ಕೋವಿಡ್ ಸಂಕಷ್ಟ: ತಮಿಳುನಾಡು ಸರ್ಕಾರಕ್ಕೆ ರೂ.5 ಕೋಟಿ ದೇಣಿಗೆ ನೀಡಿದ ಹ್ಯುಂಡೈ ಮೋಟಾರ್ಸ್
ತೀವ್ರವಾಗಿ ಹರಡುತ್ತಿರುವ ಕೋವಿಡ್ 2ನೇ ಅಲೆ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿದ್ದು, ಸರ್ಕಾರದ ಜೊತೆ ಕೈಜೋಡಿಸಿರುವ ವಿವಿಧ ಆಟೋ ಕಂಪನಿಗಳು ಕೂಡಾ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್ಆರ್) ನೀತಿ ಅಡಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿವಿಧ ರಾಜ್ಯ ಸರ್ಕಾರಗಳು ಸೋಂಕು ಹರಡುವಿಕೆಯನ್ನು ತಗ್ಗಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಸೋಂಕು ಹೆಚ್ಚಿರುವ ನಗರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹೆಚ್ಚುತ್ತಿರುವ ಕರೋನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ವಿವಿಧ ರಾಜ್ಯ ಸರ್ಕಾರಗಳು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತಂದಿದ್ದು, ಕೊರೋನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಅನುಸರಿಸಲಾಗುತ್ತಿದೆ.

ವೈರಸ್ ಹರಡುವಿಕೆ ತೀವ್ರವಾಗಿರುವುದರಿಂದ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ವಿವಿಧ ರಾಜ್ಯ ಸರ್ಕಾರಗಳ ಪ್ರಯತ್ನಕ್ಕೆ ಆಟೋ ಮೊಬೈಲ್ ಕಂಪನಿಗಳು ಸಾಕಷ್ಟು ಸಹಕಾರ ನೀಡುತ್ತಿದೆ.

ಆರ್ಥಿಕ ಸಂಕಷ್ಟದ ನಡುವೆಯೂ ಆಟೋ ಕಂಪನಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆಗೂಡಿ ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡುತ್ತಿದ್ದು, ದೇಶದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಹ್ಯುಂಡೈ ಮೋಟಾರ್ಸ್ ಕೂಡಾ ಕೋವಿಡ್ ನಿಯಂತ್ರಣಕ್ಕಾಗಿ ಹಲವಾರು ರೀತಿಯ ನೆರವು ನೀಡಿದೆ.

ಕಳೆದ ವರ್ಷ ಕೋವಿಡ್ ಹೆಚ್ಚಳವಾಗಿದ್ದ ಸಂದರ್ಭದಲ್ಲಿ ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳಿಗೆ ಸುಮಾರು ರೂ. 15 ಕೋಟಿ ಆರ್ಥಿಕ ನೆರವು ನೀಡಿದ್ದ ಹ್ಯುಂಡೈ ಕಂಪನಿಯು ಇದೀಗ 2ನೇ ಅಲೆಯ ಸಂದರ್ಭದಲ್ಲೂ ವಿವಿಧ ರೀತಿಯ ಸಹಕಾರ ನೀಡುತ್ತಿದ್ದು, ಆಕ್ಸಿಜನ್ ಉತ್ಪಾದನೆಗೆ ಸಹಕರಿಸಿರುವುದಲ್ಲದೆ ತಮಿಳುನಾಡು ಸರ್ಕಾರಕ್ಕೆ ರೂ.5 ಕೋಟಿ ದೇಣಿಗೆ ನೀಡಿದೆ.

ಕೇಂದ್ರ ಸರ್ಕಾರಕ್ಕೆ ನೀಡುತ್ತಿರುವ ಪರಿಹಾರ ಕ್ರಮಗಳನ್ನು ಹೊರತುಪಡಿಸಿ ತಮಿಳುನಾಡು ಸರ್ಕಾರಕ್ಕೆ ಪ್ರತ್ಯೇಕವಾಗಿ ರೂ.5 ಕೋಟಿ ದೇಣಿಗೆ ನೀಡಲಾಗಿದ್ದು, ನೂತನವಾಗಿ ಸಿಎಂ ಸ್ಥಾನ ಅಲಂಕರಿಸಿರುವ ಎಂ.ಕೆ ಸ್ಟಾಲಿನ್ ಅವರಿಗೆ ಹ್ಯುಂಡೈ ಇಂಡಿಯಾ ಕಂಪನಿಯ ಹಿರಿಯ ಅಧಿಕಾರಿಗಳು 'ಮುಖ್ಯಮಂತ್ರಿಗಳ ಪರಿಹಾರ ನಿಧಿ'ಗೆ ಚೆಕ್ ಹಸ್ತಾಂತರಿಸಿದ್ದಾರೆ.
MOST READ: ಲಾಕ್ಡೌನ್ ಉಲ್ಲಂಘನೆ ಮಾಡಿರುವ ವಾಹನ ಮಾಲೀಕರಿಗೆ ಜೈಲು ಶಿಕ್ಷೆ ಫಿಕ್ಸ್

ಕೋವಿಡ್ ವಿರುದ್ದದ ಹೋರಾಟದಲ್ಲಿ ಆರಂಭದಿಂದಲೂ ವಿವಿಧ ಹಂತಗಳಲ್ಲಿ ವಿವಿಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಕ್ಕೆ ಹಣಕಾಸಿನ ಜೊತೆ ವೈದ್ಯಕೀಯ ಸೇವೆಗಳ ನೆರವು ನೀಡಿರುವ ಹ್ಯುಂಡೈ ಮೋಟಾರ್ಸ್ ಕಂಪನಿಯು ಇದೀಗ ತಮಿಳುನಾಡು ಸರ್ಕಾರಕ್ಕೆ ಹೆಚ್ಚಿನ ಮಟ್ಟದ ಹಣಕಾಸು ನೆರವು ನೀಡಿದೆ.

ತಮಿಳುನಾಡಿನಲ್ಲಿ ತನ್ನ ಕಾರು ಉತ್ಪಾದನಾ ಘಟಕವನ್ನು ಹೊಂದಿರುವ ಹ್ಯುಂಡೈ ಮೋಟಾರ್ಸ್ ಕಂಪನಿಯು ಸ್ಥಳೀಯ ಆಡಳಿತ ವ್ಯವಸ್ಥೆಗೆ ಹೆಚ್ಚಿನ ಮಟ್ಟದ ನೆರವು ಘೋಷಣೆ ಮಾಡಿದ್ದು, ಅಗತ್ಯವಿದ್ದಲ್ಲಿ ಇನ್ನು ಹೆಚ್ಚಿನ ಮಟ್ಟದ ನೆರವು ನೀಡಲು ಕಂಪನಿ ಬದ್ದವಾಗಿದೆ ಎಂದಿದೆ.
MOST READ: ಕೋವಿಡ್ ಭೀತಿ: ಕಾರು ಉತ್ಪಾದನೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ ಎಂಜಿ ಮೋಟಾರ್

ಇನ್ನು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್ಆರ್) ನೀತಿ ಅಡಿಯಲ್ಲಿ ಹ್ಯುಂಡೈ ಸೇರಿದಂತೆ ಹಲವಾರು ಆಟೋ ಉತ್ಪಾದನಾ ಕಂಪನಿಗಳು ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಮಟ್ಟದ ನೆರವು ನೀಡಿದ್ದು, ಕೆಲವು ಕಂಪನಿಗಳು ಹಣಕಾಸು ನೆರವು ನೀಡಿದ್ದಲ್ಲಿ ಇನ್ನು ಕೆಲವು ವಾಹನ ಕಂಪನಿಗಳು ವೈದ್ಯಕೀಯ ಸೇವೆಗಳನ್ನು ಉನ್ನತೀಕರಿಸಲು ವೆಂಟಿಲೇಟರ್ ಉತ್ಪಾದನೆ ಮತ್ತು ಆಕ್ಸಿಜನ್ ಉತ್ಪಾದನೆಗೆ ಸಹಕಾರಿಯಾಗುತ್ತಿವೆ.


Click it and Unblock the Notifications