Karnataka Highway: ಇನ್ಮುಂದೆ ರಾಜ್ಯದ ರಸ್ತೆಗಳಲ್ಲಿ ರಾಂಗ್ ಸೈಡ್ನಲ್ಲಿ ವಾಹನ ಚಲಾಯಿಸಿದ್ರೆ ಬೀಳುತ್ತೆ FIR!
ಕರ್ನಾಟಕದಲ್ಲಿ ಹಾದು ಹೋಗುವ ಹೆದ್ದಾರಿಗಳಲ್ಲಿ ಅಪಘಾತಗಳ ತಡೆಗೆ ಪೊಲೀಸ್ ಇಲಾಖೆ, ಈಗಾಗಲೇ ಹಲವು ನಿಯಮಗಳನ್ನು ಜಾರಿಗೊಳಿಸಿದೆ. ಆದರೂ, ಕೆಲವೊಬ್ಬರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದನ್ನು ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
'ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇ (Bangalore Mysore expressway)ಯಲ್ಲಿ ದ್ವಿಚಕ್ರ ವಾಹನಗಳು ಸೇರಿದಂತೆ ಹಲವು ವಾಹನಗಳು ವಿರುದ್ಧ ದಿಕ್ಕಿನಲ್ಲಿ ಬರುತ್ತಿರುವುದನ್ನು ನೋಡಿದೆ. ಈ ರಸ್ತೆಯಲ್ಲಿ ಏನೂ ಬದಲಾಗಿಲ್ಲ. ದಯವಿಟ್ಟು, ಗಂಭೀರ ಕ್ರಮ ತೆಗೆದುಕೊಳ್ಳಿ' ಎಂದು ವಿಡಿಯೋಯೊಂದಿಗೆ ವಿಜಯಕುಮಾರ್ ಘನಶ್ಯಾಮ್ ಎಂಬುವವರು ಟ್ವೀಟ್ ಮಾಡಿ, ರಾಜ್ಯ ಸಂಚಾರ & ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರನ್ನು ಟ್ಯಾಗ್ ಮಾಡಿದ್ದರು.

ಇದಕ್ಕೆ, ಪ್ರತಿಕ್ರಿಯೆ ನೀಡಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು, ಎಕ್ಸ್ಪ್ರೆಸ್ವೇಯಲ್ಲಿ ಅಪಾಯಕಾರಿ ಚಾಲನೆಗಾಗಿ ಮಾಡಿದ ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ, ಪರವಾನಗಿಯನ್ನು ಅಮಾನತ್ತು ಮಾಡಲು ಸೂಚಿಸಲಾಗಿದೆ. ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಇನ್ಮುಂದೆ, ರಾಷ್ಟ್ರೀಯ ಹೆದ್ದಾರಿ (Highway)ಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತದೆ. ಡಿಎಲ್ ಸಸ್ಪೆಂಡ್ ಮಾಡುವಂತಹ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಬಗ್ಗೆಯೂ ಅವರು ಮಾಹಿತಿಯನ್ನು ಹಂಚಿಕೊಂಡಿದ್ದು, ಈ ವರ್ಷದ (2023) ಮೊದಲರ್ಧದಲ್ಲಿ 5830 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೇ ತಿಂಗಳಲ್ಲಿ 1094, ಜೂನ್ 965, ಜುಲೈ 807, ಆಗಸ್ಟ್ 795 ಜನರು ಸಾವನ್ನಪ್ಪಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿಯೇ ಅತಿಹೆಚ್ಚಿನ ಅಪಘಾತ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಅಪಘಾತಗಳ ತಡೆಗೆ ಅಲೋಕ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿದ ಹಿನ್ನೆಲೆ, ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ಮೇ ತಿಂಗಳಲ್ಲಿ 29 ಜೂನ್ನಲ್ಲಿ 28, ಜುಲೈನಲ್ಲಿ 8 ಮತ್ತು ಆಗಸ್ಟ್ನಲ್ಲಿ 6 ಸಾವುಗಳು ಮಾತ್ರ ಸಂಭವಿಸಿವೆ.
ಎಕ್ಸ್ಪ್ರೆಸ್ವೇನಲ್ಲಿಯಲ್ಲಿ ಪೊಲೀಸ್ ಇಲಾಖೆಯು ವಾಹನಗಳ ವೇಗವನ್ನು ಗಂಟೆಗೆ 100 ಕಿಮೀ ಸೀಮಿತಗೊಳಿಸಿದೆ. ಜೊತೆಗೆ ಪಥ ಶಿಸ್ತು ಸೇರಿದಂತೆ ವಿವಿಧ ಕ್ರಮಗಳಿಂದ ಅಪಘಾತಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಅದಕ್ಕೂ ಮುನ್ನ, ಮಾರ್ಚ್ ನಲ್ಲಿ ಉದ್ಘಾಟನೆಗೊಂಡ ಈ ಎಕ್ಸ್ಪ್ರೆಸ್ವೇಯಲ್ಲಿ ನಡೆದ ವಿವಿಧ ಅಪಘಾತ ಪ್ರಕರಣಗಳಲ್ಲಿ 100ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು.
ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇ ಮಾತ್ರವಲ್ಲದೆ, ರಾಜ್ಯದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವವರ ವಿರುದ್ಧ ಎಫ್ಐಆರ್ ಹಾಕಲಾಗುತ್ತದೆ. ಡಿಎಲ್ ಅಮಾನತ್ತು ಮಾಡುವಂತಹ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಎಚ್ಚರಿಕೆ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಈಗಲಾದರೂ ಸವಾರರು ಎಚ್ಚರಿಕೆಯಿಂದ ವಾಹನಗಳನ್ನು ಓಡಿಸಲಿ.
ಇನ್ನು, ಯಾರೇ ಆಗಲಿ ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಿ, ನಿಗದಿತ ವೇಗ ಮಿತಿಯಲ್ಲಿಯೇ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ಚಲಾಯಿಸಿ. ಮದ್ಯಪಾನ ಮಾಡಿ ಅಥವಾ ಫೋನ್ ನಲ್ಲಿ ಮಾತನಾಡಿಕೊಂಡು ವಾಹನಗಳನ್ನು ಓದಿಡಬೇಡಿ. ಹೆಲ್ಮೆಟ್, ಸೀಟ್ ಬೆಲ್ಟ್ ಸೇರಿದಂತೆ ಅಗತ್ಯ ಸುರಕ್ಷತಾ ಪರಿಕರಗನ್ನು ಧರಿಸಿ ಕಾರು, ಬೈಕ್ ಓಡಿಸಿರಿ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications