ಮಧ್ಯದ ಬೆರಳು ತೋರಿಸಿದ ಆರೋಪ...ಪತ್ನಿಯ ಎದುರೇ ಬೈಕ್ ಸವಾರನಿಗೆ ಹಿಗ್ಗಾಮುಗ್ಗಾ ಥಳಿಸಿದ ಬಿಎಂಟಿಸಿ ಚಾಲಕ
ಯಲಹಂಕ ಬಳಿ ಮಂಗಳವಾರ ಬೈಕ್ ಸವಾರನಿಗೆ ಬಿಎಂಟಿಸಿ ಚಾಲಕ ಥಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಚಾಲಕನನ್ನು ಕಳೆದ ಗುರುವಾರ ಅಮಾನತುಗೊಳಿಸಲಾಗಿದೆ. ವಿಡಿಯೋದಲ್ಲಿ ಬೈಕ್ ಚಾಲಕನನ್ನು ಬಸ್ಸಿನ ಒಳಗೆ ಮನಬಂದಂತೆ ಥಳಿಸುವ ದೃಶ್ಯಗಳನ್ನು ಕಾಣಬಹುದು.
ಯಲಹಂಕ ನ್ಯೂ ಟೌನ್ ಪೊಲೀಸರಿಗೆ ನೀಡಿದ ದೂರಿನಲ್ಲಿ, 44 ವರ್ಷದ ಸಂದೀಪ್ ಬೋನಿಫೇಸ್ ತನ್ನ ಪಕ್ಕೆಲುಬುಗಳು, ಕಾಲುಗಳು ಮತ್ತು ಮುಖದ ಮೇಲೆ ಗಾಯಗಳಾಗಿವೆ ಎಂದು ಹೇಳಿದ್ದಾರೆ. ಘಟನೆಯ ಸಮಯದಲ್ಲಿ ಕೆನಡಾದ ಪ್ರಜೆಯಾದ ತನ್ನ ಪತ್ನಿ ಲಾರಾ ಅವರೊಂದಿಗೆ ಇದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. "ನಾವು ಎರಡು ಬಸ್ಗಳ ನಡುವೆ ಬೈಕ್ನಲ್ಲಿ ಇದ್ದೆವು, ಈ ವೇಳೆ ಬಸ್ ಚಾಲಕರು ನಿರಂತರ ಹಾರ್ನ್ನಿಂದ ತೊಂದರೆ ಮಾಡಿದ್ದಾರೆ. ಬಳಿಕ ನಾನು ಚಾಲಕನಿಗೆ ದಾರಿ ಮಾಡಿಕೊಟ್ಟೆ.

ನಂತರ ಏಕಾಏಕಿ ಚಾಲಕ ಬಸ್ಸಿನಿಂದ ಕೆಳಗಿಳಿದು ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಬೈಕ್ ಕೀ ತೆಗೆದುಕೊಂಡು ಫೋನ್ ಕಸಿದುಕೊಂಡಿದ್ದಾನೆ. ನಾನು ಬಸ್ಗೆ ಹತ್ತಿದಾಗ, ಅವನು ಮತ್ತೊಮ್ಮೆ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಎರಡು ಬಸ್ಗಳು ರೇಸ್ ಮಾಡುತ್ತಿದ್ದವು ಎಂದು ಬೋನಿಫೇಸ್ ಪೊಲೀಸರಿಗೆ ತಿಳಿಸಿದ್ದಾರೆ. ಇದು ಒಂದು ಕಡೆಯ ವಾದವಾದರೆ ಮತ್ತೊಂದೆಡೆ ಬಸ್ ಚಾಲಕ ಇನ್ನೊಂದು ಕಥೆಯನ್ನು ಹೇಳಿದ್ದಾನೆ. ಬೋನಿಫೆಸ್ ದಾರಿ ಕೊಡದೆ ಅಸಭ್ಯವಾಗಿ ವರ್ತಿಸಿರುವುದಾಗಿ ಬಸ್ ಚಾಲಕ ಆರೋಪಿಸಿದ್ದಾನೆ.
ಬಸ್ನ ಚಾಲಕ ಆನಂದ್ ಪಿ.ಬಿ ಬುಧವಾರದ ಪ್ರತಿ ದೂರಿನಲ್ಲಿ, ಬೋನಿಫೇಸ್ ತನ್ನ ಮಧ್ಯದ ಬೆರಳನ್ನು ಬಳಸಿ ಆಕ್ಷೇಪಾರ್ಹ ಸನ್ನೆ ಮಾಡಿದ್ದು ವಾಗ್ವಾದಕ್ಕೆ ಕಾರಣವಾಯಿತು. ಅಲ್ಲದೇ ಆತನ ವರ್ತನೆ ಕೆರಳಿಸುವಂತಿತ್ತು ಎಂದು ಬಸ್ ಚಾಲಕ ದೂರಿನಲ್ಲಿ ತಿಳಿಸಿದ್ದಾನೆ. ಪೊಲೀಸ್ ಅಧಿಕಾರಿಯೊಬ್ಬರು ಈ ಪ್ರಕರಣದ ಕುರಿತು ಮಾಹಿತಿ ನೀಡಿದ್ದು, "ಇಬ್ಬರೂ ಪರಸ್ಪರ ಹಲ್ಲೆ ನಡೆಸಿದ್ದಾರೆ. ಇಬ್ಬರಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ಇನ್ನೆರಡು ದಿನಗಳಲ್ಲಿ ವಿಚಾರಣೆಗೆ ಕರೆಸಲಾಗುವುದು'' ಎಂದು ಹೇಳಿದ್ದಾರೆ.
ಈ ಘಟನೆಯ ದೃಶ್ಯವನ್ನು ಸ್ಮಾರ್ಟ್ಫೋನ್ನಲ್ಲಿ ಚಿತ್ರೀಕರಿಸಿದ ಟ್ವಿಟರ್(Twitter) ಬಳಕೆದಾರ ರಾಕೇಶ್ ಪ್ರಕಾಶ್ ತಮ್ಮ ಟ್ವೀಟರ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸ್ಮಾರ್ಟ್ಫೋನ್ನಲ್ಲಿ ಚಿತ್ರೀಕರಿಸಿದ ವೀಡಿಯೊದಲ್ಲಿ ಚಾಲಕ ಪದೇ ಪದೇ ಹೊಡೆಯುವುದು ಮತ್ತು ಒದೆಯುವುದನ್ನು ನೋಡಬಹುದು. ಇದಾದ ಬಳಿಕ ಬೈಕ್ ಸವಾರ ಮೊದಲು ದೂರು ನೀಡಿದ್ದು, ಬಸ್ ಚಾಲಕ ಪ್ರತಿ ದೂರನ್ನು ಪೊಲೀಸರಿಗೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಸದ್ಯ ಬಸ್ ಚಾಲಕ ಕೆಲಸ ಕಳೆದುಕೊಂಡಿದ್ದಾನೆ.
ಕಳೆದ ಗುರುವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವೀಡಿಯೋದಲ್ಲಿ ಬಸ್ ಚಾಲಕ ಬೈಕ್ ಸವಾರನ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಸದ್ಯ ಎಲ್ಲಡೆ ಹರಿದಾಡುತ್ತಿದೆ. ನೆಟ್ಟಿಗರು ಬಿಎಂಟಿಸಿ ಚಾಲಕ, ನಿರ್ವಾಹಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಪ್ಪೇನೆ ಇರಲಿ ಪೊಲೀಸರ ಮೊರೆ ಹೋಗಬೇಕು ಅಥವಾ ಮಾತಿನ ಮೂಲಕ ಬಗೆಹರಿಸಿಕೊಳ್ಳಬೇಕು ಆದರೆ ಮನಬಂದಂತೆ ಥಳಿಸುವುದು ಸರಿಯಲ್ಲ ಎಂದು ನೆಟ್ಟಿಗರು ಬಸ್ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಎಂಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕರ ವಿರುದ್ಧ ಆಗಾಗ ದೂರುಗಳು ಕೇಳಿಬರುತ್ತಿರುತ್ತವೆ. ಸರಿಯಾಗಿ ಬಸ್ಗಳು ನಿಲ್ದಾಣಗಳಲ್ಲಿ ನಿಲ್ಲಿಸುವುದಿಲ್ಲ, ನಿರ್ವಾಹಕರು ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ ಎಂಬೆಲ್ಲಾ ದೂರುಗಳು ಬರುತ್ತಿರುತ್ತವೆ. ಆದರೆ ಇದೀಗ ಇಂತಹ ದೂರುಗಳು ಕಡಿಮೆಯಾಗಿವೆ. ಬಿಎಂಟಿಸಿ, ಕೆಎಸ್ಆರ್ಟಿಸಿ ಚಾಲಕ, ನಿರ್ವಾಹಕರ ಬೇಜವಾಬ್ದಾರಿ ವರ್ತನೆ ಕಂಡುಬಂದಲ್ಲಿ ಪ್ರಯಾಣಿಕರು ಸಾರಿಗೆ ಇಲಾಖಾಧಿಕಾರಿಗಳಿಗೆ ದೂರು ನೀಡಬಹುದಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ಪರಿಣಾಮದಿಂದಲೇ ಇದೀಗ ಬಸ್ ಚಾಲಕ ಸಸ್ಪೆಂಡ್ ಆಗಿದ್ದಾನೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications