ಸೂಪರ್ಕಾರುಗಳನ್ನು ವಶಕ್ಕೆ ಪಡೆದ ಪೊಲೀಸರು, ಕಾರಣವೇನು ಗೊತ್ತಾ?
ಭಾರತದಲ್ಲಿ ರೇಸ್ ಟ್ರಾಕ್ಗಳು ಕಡಿಮೆ ಸಂಖ್ಯೆಯಲ್ಲಿವೆ. ಈ ಕಾರಣಕ್ಕೆ ಸೂಪರ್ ಕಾರು ಹಾಗೂ ಸೂಪರ್ ಬೈಕ್ಗಳ ಮಾಲೀಕರು ತಮ್ಮ ವಾಹನಗಳನ್ನು ಸಾರ್ವಜನಿಕ ರಸ್ತೆಯಲ್ಲಿ ಚಲಾಯಿಸುತ್ತಾರೆ. ಭಾರತದಲ್ಲಿರುವ ಸಾರ್ವಜನಿಕ ರಸ್ತೆಗಳಲ್ಲಿ ವೇಗದ ಮಿತಿಯನ್ನು ನಿಗದಿಪಡಿಸಲಾಗಿದೆ.

ಆದರೂ ಸಹ ಸೂಪರ್ ಕಾರು ಹಾಗೂ ಸೂಪರ್ ಬೈಕ್ಗಳು ಹೆಚ್ಚಿನ ವೇಗದಲ್ಲಿಯೇ ಚಲಿಸುತ್ತವೆ. ಈ ವಾಹನಗಳ ಮಾಲೀಕರು ಪೊಲೀಸರ ಕೈಗೆ ಸಿಕ್ಕಿ ಹಾಕದೇ ಇರುವುದಕೊಸ್ಕರ ವೀಕ್ ಎಂಡ್ಗಳಲ್ಲಿ ಬೆಳ್ಳಂಬೆಳಿಗ್ಗೆ ವಾಹನ ಚಲಾಯಿಸುತ್ತಾರೆ.

ಈ ರೀತಿ ಬೆಳಗಿನ ವೇಳೆಯಲ್ಲಿ ಅತಿವೇಗವಾಗಿ ಚಲಿಸುತ್ತಿದ್ದ ಕಾರುಗಳನ್ನು ಹೈದರಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೈದರಬಾದ್ನ ರಾಜೇಂದ್ರ ನಗರ ಪೊಲೀಸರು ಪಿವಿಎನ್ಆರ್ ಎಕ್ಸ್ ಪ್ರೆಸ್ವೇಯಲ್ಲಿ ವೇಗವಾಗಿ ಚಲಿಸುತ್ತಿದ್ದ ಎರಡು ಸೂಪರ್ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ಅಂದ ಹಾಗೆ ಹೈದರಬಾದ್ ಪೊಲೀಸರು ಹೀಗೆ ವಶಕ್ಕೆ ಪಡೆದಿದ್ದು, ಲ್ಯಾಂಬೊರ್ಗಿನಿ ಹುರಾಕನ್ ಹಾಗೂ ಆಡಿ ಆರ್ 8 ಸೂಪರ್ ಕಾರುಗಳನ್ನು. ಸಾರ್ವಜನಿಕರು ಈ ಎಕ್ಸ್ ಪ್ರೆಸ್ ವೇಯಲ್ಲಿ ಅತಿವೇಗವಾಗಿ ಚಲಿಸುವ ವಾಹನಗಳ ಬಗ್ಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಲ್ಯಾಂಬೊರ್ಗಿನಿ ಕಾರಿನ ಚಾಲಕನನ್ನು ಪ್ರತೀಕ್ ಎಂದು ಹಾಗೂ ಆಡಿ ಕಾರು ಚಾಲಕನನ್ನು ಚೇತನ್ ಎಂದು ಗುರುತಿಸಲಾಗಿದೆ. ಇವರು ಶಂಷಾಬಾದ್ನಿಂದ ಮೆಹ್ದಿಪಟ್ಟಣಕ್ಕೆ ಹೋಗುತ್ತಿದ್ದಾರೆ ಎಂದು ಹೇಳಲಾಗಿದೆ. ಇದಕ್ಕಾಗಿ ಪಿವಿಎನ್ಆರ್ ಎಕ್ಸ್ ಪ್ರೆಸ್ವೇಯನ್ನು ಬಳಸಿದ್ದಾರೆ.

ಈ ಎರಡು ಕಾರುಗಳು ಅತಿ ವೇಗವಾಗಿ ಸಂಚರಿಸುತ್ತ ಕಿರಿಕಿರಿಯನ್ನುಂಟು ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು. ದೂರು ಬಂದ ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ವಿಶೇಷ ತಂಡವನ್ನು ರಚಿಸಿ ಈ ಕಾರುಗಳನ್ನು ಚಾಲನೆ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ.

ವರದಿಗಳ ಪ್ರಕಾರ, ಈ ತಂಡವು ಕಾರುಗಳನ್ನು ಬಹುದೂರದವರೆಗೂ ಚೇಸ್ ಮಾಡಿ, ಹೈದರಬಾದ್ ಟ್ರಾಫಿಕ್ ಪೊಲೀಸರ ನೆರವಿನಿಂದ ಕಾರು ಚಾಲಕರನ್ನು ಸೆರೆಹಿಡಿದು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರುಗಳನ್ನು ನಿಲ್ಲಿಸಿದ ತಕ್ಷಣವೇ ಪೊಲೀಸರು ಕಾರಿನ ದಾಖಲೆಗಳನ್ನು ಕೇಳಿದ್ದಾರೆ.

ಇದಾದ ನಂತರ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಸ್ಪೀಡ್ ಕ್ಯಾಮರಾಗಳಿಲ್ಲದ ಕಾರಣ ಈ ಕಾರುಗಳು ಯಾವ ವೇಗದಲ್ಲಿ ಚಲಿಸುತ್ತಿದ್ದವು ಎಂದು ತಿಳಿದುಬಂದಿಲ್ಲ. ರಾಜೇಂದ್ರ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಾರ, ಕಾರು ಚಾಲಕರು ಕಾರುಗಳನ್ನು ಅತಿವೇಗದಲ್ಲಿ ಚಲಾಯಿಸುತ್ತಿದ್ದ ಕಾರಣಕ್ಕೆ ವಶಕ್ಕೆ ಪಡೆಯಲಾಗಿದೆ.

ಅತಿವೇಗದಿಂದ ಅಪಘಾತಗಳಾಗುವ ಸಾಧ್ಯತೆಗಳಿದ್ದವು ಎಂದು ಪೊಲೀಸರು ಹೇಳಿದ್ದಾರೆ. ರಾಜೇಂದ್ರ ನಗರ ಪೊಲೀಸರು ಈ ಕಾರು ಚಾಲಕರು ವಿರುದ್ಧ ವಿವಿಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಲ್ಯಾಂಬೊರ್ಗಿನಿ ಹಾಗೂ ಆಡಿ ಕಾರುಗಳು ಸುಲಭವಾಗಿ ನೂರು ಕಿ.ಮೀ ವೇಗವನ್ನು ದಾಖಲಿಸುತ್ತವೆ.

ಆದರೆ ಈ ಕಾರು ಚಾಲನೆ ಮಾಡುವವರು ಸಾರ್ವಜನಿಕ ರಸ್ತೆಯಲ್ಲಿ ಚಲಿಸುವಾಗ ನಿಗದಿ ಪಡಿಸಿರುವ ವೇಗದಲ್ಲಿ ಚಲಿಸದರೆ ಒಳ್ಳೆಯದು. ಭಾರತದ ರಸ್ತೆಗಳಲ್ಲಿ ಸಡನ್ನಾಗಿ ಏನಾದರೂ ಅಡ್ಡ ಬರುತ್ತಲೇ ಇರುತ್ತವೆ. ಆದ ಕಾರಣ ಮಿತಿಯಾದ ವೇಗದಲ್ಲಿ ಚಲಿಸುವುದು ಉತ್ತಮ.


Click it and Unblock the Notifications