ಮಿಜೋರಾಂ ಜನರ ಟ್ರಾಫಿಕ್ ನಿಯಮ ಪಾಲನೆಗೆ ಮೆಚ್ಚಿ ಅಭಿನಂದನೆ ತಿಳಿಸಿದ ಆನಂದ್ ಮಹಿಂದ್ರಾ !
ನಿತ್ಯ ಹಲವು ಆಶ್ಚರ್ಯ ಸಂಗತಿಗಳನ್ನು ತಿಳಿಸುವ ಸಾಮಾಜಿಕ ಜಾಲತಾಣದಲ್ಲಿ ಇದೀಗ ಫೋಟೋವೊಂದು ಭಾರೀ ವೈರಲ್ ಆಗುತ್ತಿದೆ. ಮಿಜೋರಾಂನ ರಸ್ತೆಯೊಂದರಲ್ಲಿ ಡಿವೈಡರ್ ಇಲ್ಲದಿದ್ದರೂ ಸಾಲುಗಟ್ಟಿ ನಿಂತು ಅತ್ತ ಕಡೆಯಿಂದ ಯಾವುದೇ ವಾಹನ ಬರದಿದ್ದರೂ ಮುನ್ನುಗ್ಗದೆ ಟ್ರಾಫಿಕ್ ನಿಯಮ ಪಾಲಿಸಿದ ಫೋಟೋ ಸದ್ಯ ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿದೆ.

ಇತ್ತೀಚೆಗೆ ಅಪ್ಲೋಡ್ ಆಗಿರುವ ಈ ಫೋಟೋ ಈಗ ಇಡೀ ಭಾರತೀಯರ ಬಾಯಿ ಮಾತಾಗಿದೆ. ಅಲ್ಲದೆ ಕಾಡ್ಗಿಚ್ಚಿನಷ್ಟೇ ವೇಗವಾಗಿ ವೈರಲ್ ಆಗುತ್ತಿದೆ. ನಿತ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪ್ರಸಿದ್ಧ ಉದ್ಯಮಿ ಆನಂದ್ ಮಹಿಂದ್ರಾ ಅವರನ್ನು ಕೂಡ ಇದು ಆಕರ್ಷಿಸಿದೆ.

ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಚಿತ್ರವನ್ನು ನೋಡಿದ ಆನಂದ್ ಮಹಿಂದ್ರಾ ಅವರು ಅಭಿನಂದನೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಭಾರತದಲ್ಲಿ ಟ್ರಾಫಿಕ್ ನಿಯಮಗಳು ಕಠಿಣವಾಗಿದ್ದರೂ, ಪಾಲನೆ ಮಾಡುವವರು ತುಂಬಾ ವಿರಳ ಎಂದೇ ಹೇಳಬಹುದು. ಆದರೆ ಮಿಜೋರಾಂನ ಜನರು ಸಂಚಾರ ನಿಯಮವನ್ನು ಸರಿಯಾಗಿ ಪಾಲಿಸಿ ಎಲ್ಲರನ್ನು ಆಶ್ಚರ್ಯಗೊಳಿಸಿದ್ದಾರೆ.

ಒಂದು ಕಡೆ ಖಾಲಿ ರಸ್ತೆ ಮತ್ತೊಂದು ಕಡೆ ವಾಹನಗಳು ತುಂಬಿಕೊಂಡಿರುವ ರಸ್ತೆ. ಸಾಮಾನ್ಯವಾಗಿ ಇಂತಹ ಸಂದರ್ಭವಿದ್ದಾಗ ಹಲವರು ಅಡ್ಡಾದಿಡ್ಡಿಯಾಗಿ ಮುನ್ನುಗ್ಗಿ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರುತ್ತಾರೆ. ಆದರೆ ಈ ಫೋಟೋವನ್ನು ಗಮನಿಸಿದರೆ, ವಾಹನ ಚಾಲಕರು ತಮ್ಮದೇ ಹಾದಿಯಲ್ಲಿ ಸಿಗ್ನಲ್ಗಾಗಿ ಕಾಯುತ್ತಿರುವುದನ್ನು ಚಿತ್ರವು ತೋರಿಸುತ್ತದೆ.

ಸಿಗ್ನಲ್ನಲ್ಲಿ ನಿಂತಿರುವ ಪ್ರತಿಯೊಬ್ಬರೂ ಸೌಜನ್ಯದಿಂದ ಸಾಗುತ್ತಿದ್ದಾರೆ, ರಸ್ತೆಯ ಮಧ್ಯದಲ್ಲಿ ಹಾಕಿರುವ ಬಿಳಿಯ ಗೆರೆಯನ್ನು ಸಹ ದಾಟುತ್ತಿಲ್ಲ ಎಂಬುದು ನೋಡುಗರನ್ನು ಆಶ್ಚರ್ಯಕ್ಕೆ ಗುರಿ ಮಾಡುತ್ತದೆ. ಇದೇ ಕಾರಣಕ್ಕೆ ಹಲವರು ಈ ಫೋಟೋವನ್ನು ಮೆಚ್ಚಲು ಕಾರಣವಾಗಿದೆ. ಅಲ್ಲದೇ ಷೇರ್ ಮಾಡಿ ವೈರಲ್ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಇಂತಹ ಘಟನೆಗಳು ಭಾರತದಲ್ಲಿ ನಡೆಯುವುದು ವಿರಳವಾದ್ದರಿಂದ ಈ ಚಿತ್ರ ಅಂತರ್ಜಾಲದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಜೊತೆಗೆ ಈ ಫೋಟೋವನ್ನು ಷೇರ್ ಮಾಡಿರುವ ವ್ಯಕ್ತಿ, ನಾನು ಇಂತಹ ಶಿಸ್ತನ್ನು ಮಿಜೋರಾಂನಲ್ಲಷ್ಟೇ ನೋಡಲು ಸಾಧ್ಯ. ಇಲ್ಲಿ ಯವುದೇ ಅಡ್ಡದಿಡ್ಡಿಯಾಗಿ ಸಂಚರಿಸುವ ಕಾರುಗಳಲ್ಲ, ಅಹಂನೊಂದಿಗೆ ಮುನ್ನುಗ್ಗುವ ಮನಃಸ್ಥಿತಿಯಂತೂ ಯಾರಿಗೂ ಇಲ್ಲ ಎಂದು ಬರೆದುಕೊಂಡಿದ್ದಾನೆ.

ಭಾರತದ ಇತರ ಕೆಲವು ರಾಜ್ಯಗಳಲ್ಲಿ ನೋಡುವುದಾದರೆ, ನಾವು ದೂರ ಹೋಗುವ ಆತುರದಲ್ಲಿದ್ದೇವೆ ಅಥವ ಮುಖ್ಯ ಕೆಲಸವಿದೆ ನಿಧಾನವಾಗಿ ಹೋಗಲು ಸಾಧ್ಯವಿಲ್ಲ ಎಂಬ ಕಾರಣ ಹೇಳಿ. ವಿರುದ್ಧ ದಿಕ್ಕಿನಲ್ಲಿ ಬರುವವರಿಗೆ ಹೋಗಲು ಜಾಗ ಬಿಡದೆ ಮುನ್ನುಗ್ಗುತ್ತಾರೆ. ಸಿಗ್ನಲ್ ಬಳಿ ನಿಂತಾಗಲೂ ವಾಹನ ಚಾಲಕರು ವಿರುದ್ಧ ದಿಕ್ಕಿನಲ್ಲಿ ನಿಂತು ಬರುವ ವಾಹನಗಳಿಗೆ ತಡೆಯೊಡ್ಡುತ್ತಾರೆ.

ಇಂತಹ ಘಟನೆಗಳು ಸಿಗ್ನಲ್ ಮಾತ್ರವಲ್ಲ, ರೈಲ್ವೆ ಗೇಟ್ಗಳ ಬಳಿ ಹೆಚ್ಚಾಗಿ ಕಂಡುಬರುತ್ತವೆ. ಆದರೆ ಮಿಜೋರಾಂ ನಿವಾಸಿಗಳು ಭಾರತದಲ್ಲಿ ಅತ್ಯಂತ ಸಂಚಾರ ಸ್ನೇಹಿ ಜನರಾಗಿದ್ದಾರೆ ಎಂಬ ಹಣೆ ಪಟ್ಟಿಯನ್ನು ಇದೀಗ ಪಡೆದುಕೊಂಡಿದ್ದಾರೆ. ಅಲ್ಲದೆ ಇಲ್ಲಿನ ಜನ ಶಿಸ್ತು, ಸಂಯಮದಿಂದ ಟ್ರಾಫಿಕ್ ನಿಯಮಗಳನ್ನು ಪಾಲಿಸುವ ಮೂಲಕ ಇತರ ರಾಜ್ಯಗಳಿಗೆ ಮಾದರಿಯಾಗಿದ್ದಾರೆ.

ಇದೇ ಕಾರಣಕ್ಕೆ ವೈರಲ್ ಆಗುತ್ತಿರುವ ಫೋಟೋ ಆನಂದ್ ಮಹಿಂದ್ರಾ ಅವರ ಮನಗೆದ್ದಿದ್ದು, ಈ ಘಟನೆಯ ಬಗ್ಗೆ ಪೋಸ್ಟ್ ಮಾಡಲು ಅವರನ್ನು ಪ್ರೇರೇಪಿಸಿದೆ. "ಎಂತಹ ಅದ್ಭುತ ಚಿತ್ರ. ರಸ್ತೆಯ ಬಿಳಿ ಗೆರೆಯನ್ನು ಒಂದೇ ಒಂದು ವಾಹನವೂ ದಾಟಲಿಲ್ಲ. ಇದು ಪ್ರೇರಣೆ ಮತ್ತು ಬಲವಾದ ಮಾಹಿತಿಯನ್ನು ಒದಗಿಸುತ್ತದೆ.

ನಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸುವುದು ನಮ್ಮ ಕರ್ತವ್ಯವಾಗಿದೆ. ನಿಯಮಗಳ ಪ್ರಕಾರ ರಸ್ತೆಯಲ್ಲಿ ಸಂಚರಿಸಿದ ಮಿಜೋರಾಂ ಜನರಿಗೆ ದೊಡ್ಡ ಅಭಿನಂದನೆಗಳು" ಎಂದು ಅವರು ಪೋಸ್ಟ್ ಮಾಡಿದ್ದಾರೆ. ಆನಂದ್ ಮಹಿಂದ್ರಾ ಅವರಂತೆ, ಅನೇಕ ಜನರು ಈ ಕಾರ್ಯಕ್ಕೆ ಮಿಜೋರಾಂ ಜನರನ್ನು ಅಭಿನಂದಿಸುತ್ತಿದ್ದಾರೆ.

ರಸ್ತೆ ನಿಯಮವನ್ನು ಪಾಲಿಸುವುದು ಬಹಳ ಮುಖ್ಯ:
ಪ್ರತಿಯೊಬ್ಬ ವಾಹನ ಚಾಲಕ ರಸ್ತೆ ನಿಯಮವನ್ನು ಪಾಲಿಸುವುದು ಬಹಳ ಮುಖ್ಯ. ಇದು ಟ್ರಾಫಿಕ್ ಜಾಮ್ ತಪ್ಪಿಸಲು ಮಾತ್ರವಲ್ಲದೆ ಅಪಘಾತಗಳಂತಹ ಅನಗತ್ಯ ಕಹಿ ಅನುಭವಗಳನ್ನು ತಪ್ಪಿಸಲು ಸಹಕಾರಿಸುತ್ತದೆ. ಆತುರಪಡಲು ನಾವು ಮಾಡಬಹುದಾದ ಪ್ರತಿಯೊಂದು ಉಲ್ಲಂಘನೆಯು ಇತರರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರಬಹುದು.

ವಿಶೇಷವಾಗಿ ಇದು ಕೆಲವೊಮ್ಮೆ ಬಹಳ ದೀರ್ಘ ಟ್ರಾಫಿಕ್ ಜಾಮ್ಗಳಿಗೆ ಕಾರಣವಾಗುತ್ತದೆ. ಆದ್ದರಿಂದಲೇ ಉತ್ತಮ ಸಂಚಾರ ಮತ್ತು ಅಪಘಾತರಹಿತ ಪ್ರಯಾಣವನ್ನು ಮಾಡಬೇಕಾದರೆ ಸಂಚಾರ ನಿಯಮಗಳನ್ನು ಸರಿಯಾಗಿ ಅನುಸರಿಸಬೇಕು. ಒಬ್ಬರಿಂದ ಈ ಕಾರ್ಯ ಮೊದಲಾದರೆ ಪಕ್ಕದ ವ್ಯಕ್ತಿಯು ಇದನ್ನೆ ಮುಂದುವರೆಸುತ್ತಾನೆ.

ವಾಹನ ಚಾಲಕರು ರಸ್ತೆಯ ನಿಯಮಗಳನ್ನು ಸರಿಯಾಗಿ ಪಾಲಿಸುವಂತೆ ಪೊಲೀಸರು ಇನ್ನೂ ಸ್ವಲ್ಪ ಕಾಳಜಿ ವಹಿಸಲು ಪ್ರಾರಂಭಿಸಿದ್ದಾರೆ. ದಂಡ ಸೇರಿದಂತೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಸಿಸಿಟಿವಿ ಮೂಲಕ ಅತ್ಯಂತ ತೀವ್ರವಾದ ಕಣ್ಗಾವಲಿನಲ್ಲಿ ಸಂಚಾರಿ ವ್ಯವಸ್ಥೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಾಗುತ್ತಿದೆ.


Click it and Unblock the Notifications