ಲಾಕ್ ಡೌನ್ ವೇಳೆ ಜಾಲಿ ಡ್ರೈವ್ಗೆ ಹೋದ ಯುವಕನಿಗೆ ಬಿತ್ತು ಗೂಸಾ..!
24 ಗಂಟೆಗಳ ಕಾಲವೂ ಬಿಜಿಯಾಗಿರುವ ಪ್ರಪಂಚವು ಈಗ ಯಾವುದೇ ಚಟುವಟಿಕೆಗಳಿಲ್ಲದೇ ಸಂಪೂರ್ಣವಾಗಿ ಸ್ಥಬ್ತವಾಗಿದೆ. ಇದಕ್ಕೆಲ್ಲಾ ಕಾರಣ ಕರೋನಾ ಎಂಬ ಕಣ್ಣಿಗೆ ಕಾಣದ ವೈರಸ್. ಜಗತ್ತಿನಾದ್ಯಂತ ಹರಡಿರುವ ಈ ವೈರಸ್ ಗೆ ಇದುವರೆಗೂ ವಿಶ್ವಾದ್ಯಂತ 47,192 ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.

ಪ್ರತಿದಿನ ಹಲವಾರು ಜನರು ಈ ವೈರಸ್ ಸೋಂಕಿಗೆ ಒಳಗಾಗುತ್ತಿದ್ದಾರೆ. ಭಾರತದಲ್ಲಿ ಕರೋನಾ ವೈರಸ್ ಸೋಂಕಿಗೆ ಒಳಗಾದವರ ಸಂಖ್ಯೆ 2,000ದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 437 ಜನರಲ್ಲಿ ಕರೋನಾ ವೈರಸ್ ಸೋಂಕು ಪತ್ತೆಯಾಗಿದೆ.

ಈ ದಿಢೀರ್ ಏರಿಕೆಯಿಂದಾಗಿ ಭಾರತೀಯರು ಭಯಗೊಂಡಿರುವುದು ಸುಳ್ಳಲ್ಲ. ಭಾರತದದ್ಯಾಂತ ಈಗಾಗಲೇ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಜನರನ್ನು ವಿನಾ ಕಾರಣ ಹೊರ ಬರದಂತೆ ನಿರ್ಬಂಧ ವಿಧಿಸಲಾಗಿದೆ.

ಇಂತಹ ಪರಿಸ್ಥಿತಿಯಲ್ಲೂ ಕೇರಳದ ಯುವಕನೊಬ್ಬ ತನ್ನ ಊರು ಆಲಂಬಾಡಿ ಯಿಂದ ತನ್ನ ಹೊಸ ಸ್ವಿಫ್ಟ್ ಕಾರಿನಲ್ಲಿ ಜಾಲಿ ರೈಡ್ಗೆ ಹೋಗಿದ್ದಾನೆ. ಹೀಗೆ ಜಾಲಿ ರೈಡಿಗೆ ಹೋದಾಗ ಕರೋನಾದಿಂದ ಹೆಚ್ಚು ಪೀಡಿತವಾಗಿರುವ ಮಾಲೂರಿಗೆ ತೆರಳಿದ್ದಾನೆ ಎಂದು ವರದಿಯಾಗಿದೆ.

ಕಣ್ಣೂರು ಜಿಲ್ಲೆಯ ಮಾಲೂರು ರಸ್ತೆಯಲ್ಲಿ ಈ ಯುವಕನನ್ನು ತಡೆದ ಅಲ್ಲಿನ ಜನರು ಆತನನ್ನು ಥಳಿಸಿದ್ದಾರೆ. ಜೊತೆಗೆ ಅವನು ಜಾಲಿ ರೈಡ್ ಹೋಗಲು ಬಳಸಿದ್ದ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಧ್ವಂಸಗೊಳಿಸಿದ್ದಾರೆ.

ಜನರಿಂದ ಗೂಸಾ ತಿಂದ ಯುವಕನನ್ನು ಪೊಲೀಸರು ಕಣ್ಣೂರು ರಸ್ತೆಯಲ್ಲಿ ತಮ್ಮ ವಶಕ್ಕೆ ಪಡೆದಿದ್ದಾರೆ. ಪೊಲೀಸರ ತನಿಖೆಯ ನಂತರ ಸಾರ್ವಜನಿಕರಿಂದ ಒದೆ ತಿಂದ ಯುವಕನನ್ನು ಕಾಸರಗೋಡು ನಿವಾಸಿ ರಿಯಾಜ್ ಎಂದು ಗುರುತಿಸಲಾಗಿದೆ.

ಈತನ ವಿರುದ್ಧ ಸೆಕ್ಷನ್ 144 ಉಲ್ಲಂಘನೆ, ಅತಿ ವೇಗವಾಗಿ ಕಾರು ಚಾಲನೆ ಮಾಡಿರುವುದು ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದ್ದು, ಇದು ಕೊನೆಗೊಳ್ಳಲು ಇನ್ನೂ 13 ದಿನಗಳು ಬಾಕಿಯಿವೆ.

ಆದರೂ ಕೆಲವರು ವಿನಾಕಾರಣ ಹೊರಗೆ ಸುತ್ತಾಡುತ್ತಿದ್ದಾರೆ. ಕರೋನಾದ ಗಂಭೀರತೆಯನ್ನು ಅರಿತುಕೊಳ್ಳದೆ ಇಂತಹ ಜನರಿಂದಾಗಿ ಕರೋನಾ ಮತ್ತಷ್ಟು ಹರಡುವ ಅಪಾಯವಿದೆ.

ಕರೋನಾದ ಹಿಡಿತದಿಂದ ನಮ್ಮನ್ನು ಮಾತ್ರವಲ್ಲದೆ ನಮ್ಮ ಸುತ್ತಲಿರುವವರನ್ನು ಸಹ ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇನ್ನಾದರೂ ಸಾರ್ವಜನಿಕರು ಸರ್ಕಾರದ ಜೊತೆಗೆ ಕೈಜೋಡಿಸಿ ಕರೋನಾ ಹರಡದಂತೆ ತಡೆಯೋಣ, ಮನೆಯಲ್ಲೇ ಇರೋಣ.
ಮೂಲ: ಇಂಡಿಯಾಟೈಮ್ಸ್


Click it and Unblock the Notifications