಂಬುದು ಈ ಕೇಳಗೆ ಓದಿ ತಿಳಿಯಿರಿ.

ಅಪ್ರಾಪ್ತ ಬೈಕ್ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಹೈದ್ರಾಬಾದ್ ಪೊಲೀಸರು ಅಪ್ರಾಪ್ತ ಮಕ್ಕಳಿಗೆ ಬೈಕ್ ಚಾಲನೆ ಮಾಡಲು ಬಿಟ್ಟಿದ್ದ 26 ಪೋಷಕರನ್ನು ಜೈಲಿಗೆ ಕಳುಹಿಸಿದ್ದಾರೆ. ಜೊತೆಗೆ ನಿಯಮ ಬಾಹಿರವಾಗಿ ಬೈಕ್ ಚಾಲನೆ ಮಾಡಿದ ತಪ್ಪಿಗೆ 14ಕ್ಕೂ ಹೆಚ್ಚು ಬಾಲಕರನ್ನು ರಿಮ್ಯಾಂಡ್ ಹೋಮ್ಗೆ ಕಳುಹಿಸಿಲಾಗಿದೆ.

ಮಕ್ಕಳ ಕೈಗೆ ಬೈಕ್ ಕೊಟ್ಟಿದ್ದ ಪೋಷಕರನ್ನು ಹೈದ್ರಾಬಾದ್ ಟ್ರಾಫಿಕ್ ಪೋಲಿಸರು ಕೋರ್ಟ್ಗೆ ಹಾಜರುಪಡಿಸಿದ್ದಾಗ ಪೋಷಕರ ಕ್ರಮಕ್ಕೆ ಛೀಮಾರಿ ಹಾಕಿರುವ ಕೋರ್ಟ್, ಪೋಷಕರಿಗೆ 1 ದಿನ ಜೈಲು ಶಿಕ್ಷೆ ನೀಡಿದ್ದಲ್ಲದೇ ಮಕ್ಕಳಿಗೆ ರಸ್ತೆ ನಿಯಮದ ತಿಳುವಳಿಕೆ ಹೇಳುವಂತೆ ಸೂಚನೆ ನೀಡಿದೆ.

ಅತ್ತ ಕಾನೂನು ಬಾಹಿರವಾಗಿ ಬೈಕ್ ಸವಾರಿ ಮಾಡುತ್ತಿದ್ದ 14 ಬಾಲಕರನ್ನು 1 ದಿನ ಮಟ್ಟಿಗೆ ರಿಮ್ಯಾಂಡ್ ಹೋಮ್ಗೆ ಕಳುಹಿಸಲಾಗಿದ್ದು, ಪದೇ ಪದೇ ನಿಯಮ ಉಲ್ಲಂಘನೆ ಮಾಡಿದ್ದು ಕಂಡುಬಂದಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.

ಮೋಟಾರ್ ವೆಹಿಕಲ್ ಸೆಕ್ಷನ್ 180ರ ಅಡಿ ಪ್ರಕರಣ ದಾಖಲಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, 1 ದಿನದ ಜೈಲು ವಾಸದ ಜೊತೆಗೆ ರೂ. 500 ದಂಡವನ್ನು ಸಹ ವಸೂಲಿ ಮಾಡಲಾಗುತ್ತಿದೆ. ಹೀಗಿದ್ದರೂ ಮಕ್ಕಳು ಬೈಕ್ ಸವಾರಿ ಮಾಡುತ್ತಿರುವ ಪ್ರಕರಣಗಳು ಮಾತ್ರ ಹೆಚ್ಚುತ್ತಲೇ ಇವೆ.
MOST READ: ಇದೇ ತಿಂಗಳು 15ರಂದು ಅನಾವರಣಗೊಳ್ಳಲಿರುವ ಹೊಸ ಜಾವಾ ಬೈಕ್ ಹೀಗಿರಲಿವೆಯೆಂತೆ..!

ಇನ್ನು ರಾಜಧಾನಿ ಬೆಂಗಳೂರಿನಲ್ಲೂ ಇಂತಹ ಕಠಿಣ ನಿಯಮಗಳನ್ನು ಸದ್ಯದಲ್ಲೇ ಜಾರಿ ತರುವ ಸಾಧ್ಯತೆಗಳಿದ್ದು, ಈ ಹಿನ್ನೆಲೆ ಪೋಷಕರು ತಮ್ಮ ಮಕ್ಕಳಿಗೆ ವಾಹನಗಳನ್ನು ನೀಡುವ ಮುನ್ನ ಎಚ್ಚರವಾಗಿರುವುದು ಒಳಿತು.

ಜೊತೆಗೆ ಇತ್ತೀಚೆಗೆ ಯುವ ಬೈಕ್ ಸವಾರರು ವೀಲ್ಹಿಂಗ್ ಕ್ರೇಜ್ನತ್ತ ವಾಲುತ್ತಿದ್ದು, ಇದರಿಂದಾಗಿ ಸಾರ್ವಜನಿಕವಾಗಿ ತೊಂದರೆಯಾಗುತ್ತಿರುವುದಲ್ಲದೇ ತಮ್ಮ ಪ್ರಾಣಕ್ಕೆ ತಾವೇ ಸಂಚಕಾರ ತಂದುಕೊಳ್ಳುತ್ತಿರುವುದು ಮತ್ತೊಂದು ದುರಂತ.

ಇದರಿಂದಾಗಿ ಎಚ್ಚರ ವಹಿಸಬೇಕಿರುವ ಪೋಷಕರು ಮಕ್ಕಳಿಗೆ ದುಬಾರಿ ಬೈಕ್ ನೀಡುವ ಮುನ್ನ ಹತ್ತಾರು ಬಾರಿ ಯೋಚಿಸಿ ಬೈಕ್ ನೀಡಿ. ಜೊತೆಗೆ ಅಪ್ರಾಪ್ತ ಮಕ್ಕಳು ಬೈಕ್ ಚಾಲನೆ ಮಾಡುವುದರ ಮೇಲೆ ನಿಗಾ ಇರಿಸುವುದಲ್ಲದೇ, ರಸ್ತೆ ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಉತ್ತಮ.


Click it and Unblock the Notifications








