ಹೊಸ ಸುರಕ್ಷಾ ಮಾರ್ಗಸೂಚಿ ಅನ್ವಯ ಬಿಡದಿ ಘಟಕದಲ್ಲಿ ಕಾರು ಉತ್ಪಾದನೆ ಆರಂಭಿಸಿದ ಟೊಯೊಟಾ
ದೇಶಾದ್ಯಂತ ಕೋವಿಡ್ 2ನೇ ಅಲೆ ತೀವ್ರವಾಗಿ ಹೆಚ್ಚಳವಾಗಿದ್ದರಿಂದ ವಿವಿಧ ರಾಜ್ಯಗಳಲ್ಲಿ ಹಲವು ಕಠಿಣ ಕ್ರಮಗಳೊಂದಿಗೆ ಲಾಕ್ಡೌನ್ ವಿಧಿಸಿದ್ದು, ಲಾಕ್ಡೌನ್ ಪರಿಣಾಮ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧವಾಗಿವೆ.

ಕಳೆದ ವರ್ಷದ ಲಾಕ್ಡೌನ್ ಹೊಡೆತಕ್ಕೆ ಸಿಲುಕಿ ಸುಧಾರಿಸಿಕೊಳ್ಳುತ್ತಿದ್ದ ಆಟೋ ಉದ್ಯಮವು ಸಹ ಇದೀಗ ವಿಸ್ತರಿತ ಲಾಕ್ಡೌನ್ ಪರಿಣಾಮ ಭಾರೀ ನಷ್ಟ ಅನುಭವಿಸುತ್ತಿದ್ದು, ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ವಾಹನ ಉತ್ಪಾದನೆಯು ಸಂಪೂರ್ಣವಾಗಿ ನೆಲಕಚ್ಚಿದೆ.

ಕೋವಿಡ್ ಎರಡನೇ ಅಲೆ ಹೆಚ್ಚಳವಾದ ನಂತರ ದೇಶದ ಪ್ರಮುಖ ಆಟೋ ಕಂಪನಿಗಳು ಕಳೆದ ತಿಂಗಳು ಆರಂಭದಿಂದಲೇ ವಾಹನ ಉತ್ಪಾದನೆಯನ್ನು ಬಂದ್ ಮಾಡಿದ್ದು, ಕೋವಿಡ್ ತುಸು ತಗ್ಗಿರುವುದರಿಂದ ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಪ್ರಮುಖ ವಾಹನ ಕಂಪನಿಗಳು ಹೊಸ ಸುರಕ್ಷಾ ಕ್ರಮಗಳೊಂದಿಗೆ ಉತ್ಪಾದನೆಯನ್ನು ಹಂತ-ಹಂತವಾಗಿ ಪುನಾರಂಭಿಸುತ್ತಿವೆ.

ಟೊಯೊಟಾ ಕಂಪನಿಯು ಸಹ ಕೋವಿಡ್ ಪರಿಣಾಮ ಕಳೆದ ಒಂದೂವರೆ ತಿಂಗಳಿನಿಂದ ಕಾರು ಉತ್ಪಾದನೆಯನ್ನು ಕನಿಷ್ಠ ಉದ್ಯೋಗಿಗಳೊಂದಿಗೆ ಕೆಲವೇ ಮಾದರಿಗಳನ್ನು ಮಾತ್ರ ಉತ್ಪಾದನೆ ಕೈಗೊಂಡಿದ್ದು, ಇದೀಗ ಕರ್ನಾಟಕ ಸರ್ಕಾರವು ಕೈಗಾರಿಕೆಗಳಲ್ಲಿ ಶೇ.50ರಷ್ಟು ಉದ್ಯೋಗಿಗಳಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಿರುವುದರಿಂದ ಬಿಡದಿ ಘಟಕದಲ್ಲಿ ಕಾರು ಉತ್ಪಾದನೆಯನ್ನು ಶೇ.50 ರಷ್ಟು ಉದ್ಯೋಗಿಗಳೊಂದಿಗೆ ಪುನಾರಂಭಿಸಿದೆ.

ಇನ್ನು ಕೋವಿಡ್ 2ನೇ ಅಲೆ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆ ಕೈಜೋಡಿಸಿರುವ ವಿವಿಧ ಆಟೋ ಕಂಪನಿಗಳು ಕೂಡಾ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್ಆರ್) ನೀತಿ ಅಡಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ವೈರಸ್ ಹರಡುವಿಕೆ ತೀವ್ರವಾಗಿರುವುದರಿಂದ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ವಿವಿಧ ರಾಜ್ಯ ಸರ್ಕಾರಗಳ ಪ್ರಯತ್ನಕ್ಕೆ ಆಟೋ ಮೊಬೈಲ್ ಕಂಪನಿಗಳು ಸಹ ಸಾಕಷ್ಟು ಸಹಕಾರ ನೀಡುತ್ತಿದೆ.

ಆರ್ಥಿಕ ಸಂಕಷ್ಟದ ನಡುವೆಯೂ ಆಟೋ ಕಂಪನಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆಗೂಡಿ ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡುತ್ತಿದ್ದು, ದೇಶದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಟೊಯೊಟಾ ಕಿರ್ಲೋಸ್ಕರ್ ಕೂಡಾ ಕೋವಿಡ್ ನಿಯಂತ್ರಣಕ್ಕಾಗಿ ಹಲವಾರು ರೀತಿಯ ನೆರವು ನೀಡುತ್ತಿದೆ.

ಕಳೆದ ವರ್ಷ ಕೋವಿಡ್ ಹೆಚ್ಚಳವಾಗಿದ್ದ ಸಂದರ್ಭದಲ್ಲೂ ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳಿಗೆ ಆರ್ಥಿಕ ನೆರವು ನೀಡಿದ್ದ ಟೊಯೊಟಾ ಕಂಪನಿಯು ಇದೀಗ 2ನೇ ಅಲೆಯ ಸಂದರ್ಭದಲ್ಲೂ ವಿವಿಧ ಸಾಮಾಜಿಕ ಸೇವೆಗಳನ್ನು ಕೈಗೊಳ್ಳುತ್ತಿದ್ದು, ಆಕ್ಸಿಜನ್ ಉತ್ಪಾದನೆಗೆ ಸಹಕರಿಸಿರುವುದಲ್ಲದೆ ಕಾರ್ಮಿಕರಿಗೆ ಹೆಚ್ಚಿನ ಮಟ್ಟದ ಪರಿಹಾರ ಕ್ರಮಗಳನ್ನು ಪ್ರಕಟಿಸಿದೆ.

ಹಾಗೆಯೇ ವೈದ್ಯಕೀಯ ಸೇವೆಗಳನ್ನು ಸರಳಗೊಳಿಸಲು ಆರೋಗ್ಯ ಕೇಂದ್ರಗಳಿಗೆ ವೆಂಟಿಲೇಟರ್ ಮತ್ತು ಆಕ್ಸಿಜನ್ ಕಾನ್ಸನ್ಟ್ರೇಟರ್ ಯಂತ್ರಗಳನ್ನು ಸಹ ದೇಣಿಗೆ ನೀಡಲಾಗುತ್ತಿದ್ದು, ರಾಮನಗರದ ಜಿಲ್ಲಾಸ್ಪತ್ರೆಗಾಗಿ ಆಕ್ಸಿಜನ್ ಕಾನ್ಸನ್ಟ್ರೇಟರ್ ವಿತರಣೆ ಮಾಡುವುದು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ಉನ್ನತೀಕರಿಸುವ ಜವಾಬ್ದಾರಿ ಹೊತ್ತಿದೆ.


Click it and Unblock the Notifications








