ಇರುವೆ ಕಾರಣಕ್ಕೆ ರದ್ದಾಯ್ತು ಏರ್ ಇಂಡಿಯಾ ವಿಮಾನದ ಟೇಕ್ ಆಫ್
ಒಂದು ಕಾಲದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ಕಂಪನಿಗಳು ಈಗ ನಷ್ಟದ ಹಾದಿಯಲ್ಲಿವೆ. ಇನ್ನು ಕೆಲವು ಕಂಪನಿಗಳು ಮುಚ್ಚಿವೆ. ಇದಕ್ಕೆಲ್ಲಾ ಪ್ರಮುಖ ಕಾರಣ ಕರೋನಾ ವೈರಸ್ ಮಹಾಮಾರಿ. ಕಳೆದ ವರ್ಷ ಕರೋನಾ ವೈರಸ್ ಕಾಣಿಸಿಕೊಂಡ ಬಳಿಕ ಹಲವು ಕಂಪನಿಗಳು ನಷ್ಟದಲ್ಲಿವೆ. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಏರ್ ಇಂಡಿಯಾ.

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಏರ್ ಇಂಡಿಯಾ ಹಲವು ವರ್ಷಗಳಿಂದ ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಈ ಕಾರಣಕ್ಕೆ ಕೇಂದ್ರ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದೆ. ಇದನ್ನು ಬದಿಗಿಟ್ಟು ನೋಡುವುದಾದರೆ ಏರ್ ಇಂಡಿಯಾ, ವಿಮಾನಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ದೂರುಗಳು ಪದೇ ಪದೇ ಕೇಳಿ ಬರುತ್ತಲೇ ಇರುತ್ತವೆ.

ಏರ್ ಇಂಡಿಯಾ, ವಿಮಾನಗಳನ್ನು ಸರಿಯಾಗಿ ನಿರ್ವಹಿಸದೇ ಕಳಪೆ ಸೇವೆಗಳನ್ನು ಒದಗಿಸುತ್ತದೆ ಎಂಬುದು ಪ್ರಯಾಣಿಕರ ಆರೋಪ. ಇದಕ್ಕೆ ಪುಷ್ಟಿ ನೀಡುವಂತಹ ಮತ್ತೊಂದು ಘಟನೆ ಇತ್ತೀಚಿಗೆ ನಡೆದಿದೆ. ಈ ಘಟನೆಯಲ್ಲಿ ದೆಹಲಿಯಿಂದ ಲಂಡನ್ಗೆ ಹೊರಡ ಬೇಕಿದ್ದ ಏರ್ ಇಂಡಿಯಾ ವಿಮಾನವನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ.

ಎಐ 111 ವಿಮಾನವು ಸೆಪ್ಟೆಂಬರ್ 6 ರಂದು ಮಧ್ಯಾಹ್ನ 2 ಗಂಟೆಗೆ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್'ಗೆ ಪ್ರಯಾಣ ಬೆಳೆಸಬೇಕಿತ್ತು. ಟಿಕೆಟ್ ಪಡೆದ ಪ್ರಯಾಣಿಕರು ವಿಮಾನದೊಳಗೆ ಆಸೀನರಾಗಿದ್ದರು. ಇದೇ ವೇಳೆ ಕೆಲವು ಪ್ರಯಾಣಿಕರು ವಿಮಾನದ ಬಿಸಿನೆಸ್ ಕ್ಲಾಸ್ ಸೀಟುಗಳಲ್ಲಿ ಇರುವೆಗಳಿರುವುದನ್ನು ಗಮನಿಸಿದ್ದಾರೆ.

ಪ್ರಯಾಣಿಕರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಮಾನದ ಬಿಸಿನೆಸ್ ಕ್ಲಾಸ್'ಗೆ ಭೇಟಿ ನೀಡಿದ ಅಧಿಕಾರಿಗಳು ಈ ಬಗ್ಗೆ ತಮ್ಮ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿ ಇರುವೆಗಳು ಕಾಣಿಸಿಕೊಂಡ ಯಾವುದೇ ಚಿತ್ರಗಳು ಬಹಿರಂಗವಾಗಿಲ್ಲ. ಇರುವೆಗಳಿದ್ದ ಕಾರಣಕ್ಕೆ ಪ್ರಯಾಣಿಕರು ಆ ಸೀಟುಗಳಲ್ಲಿ ಕುಳಿತು ಕೊಳ್ಳಲು ನಿರಾಕರಿಸಿದ್ದಾರೆ.

ಈ ಕಾರಣಕ್ಕೆ ಟೇಕಾಫ್ ಆಗಲು ಸಿದ್ಧವಾಗಿದ್ದ ಎಐ 111 ವಿಮಾನವನ್ನು ರದ್ದು ಪಡಿಸಲಾಗಿದೆ. ಅದರ ಬದಲು ಬೋಯಿಂಗ್ 787-8 ವಿಮಾನವು ಲಂಡನ್'ಗೆ ಪ್ರಯಾಣ ಬೆಳೆಸಿದೆ. ಈ ಘಟನೆಯ ಬಗ್ಗೆ ಏರ್ ಇಂಡಿಯಾ ತನ್ನ ಟ್ವಿಟರ್ ಖಾತೆಯ ಮೂಲಕ ಸ್ಪಷ್ಟನೆ ನೀಡಿದೆ. ಇರುವೆಗಳ ಕಾರಣಕ್ಕೆ ಎಐ 111 ವಿಮಾನದ ಟೇಕ್ ಆಫ್ ರದ್ದಾಗಿಲ್ಲ ಎಂದು ಏರ್ ಇಂಡಿಯಾ ತಿಳಿಸಿದೆ.

ವಿಮಾನಗಳಲ್ಲಿ ಈ ರೀತಿಯ ಘಟನೆಗಳು ನಡೆಯುವುದು ಹೊಸತೇನಲ್ಲ. ಕಳೆದ ಮೇ ತಿಂಗಳ ಅಂತ್ಯದಲ್ಲಿ ಏರ್ ಇಂಡಿಯಾ ವಿಮಾನದಲ್ಲಿಯೇ ಇದೇ ರೀತಿಯ ಘಟನೆ ನಡೆದಿತ್ತು. ಆಗ ಇರುವೆಗಳ ಬದಲು ಬಾವಲಿಗಳ ಕಾರಣಕ್ಕೆ ಅಮೆರಿಕಾಕ್ಕೆ ತೆರಳ ಬೇಕಿದ್ದ ಏರ್ ಇಂಡಿಯಾ ವಿಮಾನದ ಹಾರಾಟವನ್ನು ರದ್ದು ಪಡಿಸಲಾಗಿತ್ತು.

ಇರುವೆ ಘಟನೆಯಂತೆ, ಆ ಘಟನೆಯು ಸಹ ದೆಹಲಿ ವಿಮಾನ ನಿಲ್ದಾಣದಲ್ಲಿಯೇ ಸಂಭವಿಸಿತ್ತು ಎಂಬುದು ಗಮನಾರ್ಹ. ಕೆಲವು ಪ್ರಯಾಣಿಕರು ದೆಹಲಿಯಿಂದ ಅಮೆರಿಕಾದ ನ್ಯೂಯಾರ್ಕ್'ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಕ್ಯಾಬಿನ್ ನಲ್ಲಿ ಬಾವಲಿಗಳು ಹಾರಾಡುವುದನ್ನು ಗಮನಿಸಿದ್ದಾರೆ.

ಈ ಕಾರಣಕ್ಕೆ ಟೇಕ್ ಆಫ್ ಆಗಿದ್ದ ವಿಮಾನವನ್ನು ಮತ್ತೆ ವಿಮಾನ ನಿಲ್ದಾಣಕ್ಕೆ ಹಿಂತಿರುಗಿಸಲಾಗಿತ್ತು. ನಂತರ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಗಿತ್ತು. ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿದ ನಂತರ ವಿಮಾನದಲ್ಲಿದ್ದ ಬಾವಲಿಗಳನ್ನು ಹೊರ ಹಾಕಲಾಗಿತ್ತು.

ಈಗ ಇರುವೆ ಕಾರಣಕ್ಕೆ ರದ್ದುಗೊಂಡ ಏರ್ ಇಂಡಿಯಾ ವಿಮಾನದಲ್ಲಿ ಭೂತಾನ್ ರಾಜಕುಮಾರ ಜಿಗ್ಮೆ ನಮ್ಗೆಯೆಲ್ ವಾಂಗ್ ಕೂಡ ಪ್ರಯಾಣಿಸಲು ನಿರ್ಧರಿಸಿದ್ದರುಎಂಬುದು ಗಮನಾರ್ಹ. ಈ ಘಟನೆಯಿಂದ ಮಧ್ಯಾಹ್ನ 2 ಗಂಟೆಗೆ ಹೊರಡ ಬೇಕಿದ್ದ ದೆಹಲಿ - ಲಂಡನ್ ವಿಮಾನವು ಸುಮಾರು 3.20 ಗಂಟೆಗಳಷ್ಟು ವಿಳಂಬವಾಗಿ ಸಂಜೆ 5.20 ಕ್ಕೆ ಹೊರಟಿದೆ.

ಭದ್ರತೆಯ ಕಾರಣಕ್ಕೆ ಪಾಕಿಸ್ತಾನದ ಕೆಲವು ವಿಮಾನಯಾನ ಕಂಪನಿಗಳಿಗೆ ಯುರೋಪ್ನಲ್ಲಿ ಕಾರ್ಯ ನಿರ್ವಹಿಸದಂತೆ ನಿಷೇಧ ಹೇರಲಾಗಿದೆ. ಈ ರೀತಿಯ ಘಟನೆಗಳು ಪದೇ ಪದೇ ಸಂಭವಿಸುವುದರಿಂದ ಏರ್ ಇಂಡಿಯಾ ವಿಮಾನಗಳನ್ನು ಸಹ ನಿಷೇಧಿಸಬಹುದು. ಏರ್ ಇಂಡಿಯಾ ಮುಂದೆ ಈ ರೀತಿಯ ಘಟನೆಗಳು ಸಂಭವಿಸದಂತೆ ಜಾಗೃತಿ ವಹಿಸಿ ನಿಷೇಧ ವಿಧಿಸುವುದರಿಂದ ಪಾರಾಗಬೇಕಿದೆ.

ವಿಮಾನಗಳು ಎಷ್ಟು ವರ್ಷಗಳವರೆಗೆ ಬಾಳಿಕೆ ಬರುತ್ತವೆ ಎಂಬ ಪ್ರಶ್ನೆ ಹಲವರನ್ನು ಕಾಡುವುದು ಸಹಜ. ದೊಡ್ಡ ವಿಮಾನಗಳು ಹಲವು ದಶಕಗಳವರೆಗೆ ಸೇವೆ ಸಲ್ಲಿಸುತ್ತವೆ ಎಂಬುದು ಕೆಲವರ ಅಭಿಪ್ರಾಯ. ಆದರೆ ವಿಮಾನವೊಂದರ ಸರಾಸರಿ ಜೀವಿತಾವಧಿ ಕೇವಲ 25 ವರ್ಷದಿಂದ 30 ವರ್ಷಗಳಾಗಿರುತ್ತದೆ. ಯಾವುದೇ ವಿಮಾನವು ಸಂಪೂರ್ಣವಾಗಿ ಹಳೆಯದಾಗುವವರೆಗೆ ಕಾಯುವುದಿಲ್ಲ.

ಹಲವು ವಿಮಾನಗಳು ತಮ್ಮ ಪೂರ್ಣ ಜೀವನವನ್ನು ಸಹ ತಲುಪುವುದಿಲ್ಲ. ವಿಮಾನದ ಜೀವಿತಾವಧಿ ಸುಮಾರು 25 ವರ್ಷಗಳೇ ಆದರೂ ಬಹುತೇಕ ವಿಮಾನಗಳು 18 ವರ್ಷ ಸೇವೆ ಸಲ್ಲಿಸಿದ ನಂತರ ನಿವೃತ್ತಿಯಾಗುತ್ತವೆ. ವಿಮಾನವು ನಿವೃತ್ತಿಯಾದ ನಂತರ ಅದು ತನ್ನ ಕೊನೆಯ ಹಾರಾಟವನ್ನು ಸ್ಟೋರೆಜ್ ವಿಮಾನ ನಿಲ್ದಾಣಕ್ಕೆ ಮಾಡುತ್ತದೆ. ಈ ಸ್ಟೋರೆಜ್ ವಿಮಾನ ನಿಲ್ದಾಣವು ದೊಡ್ಡದಾಗಿದ್ದು, ತೆರೆದ ಆಕಾಶದ ಅಡಿಯಲ್ಲಿರುತ್ತದೆ.

ಈ ಸ್ಟೋರೆಜ್ ವಿಮಾನ ನಿಲ್ದಾಣಗಳನ್ನು ಪ್ರಪಂಚದ ಹಲವು ಭಾಗಗಳಲ್ಲಿ ಕಾಣಬಹುದು. ಇವುಗಳಲ್ಲಿ ಹೆಚ್ಚಿನವು ನೈಋತ್ಯ ಅಮೆರಿಕಾದಲ್ಲಿವೆ. ಈ ಸ್ಥಳದಲ್ಲಿ ಭೂಮಿಯ ಲಭ್ಯತೆ ಹೆಚ್ಚಾಗಿದ್ದು ಗಾಳಿ ಒಣಗಿರುವುದರಿಂದ ವಿಮಾನಗಳು ತುಕ್ಕು ಹಿಡಿಯುವ ಪ್ರಕ್ರಿಯೆ ತುಂಬಾ ನಿಧಾನವಾಗಿರುತ್ತದೆ. ವಿಮಾನವೊಂದು ನಿವೃತ್ತಿಯಾದ ನಂತರ ಅದರಲ್ಲಿರುವ ಬಿಡಿ ಭಾಗಗಳನ್ನು ಇತರ ವಿಮಾನಗಳಲ್ಲಿ ಬಳಸಲಾಗುತ್ತದೆ. ಕೆಲವೊಮ್ಮೆ ವಿಮಾನಗಳಲ್ಲಿರುವ ಬಿಡಿಭಾಗಗಳನ್ನು ಸರಿಪಡಿಸುವುದರ ಬದಲು ಹಳೆಯ ವಿಮಾನಗಳಲ್ಲಿರುವ ಬಿಡಿ ಭಾಗವನ್ನು ಅಳವಡಿಸಲಾಗುತ್ತದೆ.
ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications