ರಾಷ್ಟ್ರಧ್ವಜದಲ್ಲಿ ವಾಹನ ಒರೆಸಿ ಜೈಲು ಸೇರಿದ 52 ವರ್ಷದ ವ್ಯಕ್ತಿ: ಸ್ಕೂಟರ್ ಸೀಜ್, ವಿಡಿಯೋ ವೈರಲ್
ಈ ವರ್ಷ ಭಾರತದ ರಾಷ್ಟ್ರಧ್ವಜವನ್ನು ಜನಪ್ರಿಯಗೊಳಿಸುವ ಕೇಂದ್ರ ಸರ್ಕಾರದ ಹೊಸ "ಹರ್ ಘರ್ ತಿರಂಗಾ" ಅಭಿಯಾನವು ದೇಶದಲ್ಲಿ ಹಲವರ ಮನಗೆದ್ದಿತ್ತು. ಲಕ್ಷಗಟ್ಟಲೆ ತ್ರಿವರ್ಣ ಧ್ವಜಗಳು ಮನೆಗಳ ಮೇಲ್ಛಾವಣಿಯ ಮೇಲೆ ಮತ್ತು ವಾಹನಗಳ ಮೇಲೆ ಹಾರುವುದನ್ನು ನೋಡಿದ್ದೆವು.

ಆದರೆ ಇಲ್ಲೋರ್ವ ಮೂರ್ಖ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ್ದಾನೆ. ಭಾರತದ ರಾಷ್ಟ್ರಧ್ವಜವನ್ನು ನಿರ್ವಹಿಸಲು ಹಲವಾರು ನೀತಿ ಸಂಹಿತೆಗಳಿವೆ. ಇದ್ಯಾವುದನ್ನು ಲೆಕ್ಕಸಿದೆ ಸ್ಕೂಟರ್ ಕ್ಲೀನ್ ಮಾಡಲು ಧ್ವಜವನ್ನು ಬಳಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ತನ್ನ ಸ್ಕೂಟರ್ ಅನ್ನು ಸ್ವಚ್ಛಗೊಳಿಸಲು ತ್ರಿವರ್ಣವನ್ನು ಬಳಸಿದ ಆರೋಪದ ಮೇಲೆ ದೆಹಲಿ ಪೊಲೀಸರು 52 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈಶಾನ್ಯ ದೆಹಲಿಯ ಭಜನ್ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಸ್ಕೂಟರ್ ಕ್ಲೀನ್ ಮಾಡುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆಯನ್ನು ಸ್ಥಳೀಯರು ತಮ್ಮ ಫೋನ್ಗಳಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಕಿರಿದಾದ ಲೇನ್ನಲ್ಲಿ ನಿಲ್ಲಿಸಲಾಗಿದ್ದ ತನ್ನ ಸ್ಕೂಟರ್ ಅನ್ನು ಆ ವ್ಯಕ್ತಿ ಸ್ವಚ್ಛಗೊಳಿಸಿ ಬಳಿಕ ಧೂಳು ಒರೆಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಧ್ವಜವು ಆತನ ಕೈಯಲ್ಲಿ ಮಡಚಿ ನಲುಗಿರುವಂತೆ ಕಾಣುತ್ತಿದೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ, ಈ ವಿಷಯದಲ್ಲಿ ಆರೋಪಿ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಭಜಾನ್ಪುರ ಪೊಲೀಸ್ ಠಾಣೆಯಲ್ಲಿ ರಾಷ್ಟ್ರೀಯ ಧ್ವಜದ ಗೌರವಕ್ಕೆ ಅವಮಾನ ತಡೆ ಕಾಯಿದೆ, 1971 ರ ಸೆಕ್ಷನ್ 2 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಆರೋಪಿಯನ್ನು ತನಿಖೆಗೆ ಹಾಜರಾಗುವಂತೆ ಕೋರಲಾಗಿದೆ.

ಇದು ಉದ್ದೇಶಪೂರ್ವಕವಾಗಿ ಮಾಡಿಲ್ಲ. ತಿಳಿಯದೇ ಮಾಡಿರುವುದಾಗಿ ಆರೋಪಿ ಹೇಳಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ. ತನಿಖೆ ಸಂಬಂಧ ಇನ್ನೂ ಹಲವು ಬಾರಿ ಆರೋಪಿ ಠಾಣೆಗೆ ಬರಬೇಕಿದೆ, ಕರೆ ಮಾಡಿದಾಗ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಸ್ಕೂಟರ್ ಹಾಗೂ ಧ್ವಜವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಾಹನದ ಮೇಲೆ ಯಾರೆಲ್ಲ ಧ್ವಜವನ್ನು ಬಳಸಬಹುದು
ನೀತಿ ಸಂಹಿತೆಯ ಪ್ರಕಾರ, ತಮ್ಮ ವಾಹನಗಳಲ್ಲಿ ಭಾರತೀಯ ಧ್ವಜವನ್ನು ಪ್ರದರ್ಶಿಸುವಾಗ ಅನುಸರಿಸಬೇಕಾದ ಹಲವಾರು ನಿಯಮಗಳಿವೆ. ಮೊದಲನೆಯದಾಗಿ, ಮೋಟಾರು ಕಾರುಗಳಲ್ಲಿ ಭಾರತೀಯ ರಾಷ್ಟ್ರಧ್ವಜವನ್ನು ಶಾಶ್ವತವಾಗಿ ಪ್ರದರ್ಶಿಸುವ ಸವಲತ್ತು ರಾಷ್ಟ್ರಪತಿ, ಉಪರಾಷ್ಟ್ರಪತಿ, ಗವರ್ನರ್ಗಳು ಮತ್ತು ಲೆಫ್ಟಿನೆಂಟ್ ಗವರ್ನರ್ಗಳು ಮತ್ತು ವಿದೇಶದಲ್ಲಿರುವ ಭಾರತೀಯ ಮಿಷನ್ಗಳು/ಪೋಸ್ಟ್ಗಳ ಮುಖ್ಯಸ್ಥರು, ಪ್ರಧಾನಿ, ಕ್ಯಾಬಿನೆಟ್ ಮಂತ್ರಿಗಳು, ಲೋಕಸಭೆಯ ಸ್ಪೀಕರ್ಗಳು ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿಗೆ ಸೀಮಿತವಾಗಿದೆ.

ಸೆಕ್ಷನ್ 3.12 ರ ಅಡಿಯಲ್ಲಿ, ಖಾಸಗಿ ವಾಹನ ಮಾಲೀಕರಿಗೆ ಸಹ ಧ್ವಜವನ್ನು ಪ್ರದರ್ಶಿಸಲು ಅವಕಾಶವಿದೆ. ಕಾನೂನಿನ ಪ್ರಕಾರ, ಮೋಟಾರು ಕಾರಿನ ಮೇಲೆ ಧ್ವಜವನ್ನು ಏಕಾಂಗಿಯಾಗಿ ಪ್ರದರ್ಶಿಸಿದಾಗ, ಅದನ್ನು ಸಿಬ್ಬಂದಿಯಿಂದ ಹಾರಿಸಲಾಗುತ್ತದೆ. ಅದನ್ನು ಬಾನೆಟ್ನ ಮಧ್ಯದ ಮುಂಭಾಗದಲ್ಲಿ ಅಥವಾ ಕಾರಿನ ಮುಂಭಾಗದ ಬಲಭಾಗದಲ್ಲಿ ದೃಢವಾಗಿ ಅಂಟಿಸಬೇಕು.

ರಾಷ್ಟ್ರಧ್ವಜದ ದುರುಪಯೋಗ ಅಥವಾ ಯಾರಾದರೂ ಸುಡುವುದು, ವಿರೂಪಗೊಳಿಸುವುದು, ಅಪವಿತ್ರಗೊಳಿಸುವುದು, ನಾಶಪಡಿಸುವುದು, ತುಳಿಯುವುದು, ಅಗೌರವವನ್ನು ತೋರಿಸುವುದು, ಅವಹೇಳನವಾಗಿ ಮಾತಿನ ಮೂಲಕ, ಬರಹದಿಂದ ಅಥವಾ ಕೃತ್ಯಗಳಿಂದ ಭಾರತೀಯ ರಾಷ್ಟ್ರೀಯ ಧ್ವಜಕ್ಕೆ ಅವಮಾನವಾದರೆ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.

ಹರ್ ಘರ್ ತಿರಂಗ ಅಭಿಯಾನ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ಮನೆ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ "ಹರ್ ಘರ್ ತಿರಂಗ" ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ದೇಶದ ಕೋಟ್ಯಂತರ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಾಡಿದ್ದವು, ಆಜಾದಿಕಾ ಅಮೃತ ಮಹೋತ್ಸವದ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣಗೊಂಡಿರುವ ಸಲುವಾಗಿ ಪ್ರಧಾನಿ ಮೋದಿ ಅವರು ಆ. 13 ರಿಂದ ಸ್ವಾತಂತ್ರ್ಯ ದಿನಾಚರಣೆ ದಿನವಾದ ಆ. 15ರವರೆಗೆ ಎಲ್ಲರ ಮನೆಗಳ ಮೇಲೂ ರಾಷ್ಟ್ರ ಧ್ವಜ ಹಾರಿಸುವ ಹರ್ ಘರ್ ತಿರಂಗ ಅಭಿಯಾನವನ್ನು ಘೋಷಿಸಿದ್ದರು.

ಅದರಂತೆ ಎಲ್ಲ ನಾಗರಿಕರು ಧ್ವಜಾರೋಹಣ ಮಾಡಿದ್ದರು. ಜನರಲ್ಲಿ ದೇಶಭಕ್ತಿ ಭಾವನೆಯನ್ನು ತುಂಬುವುದು ಈ ಅಭಿಯಾನದ ಉದ್ದೇಶವಾಗಿದೆ. ಹಾಗೆಯೇ ಭಾರತದ ಇತಿಹಾಸ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ್ದವರನ್ನು ನೆನಪಿಸಿಕೊಳ್ಳುವ ಉದ್ದೇಶವೂ ಈ ಅಭಿಯಾನದ್ದಾಗಿದೆ.

ಎಲ್ಲ ದೇಶವಾಸಿಗಳು ತಮ್ಮ ಮನೆ, ಕಚೇರಿ, ಅಂಗಡಿ ಮುಂಗಟ್ಟುಗಳು ಸೇರಿದಂತೆ ತಾವು ಕಾರ್ಯನಿರ್ವಹಿಸುವ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜಗಳನ್ನು ಹಾರಿಸಿ ರಾಷ್ಟ್ರ ಪ್ರೇಮ ಮೆರೆದಿದ್ದರು. ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಈ ಹರ್ ಘರ್ ತಿರಂಗ ಅಭಿಯಾನಕ್ಕೆ ಚಾಲನೆ ನೀಡಿದ್ದರು. ದೇಶಾದ್ಯಂತ ರಾಜಕಾರಣಿ, ಗಣ್ಯರು, ಉದ್ಯಮಿಗಳು, ಸಿನಿಮಾ ನಟರುಗಳು, ಗಡಿಯಲ್ಲಿ ಸೈನಿಕರು, ಪೊಲೀಸರು ಹರ್ ಘರ್ ತಿರಂಗ ಅಭಿಯಾನದಲ್ಲಿ ಭಾಗಿಯಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ್ದರು.


Click it and Unblock the Notifications