ಜುಲೈ 20ರಿಂದ ಕಾರು ಉತ್ಪಾದನೆಯನ್ನು ಪುನಾರಂಭಿಸಲಿದೆ ಟೊಯೊಟಾ
ದೇಶಾದ್ಯಂತ ಕರೋನಾ ವೈರಸ್ ಸೋಂಕಿತರ ಪ್ರಕರಣಗಳು ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಸೋಂಕು ಹತೋಟಿ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹರಸಾಹಸಪಡುತ್ತಿವೆ. ಇದಕ್ಕಾಗಿ ಎರಡನೇ ಹಂತದ ಲಾಕ್ಡೌನ್ ಮೊರೆ ಹೋಗಿರುವ ವಿವಿಧ ರಾಜ್ಯ ಸರ್ಕಾರಗಳು ಜನಸಂಪರ್ಕ ತಪ್ಪಿಸುವುದಕ್ಕಾಗಿ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ಬಹುತೇಕ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿವೆ.

ಕರ್ನಾಟಕದಲ್ಲೂ ತಜ್ಞರ ಸಲಹೆಯೆಂತೆ ಒಂದು ವಾರಗಳ ಕಾಲ ಕಠಿಣ ನಿಯಮಗಳೊಂದಿಗೆ 2ನೇ ಹಂತದ ಲಾಕ್ಡೌನ್ ಜಾರಿಗೆ ತರಲಾಗಿದ್ದು, ಹೊಸ ಸುರಕ್ಷಾ ಮಾರ್ಗಸೂಚಿ ಅನುಸಾರವಾಗಿ ಟೊಯೊಟಾ ಕಂಪನಿಯು ಕೂಡಾ ಬೆಂಗಳೂರಿನ ಹೊರಭಾಗದಲ್ಲಿರುವ ಬಿಡದಿ ಕಾರು ಉತ್ಪಾದನಾ ಘಟಕದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಜುಲೈ 20ರ ನಂತರವಷ್ಟೇ ಕಾರು ಉತ್ಪಾದನೆಯನ್ನು ಪುನಾರಂಭಿಸುವುದಾಗಿ ಮಾಹಿತಿ ಹಂಚಿಕೊಂಡಿದ್ದು, ಸಾರ್ವಜನಿಕರ ಸುರಕ್ಷಾ ದೃಷ್ಠಿಯಿಂದ ಸರ್ಕಾರವು ತೆಗೆದುಕೊಂಡಿರುವ ಕ್ರಮವನ್ನು ಸ್ವಾಗತಿಸಿದೆ.

ಮೇ 4ರ ನಂತರ ಲಾಕ್ಡೌನ್ ಸಡಿಲಿಕೆಯಾದಾಗ ರಾಜ್ಯ ಸರ್ಕಾರದ ಮಾರ್ಗಸೂಚಿಯೆಂತೆಯೇ ಕಾರು ಉತ್ಪಾದನೆಯನ್ನು ಕೈಗೊಂಡಿದ್ದ ಟೊಯೊಟಾ ಕಂಪನಿಯು ಬಿಡದಿ ಘಟಕದಲ್ಲಿ ಹಲವಾರು ಸುರಕ್ಷಾ ಕ್ರಮಗಳೊಂದಿಗೆ ಕಾರು ಉತ್ಪಾದನೆಗೆ ಚಾಲನೆ ನೀಡಿತ್ತು.

ಹಲವಾರು ಸುರಕ್ಷಾ ಕ್ರಮಗಳ ನಡುವೆಯೂ ಸುಮಾರು 5 ಕರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಸದ್ಯ ಸೋಂಕಿತ ಪ್ರಕರಣಗಳು ಸಂಪೂರ್ಣವಾಗಿ ಗುಣಮುಖರಾಗಿದ್ದು, ಇದೀಗ ರಾಜ್ಯ ಸರ್ಕಾರದ ಮಾರ್ಗಸೂಚಿ ಅನುಸಾರವಾಗಿ ಕಾರು ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಮುಂದಿನ ವಾರದಲ್ಲಿ ಉತ್ಪಾದನೆಯನ್ನು ಪುನಾರಂಭಿಸಲಿದೆ.

ಇನ್ನು ಲಾಕ್ಡೌನ್ ಸಂಕಷ್ಟದಲ್ಲೂ ಕರೋನಾ ವೈರಸ್ ವಿರುದ್ಧ ಹೋರಾಟದಲ್ಲಿ ಕೈಜೋಡಿಸಿರುವ ಟೊಯೊಟಾ ಕಂಪನಿಯು ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಧನ ಸಹಾಯದ ಜೊತೆ ವೈದ್ಯಕೀಯ ಉಪಕರಣಗಳ ಸಹಾಯಹಸ್ತ ಚಾಚಿದ್ದು, ತ್ವರಿತ ಗತಿಯಲ್ಲಿ ವೈರಸ್ ಪತ್ತೆಗಾಗಿ ಮೊಬೈಲ್ ಮೆಡಿಕಲ್ ಯುನಿಟ್ ಅನ್ನು ದೇಣಿಯಾಗಿ ನೀಡಿದೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ(ಐಐಎಸ್ಸಿ) ಮೊಬೈಲ್ ಮೆಡಿಕಲ್ ಯುನಿಟ್ ಅನ್ನು ದೇಣಿಯಾಗಿರುವ ನೀಡಿರುವ ಟೊಯೊಟಾ ಕಂಪನಿಯು ಟೆಸ್ಟಿಂಗ್ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗಿದ್ದು, ತ್ವರಿತಗತಿಯಲ್ಲಿ ಟೆಸ್ಟಿಂಗ್ ಮೂಲಕ ವೈರಸ್ ಹರಡುವಿಕೆಯನ್ನು ಪರಿಣಾಮಕಾರಿ ತಗ್ಗಿಸಲು ನೆರವಾಗಿದೆ.

ವೈದ್ಯಕೀಯ ಅಗತ್ಯಗಳಿಗೆ ಅನುಗುಣವಾಗಿ ಫೋರ್ಸ್ ಟ್ರಾವೆಲರ್ ಅನ್ನು ಮಾಡಿಫೈಗೊಳಿಸಿರುವ ಟೊಯೊಟಾ ಕಂಪನಿಯು ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಒಂದೇ ಸೂರಿನಡಿ ಜೋಡಣೆ ಮಾಡಿದ್ದು, ವೈರಸ್ ಹೆಚ್ಚಿರುವ ಪ್ರದೇಶಗಳಲ್ಲಿ ನಿಯೋಜನೆ ಮಾಡಲು ಅನುಕೂಲಕರವಾಗಿದೆ.
MOST READ: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಇದರೊಂದಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ತುರ್ತು ಪರಿಹಾರ ನಿಧಿಗೂ ದೇಣಿಗೆ ನೀಡಿದ್ದು, ಕರ್ನಾಟಕ ಸರ್ಕಾರಕ್ಕೆ ಪ್ರತ್ಯೇಕವಾಗಿ ರೂ.2 ಕೋಟಿ ಹಣಕಾಸಿನ ನೆರವು ನೀಡಿತ್ತು. ಜೊತೆಗೆ ತನ್ನ ಪಾಲುದಾರ ಕಂಪನಿಗಳ ಜೊತೆಗೂಡಿ ಲಾಕ್ಡೌನ್ ವೇಳೆ ಹಸಿದವರಿಗೆ ಊಟ ಮತ್ತು ವೈದ್ಯಕೀಯ ಉಪಕರಣಗಳನ್ನು ಅಭಿವೃದ್ದಿಗೊಳಿಸಿ ವಿತರಣೆ ಮಾಡಿದೆ.

ಇನ್ನು ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಈಗಾಗಲೇ ಹಲವಾರು ಆಟೋ ಉತ್ಪಾದನಾ ಕಂಪನಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಭಾರೀ ಪ್ರಮಾಣದ ಹಣಕಾಸಿನ ನೆರವು ಘೋಷಣೆ ಮಾಡಿರುವುದಲ್ಲದೇ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಅಭಿವೃದ್ದಿಪಡಿಸುತ್ತಿವೆ.
MOST READ: ಕೋವಿಡ್ 19: ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ವಿಶ್ವದ ಬಹುತೇಕ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿಯು ಸಂಕಷ್ಟಕ್ಕೆ ಸಿಲುಕಿದ್ದು, ಈ ಹಿನ್ನಲೆಯಲ್ಲಿ ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಆರಂಭಿಸಲಾದ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಈಗಾಗಲೇ ಭಾರೀ ಪ್ರಮಾಣದ ನೆರವು ಹರಿದು ಬಂದಿದೆ.


Click it and Unblock the Notifications