ಅಪಘಾತದಲ್ಲಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿ ನಟ ಸಂಚಾರಿ ವಿಜಯ್
ರಸ್ತೆ ಅಪಘಾತದಲ್ಲಿ ಕನ್ನಡ ಜನಪ್ರಿಯ ನಟ ಸಂಚಾರಿ ವಿಜಯ್ ಗಂಭೀರವಾಗಿ ಗಾಯಗೊಂಡಿದ್ದು, ಅಪಘಾತದಲ್ಲಿ ನಟ ವಿಜಯ್ ಅವರ ತಲೆ ಮತ್ತು ಬಲತೊಡೆಗೆ ಗಂಭೀರವಾದ ಪೆಟ್ಟು ಬಿದ್ದಿದೆ.

ದೇಶಾದ್ಯಂತ ಕೋವಿಡ್ ಹಾವಳಿ ಹೆಚ್ಚಿರುವ ಸಂದರ್ಭದಲ್ಲಿ ನಿಗದಿತ ಅವಧಿ ಹೊರತುಪಡಿಸಿ ವಾಹನ ಸಂಚಾರವನ್ನು ನಿಷೇಧಿಸಿದ್ದರೂ ದಿನನಿತ್ಯ ನೂರಾರು ಅಪಘಾತ ಪ್ರಕರಣ ದಾಖಲಾಗುತ್ತಿದ್ದು, ಮೊನ್ನೆ ತಡರಾತ್ರಿ ನಟ ಸಂಚಾರಿ ವಿಜಯ್ ಅವರು ಕೂಡಾ ಸ್ನೇಹಿತನ ಬೈಕಿನಲ್ಲಿ ತೆರಳುವಾಗ ಅಪಘಾತದಲ್ಲಿ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದಾರೆ.

ನಟ ವಿಜಯ್ ಅವರ ಪರಿಸ್ಥಿತಿ ಸದ್ಯ ಚಿಂತಾಜನಕವಾಗಿದ್ದು, ಬೆಂಗಳೂರಿನ ಬನ್ನೇರು ಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪೋಲೋ ಆಸ್ಪತ್ರೆಯು ನಟ ಸಂಚಾರಿ ವಿಜಯ್ ಅವರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಅಪಘಾತ ತೀವ್ರವಾಗಿ ಗಾಯಗೊಂಡಿರುವ ವಿಜಯ್ ಅವರ ಆರೋಗ್ಯದ ಸ್ಥಿತಿಗತಿ ಕುರಿತು ನಿಗಾ ವಹಿಸಿದ್ದೇವೆ ಎಂದು ಆಸ್ಪತ್ರೆಯ ಹೆಲ್ತ್ ಬುಲೆಟಿನ್ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಅಪಘಾತ ದಿನ ಅಂದರೆ ಜೂನ್ 13 ರ ರಾತ್ರಿ 11.45 ವೇಳೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡ ವಿಜಯ್ ಅವರನ್ನು ತಕ್ಷಣಕ್ಕೆ ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯ್ತು. ತೀವ್ರವಾಗಿ ಗಾಯಗೊಂಡಿದ್ದರಿಂದ ಮೆದುಳಿನ ಸಿ.ಟಿ. ಸ್ಕ್ಯಾನ್ ಮಾಡಲಾಗಿದ್ದು, ಈ ವೇಳೆ ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿರುವುದು ಪತ್ತೆಯಾಗಿದೆ.

ತಕ್ಷಣವೇ ಸಂಚಾರಿ ವಿಜಯ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿರುವ ಅಪೋಲೋ ವೈದ್ಯರು ಆರೋಗ್ಯದ ಸ್ಥಿತಿಗತಿ ಕುರಿತು ನಿಗಾ ವಹಿಸಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿರುವುದರಿಂದ ಇನ್ನು 48 ಗಂಟೆಗಳ ಕಾಲ ಏನನ್ನು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಅಪಘಾತವಾಗಿದ್ದು ಹೇಗೆ?
ಕಳೆದ ಶನಿವಾರದಂದು ರಾತ್ರಿ ಗೆಳೆಯ ನವೀನ್ ಮನೆಯಲ್ಲಿ ಊಟ ಮಾಡಿಕೊಂಡು ಬೈಕ್ ನಲ್ಲಿ ಹಿಂದಿರುಗುವ ಸಂದರ್ಭದಲ್ಲಿ ಜೆಪಿ ನಗರದ 7ನೇ ಹಂತದಲ್ಲಿ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿತ್ತು.

ನಟ ವಿಜಯ್ ಅವರು ಹಿಂಬದಿಯಲ್ಲಿ ಕುಳಿತಿದ್ದರೆ ನವೀನ ಬೈಕ್ ಚಾಲನೆ ಮಾಡುತ್ತಿದ್ದರು. ಬೈಕ್ ವೇಗವಾಗಿದ್ದರಿಂದ ಸ್ಕಿಡ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಬಗ್ಗೆ ಮಾಹಿತಿಯಿದ್ದು, ಬೈಕ್ ಚಾಲನೆ ಮಾಡುತ್ತಿದ್ದ ನವೀನ್ ಹೆಲ್ಮೆಟ್ ಧರಿಸಿದ್ದರೆ ನಟ ಸಂಚಾರಿ ವಿಜಯ್ ಹೆಲ್ಮೆಟ್ ಧರಿಸಿರಲಿಲ್ಲ ಎನ್ನಲಾಗಿದೆ.

ಇನ್ನು ಹೆಲ್ಮೆಟ್ ಇಲ್ಲದ ಬೈಕ್ ಸವಾರಿಯು ಪ್ರಾಣಾಪಾಯಕ್ಕೆ ಕುತ್ತು ತರುತ್ತದೆ ಎನ್ನುವುದು ಈಗಾಗಲೇ ಹಲವಾರು ಅಪಘಾತ ಪ್ರಕರಣಗಳಲ್ಲಿ ಸಾಬೀತಾಗಿದ್ದು, ದಯವಿಟ್ಟು ಸುರಕ್ಷಿತ ಪ್ರಯಾಣಕ್ಕಾಗಿ ಸೀಟ್ ಬೆಲ್ಟ್ ಮತ್ತು ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು.

ಕೇವಲ ದಂಡದಿಂದ ತಪ್ಪಿಸಿಕೊಳ್ಳುವ ಕಾರಣದಿಂದ ಮಾತ್ರ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಬಳಕೆಯು ಅಪಘಾತ ಸಂದರ್ಭಗಳಲ್ಲಿ ನಮಗೆ ಗರಿಷ್ಠ ಸುರಕ್ಷತೆ ನೀಡುವಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ನಟ ಸಂಚಾರಿ ವಿಜಯ್ ಜೊತೆ ಬೈಕ್ ರೈಡ್ ಮಾಡುತ್ತಿದ್ದ ನವೀನ್ ಗಾಯಗೊಂಡಿದ್ದರೂ ಕೂಡಾ ಹೆಲ್ಮೆಟ್ನಿಂದ ಗರಿಷ್ಠ ರಕ್ಷಣೆ ಸಿಕ್ಕಿದ್ದು ಮಾತ್ರ ಸುಳ್ಳಲ್ಲ.

ಇದೇ ಕಾರಣಕ್ಕೆ ಸಾರಿಗೆ ಇಲಾಖೆಯು ದೇಶಾದ್ಯಂತ ಜೂನ್ 1ರಿಂದಲೇ ಪ್ರತಿಯೊಬ್ಬರು ಗುಣಮಟ್ಟದ ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್ ಬಳಕೆಯನ್ನು ಕಡ್ಡಾಯವಾಗಿ ಜಾರಿಗೆ ತಂದಿದ್ದು, ದಯವಿಟ್ಟು ಪ್ರಾಣರಕ್ಷಣೆಗಾಗಿ ಹೆಲ್ಮೆಟ್ ಬಳಕೆಯನ್ನು ಮಾಡಿ.


Click it and Unblock the Notifications








