ವ್ಯಕ್ತಿ ಪರಿಚಯ: ಮಹೀಂದ್ರಗೆ ಹೊಸ ಜೀವ ತುಂಬಿದ ಆನಂದ್ ಮಹೀಂದ್ರ
ಮಹೀಂದ್ರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯಸ್ಥ ಆನಂದ್ ಮಹೀಂದ್ರ ದೇಶದ ವಾಹನ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಓರ್ವ ವ್ಯಕ್ತಿಯ ಬೆಳವಣಿಗೆಯಲ್ಲಿ ಆತನ ಅಡಿಪಾಯ ಭದ್ರವಾಗಿರಬೇಕು. ಇಲ್ಲಿ ತಾತ ಜೆಸಿ ಮಹೀಂದ್ರ ಹುಟ್ಟು ಹಾಕಿರುವ ಸಂಸ್ಥೆಯನ್ನು ಇಷ್ಟರ ಮಟ್ಟಿಗೆ ಬೆಳೆಸಿರುವ 60ರ ಹರೆಯದ ಆನಂದ್ ಮಹೀಂದ್ರ ಈಗಲೂ ಮಹೀಂದ್ರ ನಾವೀನ್ಯ ಯೋಜನೆ ರೂಪಿಸುವುದರಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ.
Also Read: ಮಹೀಂದ್ರ ಮಗದೊಂದು ಎಸ್ಯುವಿ ಬರಮಾಡಿಕೊಳ್ಳಲು ತಯಾರಾಗಿರಿ! ಮುಂದಕ್ಕೆ ಓದಿ
ತನ್ನ ತಂಡವನ್ನು ಮುನ್ನಡೆಸಿಕೊಂಡು ಹೋಗಲು ತಾಳ್ಮೆ ಅತಿ ಅಗತ್ಯ. ಇಲ್ಲೂ ಜಾಣ್ಮೆಯ ಹಾಗೂ ನಾಯಕತ್ವ ಕೌಶಲ್ಯದಿಂದ ದೇಶದ ಉದ್ಯಮ ಜಗತ್ತಿನಲ್ಲಿ ಹೆಸರು ಮಾಡಿರುವ ಆನಂದ್ ಮಹೀಂದ್ರ ಜನಪ್ರಿಯತೆ ದೇಶಕ್ಕಷ್ಟೇ ಮಾತ್ರ ಸೀಮಿತವಲ್ಲ. ಬದಲಾಗಿವಿದೇಶಗಳಿಂದಲೂ ಅನೇಕ ಪ್ರಶಸ್ತಿಗಳು ಹರಸಿಕೊಂಡು ಬಂದಿದೆ.

1955ನೇ ಇಸವಿಯಲ್ಲಿ ಮುಂಬೈನಲ್ಲಿ ಜನಿಸಿದ ಆನಂದ್ ಮಹೀಂದ್ರ 1977ರಲ್ಲಿ ಕ್ಯಾಂಬ್ರಿಡ್ಜ್ನ ಹಾರ್ವಡ್ ಕಾಲೇಜಿನಲ್ಲಿ ಪದವಿಯನ್ನು ಬಳಿಕ 1981ರಲ್ಲಿ ಎಂಬಿಎ ಪೂರೈಸಿ ಭಾರತಕ್ಕೆ ಹಿಂತಿರುಗಿದರು. ಆನಂದ್ ಮಹೀಂದ್ರ ತಮ್ಮ ವೃತ್ತಿ ಜೀವನದ ಮೊದಲ ಪ್ರಯತ್ನದಲ್ಲೇ ಮಹೀಂದ್ರ ಉಜಿನ್ ಸ್ಟೀಲ್ ಕಂಪನಿ (ಎಂಯುಎಸ್ಸಿಒ)ನಲ್ಲಿ ಸಹಾಯಕ ಕಾರ್ಯ ನಿರ್ವಾಹಕರಿಂದ ಹಣಕಾಸು ನಿರ್ದೇಶಕರ ವರೆಗೆ ಬೆಳೆದು ನಿಂತಿದ್ದರು.

ಕ್ರಮೇಣ ಕಠಿಣ ಪ್ರಯತ್ನದಿಂದಲೇ 1991ರಲ್ಲಿ ಮಹೀಂದ್ರ ಆ್ಯಂಡ್ ಮಹೀಂದ್ರ ಸಂಸ್ಥೆಯ ಉಪ ಮಹಾನಿರ್ದೇಶಕರಾಗಿಯೂ 1997ರಲ್ಲಿ ಮಹಾ ನಿರ್ದೇಶಕರಾಗಿಯೂ ನಿಯುಕ್ತಿಗೊಂಡರು. 2013ರಲ್ಲಿ ಹೆಚ್ಚುವರಿ ಉಪಾ ಮುಖ್ಯಸ್ಥರ ಜವಾಬ್ದಾರಿಯನ್ನು ವಹಿಸಿಕೊಂಡರು.

ಉದ್ಯಮ ರಂಗದಲ್ಲಿ ಆನಂದ್ ವ್ಯವಹಾರಿಕ ಜ್ಞಾನ ಎಷ್ಟರ ಮಟ್ಟಿಗಿತ್ತೆಂದರೆ ಅನೇಕ ಜನಪ್ರಿಯ ಬ್ರ್ಯಾಂಡ್ ಗಳು ಮಹೀಂದ್ರ ತೆಕ್ಕೆಗೆ ಸೇರಿಕೊಂಡವು. ಇವುಗಳಲ್ಲಿ 2009ರಲ್ಲಿ ಸತ್ಯಂ ಕಂಪ್ಯೂಟರ್ ಸರ್ವೀಸಸ್, 2010ರಲ್ಲಿ ರೇವಾ ಎಲೆಕ್ಟ್ರಿಕ್ ಮೋಟಾರ್ಸ್, ಸ್ಯಾಂಗ್ಯೊಂಗ್ ಮೋಟಾರು ಕಂಪನಿ ಮಹೀಂದ್ರ ಅಧೀನತೆಗೆ ಬಂದಿತ್ತು.

2007ರಲ್ಲಿ ಪಂಜಾಬ್ ಟ್ರ್ಯಾಕ್ಟರ್ ವಶಪಡಿಸುವುದರೊಂದಿಗೆ ಟ್ರಾಕ್ಟರ್ ಮಾರುಕಟ್ಟೆಯಲ್ಲಿ ತಮ್ಮ ಸ್ವಾಧೀನವನ್ನು ಇಮ್ಮಡಿಗೊಳಿಸಿದರು. ಇದರ ಬೆನ್ನಲ್ಲೇ 2008ರಲ್ಲಿ ಕೈನಾಟಿಕ್ ಮೋಟಾರ್ಸ್ ಮಹೀಂದ್ರ ತೆಕ್ಕೆಗೆ ಸೇರಿತ್ತು.

ದೇಶದ ಸರ್ವಕಾಲಿಕ ಶ್ರೇಷ್ಠ ಕ್ರೀಡಾ ಬಳಕೆಯ ವಾಹನಗಳಲ್ಲಿ ಒಂದಾಗಿರುವ ಸ್ಕಾರ್ಪಿಯೊ ಸಂಪೂರ್ಣವಾಗಿ ದೇಶದಲ್ಲೇ ಅಭಿವೃದ್ಧಿ ಮಾಡಿ ಬಿಡುಗಡೆ ಮಾಡುವುದರಲ್ಲೂ ಆನಂದ್ ಪಾತ್ರ ನಿರ್ಣಾಯಕವೆನಿಸಿತ್ತು. ಅವರೇ ಸ್ವತ: ಹೇಳುವಂತೆ "ಜಾಗತಿಕವಲ್ಲದ ಯಾವುದೇ ಉದ್ಯಮಕ್ಕೆ ನಾವು ಮುನ್ನುಗ್ಗುವುದಿಲ್ಲ. ಮನೆಯಲ್ಲಿ ಮಾತ್ರ ಉದ್ಯಮ ನಡೆಸಿದ್ದರೆ ನೀವು ಸುರಕ್ಷಿತರಲ್ಲ." ಎಂದು ತಮ್ಮ ಜಾಗತಿಕ ಯೋಜನೆಯ ಮಹತ್ವದ ಬಗ್ಗೆ ವಿವರಿಸುತ್ತದೆ.

ಉಪಯುಕ್ತ ವಾಹನ ವಿಭಾಗದಲ್ಲಿ ಮಹೀಂದ್ರ ಸಾಧಿಸಿರುವ ಯಶಸ್ಸಿನ ಬಗ್ಗೆ ಹೆಚ್ಚೇನು ಹೇಳುವ ಅಗತ್ಯವಿಲ್ಲ. ಕೇವಲ ವಾಹನೋದ್ಯಮ ಮಾತ್ರವಲ್ಲದೆ ತಂತ್ರಜ್ಞಾನ, ರಿಯಲ್ ಎಸ್ಟೇಟ್, ವಿಮಾನಯಾನ, ರಕ್ಷಣಾ ವಿಭಾಗ, ಹಣಕಾಸು ಇತ್ಯಾದಿ ಹತ್ತು ಹಲವಾರು ಕ್ಷೇತ್ರದಲ್ಲೂ ಮಹೀಂದ್ರ ಇಂದು ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ.

ಉದ್ಯಮ ರಂಗದಲ್ಲಿ ಮಹೀಂದ್ರ ನೀಡಿರುವ ಕೊಡುಗೆಗಾಗಿ 2004ರಲ್ಲಿ ರಾಜೀವ್ ಗಾಂಧಿ, 2008-09ನೇ ಸಾಲಿನಲ್ಲಿ ಇಕಾನಾಮಿಕ್ಸ್ ಟೈಮ್ಸ್ 'ಉದ್ಯಮ ನಾಯಕ' ಹೀಗೆ ಅನೇಕ ಪ್ರಶಸ್ತಿಗಳಿಗೆ ಭಾಜನವಾಗಿದ್ದರು. ಹಾರ್ವಡ್ ಬ್ಯುಸಿನೆಸ್ ಸ್ಕೂಲ್ ಆಸೋಸಿಯೇಷನ್ ಆಫ್ ಇಂಡಿಯಾ, ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ ಮತ್ತು ಭಾರತೀಯ ಸುಸ್ಥಿರ ಅಭಿವೃದ್ಧಿ ಮಂಡಳಿಯಲ್ಲೂ ಸದಸ್ಯತನದ ಗೌರವವನ್ನು ಪಡೆದಿದ್ದಾರೆ.

1996ರಲ್ಲಿ ನನ್ಹಿ ಕಲಿಗೆ (Nanhi Kali) ರೂಪುರೇಷೆ ನೀಡಿದ ಆನಂದ್, ಮಹಿಳಾ ಸಬಲೀಕರಣಕ್ಕೂ ಆದ್ಯತೆ ಕೊಟ್ಟಿದ್ದರು. ಈ ಮೂಲಕ 30ರಿಂದ 75,000ದಷ್ಟು ಹಿಂದುಳಿದ ಹೆಣ್ಮಕ್ಕಳಿಗೂ ನೆರವು ನೀಡುತ್ತಿದ್ದಾರೆ.

2007ರಲ್ಲಿ ಬೆಂಗಳೂರು ತಳಹದಿಯ ಎಂಜಿನಿಯರಿಂಗ್ ಸರ್ವಿಸಸ್ ಸಂಸ್ಥೆ ಪ್ಲೆಕ್ಸಿಯಾನ್ ಖರೀದಿಸುವುದರೊಂದಿಗೆ ವ್ಯೋಮಯಾನ ಕ್ಷೇತ್ರದಲ್ಲೂ ಮಹೀಂದ್ರ ರಂಗ ಪ್ರವೇಶ ಮಾಡಿತ್ತು. ಬಳಿಕ 2008ರಲ್ಲಿ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ ಜೊತೆ ಮಾಡಿಕೊಂಡ ಒಪ್ಪಂದದಂತೆ ನಾಲ್ಕೈದು ಸೀಟುಗಳ ಎನ್ಎಂ-5 ಲಘು ವಿಮಾನ ನಿರ್ಮಾಣಕ್ಕೆ ಸಹಿ ಹಾಕಿತ್ತು.

ಇನ್ನು ಆನಂದ್ ಅವರ ಕುಟುಂಬ ಜೀವನದ ಬಗ್ಗೆ ಮಾತನಾಡುವುದಾದರೆ ಪತ್ನಿ ಅನುರಾಧಾ ಮಹೀಂದ್ರ ಹಾಗೂ ಇಬ್ಬರು ಹೆಣ್ಮಕ್ಕಳೊಂದಿಗೆ ಸುಖ ಜೀವನ ನಡೆಸುತ್ತಿದ್ದಾರೆ. ಅಲ್ಲದೆ ವ್ಯವಹಾರದ ಹೊರತಾಗಿ ಟೆನಿಸ್, ಫೋಟೋಗ್ರಾಫಿ ಹಾಗೂ ಪುಸ್ತಕ ಓದುವುದನ್ನು ತಮ್ಮ ಹವ್ಯಾಸವಾಗಿಸಿಕೊಂಡಿದ್ದಾರೆ.

ಬೆಂಗಳೂರು ಪ್ರವೇಶಿಸಿದ ಮಹೀಂದ್ರ ಟಿಯುವಿ300; ಬೆಲೆ ಎಷ್ಟು ಗೊತ್ತಾ? ಮುಂದಕ್ಕೆ ಓದಿ


Click it and Unblock the Notifications








