ತಮಿಳಿನಲ್ಲಿ ಎ.ಆರ್.ರೆಹಮಾನ್ ಅವರ ಆಲ್ಬಮ್ ಅನ್ನು ಶ್ಲಾಘಿಸಿದ ಆನಂದ್ ಮಹೀಂದ್ರಾ!
ಮಹೀಂದ್ರಾ ಆ್ಯಂಡ್ ಮಹಿಂದ್ರಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಆನಂದ್ ಮಹೀಂದ್ರಾ ಸದಾ ಸಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ವ್ಯಕ್ತಿ. ಅವರಿಗೆ ಯಾವುದೇ ವಿಷಯ ಆಸಕ್ತಿದಾಯಕವಾಗಿ ಕಂಡರೆ ಅದನ್ನು ಸೋಷಿಯಲ್ ಮೀಡಿಯದಲ್ಲಿ ಪೋಸ್ಟ್ ಮಾಡುವುದು ಇಲ್ಲವೇ ಅದಕ್ಕೆ ಪ್ರತಿಕ್ರಿಯೆ ನೀಡುವ ಮೂಲಕ ವೈರಲ್ ಆಗಲು ಕಾರಣರಾಗುತ್ತಿರುತ್ತಾರೆ.

ಇದೀಗ ತಮಿಳಿನಲ್ಲಿ 'ಟ್ವೀಟ್' ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಹೌದು. ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ‘ಮೂಪಿಳ್ಳ ತಮಿಳ್ ತಾಯೇ' ಮ್ಯೂಸಿಕ್ ಆಲ್ಬಂ ಬಿಡುಗಡೆಯಾಗಿದೆ. ಈ ತಮಿಳು ಗೀತೆಗೆ ಕವಿ ತಾಮರೈ ಸಾಹಿತ್ಯವನ್ನು ಬರೆದಿದ್ದಾರೆ. ಮೂಪಿಳ್ಳ ತಮಿಳ್ ತಾಯೇ ಹಾಡನ್ನು ಸೈಂಧವಿ ಪ್ರಕಾಶ್, ಪೂವಯ್ಯರ್ ಸೇರಿದಂತೆ ಹಲವರು ಹಾಡಿದ್ದಾರೆ.

ಸದ್ಯ ಈ ಹಾಡು 'ಟ್ರೆಂಡ್' ಆಗುತ್ತಿದ್ದು, ಮತ್ತೆ ಮತ್ತೆ ಕೇಳುವಷ್ಟು ಪ್ರಭಾವ ಭೀರುತ್ತಿದೆ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಅಲ್ಲದೇ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕೂಡ ಇತ್ತೀಚೆಗೆ ದುಬೈಗೆ ಹೋದಾಗ ಎ.ಆರ್. ರೆಹಮಾನ್ ಅವರ ಸ್ಟುಡಿಯೋಗೆ ಭೇಟಿ ನೀಡಿದ್ದರು. ಆ ವೇಳೆ ಎಂ.ಕೆ. ಸ್ಟಾಲಿನ್ ಅವರು ಈ ಹಾಡನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದೀಗ ಮೂಪಿಳ್ಳ ತಮಿಳ್ ತಾಯೇ ಹಾಡನ್ನು ಭಾರತದ ಪ್ರಸಿದ್ಧ ವ್ಯಕ್ತಿ ಆನಂದ್ ಮಹೀಂದ್ರಾ ಅವರು ಹೊಗಳಿದ್ದಾರೆ. ಮೂಪಿಳ್ಳ ತಮಿಳ್ ತಾಯೇ ಆಲ್ಬಂ ವೀಕ್ಷಿಸಿದ ಆನಂದ್ ಮಹೀಂದ್ರಾ ಅವರು ತಮ್ಮ ಅನಿಸಿಕೆಗಳನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.

"ನಾನು ಇದನ್ನು ಮೊದಲೇ ನೋಡಿದ್ದೇನೆ ಏಕೆಂದರೆ ಅದರಲ್ಲಿ ಕಾಣಿಸಿಕೊಂಡಿರುವುದು ಜಾವಾ ಬೈಕ್ ಎಂದು ಹೇಳಲಾಗಿದೆ. ಈಗ ಅದನ್ನು ನೋಡಲು ನಾನು ಕಾಯಲು ಸಾಧ್ಯವಿಲ್ಲ. ಅದ್ಭುತ ಸಂಗೀತ ಮತ್ತು ವೀಡಿಯೊ" ಎಂದು ಟ್ವೀಟ್ ಮಾಡಿದ್ದಾರೆ.

ಆನಂದ್ ಮಹೀಂದ್ರಾ ತಮ್ಮ ಪೋಸ್ಟ್ನಲ್ಲಿ ಮೂಪಿಳ್ಳ ತಮಿಳ್ ತಾಯೇ ಹಾಡನ್ನು ವೀಕ್ಷಿಸಲು ಲಿಂಕ್ ಅನ್ನು ಕೂಡ ಆಡ್ ಮಾಡಿದ್ದಾರೆ. ಈ ಮತ್ತೊಂದು ವಿಶೇಷ ಎಂದರೆ ಆನಂದ್ ಮಹೀಂದ್ರಾ ಅವರ ಬಹುತೇಕ ಪೋಸ್ಟ್ಗಳು ಇಂಗ್ಲಿಷ್ನಲ್ಲಿ ಇರುತ್ತವೆ. ಆದರೆ ಈ ಬಾರಿ ತಮಿಳಿನಲ್ಲಿ ಪೋಸ್ಟ್ ಮಾಡಿರುವುದು ಹೈಲೈಟ್ ಆಗಿದ್ದು ಎಲ್ಲರ ಗಮನ ಸೆಳೆದಿದೆ.

ಆನಂದ್ ಮಹೀಂದ್ರಾ ತಮಿಳಿನಲ್ಲಿ ಪೋಸ್ಟ್ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ತಮಿಳುನಾಡಿನ ದೊಡ್ಡ ದೊಡ್ಡ ವ್ಯಕ್ತಿಗಳು ಅಭಿಪ್ರಾಯಪಟ್ಟಿದ್ದಾರೆ. ಆನಂದ್ ಮಹೀಂದ್ರಾ ಹೇಳಿದಂತೆ ಮೂಪಿಳ್ಳ ತಮಿಳ್ ತಾಯೇ ಹಾಡಿನಲ್ಲಿ ಜಾವಾ ಬೈಕ್ ಅನ್ನು ತೋರಿಸಲಾಗಿದೆ. ಜಾವಾ ಬೈಕುಗಳನ್ನು ಪ್ರಸ್ತುತ ಭಾರತದಲ್ಲಿ ಕ್ಲಾಸಿಕ್ ಲೆಜೆಂಡ್ಸ್ ಮಾರಾಟ ಮಾಡುತ್ತಿದೆ.

ಈ ಕ್ಲಾಸಿಕ್ ಲೆಜೆಂಡ್ಸ್ ಮಹೀಂದ್ರಾ ಗ್ರೂಪ್ನ ಒಂದು ಭಾಗವಾಗಿದೆ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ. ಪ್ರಸ್ತುತ, ಜಾವಾ, ಜಾವಾ 42 ಮತ್ತು ಜಾವಾ ಪೆರಾಕ್ ಸೇರಿದಂತೆ ಹಲವು ಮಾದರಿಗಳನ್ನು ಜಾವಾ ಬ್ರಾಂಡ್ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಪ್ರಸ್ತುತ ಎ.ಆರ್. ರೆಹಮಾನ್ ಅವರನ್ನು ಹೊಗಳಿರುವ ಆನಂದ್ ಮಹೀಂದ್ರಾ ಅವರು, ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಮಹೀಂದ್ರಾ ಕಾರನ್ನು ಬಳಸಿದ್ದಕ್ಕಾಗಿ ಧನ್ಯವಾದ ಹೇಳಿದ್ದರು. ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹೀಂದ್ರಾದ ಥಾರ್ ಎಸ್ಯುವಿಯನ್ನು ಬಳಸಿದರು.

ಆನಂದ್ ಮಹೀಂದ್ರಾ ಅವರು ಭಾರತದಲ್ಲಿ ತಯಾರಿಸಿದ ತಮ್ಮ ಕಂಪನಿಯ ವಾಹನವನ್ನು ಬಳಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ತಕ್ಷಣವೇ ಧನ್ಯವಾದ ತಿಳಿಸಿದ್ದಾರೆ. ಅಂದಹಾಗೆ, ಆನಂದ್ ಮಹೀಂದ್ರಾ ಯಾವಾಗಲೂ ಟ್ವಿಟರ್ನಲ್ಲಿ ತುಂಬಾ 'ಆಕ್ಟಿವ್' ಆಗಿರುತ್ತಾರೆ.

ಮೊದಲೇ ಹೇಳಿದಂತೆ ತಮ್ಮನ್ನು ಆಕರ್ಷಿಸುವ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವುದು ಅವರ ಗುಣವಾಗಿದೆ. ಆನಂದ್ ಮಹೀಂದ್ರಾ ಅವರ ಮೂಲಕ ಹಲವರ ಪ್ರತಿಭೆ ಹೊರಜಗತ್ತಿಗೆ ವ್ಯಾಪಕವಾಗಿ ಬಹಿರಂಗಗೊಂಡಿರುವುದು ಕೂಡ ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಮಹೀಂದ್ರಾ ಶೀಘ್ರದಲ್ಲೇ ಮುಂದಿನ ಪೀಳಿಗೆಯ ಸ್ಕಾರ್ಪಿಯೊ ಎಸ್ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ.


Click it and Unblock the Notifications