ಏಷ್ಯನ್ ಗೇಮ್ಸ್ ಪದಕ ವಿಜೇತ.. ಬಡ ಹಳ್ಳಿ ಹುಡುಗನ ಸಾಧನೆ ಮೆಚ್ಚಿದ ಆನಂದ್ ಮಹೀಂದ್ರಾ: ಅದಕ್ಕೆ ಗ್ರೇಟ್ ಅನ್ನೋದು!
ಆನಂದ್ ಮಹೀಂದ್ರಾ (Anand Mahindra) ಕ್ರೀಡೆ ಸೇರಿದಂತೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ತಮ್ಮ ಕಂಪನಿ ಕಾರುಗಳನ್ನು ಉಡುಗೊರೆಯಾಗಿ ಪ್ರೋತ್ಸಾಹಿಸಿಕೊಂಡು ಬಂದಿದ್ದಾರೆ. ಇದೀಗ, ಏಷ್ಯನ್ ಗೇಮ್ಸ್ ಪದಕ ವಿಜೇತ, ಗ್ರಾಮೀಣ ಪ್ರತಿಭೆ ರಾಮ್ ಬಾಬೂ (Ram Baboo) ಕುಟುಂಬಕ್ಕೆ ಕೃಷಿ ಕೆಲಸಕ್ಕೆ ನೆರವಾಗಲು ಮಹೀಂದ್ರಾ ವಾಹನ ನೀಡಲು ಮುಂದಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ ಅವರು, 'ದಿನಗೂಲಿ ಕೂಲಿ ಕಾರ್ಮಿಕನಿಂದ ಏಷ್ಯನ್ ಗೇಮ್ಸ್ ಪದಕ ವಿಜೇತನಾಗುವವರೆಗೆ, ಅವರ ದೃಢನಿಶ್ಚಯ ಹಾಗೂ ಧೈರ್ಯವನ್ನು ಮೆಚ್ಚಬೇಕು. ನನಗೆ ಅವರ ಸಂಪರ್ಕ ಸಂಖ್ಯೆಯನ್ನು ನೀಡಿ, @ದಿಬೆಟರ್ ಇಂಡಿಯಾ. ನಾನು ಅವರ ಕುಟುಂಬಕ್ಕೆ ಅಗತ್ಯವಿರುವ ಟ್ರಾಕ್ಟರ್ ಅಥವಾ ಪಿಕಪ್ ಟ್ರಕ್ ನೀಡಿ, ಬೆಂಬಲಿಸಲು ಬಯಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ರಾಮ್ ಬಾಬೂ ಯಾರು?: ವಿವಿಧ ಮಾಧ್ಯಮಗಳ ವರದಿ ಪ್ರಕಾರ, ಏಷ್ಯನ್ ಗೇಮ್ಸ್ 35 ಕಿಲೋಮೀಟರ್ ರೇಸ್ ವಾಕ್ (race walk) ಸ್ಪರ್ಧೆಯ ಮಿಶ್ರ ತಂಡದಲ್ಲಿ ರಾಮ್ ಬಾಬೂ ಕಂಚಿನ ಪದಕ ಜಯಿಸಿದ್ದಾರೆ. ಮೂಲತಃ ಉತ್ತರಪ್ರದೇಶದವರಾದ ಅವರು, ಬಡತನದಲ್ಲಿ ಅರಳಿದ ಪ್ರತಿಭೆ. ಒಬ್ಬ ಸಾಮಾನ್ಯ ದಿನಗೂಲಿ ಕಾರ್ಮಿಕನ ಮಗನಾದ ರಾಮ್ ಬಾಬೂ, ಕೊರೊನಾ ಲಾಕ್ಡೌನ್ ಸಮಯದಲ್ಲಿ ಜೀವನ ನಿರ್ವಹಣೆಗೆ ಸಾಕಷ್ಟು ಕಷ್ಟಪಟ್ಟಿದ್ದಾರೆ.
ಅಥ್ಲೆಟಿಕ್ಸ್ ತರಬೇತಿಗೆ ಹಣ ಹೊಂದಿಸಲು ಹೋಟೆಲ್ನಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ತಮ್ಮ ತಂದೆಯೊಂದಿಗೆ ಸೇರಿಕೊಂಡು ನರೇಗಾ ಯೋಜನೆಯಡಿ ರಸ್ತೆ ನಿರ್ಮಾಣ ಕೆಲಸದಲ್ಲಿಯೂ ತೊಡಗಿಕೊಂಡಿದ್ದರು. ಈ ಬಗ್ಗೆ ಸುದ್ದಿಸಂಸ್ಥೆಯೊಂದಕ್ಕೆ ನೀಡದ ಸಂದರ್ಶನದಲ್ಲಿ ಸ್ವತಃ ರಾಮ್ ಬಾಬೂ ಮಾತನಾಡಿ, ತಮ್ಮ ಕಷ್ಟದ ದಿನಗಳ ಬಗ್ಗೆ ಮೆಲುಕು ಹಾಕಿದ್ದರು. ಜೀವನ ನಿರ್ವಹಿಸಲು ಎಲ್ಲವನ್ನು ಮಾಡಿದ್ದಾನೆ ಎಂದು ಹೇಳಿದ್ದರು.
ರಾಮ್ ಬಾಬೂ ಅವರದ್ದು 6 ಜನರ ತುಂಬು ಕುಟುಂಬ. ತಂದೆ ಮಾಸಿಕ 3,000 - 3500 ರೂಪಾಯಿ ಗಳಿಸುತ್ತಿದ್ದರು. ಇದರಲ್ಲಿಯೇ ಜೀವನ ನಿರ್ವಹಣೆ ಮಾಡಬೇಕಾಗಿತ್ತು. ಸಾಧಿಸಬೇಕೆಂಬ ಅವರ ದೃಢಸಂಕಲ್ಪ ಕ್ರೀಡೆಯತ್ತ ಆಸಕ್ತಿ ಬೆಳೆಸಿತು. ತಾಯಿಯ ಪರಿಶ್ರಮ, ಅವರನ್ನು ಜವಾಹರ್ ನವೋದಯ ವಿದ್ಯಾಲಯಕ್ಕೆ (ಜೆಎನ್ವಿ) ಸೇರುವಂತೆ ಪ್ರೇರಿಪಿಸಿತು. ಅಲ್ಲಿ, ರಾಮ್ ಬಾಬೂ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ಆರಂಭಿಸಿದರು.
ಆದರೆ, ಮ್ಯಾರಥಾನ್ ರಾಮ್ ಬಾಬೂ ಅವರಿಗೆ ಕಷ್ಟವನ್ನು ತಂದೊಡ್ಡಿತು. ಮೊಣಕಾಲು ನೋವು ಕಾಣಿಸಿಕೊಂಡಿತು. ಕೋಚ್ ಪ್ರಮೋದ್ ಯಾದವ್ ಅವರ ಸಲಹೆಯ ಮೇರೆಗೆ ರೇಸ್ ವಾಕ್ ಶುರು ಮಾಡಿದರು. ಆ ಬಳಿಕ, ಮತ್ತೊಬ್ಬರು, ವಾರಣಾಸಿಯಲ್ಲಿ ಕೋಚ್ ಚಂದ್ರಬಹನ್ ಯಾದವ್ ಅವರೊಂದಿಗೆ ಸಾಮಾಜಿಕ ಜಾಲತಾಣ ನೆರೆವಿಂದ ಸಂಪರ್ಕ ಸಾಧಿಸಿದರು.
2019ರಲ್ಲಿ ಭೋಪಾಲ್ ಸಾಯ್ (SAI) ತರಬೇತಿ ಕೇಂದ್ರವನ್ನು ಸೇರಿದರು. ಲಾಕ್ಡೌನ್ ಸಮಯದಲ್ಲಿ ಮನೆಗೆ ಹಿಂದಿರುಗಿ, ಕುಟುಂಬ ನಿರ್ವಹಣೆಗೆ ನರೇಗಾ ಯೋಜನೆಯಲ್ಲಿ ತಂದೆಯೊಂದಿಗೆ ಕೆಲಸ ಮಾಡಿದರು. ಆ ಬಳಿಕ, ನ್ಯಾಷನಲ್ ರೇಸ್ ವಾಕ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ, ಬೆಳ್ಳಿ ಪದಕ ಗೆದ್ದು, ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ನಲ್ಲಿಯೂ ಸ್ಥಾನ ಪಡೆದರು.
ರೇಸ್ ವಾಕ್ ಸ್ಪರ್ಧೆಯಲ್ಲಿ 50 ಕಿಲೋಮೀಟರ್ ವಿಭಾಗವನ್ನು ತೆಗೆದುಹಾಕಲಾಯಿತು. ರಾಮ್ ಬಾಬೂ 35 ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಪ್ರಾರಂಭಿಸಿದರು. ನಂತರ, ನ್ಯಾಷನಲ್ ಓಪನ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಪದಕವನ್ನು ಜಯಿಸಿದರು. ಕೆಲವೇ ದಿನಗಳಲ್ಲಿ ಸೇನೆಗೂ ಸೇರ್ಪಡೆಯಾದರು. ಒಟ್ಟಾರೆಯಾಗಿ ರಾಮ್ ಬಾಬೂ ಬಡತನದಲ್ಲಿ ಅರಳಿದ ಪ್ರತಿಭೆ ಎಂದು ಹೇಳಬಹುದು.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications