ನಿಯಮ ಉಲ್ಲಂಘಿಸಿ ಕಾರಿಗೆ ಡಿಕ್ಕಿ ಹೊಡೆದು ವ್ಯಕ್ತಿ ಸಾವು: ಪರಿಹಾರ ನೀಡದಂತೆ ನ್ಯಾಯಾಲಯ ಆದೇಶ
ದ್ವಿಚಕ್ರ ವಾಹನದಲ್ಲಿ ಅಪಘಾತಕ್ಕೀಡಾದ ಸಂತ್ರಸ್ತರ ಕುಟುಂಬವೊಂದಕ್ಕೆ ಪರಿಹಾರ ನೀಡಲು ನ್ಯಾಯಾಲಯ ನಿರಾಕರಿಸಿದೆ. ಟ್ರಾಫಿಕ್ ನಿಯಮ ಪಾಲಿಸದೆ ರಾಂಗ್ ಸೈಡ್ ಹೋಗಿ ಅಪಘಾತಕ್ಕೀಡಾದರೆ ಪರಿಹಾರ ನೀಡುವುದಿಲ್ಲ ಎಂದು ಹೇಳಿ ಖಡಕ್ ಎಚ್ಚರಿಕೆ ನೀಡಿದೆ.

ರಸ್ತೆಯಲ್ಲಿ ಚಾಲನೆ ಮಾಡುವಾಗ ಅಪಘಾತ ಸಂಭವಿಸಿದಲ್ಲಿ ಆ ಅಪಘಾತದಲ್ಲಿ ಉಂಟಾದ ನಷ್ಟವನ್ನು ಭರಿಸಲು ವಾಹನ ವಿಮೆ ಮಾಡಿಸಬೇಕು ಎಂದು ಕಾನೂನು ಹೇಳುತ್ತದೆ. ಜೊತೆಗೆ ವಾಹನಕ್ಕೆ ಥರ್ಡ್ ಪಾರ್ಟಿ ವಿಮೆ ಮಾಡುವುದನ್ನು ಕಾನೂನು ಕಡ್ಡಾಯಗೊಳಿಸಿದೆ. ಆ ಮೂಲಕ ವಾಹನ ಅಪಘಾತಕ್ಕೀಡಾದರೆ ಸಂತ್ರಸ್ತರಿಗೆ ಆ ವಿಮೆ ಹಣ ಸಿಗುತ್ತದೆ.

ಇತ್ತೀಚೆಗೆ ದೆಹಲಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ನೀಡದಂತೆ ನ್ಯಾಯಾಲಯ ತಡೆ ನೀಡಿದೆ. ರಸ್ತೆ ನಿಯಮಗಳನ್ನು ಉಲ್ಲಂಘಿಸಿ ವಿರುದ್ಧ ದಿಕ್ಕಿನಲ್ಲಿ ಚಲಿಸಿದ ಕಾರಣದಿಂದಲೇ ಅಪಘಾತ ಸಂಭವಿಸಿದೆ, ಹಾಗಾಗಿ ನಿರ್ದಿಷ್ಟ ವ್ಯಕ್ತಿಗೆ ಹಣ ನೀಡಬಾರದು ಎಂದು ನ್ಯಾಯಾಲಯ ಆದೇಶಿಸಿದೆ.

ಕಳೆದ ಕೆಲವು ತಿಂಗಳ ಹಿಂದೆ ದೆಹಲಿಯಲ್ಲಿ ಅಪಘಾತ ಸಂಭವಿಸಿತ್ತು. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರು ಮತ್ತು ದ್ವಿಚಕ್ರ ವಾಹನ ಪರಸ್ಪರ ಡಿಕ್ಕಿ ಹೊಡೆದಿವೆ. ಘಟನೆಯಲ್ಲಿ ಎರಡು ವಾಹನಗಳು ಜಖಂಗೊಂಡಿದ್ದು, ದ್ವಿಚಕ್ರ ವಾಹನದ ಚಾಲಕ ಗಾಯಗೊಂಡರೇ ಹಿಂಬದಿ ಕುಳಿತಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಈ ಸಂಬಂಧ ಮೃತರ ಕುಟುಂಬ ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ಫಿರ್ಯಾದಿದಾರರು ಕಾರನ್ನು ಅತಿವೇಗವಾಗಿ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದವರು ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಕೋರಿದ್ದರು. ಈ ಸಂಬಂಧ ಸತ್ಯಾಸತ್ಯತೆ ತಿಳಿಯಲು ನ್ಯಾಯಾಲಯ ಪೊಲೀಸರಿಗೆ ಆದೇಶಿಸಿತ್ತು.

ಅದರಂತೆ ಸಂಚಾರಿ ಪೊಲೀಸಸರು ತನಿಖೆ ನಡೆಸಿದಾಗ ಸತ್ಯ ಹೊರಬಿದ್ದಿದೆ. ಅಪಘಾತದ ಸ್ಥಳದಲ್ಲಿ ಕಾರಿನಲ್ಲಿದ್ದ ವ್ಯಕ್ತಿ ಸರಿಯಾದ ಹಾದಿಯಲ್ಲೇ ಬಂದಿದ್ದು, ಆ ರಸ್ತೆಯಲ್ಲಿ ಅನುಮತಿಸಿದ್ದ ವೇಗದಲ್ಲಿ ಕಾರನ್ನು ಓಡಿಸಿದ್ದಾನೆ. ಆದರೆ ಬೈಕ್ ಸವಾರರು ತಪ್ಪಾದ ಟ್ರ್ಯಾಕ್ ನಲ್ಲಿ ವಾಹನ ಚಾಲನೆ ಮಾಡಿ ಅಪಘಾತವಾಗಲು ಕಾರಣವಾಗಿದ್ದಾರೆ.

ಇನ್ನು ಕಾರು ಚಾಲಕ ಹೇಳುವ ಪ್ರಕಾರ, ಬೈಕ್ ತಪ್ಪು ದಾರಿಯಲ್ಲಿ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಹೀಗಾಗಿ ಅವಘಡ ಸಂಭವಿಸಿದೆ. ಅಪಘಾತಕ್ಕೆ ಒಳಗಾದ ಕಾರು ಚಾಲಕ ಅಥವಾ ಮಾಲೀಕರಿಂದ ಯಾವುದೇ ತಪ್ಪಾಗಿಲ್ಲ. ಬೈಕ್ ತಪ್ಪು ದಾರಿಯಲ್ಲಿ ಸಾಗಿ ಅಪಘಾತಕ್ಕೆ ಕಾರಣವಾಗಿದ್ದು, ಕಾರು ಮಾಲೀಕರಿಂದ ಸಂತ್ರಸ್ತರು ಪರಿಹಾರ ಪಡೆಯಲು ಯಾವುದೇ ಹಕ್ಕಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ಎಲ್ಲಾ ವಾದ ಪ್ರತಿವಾದಗಳನ್ನು ಆಲಿಸಿ ನ್ಯಾಯಾಲಯ ಪರಿಹಾರ ನೀಡಲು ತಿರಸ್ಕರಿಸಿ, ಟ್ರಾಫಿಕ್ ನಿಯಮ ಪಾಲನೆ ಮಾಡದೆ ಅಪಘಾತವಾದಲ್ಲಿ ಯಾವುದೇ ಪರಿಹಾರ ಸಿಗುವುದಿಲ್ಲ ಎಂದು ತೀರ್ಪು ನೀಡಿದೆ. ಭಾರತದಲ್ಲಿ ವಾಹನಗಳು ರಸ್ತೆಯ ಎಡಭಾಗದಲ್ಲಿ ಮಾತ್ರ ಚಲಿಸಬೇಕು. ಆಗ ಮಾತ್ರ ಅಪಘಾತ ತಪ್ಪಿಸಬಹುದು.

ರಸ್ತೆಯ ಬಲಬದಿಯಲ್ಲಿ ಸಂಚರಿಸುವುದು ಕಾನೂನಿನ ಪ್ರಕಾರ ಅಪರಾಧ. ಎಡಭಾಗದಲ್ಲಿರುವ ವ್ಯಕ್ತಿಗೆ ವಾಹನವು ಇದ್ದಕ್ಕಿದ್ದಂತೆ ಮುಂದೆ ಬರುತ್ತಿರುವುದು ತಿಳಿದಿರುವುದಿಲ್ಲ. ಈ ರೀತಿಯ ವಾಹನಗಳು ರಾತ್ರಿ ವೇಳೆ ಬಂದರೆ ವಾಹನ ಸವಾರರು ಎಲ್ಲಿಗೆ ಹೋಗುತ್ತಿದ್ದಾರೆ ಎಂಬುದು ನಿಖರವಾಗಿ ತಿಳಿಯುವುದು ಕಷ್ಟ.

ರಾತ್ರಿ ವೇಳೆ ಹೆಡ್ ಲೈಟ್ ಆನ್ ಮಾಡಿದರೂ ನೇರವಾಗಿ ಬರುವ ಚಾಲಕನಿಗೆ ಸರಿಯಾಗಿ ಕಾಣುವುದಿಲ್ಲ. ಹಾಗಾಗಿ ಅವಘಡ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ದೆಹಲಿ ನ್ಯಾಯಾಲಯದ ತೀರ್ಪು ಹಲವರಿಗೆ ಎಚ್ಚರಿಕೆಯ ಗಂಟೆಯಾಗಿದೆ. ನಿತ್ಯ ಇಂತಹ ಘಟನೆಗಳು ಭಾರತದಲ್ಲಿ ಸಾಮಾನ್ಯವಾಗಿಬಿಟ್ಟಿವೆ. ಅದರಲ್ಲೂ ಮಧ್ಯ ರಾತ್ರಿಯಲ್ಲಿ ನಿಯಮ ಪಾಲನೆ ಮಾಡುವವರೇ ಇರುವುದಿಲ್ಲ.

ಸಮಯ ಉಳಿಸಲು ತಪ್ಪು ದಾರಿಯಲ್ಲಿ ವಾಹನಗಳೊಂದಿಗೆ ನುಗ್ಗುತ್ತಿರುತ್ತಾರೆ. ಈ ಬಗ್ಗೆ ಪೊಲೀಸರು ಕೂಡ ಕ್ರಮ ಜರುಗಿಸಿದರೂ ಪದೆ ಪದೇ ಇಂತಹ ಪ್ರಕರಣಗಳು ನಡೆಯುತ್ತಲೇ ಇವೆ. ಇದೀಗ ಇಂತಹ ರಾಂಗ್ ವೇನಲ್ಲಿ ಪ್ರಯಾಣಿಸಲು ಯೋಚಿಸುವವರು ಅಪಘಾತಕ್ಕೀಡಾದರೆ ಪರಿಹಾರ ಪಡೆಯುವ ಹಕ್ಕನ್ನು ಸಹ ಕಳೆದುಕೊಳ್ಳುತ್ತಾರೆ ಎಂದು ನ್ಯಾಯಾಲಯ ಎಚ್ಚಾರಿಸಿದೆ.

ಪ್ರಯಾಣದ ವೇಳೆ ತುಸು ತಡವಾದರೂ ನಿಧಾನವಾಗಿ ನಿಯಮ ಪಾಲಿಸಿ ಪ್ರಯಾಣ ಮಾಡಿದರೆ ಅಪಘಾತಗಳನ್ನು ತಪ್ಪಿಸಬಹುದು. ಒಂದು ವೇಳೆ ಅಪಘಾತವಾದರೆ ನಮ್ಮಿಂದ ತಪ್ಪು ಆಗಿಲ್ಲವೆಂದು ವಾದಿಸಿ ಪರಿಹಾರವನ್ನು ಪಡಿಯಬಹುದು. ಹಾಗಾಗಿ ವಾಹನ ಚಾಲಕರು ಎಚ್ಚೆತ್ತು ಪ್ರಯಾಣದ ವೇಳೆ ಜಾಗರೂಕರಾಗಿ ನಿಯಮ ಪಾಲಿಸಿ ಸಂಚರಿಸಿ.


Click it and Unblock the Notifications