ವಾಣಿಜ್ಯ ವಾಹನಗಳ ಸ್ಪೀಡ್ ಗವರ್ನರ್ ವಿಚಾರದಲ್ಲಿ ಕೇಂದ್ರದಿಂದ ಮಹತ್ವದ ನಿರ್ಧಾರ...
ವಾಣಿಜ್ಯ ವಾಹನಗಳಲ್ಲಿ ಅಳವಡಿಸಲಾಗುವ ಸ್ಪೀಡ್ ಗವರ್ನರ್ ವಿಚಾರದಲ್ಲಿ ಕೇಂದ್ರ ಸಾರಿಗೆ ಇಲಾಖೆಯು ಮಹತ್ವದ ನಿರ್ಣಯ ಕೈಗೊಳ್ಳಲು ಮುಂದಾಗಿದೆ.
ವಾಣಿಜ್ಯ ವಾಹನಗಳಲ್ಲಿ ಅಳವಡಿಸಲಾಗುವ ಸ್ಪೀಡ್ ಗವರ್ನರ್ ವಿಚಾರದಲ್ಲಿ ಕೇಂದ್ರ ಸಾರಿಗೆ ಇಲಾಖೆಯು ಮಹತ್ವದ ನಿರ್ಣಯ ಕೈಗೊಳ್ಳಲು ಮುಂದಾಗಿದ್ದು, ಸರ್ಕಾರ ಮತ್ತು ವಾಹನ ಮಾಲೀಕರ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿರುವ ಸ್ಪೀಡ್ ಗವರ್ನರ್ ವಿವಾದಕ್ಕೆ ಸದ್ಯದಲ್ಲೇ ಸ್ಪಷ್ಟ ಉತ್ತರ ಸಿಗಲಿದೆ.

ಸ್ಪೀಡ್ ಗವರ್ನರ್ ವಿವಾದ ಕುರಿತು ಮಾತನಾಡಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡಾ ತುರ್ತು ಆರ್ಥಿಕ ಬೆಳವಣಿಗೆಗೆ ಮಾರಕವಾಗಿರುವ ಸ್ಪೀಡ್ ಗವರ್ನರ್ ಕಡ್ಡಾಯವನ್ನು ತೆಗೆದುಹಾಕುತ್ತಿರುವ ಬಗ್ಗೆ ಸುಳಿವು ನೀಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದ್ದಾರೆ.

ದೆಹಲಿಯಲ್ಲಿ ನಡೆದ 58ನೇ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನಿಫ್ಯಾಚ್ಚರ್ಸ್(SIAM)ಸಮಾವೇಶದಲ್ಲಿ ಮಾತನಾಡಿದ ಸಚಿವ ನಿತಿನ್ ಗಡ್ಕರಿ ಅವರು, ಸಾರಿಗೆ ಇಲಾಖೆಗೆ ಹಿನ್ನಡೆಯಾಗಿರುವ ಸ್ಪೀಡ್ ಗವರ್ನರ್ ತೆಗೆದುಹಾಕುವ ಬಗ್ಗೆ ಈಗಾಲಲೇ ಹಲವು ಸುತ್ತಿನ ಉನ್ನತ ಸಭೆಗಳನ್ನು ನಡೆಸಲಾಗಿದೆ ಎಂದಿದ್ದಾರೆ.

ಹೀಗಾಗಿ ಹೊಸ ಕಾಯ್ದೆ ಅನುಷ್ಠಾನ ತರುವುದಕ್ಕೂ ಮುನ್ನ ಮೋಟಾರ್ ಕಾಯ್ದೆಗೆ ತಿದ್ದುಪಡಿ ತರುವ ಅವಶ್ಯಕತೆಯಿದ್ದು, ತಿದ್ದುಪಡಿ ತಂದ ನಂತರವೇ ಸ್ಪೀಡ್ ಗವರ್ನರ್ ನಿಷೇಧವು ಅಧಿಕೃತವಾಗಿ ಜಾರಿಗೆ ಬರಲಿದೆ. ಇದರಿಂದ ವಾಣಿಜ್ಯ ವಾಹನಗಳಿಗೆ ಸಾಕಷ್ಟು ಅನುಕೂಲತೆಗಳಿದ್ದು, ಸರಕು ಸಾಗಾಣಿಕೆಯಲ್ಲಿ ಆಗುವ ಸಮಯದ ವ್ಯರ್ಥ ಮತ್ತು ಸಾಗಾಣಿಕೆ ವೆಚ್ಚಗಳನ್ನು ತಗ್ಗಿಸಲು ಸಹಕಾರಿಯಾಗಲಿದೆ.

ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶ.!
ವೈಯಕ್ತಿಕ ಬಳಕೆ ವಾಹನಗಳನ್ನು ಹೊರತುಪಡಿಸಿ ಅಂದರೆ, ದ್ವಿಚಕ್ರ ವಾಹನ, ಕಾರು(ವೈಟ್ ಬೋರ್ಡ್ ಮಾತ್ರ) ಹೊರತುಪಡಿಸಿ ಇನ್ನುಳಿದ ಎಲ್ಲಾ ವಾಣಿಜ್ಯ ವಾಹನಗಳಿಗೆ ಕಡ್ಡಾಯವಾಗಿ ಸ್ಪೀಡ್ ಗರ್ವನರ್ ಅಳವಡಿಸುವಂತೆ 2006ರಲ್ಲೇ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿತ್ತು.

ತದನಂತರದ ದಿನಗಳಲ್ಲಿ ಈ ಆದೇಶವನ್ನು ಸುಪ್ರೀಂಕೋರ್ಟ್ ಕೂಡಾ ಎತ್ತಿಹಿಡಿಯುವ ಮೂಲಕ ದೇಶಾದ್ಯಂತ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಕರ್ನಾಟಕ ನಂತರ ದೇಶದ ಬಹುತೇಕ ರಾಜ್ಯಗಳಲ್ಲಿ ಸ್ಪೀಡ್ ಗವರ್ನರ್ ಜಾರಿಗೆ ತರುವ ಮೂಲಕ ಅತಿ ವೇಗಕ್ಕೆ ಸ್ಪೀಡ್ ಹಾಕುವುದೇ ಈ ಕಾಯ್ದೆಯ ಉದ್ದೇಶವಾಗಿತ್ತು.
MOST READ: ಆರ್ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪೆಗೆ ಎಸೆದ ಬೈಕ್ ಮಾಲೀಕ

ಅಂದಿನಿಂದ ಇದುವರೆಗೂ ಸ್ಪೀಡ್ ಗವರ್ನರ್ ಕಡ್ಡಾಯದ ಬಗ್ಗೆ ಸರ್ಕಾರ ಮತ್ತು ವಾಣಿಜ್ಯ ವಾಹನಗಳ ಮಾಲೀಕರ ನಡುವೆ ಜಟಾಪಟಿ ನಡೆಯುತ್ತಲೇ ಇದ್ದು, ಸ್ಪೀಡ್ ಗವರ್ನರ್ ವಿರುದ್ಧ ದೇಶಾದ್ಯಂತ ಇದುವರೆಗೆ ನೂರಾರು ಮುಸ್ಕರಗಳು ನಡೆದಿರುವುದಲ್ಲದೇ ಕಡ್ಡಾಯ ಕಾಯ್ದೆ ತೆಗೆದುಹಾಕುವಂತೆ ಸರ್ಕಾರಗಳ ಒತ್ತಡ ತರಲಾಗುತ್ತಿದೆ.

ಇದಕ್ಕೆ ಸಮ್ಮತಿಸುವ ಕೇಂದ್ರ ಸಾರಿಗೆ ಇಲಾಖೆಯು ಮುಂಬರುವ ಕೆಲವೇ ದಿನಗಳಲ್ಲಿ ಅಧಿಕೃತ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದ್ದು, ವಾಣಿಜ್ಯ ವಾಹನ ಮಾಲೀಕರಿಗೆ ಇದು ವರವಾಗಿ ಪರಿಣಮಿಸಲಿದೆ ಎನ್ನಬಹುದು.

ಸದ್ಯಕ್ಕಿರುವ ಸ್ಪೀಡ್
ಸದ್ಯ ಚಾಲ್ತಿಯಲ್ಲಿರುವ ಸ್ಪೀಡ್ ಗವರ್ನರ್ ಕಾಯ್ದೆ ಪ್ರಕಾರ ಬಸ್, ಟ್ಯಾಕ್ಸಿಗಳಿಗೆ ಪ್ರತಿ ಗಂಟೆಗೆ 80 ಕಿ.ಮೀ, ಟ್ರಕ್ಸ್ಗಳಿಗೆ ಪ್ರತಿ ಗಂಟೆಗೆ 60 ಕಿ.ಮೀ ಮತ್ತು ಮೂರು ಚಕ್ರದ ವಾಹನ, ಶಾಲಾ ಬಸ್ಗಳಿಗೆ ಪ್ರತಿ ಗಂಟೆಗೆ 40ಕಿ.ಮಿ ಸ್ಪೀಡ್ ಗವರ್ನರ್ ಜಾರಿಯಲ್ಲಿದೆ.

ಇದರಿಂದ ಸರಕು ಸಾಗಾಟಗಳಿಗೆ ಭಾರೀ ಹಿನ್ನಡೆಯಾಗಿದ್ದು, ಟ್ಯಾಕ್ಸಿ ಮಾಲೀಕರು ಮತ್ತು ಲಾರಿ ಮಾಲೀಕರು ಇದನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಅಪಘಾತಗಳ ಸಂಖ್ಯೆ ನಿಯಂತ್ರಿಸುವ ಒಂದೇ ಉದ್ದೇಶದಿಂದ ಜಾರಿಗೆ ತರಲಾದ ಈ ಕಾಯ್ದೆಯು ಭಾರೀ ಪ್ರಮಾಣದ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತಿರುವ ಬಗ್ಗೆ ಕೇಂದ್ರ ಸಾರಿಗೆ ಇಲಾಖೆಯು ಗಂಭೀರ ಚಿಂತನೆ ನಡೆಸಿದ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದೆ.

ಇದಕ್ಕಾಗಿಯೇ ವಾಣಿಜ್ಯ ವಾಹನಗಳಿಗೆ ಸ್ಪೀಡ್ ಗವರ್ನರ್ ಬದಲಾಗಿ ಹೊಸ ಸುರಕ್ಷಾ ಸೌಲಭ್ಯಗಳನ್ನು ಕಡ್ಡಾಯಗೊಳಿಸುವ ಬಗ್ಗೆ ಸುಳಿವು ನೀಡಿರುವ ಕೇಂದ್ರ ಸರ್ಕಾರವು ವಾಣಿಜ್ಯ ವಾಹನಗಳಲ್ಲಿ ಡ್ಯುಯಲ್ ಏರ್ಬ್ಯಾಗ್, ಎಬಿಎಸ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಮತ್ತು ಸ್ಪೀಡ್ ರಿಮೆಂಡರ್(120 ಕಿ.ಮೀ) ಸೌಲಭ್ಯಗಳನ್ನು ಕಡ್ಡಾಯಗೊಳಿಸಲಿದೆ.
MOST READ: ವಾಹನಗಳಲ್ಲಿ ಯಾಕೆ ಕಡ್ಡಾಯವಾಗಿ ಎಬಿಎಸ್ ಇರಬೇಕು? ಈ ವಿಡಿಯೋ ನೋಡಿ..

ಈ ಮೂಲಕ ವಾಣಿಜ್ಯ ವಾಹನಗಳ ವೇಗದ ಮೀತಿಯನ್ನು ಹೆಚ್ಚಿಸುವುದಲ್ಲದೇ ಸುರಕ್ಷಾ ಸೌಲಭ್ಯದಲ್ಲೂ ಕಟ್ಟುನಿಟ್ಟಾಗಿ ಜಾರಿಗೊಳ್ಳುವಂತೆ ಮಾಡಲು ನಿರ್ಧರಿಸಿರುವ ಕೇಂದ್ರ ಸರ್ಕಾರವು ಸದ್ಯದಲ್ಲೇ ಅಧಿಕೃತ ಆದೇಶ ಹೊರಡಿಸುವುದಲ್ಲದೇ ಮೇಲೆ ಹೇಳಲಾದ ಸೌಲಭ್ಯಗಳನ್ನು ಕಡ್ಡಾಯಗೊಳಿಸಲಿದೆ.


Click it and Unblock the Notifications








