ಗೆಳತಿಯನ್ನು ಇಂಪ್ರೆಸ್ ಮಾಡಲು 2 ಕಾರು, 13 ಬೈಕ್ಗಳನ್ನು ಕದ್ದ ಯುವಕ: ಸಿಕ್ಕಿಬಿದ್ದಿದ್ದೇ ರೋಚಕ!
ಪುಣೆಯಲ್ಲಿ 20 ವರ್ಷದ ಯುವಕನೊಬ್ಬ ಒಂದಲ್ಲ ಎರಡಲ್ಲ ಬರೋಬ್ಬರಿ ಹದಿಮೂರು ಮೋಟಾರ್ಸೈಕಲ್ಗಳು ಮತ್ತು ಎರಡು ಕಾರುಗಳನ್ನು ಕದ್ದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಹೆಚ್ಚು ಆಶ್ಚರ್ಯಕರ ಸಂಗತಿಯೆಂದರೆ ಅವನು ತನ್ನ ಗೆಳತಿಯನ್ನು ಜಾಯ್ರೈಡ್ಗೆ ಕರೆದೊಯ್ಯಲು ವಾಹನಗಳನ್ನು ಕದಿಯುತ್ತಿದ್ದ ಎಂದು ಪೊಲೀಸರ ವಿಚಾರಣೆಯಲ್ಲಿ ತಿಳಿದುಬಂದಿದೆ.

ಆರೋಪಿಯನ್ನು ತಲೆಗಾಂವ್ ದಭಾಡೆ ನಿವಾಸಿ ಯಶ್ ಕಿರಣ್ ಸೊಲಸೆ ಎಂದು ಗುರ್ತಿಸಲಾಗಿದ್ದು, ಇಲ್ಲಿನ ಪಿಂಪ್ರಿ ಚಿಂಚ್ವಾಡ್ನ ಟ್ರಾನ್ಸ್ಪೋರ್ಟ್ ನಗರ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಳ್ಳತನವಾಗಿದ್ದ ಕಾರಿನ ಕುರಿತು ದೂರು ದಾಖಲಾಗಿದ್ದ ಮೇರೆಗೆ ಕಾರಿನ ಹುಡುಕಾಟದಲ್ಲಿದ್ದ ಪೊಲೀಸರಿಗೆ ಅದೇ ಕಾರಿನಲ್ಲಿ ಓಡಾಡುತ್ತಿದ್ದ ಯುವಕ ಕಾಣಿಸಿಕೊಂಡಿದ್ದು ಬೆನ್ನಟ್ಟಿ ಆತನನ್ನು ಬಂಧಿಸಿದ್ದಾರೆ.

ಯಶ್ ಕಾರುಗಳನ್ನು ಕದ್ದು ತನ್ನ ಗೆಳತಿಯನ್ನು ಜಾಯ್ರೈಡ್ಗೆ ಕರೆದೊಯ್ಯುತ್ತಿದ್ದ. ಇಲ್ಲಿಯವರೆಗೆ 13 ದ್ವಿಚಕ್ರವಾಹನ ಹಾಗೂ 2 ಕಾರುಗಳನ್ನು ಕಳ್ಳತನ ಮಾಡಿರುವುದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ. ಯಶ್ ಕಳ್ಳತನ ಮಾಡಿದ್ದ ಎಲ್ಲಾ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ರೀತಿ ವರದಿಯಾಗುತ್ತಿರುವುದು ಇದೇ ಮೊದಲೇನಲ್ಲ.

ಈ ಹಿಂದೆ ಪಾರ್ಕಿಂಗ್ ಸ್ಥಳದಲ್ಲಿ ಕೋಟ್ಯಂತರ ಮೌಲ್ಯದ ಕದ್ದ ವಾಹನಗಳನ್ನು ಪೊಲೀಸರು ಕಳ್ಳರಿಂದ ವಶಪಡಿಸಿಕೊಂಡಿದ್ದಾರೆ. ದೇಶ ರಾಜಧಾನಿ ದೆಹಲಿಯಲ್ಲಿ ಅತಿ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದು, ಕಳ್ಳತನದ ವಿಷಯದಲ್ಲೂ ದೆಹಲಿ ರಾಜಧಾನಿಯಾಗುತ್ತಿದೆ. ದೆಹಲಿ ಪೊಲೀಸರ ಅಂಕಿಅಂಶಗಳ ಪ್ರಕಾರ, 2011 ರಿಂದ 2020ರ ನಡುವೆ ಸುಮಾರು 3,07,000 ವಾಹನಗಳನ್ನು ಕಳವು ಮಾಡಲಾಗಿದೆ.

ಇಲ್ಲಿ ಪ್ರತಿ 12 ನಿಮಿಷಕ್ಕೊಂದು ವಾಹನ ಕಳ್ಳತನವಾಗುತ್ತವೆ ಎಂದು ವರದಿಗಳು ಹೆಳುತ್ತಿವೆ. ಅಪರಾಧಿಗಳನ್ನು ಪತ್ತೆಹಚ್ಚಲು ಪೊಲೀಸರು ಹೊಸ ತಂತ್ರಜ್ಞಾನವನ್ನು ಅವಲಂಭಿಸಿರುವಂತೆ, ಕಳ್ಳರು ಕೂಡ ವಾಹನಗಳನ್ನು ಕದಿಯಲು ಸುಧಾರಿತ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಇತ್ತೀಚೆಗೆ ಮನೆ ಮುಂದೆ ನಿಲ್ಲಿಸಿದ್ದ ಹ್ಯುಂಡೈ ಕ್ರೆಟಾವನ್ನು ಸುಲಭವಾಗಿ ಕಳ್ಳರು ಕದ್ದೊಯ್ದಿದ್ದರು.

ಈ ಕಳ್ಳತನವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಅಲ್ಲದೇ ಕಾರು ಮಾಲೀಕರಲ್ಲಿ ಆತಂಕವನ್ನೂ ಹುಟ್ಟಿಸಿತ್ತು. ಹ್ಯುಂಡೈ ಕ್ರೆಟಾವನ್ನು ಕೆಲವೇ ನಿಮಿಷಗಳಲ್ಲಿ ಕಳ್ಳರು ಎಗರಿಸಿದ್ದು, ಕ್ಯಾಮೆರಾದಲ್ಲಿ ತಮ್ಮ ಮುಖ ಸೆರೆಯಾಗದಂತೆ ಎಚ್ಚರ ವಹಿಸಿದ್ದರು.

ದೆಹಲಿಯ ಸಂಸದ ಹಾಗೂ ಭಾರತದ ಖ್ಯಾತ ಕ್ರಿಕೆಟಿಗ ಗೌತಮ್ ಗಂಭೀರ್ ಅವರ ಟೊಯೊಟಾ ಫಾರ್ಚುನರ್ ಎಸ್ಯುವಿಯನ್ನು 2020 ರಲ್ಲಿ ಕಳವು ಮಾಡಲಾಗಿತ್ತು. ಈ ಪ್ರಕರಣವನ್ನು ಇನ್ನೂ ಕೂಡ ಪೊಲೀಸರು ಭೇದಿಸಿಲ್ಲ. ಇನ್ನು ಹರಿಯಾಣದ ಗುರುಗ್ರಾಮ್ನಲ್ಲಿರುವ ಡೀಲರ್ಶಿಪ್ನಿಂದಲೇ ಹೊಚ್ಚ ಹೊಸ ಟಾಟಾ ಹ್ಯಾರಿಯರ್ ಅನ್ನು ಕಳ್ಳರು ಕದ್ದಿದ್ದಾರೆ.

ಈ ವಿಧಾನಗಳನ್ನು ಅನುಸರಿಸಿ
ಕಾರು ಅಥವಾ ಬೈಕ್ ಮಾಲೀಕರು ಕಳ್ಳರಿಂದ ತಮ್ಮ ವಾಹನಗಳನ್ನು ರಕ್ಷಿಸಿಕೊಳ್ಳಲು ಈ ವಿಧಾನಗಳನ್ನು ಅನುಸರಿಸಿ. ನಿಮ್ಮ ವಾಹನವನ್ನು ಮತ್ಯಾವುದೇ ವಾಹನಗಳು ಇಲ್ಲದ ಅಥವಾ ಯಾರೂ ಇಲ್ಲದ ಮೂಲೆ ಪ್ರದೇಶಗಳಲ್ಲಿ ನಿಲ್ಲಿಸಬೇಡಿ. ನಿಮ್ಮ ವಾಹನ ಆದಷ್ಟು ನಿಮಗೆ ಹತ್ತಿರವಿರುವ ಜಾಗದಲ್ಲಿ ಪಾರ್ಕ್ ಮಾಡಿಕೊಳ್ಳಿ.

ಹೊರಗೆ ನಿಲ್ಲಿಸಿದರೆ ಬೈಕ್ಗಳಿಗೆ ಡಿಸ್ಕ್ ಲಾಕ್ಗಳು ಮತ್ತು ಟೈರ್ ಲಾಕ್ಗಳನ್ನು ಬಳಸಬಹುದು. ಸ್ಪಾಟ್ಲೈಟ್ ಅಡಿಯಲ್ಲಿ ವಾಹನಗಳನ್ನು ಎಗರಿಸಲು ಕಳ್ಳರು ಇಷ್ಟಪಡುವುದಿಲ್ಲ, ಹಾಗಾಗಿ ವಾಹನವನ್ನು ಆದಷ್ಟು ಬೆಳಕಿರುವ ಸ್ಥಳಗಳಲ್ಲಿ ನಿಲ್ಲಿಸುವುದು ಉತ್ತಮ. ಇನ್ನು ಕಾರುಗಳ ಸ್ಟೀರಿಂಗ್ ಲಾಕ್ ಅಥವಾ ಗೇರ್ ಬಾಕ್ಸ್ ಲಾಕ್ಗಳಂತಹ ಭದ್ರತಾ ಸಾಧನಗಳನ್ನು ಇನ್ಸ್ಟಾಲ್ ಮಾಡಿಕೊಳ್ಳಿ.

ಕಳ್ಳರು ಒಂದು ವಾಹನವನ್ನು ಕದಿಯಲು ಹೆಚ್ಚು ಸಮಯ ತೆಗೆದುಕೊಳ್ಳಲು ಬಯಸುವುದಿಲ್ಲ. ಹಾಗಾಗಿ ಜಿಪಿಎಸ್ ಆಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಇನ್ಸ್ಟಾಲ್ ಮಾಡುವುದರಿಂದ ಇವುಗಳನ್ನು ಭೇದಿಸಲು ಕಳ್ಳರಿಗೆ ಹೆಚ್ಚಿನ ಸಮಯ ಬೇಕಾಗಬಹದು. ಒಂದು ವೇಳೆ ಕದ್ದರೂ ನಿಮ್ಮ ವಾಹನದ ಲೈವ್ ಸ್ಥಳವನ್ನು ನಿಮಗೆ ತಿಳಿಸುತ್ತದೆ. ಅಲ್ಲದೇ ವಾಹನವನ್ನು ಸ್ಟಾರ್ಟ್ ಮಾಡುತ್ತಿದ್ದಂತೆ ಮಾಲೀಕರಿಗೆ ಎಚ್ಚರಿಕೆಗಳನ್ನು ಸಹ ಕಳುಹಿಸುತ್ತದೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಭಾರತದಲ್ಲಿ ವಾಹನ ಕಳವು ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ಕಳವು ಮಾಡಿದ ಹಲವಾರು ಪ್ರಕರಣಗಳನ್ನು ನಾವು ನೋಡಿದ್ದೇವೆ. ಇಂತಹ ಅಪರಾಧಗಳು ಮತ್ತು ನಿಯಮಗಳ ಉಲ್ಲಂಘನೆಗಳ ಮೇಲೆ ಕಣ್ಣಿಡಲು ವಿವಿಧ ರಾಜ್ಯಗಳ ಪೊಲೀಸರು ಈಗ ಆಧುನಿಕ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಆದರೆ ಕಳ್ಳರು ಪೊಲೀಸರಿಗಿಂತಲೂ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಕೈಚಳಕ ತೋರಿಸುತ್ತಿದ್ದಾರೆ. ಹಾಗಾಗಿ ನಮ್ಮ ವಾಹನಗಳ ಮೇಲೆ ನಮಗೂ ಹೆಚ್ಚು ಜವಾಬ್ದಾರಿ ಇರಬೇಕಾದ್ದರಿಂದ ಮೇಲೆ ತಿಳಿಸಲಾದ ಟಿಪ್ಸ್ಗಳನ್ನು ಫಾಲೋ ಮಾಡಿ...


Click it and Unblock the Notifications