ಕೇವಲ 13,000 ರೂ. ಸಂಬಳದಲ್ಲಿ ಗೆಳತಿಗೆ 1 ಕೋಟಿ ಬೆಲೆಯ ಕಾರು, ಫ್ಲಾಟ್ ಗಿಫ್ಟ್ ಕೊಟ್ಟ ಯುವಕ!
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ಸರ್ಕಾರಿ ಕ್ರೀಡಾ ಸಂಕೀರ್ಣದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 23 ವರ್ಷದ ಕಂಪ್ಯೂಟರ್ ಆಪರೇಟರ್, 21.6 ಕೋಟಿ ರೂ.ಗಳ ಹಗರಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಹಣ ದುರುಪಯೋಗದ ನಂತರ ಯುವಕ 1.2 ಕೋಟಿ ರೂ.ಗಳ ಬಿಎಂಡಬ್ಲ್ಯು, 1.3 ಕೋಟಿ ರೂ.ಗಳ ಐಷಾರಾಮಿ ಎಸ್ಯುವಿ ಮತ್ತು 32 ಲಕ್ಷ ರೂ.ಗಳ ಬಿಎಂಡಬ್ಲ್ಯು ಸೂಪರ್ ಬೈಕ್ ಖರೀದಿಸಿರುವುದಾಗಿ ವರದಿಯಾಗಿದೆ. ವರದಿಗಳ ಪ್ರಕಾರ, ಯುವಕನ ಸಂಬಳ ಕೇವಲ 13,000 ರೂ. ಇತ್ತು. ಐಷಾರಾಮಿ ಜೀವನ ನಡೆಸಲು ಇಂತಹ ಕೃತ್ಯಗಳನ್ನು ಮಾಡಿರುವುದಾಗಿ ತಿಳಿದುಬಂದಿದೆ.
23 ವರ್ಷದ ಕಂಪ್ಯೂಟರ್ ಆಪರೇಟರ್ ಹರ್ಷಲ್ ಕುಮಾರ್ ಕ್ಷೀರಸಾಗರ್ ಈ ವಂಚನೆಯ ಮುಖ್ಯ ಆರೋಪಿಯಾಗಿದ್ದಾನೆ. ಈತ 21.6 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡಿದ್ದು, ಯುವಕ ತನ್ನ ಗೆಳತಿಗಾಗಿ ಛತ್ರಪತಿ ಸಂಭಾಜಿನಗರ ವಿಮಾನ ನಿಲ್ದಾಣದ ಬಳಿ 4 ಬಿಎಎಚ್ಕೆ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾನೆ. ಹೆಚ್ಚುವರಿಯಾಗಿ, ವಜ್ರಖಚಿತ ಕನ್ನಡಕಗಳನ್ನು ಖರೀದಿಸಿದ್ದಾನೆ.

ಯುವಕನ ವೈಯಕ್ತಿಕ ಖಾತೆಗಳಿಗೆ ಹಣವನ್ನು ವರ್ಗಾಯಿಸಲು ಸಹಾಯ ಮಾಡಿದ್ದಕ್ಕಾಗಿ ಸಹೋದ್ಯೋಗಿ ಯಶೋದಾ ಶೆಟ್ಟಿ ಹಾಗೂ ಆಕೆಯ ಪತಿ ಬಿ.ಕೆ.ಜೀವನ್ ಅವರನ್ನು ಬಂಧಿಸಲಾಗಿದೆ. ಕ್ಷೀರಸಾಗರ್ನ ಸಹಚರ ಬಿ.ಕೆ.ಜೀವನ್ 35 ಲಕ್ಷ ರೂ.ಗಳ ಎಸ್ಯುವಿಯನ್ನು ಖರೀದಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ವರದಿ ಮಾಡಿದ್ದಾರೆ. ಸದ್ಯ ಬಿ.ಕೆ.ಜೀವನ್ ಮತ್ತು ಅವರ ಪತ್ನಿ ಯಶೋದಾ ಶೆಟ್ಟಿ ಮಾತ್ರ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಸಿಕ್ಕಿಬಿದ್ದಿದ್ದು ಹೇಗೆ?: ಈ ವಂಚನೆ ಪ್ರಕರಣದ ಮುಖ್ಯ ಆರೋಪಿ 23 ವರ್ಷದ ಕಂಪ್ಯೂಟರ್ ಆಪರೇಟರ್ ಹರ್ಷಲ್ ಕುಮಾರ್ ಕ್ಷೀರಸಾಗರ್, ಕ್ರೀಡಾ ಸಂಕೀರ್ಣದಲ್ಲಿ ಹಳೆಯ ಲೆಟರ್ ಹೆಡ್ ಬಳಸಿ ಬ್ಯಾಂಕಿಗೆ ಅಧಿಕೃತ ಪತ್ರವನ್ನು ಕಳುಹಿಸಿದ್ದ ಎನ್ನಲಾಗಿದೆ. ಕ್ರೀಡಾ ಸಂಕೀರ್ಣದ ಹಳೆಯ ಇಮೇಲ್ನಲ್ಲಿ ಒಂದು ಅಕ್ಷರವನ್ನು ಬದಲಾಯಿಸಿ, ಹೊಸ ಇಮೇಲ್ ವಿಳಾಸದಿಂದ ಒಟಿಪಿಗಳನ್ನು ಬಳಸಿಕೊಂಡು ಕ್ರೀಡಾ ಸಂಕೀರ್ಣದ ಇಂಟರ್ನೆಟ್ ಬ್ಯಾಂಕಿಂಗ್ಗೆ ಪ್ರವೇಶ ಪಡೆದಿದ್ದ.

ಮೂಲಗಳ ಪ್ರಕಾರ, 2023 ರ ಜುಲೈ 1 ಮತ್ತು ಡಿಸೆಂಬರ್ 7 ರ ನಡುವೆ 13 ವಿವಿಧ ಬ್ಯಾಂಕ್ ಖಾತೆಗಳಿಗೆ 21.6 ಕೋಟಿ ರೂ.ಗಳನ್ನು ವರ್ಗಾಯಿಸಿದ್ದಾನೆ. ಅಧಿಕಾರಿಗಳನ್ನು ದಾರಿ ತಪ್ಪಿಸಿ ಅಕ್ರಮ ವಹಿವಾಟುಗಳನ್ನು ನಡೆಸಲು ನಕಲಿ ದಾಖಲೆಗಳನ್ನು ಬಳಸಿದ್ದ. ಇದರಿಂದಾಗಿ ಕೆಲವು ತಿಂಗಳುಗಳವರೆಗೆ ಅಕ್ರಮ ಬೆಳಕಿಗೆ ಬಂದಿಲ್ಲ. ನಂತರ ಕ್ರೀಡಾ ಇಲಾಖೆಯ ಅಧಿಕಾರಿಯೊಬ್ಬರು ಹಣಕಾಸಿನ ವ್ಯತ್ಯಾಸವನ್ನು ಗಮನಿಸಿದ್ದಾರೆ.
ವಂಚನೆ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದು, ಇಡೀ ದುರುಪಯೋಗದ ಹಿಂದೆ 23 ವರ್ಷದ ಹರ್ಷಲ್ ಕುಮಾರ್ ಕ್ಷೀರಸಾಗರ್ ಇರುವುದು ಬೆಳಕಿಗೆ ಬಂದಿದೆ. ಮಹಾರಾಷ್ಟ್ರ ಪೊಲೀಸರು ಪ್ರಸ್ತುತ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ವಂಚಕ ಹರ್ಷಲ್ ಕುಮಾರ್ ಕ್ಷೀರಸಾಗರ್ನನ್ನು ಬಂಧಿಸಲು ಮುಂದಾಗಿದ್ದಾರೆ. ದುಬಾರಿ ಕಾರುಗಳು ಹಾಗೂ ಬೈಕ್ಗಳನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ.

ಭಾರತದ ಟಾಪ್ ಸೆಲೆಬ್ರಿಟಿಗಳ ಬಳಿ ಇರುವ ಬೆಸ್ಟ್ ಎಸ್ಯುವಿಗಳನ್ನು ಯುವಕ ಕೂಡ ಖರೀದಿಸಿದ್ದ. ಯುವಕ ವಾಹನಗಳ ಮೇಲೆ ಹೆಚ್ಚು ಹಣವನ್ನು ವ್ಯಯಿಸಿದ್ದು, ಐಷಾರಾಮಿ ಕಾರುಗಳ ಮೇಲೆ ಹೆಚ್ಚಿನ ಒಲವಿರುವುದು ತಿಳಿದುಬಂದಿದೆ. ಉಳಿದಂತೆ ತನ್ನ ಗೆಳತಿಗಾಗಿ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿ ಸದ್ಯ ಪರಾರಿಯಲ್ಲಿದ್ದಾನೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ನಲ್ಲಿ ತಿಳಿಸಿ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications