ಹೆದ್ದಾರಿ ಟನೆಲ್ ಕಾಮಗಾರಿ 48 ಗಂಟೆಯೊಳಗೆ ಮುಕ್ತಾಯ: ಆನಂದ್ ಮಹೀಂದ್ರಾ ಪೋಸ್ಟ್ ಭಾರೀ ವೈರಲ್
ಪ್ರಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಇರುತ್ತಾರೆ. ಅವರಿಗೆ ಭಿನ್ನವೆನಿಸುವ ವಿಚಾರಗಳ ಕುರಿತು ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಾಗೂ ಚಿತ್ರಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ, ಅಂತಹದ್ದೇ ಪೋಸ್ಟ್ ವೊಂದು ಭಾರೀ ವೈರಲ್ ಆಗಿದ್ದು, ನೆಟ್ಟಿಗರಿಂದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ
ಅಂದಹಾಗೆ ಆನಂದ್ ಮಹೀಂದ್ರಾ ಟ್ವೀಟ್ ಮಾಡಿರುವ ಈ ಪೋಸ್ಟ್ ಭಾರತದ್ದಲ್ಲ. ಅದು ದೂರದ ಯುರೋಪ್ ಗೆ ಸೇರಿದ್ದು, ನೆದರ್ಲ್ಯಾಂಡ್ಸ್ನಲ್ಲಿ ಕೇವಲ ಒಂದೇ ವಾರಾಂತ್ಯದಲ್ಲಿ ಅಂದರೇ 48 ಗಂಟೆಯೊಳಗೆ ಹೆದ್ದಾರಿಯಲ್ಲಿ ಸುರಂಗ ಕಾಮಗಾರಿಯನ್ನು ಮುಕ್ತಾಯಗೊಳಿಸಿ, ಆ ರಸ್ತೆಯನ್ನು ಸಂಚಾರಕ್ಕೆ ಮುಕ್ತ ಮಾಡುವ ವಿಡಿಯೋ ಇದಾಗಿದೆ. ಪೋಸ್ಟ್ ಮಾಡಿ, ಕೆಲವೇ ಗಂಟೆಗಳು ಕಳೆದಿದ್ದು, 1.7 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಜೊತೆಗೆ 30 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

ಆನಂದ್ ಮಹೀಂದ್ರಾ ವಿಡಿಯೋ ಟ್ವೀಟ್ ಮಾಡಿ, ಈ ರೀತಿಯಾಗಿ ಹೇಳಿದ್ದಾರೆ.. 'ಡಚ್ಚರು ಒಂದೇ ವಾರಾಂತ್ಯದಲ್ಲಿ ಹೆದ್ದಾರಿಯ ಕೆಳಗೆ ಸುರಂಗವನ್ನು ನಿರ್ಮಿಸಿದ್ದಾರೆ. ಇದು ಕೆಲಸಗಾರರ ಶ್ರಮದ ಉಳಿತಾಯದ ಬಗ್ಗೆಯಲ್ಲ. ಆದರೆ, ಸಮಯ ಉಳಿತಾಯದ ಕುರಿತು.. ಉದಯೋನ್ಮುಖ ಆರ್ಥಿಕತೆಗೆ ಈ ಅಂಶ ನಿರ್ಣಾಯಕವಾಗಿದೆ. ತ್ವರಿತ ಮೂಲಸೌಕರ್ಯ ಸೃಷ್ಟಿ ಎಂದರೆ ವೇಗವಾದ ಬೆಳವಣಿಗೆ ಹಾಗೂ ಎಲ್ಲರಿಗೂ ಅನುಕೂಲವಾಗುವುದು' ಎಂದಿದ್ದಾರೆ. ಇದು ಭಾರೀ ವೈರಲ್ ಆಗುತ್ತದೆ.
ಸದ್ಯ, ಈ ವಿಡಿಯೋ ಪೋಸ್ಟ್ ಗೆ ನೆಟ್ಟಿಗರು ಕೂಡ ತರಹೇವಾರಿ ಪ್ರತಿಕ್ರಿಯೆ ನೀಡಿದ್ದಾರೆ. 'ಭಾರತದಲ್ಲಿ ಅಪರೂಪವಾಗಿ ಸಾಧ್ಯ' ಎಂದು ಟ್ವಿಟರ್ ಬಳಕೆದಾರರೊಬ್ಬರು ಹೇಳಿದ್ದಾರೆ. ಮತ್ತೊಬ್ಬರು, 'ನಾವು ಇದನ್ನು ವರ್ಷಗಳಲ್ಲಿ ಮಾಡುತ್ತೇವೆ. ಇದು ಮುಕ್ತಾಯವಾಗುವುದರಲ್ಲಿ ಈ ಕಾಮಗಾರಿಗೆ ಸಹಕರಿಸುವ ಪ್ರತಿಯೊಬ್ಬರು ಶ್ರೀಮಂತರಾಗುತ್ತಾರೆ' ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬರು, 'ನಾವು ನಿರ್ಮಾಣ ಕ್ಷೇತ್ರದಲ್ಲಿ ಮತ್ತಷ್ಟು ವೇಗವಾಗಬೇಕು' ಎಂದು ಹೇಳಿದ್ದಾರೆ. ಜೊತೆಗೆ ಬರೋಬ್ಬರಿ 3,481 ಮಂದಿ ರೀ-ಟ್ವೀಟ್ ಮಾಡಿದ್ದಾರೆ.
ರೋಸ್ಮಾಲೆನ್ ಮೂಲದ ನಿರ್ಮಾಣ ಸಂಸ್ಥೆ ಹೈಜ್ಮ್ಯಾನ್ಸ್, ಈ ಹೆದ್ದಾರಿಯಲ್ಲಿ ಸುರಂಗದ ಕಾಮಗಾರಿಯ ಜವಾಬ್ದಾರಿ ಹೊತ್ತು ಕೊಂಡಿತ್ತು. ಧಾರಾಕಾರ ಮಳೆ ಹಾಗೂ ಸಾಕಷ್ಟು ಕ್ಲಿಷ್ಟ ಪರಿಸ್ಥಿತಿಯಲ್ಲಿಯು ಟ್ರಕ್ ಸೇರಿದಂತೆ ಅತ್ಯಾಧುನಿಕ ಉಪಕರಣಗಳ ನೆರವಿನಿಂದ 230 ಅಡಿ ಸುರಂಗವನ್ನು ಜೋಡಿಸುವ ಕಾರ್ಯವನ್ನು ಕೇವಲ ವಾರಾಂತ್ಯದ 48 ಗಂಟೆಯಲ್ಲಿ ಮಾಡಿ ಮುಗಿಸಿ, ಸೋಮವಾರ ಎಂದಿನಂತೆ ಸಾರ್ವಜನಿಕರಿಗೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಾಯಗೊಳಿಸಿತು.
ಕಳೆದ ತಿಂಗಳು, ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ವಂದೇ ಭಾರತ್ ರೈಲು, ಹೊಸದಾಗಿ ನಿರ್ಮಿಸಿರುವ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇ ಸೇತುವೆ ಕೆಳಗೆ ಹಾದುಹೋಗುವ ಡ್ರೋನ್ ದೃಶ್ಯಗಳ ವಿಡಿಯೋವನ್ನು ಹಂಚಿಕೊಂಡಿದ್ದರು. ಇದಕ್ಕೆ ವಿಶ್ವದರ್ಜೆಯ ಗುಣಮಟ್ಟದ ಮೂಲಸೌಕರ್ಯದ ಅಭಿವೃದ್ಧಿಯು ಭಾರತವನ್ನು ಹೇಗೆ ಪರಿವರ್ತಿಸುತ್ತಿದೆ ಎಂಬುದಕ್ಕೆ ಇದು ಉದಾಹರಣೆ ಎಂದು ಬರೆದುಕೊಂಡಿದ್ದಾರೆ. ಇದು ಭಾರೀ ವೈರಲ್ ಆಗಿತ್ತು.
ಈ ದಶಪಥದ ಹೆದ್ದಾರಿ ಬಗ್ಗೆ ಹೇಳುವುದಾದರೆ, ಒಟ್ಟು 118 ಕಿಲೋ ಮೀಟರ್ ಉದ್ದದ ರಸ್ತೆ ಇದಾಗಿದ್ದು, ಎರಡು ಕಡೆ ತಲಾ 3 ಪಥ ಒಳಗೊಂಡಿರುವ 6 ಪಥದ ಎಕ್ಸ್ಪ್ರೆಸ್ ವೇ ಇರಲಿದ್ದು, ಉಳಿದಂತೆ ಎರಡು ಬದಿಯಲ್ಲಿ ತಲಾ 2 ಪಥದ ಸರ್ವಿಸ್ ರಸ್ತೆ ಇರಲಿದೆ. ಈ ಹೆದ್ದಾರಿಯಿಂದ ಆಗುವ ದೊಡ್ಡ ಪ್ರಯೋಜನವೆಂದರೆ, ಈ ಹಿಂದೆ, ಬೆಂಗಳೂರಿನಿಂದ ಮೈಸೂರು ತಲುಪಲು 150 ನಿಮಿಷ ಬೇಕಿತ್ತು. ಅದು 90 ನಿಮಿಷಕ್ಕೆ ಇಳಿಯಲಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications