ಕಾರಿನಲ್ಲಿ ಕೂರುವ ಹಿಂಬದಿ ಸವಾರರಿಗೂ ಇನ್ಮುಂದೆ ಸೀಟ್ ಬೆಲ್ಟ್ ಕಡ್ಡಾಯ
ದೇಶಾದ್ಯಂತ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಿಂದಾಗಿ ದಿನಂಪ್ರತಿ ನೂರಾರು ಜನ ಬಲಿಯಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುತ್ತಿರುವ ಕೇಂದ್ರ ಸಾರಿಗೆ ಇಲಾಖೆಯು ಹಲವಾರು ಕಡ್ಡಾಯ ನಿಯಮಗಳನ್ನು ಜಾರಿಗೆ ತರುತ್ತಿರುವುದಲ್ಲದೇ ನಿಯಮ ಉಲ್ಲಂಘಿಸುವ ವಾಹನ ಸವಾರರಿಂದ ಭಾರೀ ಮೊತ್ತದ ದಂಡವನ್ನು ವಸೂಲಿ ಮಾಡುತ್ತಿದೆ.

ಸದ್ಯ ದೇಶಾದ್ಯಂತ ಕಾರು ಚಾಲಕರು ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸಬೇಕೆಂಬ ನಿಯಮವಿದ್ದರೂ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಕೇಂದ್ರ ಸಾರಿಗೆ ಇಲಾಖೆಯು ಮುಂಬೈ ಮತ್ತು ಪುಣೆ ನಡುವಿನ ಎಕ್ಸ್ಪ್ರೇಸ್ ವೇ ನಲ್ಲಿ ಹಿಂಬದಿಯ ಸವಾರರಿಗೂ ಸೀಟ್ ಬೆಲ್ಟ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಮುಂಬೈ ಮತ್ತು ಪುಣೆ ನಡುವಿನ ಎಕ್ಸ್ಪ್ರೇಸ್ ವೇ ನಲ್ಲಿ ಅಪಘಾತಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿರುವುದರಿಂದ ಈ ನಿಯಮವನ್ನು ಜಾರಿಗೆ ಮಾಡಲಾಗಿದ್ದು, ತಪ್ಪಿದಲ್ಲಿ ಕಾರು ಪ್ರಯಾಣಿಕರಿಗೆ ದಂಡ ಖಾಯಂ.

ಹೊಸ ನಿಯಮದ ಪ್ರಕಾರ, ಸೀಟ್ ಬೆಲ್ಟ್ ಧರಿಸದ ಹಿಂಬದಿ ಸವಾರರಿಗೆ ರೂ. 200 ದಂಡ ವಿಧಿಸಲಾಗುತ್ತಿದ್ದು, ಜೊತೆಗೆ ಹೊಸ ನಿಯಮ ಕಡ್ಡಾಯಗೊಳಿಸಿರುವ ಬಗ್ಗೆ ಮುಂಬೈ-ಪುಣೆ ಪೊಲೀಸರು ಮತ್ತು ಹೆದ್ದಾರಿ ಪೊಲೀಸರು ಜಾಗೃತಿ ಅಭಿಯಾನ ಕೈಗೊಳ್ಳುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಹೆದ್ದಾರಿ ಸುರಕ್ಷಾ ಪಡೆಯ ಎಸ್ಪಿ ಅಮೋಲ್ ತಂಬೆಯವರು, ಕೇಂದ್ರ ಸಾರಿಗೆ ಇಲಾಖೆಯ ನಿರ್ದೇಶನದಂತೆ ಹೊಸ ನಿಯಮ ಜಾರಿಗೆ ತರಲಾಗಿದ್ದು, ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಯಲ್ಲಿ ಹಿಂಬದಿಯ ಸವಾರರಿಗೆ ಹೆಚ್ಚಿನ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿಯಮ ಜಾರಿಗೆ ತರಲಾಗಿದೆ.

ಸದ್ಯದಲ್ಲೇ ದೇಶಾದ್ಯಂತ ಹೊಸ ರೂಲ್ಸ್
ಮೊದಲ ಹಂತವಾಗಿ ಮುಂಬೈ-ಪುಣೆ ಎಕ್ಸ್ಪ್ರೇಸ್ ವೇನಲ್ಲಿ ಹಿಂಬದಿಯ ಸವಾರರಿಗೆ ಸೀಟ್ ಬೆಲ್ಟ್ ಕಡ್ಡಾಯಗೊಳಿಸಿರುವ ಕೇಂದ್ರ ಸಾರಿಗೆ ಇಲಾಖೆಯು, ಮುಂದಿನ ಕೆಲವೇ ತಿಂಗಳಲ್ಲಿ ದೇಶಾದ್ಯಂತ ಈ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಸಿದ್ದತೆ ನಡೆಸಿದೆ.

ಇನ್ನು ಹೊಸ ನಿಯಮದ ಜಾರಿಗೆ ಮತ್ತೊಂದು ಪ್ರಮುಖ ಕಾರಣ ಏನೆಂದರೇ, ಭಾರತದಲ್ಲಿ ಮಾರಾಟವಾಗುತ್ತಿರುವ ಬಹುತೇಕ ಕಾರುಗಳಲ್ಲಿ ಅಗತ್ಯ ಮಟ್ಟದ ಸುರಕ್ಷಾ ಸೌಲಭ್ಯಗಳು ಇಲ್ಲದಿರುವುದು ಪ್ರಯಾಣಿಕರ ಜೀವಕ್ಕೆ ಕುತ್ತು ತರುತ್ತಿವೆ. ಹೀಗಾಗಿ ಸಾಧ್ಯವಾದಷ್ಟು ಮಟ್ಟಿಗೆ ಲಭ್ಯವಿರುವ ಸುರಕ್ಷಾ ಸೌಲಭ್ಯಗಳನ್ನು ಬಳಸಿಕೊಂಡು ಆಗುವ ಅನಾಹುತ ತಪ್ಪಿಸುವುದು ಇದರ ಉದ್ದೇಶವಾಗಿದೆ.

ಇದಲ್ಲದೆ ಸುರಕ್ಷತೆಗಾಗಿ ಹಲವು ಕಡ್ಡಾಯ ಸುರಕ್ಷಾ ಕ್ರಮಗಳನ್ನು ಅಳವಡಿಸುವ ಸಂಬಂಧ ಹೊಸ ಮೋಟಾರ್ ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದು, ಇವುಗಳಲ್ಲಿ ಎಡಿಎಎಸ್(ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ) ತಂತ್ರಜ್ಞಾನ ಕೂಡಾ ಒಂದಾಗಿದೆ.
MOST READ: ಬದಲಾದ ಆಮದು ನೀತಿ- ಟೊಯೊಟಾ ಆಲ್ಫಾರ್ಡ್ ಬಿಡುಗಡೆಯಾಗುವುದು ಪಕ್ಕಾ..!!

ಎಡಿಎಎಸ್ ತಂತ್ರಜ್ಞಾನವು ಈಗಾಗಲೇ ಐಷಾರಾಮಿ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಒದಗಿಸಲಾಗುತ್ತಿದ್ದು, ಈ ಸೌಲಭ್ಯವನ್ನು ಎಂಟ್ರಿ ಲೆವಲ್ ಕಾರುಗಳಲ್ಲೂ ಸಹ ಕಡ್ಡಾಯ ಮಾಡುವ ಬಗ್ಗೆ ಕೇಂದ್ರ ಸಾರಿಗೆ ಇಲಾಖೆಯು ಚಿಂತನೆ ನಡೆಸಿದೆ. ಕೇವಲ ಪ್ರಯಾಣಿಕ ಕಾರುಗಳಲ್ಲಿ ಅಷ್ಟೇ ಅಲ್ಲದೇ ಹೆವಿ ಡ್ಯೂಟಿ ವಾಣಿಜ್ಯ ವಾಹನಗಳಿಗೂ ಎಡಿಎಎಸ್ ಕಡ್ಡಾಯವಾಗಿದೆ.

ಈ ಕುರಿತು ಸಾರಿಗೆ ಇಲಾಖೆಯ ಸಭೆಯೊಂದಿಗೆ ಮಾತನಾಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು, ದೇಶದಲ್ಲಿ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಯನ್ನು ತಗ್ಗಿಸುವ ಉದ್ದೇಶದಿಂದ ಮೋಟಾರ್ ಕಾಯ್ದೆಯಲ್ಲಿ ಸಾಕಷ್ಟು ಬದಲಾವಣೆ ಅವಶ್ಯಕತೆಯಿದ್ದು, ವಾಹನಗಳಲ್ಲಿ ಎಬಿಎಸ್, ಇಬಿಡಿ, ಎಡಿಎಎಸ್ ಸೇರಿದಂತೆ ಹಲವು ಸೌಲಭ್ಯಗಳು ಕಡ್ಡಾಯಗೊಳಿಸಬೇಕಿದೆ ಎಂದಿದ್ದಾರೆ.

ಹೊಸ ಎಡಿಎಎಸ್ ತಂತ್ರಜ್ಞಾನವು ಈಗಾಗಲೇ ಮುಂದುವರಿದ ರಾಷ್ಟ್ರಗಳಲ್ಲಿ ಕಡ್ಡಾಯ ಮಾಡಲಾಗಿದ್ದು, ದೇಶದಲ್ಲಿ ಇದರ ಅವಶ್ಯಕತೆಯಿದ್ದರೂ ತತಕ್ಷಣವೇ ಜಾರಿ ಮಾಡಲು ಸಾಧ್ಯವಿಲ್ಲ ಎಂದಿರುವ ನಿತಿನ್ ಗಡ್ಕರಿಯವರು ಹೊಸ ಸೌಲಭ್ಯದಿಂದ ಮಧ್ಯಮ ವರ್ಗದವರು ಕಾರು ಖರೀದಿಯೇ ಕಷ್ಟವಾಗಬಹುದು ಎಂದಿದ್ದಾರೆ.

ಕಾರಣ, ಎಡಿಎಎಸ್ ತಂತ್ರಜ್ಞಾನ ಬಳಕೆಯಿಂದ ಕಾರುಗಳು ಮತ್ತು ವಾಣಿಜ್ಯ ವಾಹನಗಳ ಬೆಲೆಗಳು ಏರಿಕೆಯಾಗಲಿದ್ದು, ಇದರಿಂದ ಹಂತ ಹಂತವಾಗಿ ಒಂದೊಂದೆ ಸುರಕ್ಷಾ ಸೌಲಭ್ಯಗಳನ್ನು ಕಡ್ಡಾಯಗೊಳಿಸುವ ಬಗ್ಗೆ ಸಾರಿಗೆ ಇಲಾಖೆಯು ಚಿಂತನೆ ನಡೆಸುತ್ತಿದೆ.
MOST READ: ಬೈಕ್ ಮೂಲಕವೇ ಬೆಂಗಳೂರು ಟು ಸಿಡ್ನಿಗೆ ಹೊರಟಿರುವ ಹುಬ್ಬಳ್ಳಿ ಹುಡುಗಿಯ ಕನಸು ಏನು?

ಎಡಿಎಎಸ್ ಸೌಲಭ್ಯದಿಂದ ಏನು ಲಾಭ?
ಹೌದು, ಹೊಸ ಸುರಕ್ಷಾ ತಂತ್ರಜ್ಞಾನವಾಗಿರುವ ಎಡಿಎಎಸ್ ಸೌಲಭ್ಯವು ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಎಬಿಎಸ್, ಲೈನ್ ಅಸಿಸ್ಟಂಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಪ್ಯಾಕೇಜ್ ಹೊಂದಿರುತ್ತೆ. ಇದು ವಾಹನ ಚಾಲನೆ ವೇಳೆ ಆಗಬಹುದಾದ ದುರಂತಗಳನ್ನು ತಪ್ಪಿಸಲು ಸಾಕಷ್ಟು ಸಹಕಾರಿಯಾಗಲಿದೆ.

ಎಡಿಎಎಸ್ ಸೌಲಭ್ಯ ಹೊಂದಿದ ಕಾರುಗಳಿಗೂ ಮತ್ತು ಎಡಿಎಎಸ್ ಇಲ್ಲದ ಕಾರುಗಳಿಗೆ ಹೋಲಿಕೆ ಮಾಡಿದ್ದಲ್ಲಿ ಎಡಿಎಎಸ್ ಪ್ರೇರಿತ ವಾಹನಗಳಿಂದ ಆಗುವ ಅಪಘಾತಗಳ ಸಂಖ್ಯೆ ತಿರಾ ಕಡಿಮೆ ಎಂದು ಹೇಳಬಹುದಾಗಿದ್ದು, ಅತಿ ಕಡಿಮೆ ಅವಧಿಯಲ್ಲಿ ವಾಹನದ ನಿಯಂತ್ರಣ ತೆಗೆದುಕೊಳ್ಳಬಹುದಾಗಿದೆ.

ಜೊತೆಗೆ ಕೆಲವು ಸಂದರ್ಭಗಳಲ್ಲಿ ನೀವು ರಸ್ತೆಯಲ್ಲಿರುವ ಕಾರು ಲೈನ್ ಬಿಟ್ಟು ರಸ್ತೆ ನಿಯಮ ಮೀರಿ ಚಾಲನೆ ಮಾಡಿದಾಗ ಎಡಿಎಎಸ್ ತಂತ್ರಜ್ಞಾನವು ನಿಮ್ಮನ್ನ ಎಚ್ಚರಿಸುತ್ತೆ. ಈ ಮೂಲಕ ಎದುರಿಗೆ ಬರುವ ವಾಹನಗಳ ಮಾಹಿತಿಯನ್ನು ದೂರದಲ್ಲಿರುವಾಗಲೇ ನೀಡುವುದಲ್ಲದೇ ಆಗಬಹುದಾದ ದುರಂತಗಳನ್ನು ತಪ್ಪಿಸಲಿವೆ.

ಮರ್ಸಿಡಿಸ್ ಬೆಂಝ್ ಮತ್ತು ವೊಲ್ವೊ ನಿರ್ಮಾಣದ ಪ್ರತಿ ಕಾರು ಮಾದರಿಗಳಲ್ಲೂ ಈಗಾಗಲೇ ಈ ಸೌಲಭ್ಯವನ್ನು ಸ್ಟ್ಯಾಂಡಂರ್ಡ್ ಮಾದರಿಯಲ್ಲಿ ಒದಗಿಸಲಾಗುತ್ತಿದ್ದು, ಮುಂಬರುವ 2019ರ ಅಂತ್ಯದೊಳಗೆ ಎಂಟ್ರಿ ಲೆವಲ್ ಕಾರುಗಳಲ್ಲೂ ಇದು ಕಡ್ಡಾಯವಾಗಿರಲಿದೆ.
ವೈಯಕ್ತಿಕ ಬಳಕೆಗಾಗಿ ಹಾಗೂ ಟೂರಿಸ್ಟ್ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಿರುವ ಮಹೀಂದ್ರಾ ಮರಾಜೊ ಎಂಪಿವಿ ಕಾರುಗಳ ಫೋಟೋ ಗ್ಯಾಲರಿ..


Click it and Unblock the Notifications