21 ಜನರ ಸಾವಿಗೆ ಕಾರಣವಾದ ಬಸ್ ದುರಂತಕ್ಕೆ ಕಾರಣವೇನು ಗೊತ್ತಾ?
ಕೊಯಮತ್ತೂರಿನ ಅವಿನಾಶಿಯ ಬಳಿ ಇಂದು ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕನಿಷ್ಟ 21 ಮಂದಿ ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ ಹಲವಾರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತವು ಸಾರ್ವಜನಿಕರಲ್ಲಿ ಹಲವಾರು ಪ್ರಶ್ನೆಯನ್ನು ಹುಟ್ಟುಹಾಕಿದೆ.

ಕೇರಳ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ವೊಲ್ವೊ ಲಗ್ಷುರಿ ಬಸ್ ಬೆಂಗಳೂರಿನಿಂದ ಕೊಯಮತ್ತೂರು, ಎರ್ನಾಕುಲಂ ಮಾರ್ಗವಾಗಿ ತಿರುವನಂತಪುರಕ್ಕೆ ಹೊರಟಿತ್ತು. ಈ ಮಲ್ಟಿ ಆಕ್ಸೆಲ್ ಲಗ್ಷುರಿ ಬಸ್ಸಿನಲ್ಲಿ 48 ಜನ ಪ್ರಯಾಣಿಕರಿದ್ದರು. ಈ ಬಸ್ ಮುಂಜಾನೆ 3.15ರ ಸಮಯದಲ್ಲಿ ಅವಿನಾಶಿ ಬಳಿಯಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿತ್ತು.

ಇದೇ ವೇಳೆ ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಬರುತ್ತಿದ್ದ ಹೆವಿ ಡ್ಯೂಟಿ ಕಂಟೇನರ್ ಟ್ರಕ್ ನಿಯಂತ್ರಣ ತಪ್ಪಿ ರಸ್ತೆಯ ಇನ್ನೊಂದು ಬದಿಗೆ ಬಿದ್ದಿದೆ. ಈ ಟ್ರಕ್ ಡಿವೈಡರ್ನಿಂದ ಹೊರಗೆ ಬಂದು ಲಗ್ಷುರಿ ಬಸ್ಸಿಗೆ ಗುದ್ದಿದೆ.

ಇದರಿಂದಾಗಿ ಬಸ್ಸಿನ ಬಲಭಾಗವು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಈ ಅಪಘಾತದಲ್ಲಿ 16 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, 5 ಜನರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.

ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಅಪಘಾತ ಸಂಭವಿಸಿದಾಗ ಟ್ರಕ್ನ ಡ್ರೈವರ್ ನಿದ್ದೆ ಮಂಪರಿನಲ್ಲಿದ್ದನು ಎಂದು ಹೇಳಲಾಗಿದೆ. ತನ್ನ ಅಚಾತುರ್ಯದಿಂದಾಗಿ ಈತ 21 ಜನರ ಸಾವಿಗೆ ಕಾರಣನಾಗಿದ್ದಾನೆ.

ಇದರ ಜೊತೆಗೆ ಟೈಲ್ಸ್ ಗಳಿಂದ ಭರ್ತಿಯಾಗಿದ್ದ ಈ ಟ್ರಕ್ ಅನ್ನು ಅವಿನಾಶಿ ಬಳಿ ವೇಗವಾಗಿ ಚಲಾಯಿಸುತ್ತಿದ್ದ ಎಂದು ತಿಳಿದು ಬಂದಿದೆ. ವೇಗವಾಗಿ ಟ್ರಕ್ ಅನ್ನು ಚಲಾಯಿಸಿದ ಕಾರಣಕ್ಕೆ ಟ್ರಕ್ ಆತನ ನಿಯಂತ್ರಣಕ್ಕೆ ಸಿಗದೇ ಡಿವೈಡರ್ಗೆ ಗುದ್ದಿ ರಸ್ತೆಯ ಇನ್ನೊಂದು ಬದಿಗೆ ಬಿದ್ದಿದೆ.

ಟ್ರಕ್ ಬಿದ್ದ ರಭಸಕ್ಕೆ ಟಯರ್ಗಳು ಸ್ಪೋಟಗೊಂಡಿವೆ. ಇದರಿಂದಾಗಿ ಟ್ರಕ್ ಬಸ್ನ ಒಳಗೆ ನುಗ್ಗಿದೆ. ಟ್ರಕ್ನ ಮುಂಭಾಗಕ್ಕೆ ಯಾವುದೇ ಹಾನಿಯಾಗಿಲ್ಲ. ಬದಲಿಗೆ ಬಸ್ ಟ್ರಕ್ನ ಹಿಂಭಾಗಕ್ಕೆ ಬಡಿದಿದೆ. ಈ ಅಪಘಾತವು ರಾತ್ರಿ ವೇಳೆಯಲ್ಲಿ ಸಂಭವಿಸಿದ್ದು, ಯಾವುದೇ ರೀತಿಯ ಟ್ರಾಫಿಕ್ ಇರಲಿಲ್ಲ.

ಕಾನೂನಿನ ಪ್ರಕಾರ ಹೆಚ್ಚು ತೂಕವನ್ನು ಹೊಂದಿರುವ ಟ್ರಕ್ ಹಾಗೂ ಲಾರಿಗಳು ರಸ್ತೆಯ ಎಡಭಾಗದಲ್ಲಿ ಚಲಿಸಬೇಕು. ಆದರೆ ಬಹುತೇಕ ಟ್ರಕ್ ಡ್ರೈವರ್ಗಳು ಈ ನಿಯಮವನ್ನು ಗಾಳಿಗೆ ತೂರಿ, ರಸ್ತೆಯ ಬಲಭಾಗದಲ್ಲಿ ಡ್ರೈವ್ ಮಾಡುತ್ತಾರೆ.

ನಿದ್ದೆ ಮಂಪರಿನಲ್ಲಿದ್ದ ಡ್ರೈವರ್ ಎಡಭಾಗಕ್ಕೆ ಟ್ರಕ್ ಅನ್ನು ತಿರುಗಿಸುವ ಬದಲು ಬಲಭಾಗಕ್ಕೆ ತಿರುಗಿಸಿದ್ದಾನೆ. ಎಡಭಾಗಕ್ಕೆ ಟ್ರಕ್ ಅನ್ನು ತಿರುಗಿಸಿದ್ದರೆ ಈ ಭಾರೀ ಪ್ರಮಾಣದ ಅನಾಹುತ ಸಂಭವಿಸುವುದು ತಪ್ಪುತ್ತಿತ್ತು. ಈ ದುರ್ಘಟನೆಗೆ ಕಾರಣನಾದ ಟ್ರಕ್ ಡ್ರೈವರ್ ಹೇಮರಾಜ್ನನ್ನು ಬಂಧಿಸಲಾಗಿದೆ.

ಈ ಘಟನೆಗೆ ಕಾರಣವೇನೆಂಬುದು ಸಂಪೂರ್ಣ ತನಿಖೆಯ ನಂತರ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ನಂತರವಾದರೂ ಭಾರೀ ತೂಕದ ವಾಹನವನ್ನು ಚಲಾಯಿಸುವ ಡ್ರೈವರ್ಗಳು ಎಚ್ಚೆತ್ತುಕೊಂಡು ಸರಿಯಾದ ಮಾರ್ಗದಲ್ಲಿ ವಾಹನ ಚಲಾಯಿಸುತ್ತಾರೆಯೇ ಕಾದು ನೋಡಬೇಕಿದೆ.


Click it and Unblock the Notifications