ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಆಮ್ ಆದ್ಮಿ ಪಕ್ಷ
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಸತತವಾಗಿ ಏರಿಕೆಯಾಗುತ್ತಿದ್ದು, ಹೊಸ ದಾಖಲೆಯನ್ನು ಬರೆದಿವೆ. ಬೆಲೆ ಏರಿಕೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ಬೆಲೆ ಏರಿಕೆಯನ್ನು ವಿರೋಧಿಸಿ ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

ಈಗ ಗೋವಾದ ಆಮ್ ಆದ್ಮಿ ಪಕ್ಷವು (ಎಎಪಿ) ಕೇಂದ್ರ ಸರ್ಕಾರದ ಬೆಲೆ ಏರಿಕೆ ನಿರ್ಧಾರವನ್ನು ವಿರೋಧಿಸಿ ಪೆಟ್ರೋಲ್ ಬಂಕ್'ನಲ್ಲಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದೆ. ಪೆಟ್ರೋಲ್, ಡೀಸೆಲ್ ಖರೀದಿಸಲು ಬಂದ ವಾಹನ ಸವಾರರಿಗೆ ಕೇಕ್ ಹಾಗೂ ಚಾಕೊಲೇಟ್'ನಂತಹ ಸಿಹಿತಿಂಡಿಗಳನ್ನು ನೀಡುವ ಮೂಲಕ ಆಮ್ ಆದ್ಮಿ ಪಾರ್ಟಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದೆ.

ಗೋವಾದಲ್ಲಿ ನಡೆದ ಈ ಘಟನೆ ದೇಶದ ಜನರ ಗಮನ ಸೆಳೆಯುತ್ತಿದೆ. ಅಂದ ಹಾಗೆ ಆಮ್ ಆದ್ಮಿ ಪಕ್ಷವು ಕೇಕ್ ಹಾಗೂ ಚಾಕೊಲೇಟ್ಗಳನ್ನು ವಿತರಿಸಿ ಈ ರೀತಿಯಾಗಿ ವಿಶಿಷ್ಟ ಪ್ರತಿಭಟನೆ ನಡೆಸಿರುವುದು ಗೋವಾದ ಪಣಜಿಯಲ್ಲಿ. ರಾಜಕೀಯ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿ ಭಟನೆ ನಡೆಸುತ್ತಿವೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಯ ಫೋಟೋಗಳನ್ಣಿಟ್ಟು ಕೊಂಡು ಕೇಂದ್ರ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಇಂದು ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 105.25 ಗಳಾದರೆ, ಡೀಸೆಲ್ ಬೆಲೆ ರೂ. 95.26 ಗಳಾಗಿದೆ.

ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗೆ ಅನುಗುಣವಾಗಿ ದೇಶದಲ್ಲಿ ಪ್ರತಿ ದಿನ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಏರಿಕೆ ಕಂಡು ಬರುತ್ತದೆ. ಇಲ್ಲವೇ ಕಡಿಮೆಯಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಬೆಲೆ ಏರಿಕೆಯಾಗುತ್ತಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುವ ಹೆಚ್ಚಿನ ತೆರಿಗೆಗಳು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ವ್ಯಾಟ್ ಹಾಗೂ ಇನ್ನಿತರ ತೆರಿಗೆಗಳಿಂದಾಗಿ ಭಾರತದಲ್ಲಿ ಪೆಟ್ರೋಲ್ ಬೆಲೆ ರೂ. 100 ರ ಗಡಿ ದಾಟಿದೆ.
ಅತಿಯಾದ ತೆರಿಗೆಗಳಿಂದಾಗಿ ಭಾರತದಲ್ಲಿ ವಾಹನ ಸವಾರರು ಪ್ರತಿ ಲೀಟರ್ ಪೆಟ್ರೋಲ್ ಖರೀದಿಗಾಗಿ 60% ಹಾಗೂ ಪ್ರತಿ ಲೀಟರ್ ಡೀಸೆಲ್ ಖರೀದಿಗಾಗಿ 54% ನಷ್ಟು ಹಣವನ್ನು ತೆರಿಗೆ ರೂಪದಲ್ಲಿ ಪಾವತಿಸುತ್ತಿದ್ದಾರೆ.

ಈ ಕಾರಣದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿದಿದ್ದರೂ ಭಾರತದಲ್ಲಿ ಮಾತ್ರ ಗಗನಕ್ಕೇರಿದೆ. ಇದನ್ನು ಖಂಡಿಸಿ ಆಮ್ ಆದ್ಮಿಪಕ್ಷವು ಪೆಟ್ರೋಲ್ ಬಂಕ್'ನಲ್ಲಿ ಕೇಕ್ ಹಾಗೂ ಚಾಕೊಲೇಟುಗಳನ್ನು ನೀಡುವ ಮೂಲಕ ಪ್ರತಿಭಟನೆ ನಡೆಸಿದೆ.


Click it and Unblock the Notifications