Ayodhya Water Metro: ಪವಿತ್ರ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ವಾಟರ್ ಮೆಟ್ರೋ ಸಂಚಾರ.. ವಿಶೇಷತೆಗಳೇನು?
ಅಯೋಧ್ಯೆಯಲ್ಲಿ (Ayodhya) ರಾಮಮಂದಿರ ನಿರ್ಮಾಣ ಕಾರ್ಯ ಮುಕ್ತಾಯಗೊಳ್ಳುವ ಹಂತಕ್ಕೆ ಬಂದಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಮುಂದಾಳತ್ವದ ಕೇಂದ್ರ ಸರ್ಕಾರವು ಈ ಪವಿತ್ರ ನಗರವನ್ನು ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಅತ್ಯಾಧುನಿಕ ಸೌಕರ್ಯಗಳೊಂದಿಗೆ ಸಮ್ಮಿಲನಗೊಳಿಸುತ್ತಿದೆ.
ಹೊಸ ವಿಮಾನ ನಿಲ್ದಾಣ ಮತ್ತು ವಾಟರ್ ಮೆಟ್ರೋನಂತಹ ಸೌಲಭ್ಯವನ್ನು ಕಲ್ಪಿಸುವ ಮೂಲಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲಾಗುತ್ತಿದ್ದು, ಅಯೋಧ್ಯೆಯನ್ನು ವಿಶ್ವ ದರ್ಜೆಯ ನಗರವನ್ನಾಗಿಲು ಎರಡು ಸರ್ಕಾರಗಳು ಶ್ರಮಿಸುತ್ತಿವೆ. ಇಲ್ಲಿ ನಿರ್ಮಿಸುತ್ತಿರುವ ವಿಮಾನ ನಿಲ್ದಾಣ (Ayodhya airport) ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಡಿಸೆಂಬರ್ 25ರಂದು ಲೋಕಾರ್ಪಣೆಯಾಗುವ ಸಾಧ್ಯತೆಯಿದೆ. ಡಿಸೆಂಬರ್ 30ರಂದು ಮೊದಲ ವಿಮಾನ ಸಂಚರಿಸಲಿದೆ ಎಂದು ವರದಿಯಾಗಿದೆ.

ಶೀಘ್ರದಲ್ಲಿಯೇ ಅಯೋಧ್ಯೆಯ ಸರಯೂ ನದಿಯಲ್ಲಿ (Sarayu River) ವಾಟರ್ ಮೆಟ್ರೋ (Water Metro) ಕೂಡ ಸಂಚಾರ ನಡೆಸಲಿದೆ. ಈ ವರ್ಷದ ಏಪ್ರಿಲ್ನಲ್ಲಿ ದೇಶದಲ್ಲಿ ಮೊದಲ ವಾಟರ್ ಮೆಟ್ರೋಗೆ ಕೇರಳದ ಕೊಚ್ಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ವಾಟರ್ ಮೆಟ್ರೋ ಸಣ್ಣ ಹಡಗಿನ ರೀತಿ ಇರಲಿದ್ದು, ತೀರ ಪ್ರದೇಶಗಳ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ವಾಟರ್ ಮೆಟ್ರೋ ನದಿ ಅಥವಾ ಸಮುದ್ರ ಮಾರ್ಗದಲ್ಲಿ ಸಂಚರಿಸಿ, ಕರಾವಳಿ ಹಾಗೂ ನದಿ ಪಾತ್ರದಲ್ಲಿರುವ ಪಟ್ಟಣಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಆಕರ್ಷವಾಗಿ ವಿನ್ಯಾಸಗೊಳಿಸಲಾದ ವಾಟರ್ ಮೆಟ್ರೋ ವೇಗವಾಗಿ ಚಲಿಸುವ ಮೂಲಕ ಪ್ರಯಾಣಿಕರನ್ನು ಬೇಗನೇ ಗಮ್ಯ ಸ್ಥಾನವನ್ನು ತಲುಪಿಸುತ್ತಿದೆ. ಜೊತೆಗೆ ರಸ್ತೆಗಳಲ್ಲಿ ಉಂಟಾಗುವ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ.
ಅಯೋಧ್ಯೆಯಲ್ಲಿ 2024ರ ಜನವರಿ 22ರಂದು ನೂತನವಾಗಿ ನಿರ್ಮಿಸಲಾಗಿರುವ ರಾಮ ಮಂದಿರದಲ್ಲಿ 'ರಾಮ ಲಲ್ಲಾ' ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅಂದೇ ಪ್ರಧಾನಿ ನರೇಂದ್ರ ಮೋದಿ ಅವರು, ವಾಟರ್ ಮೆಟ್ರೋವನ್ನು ಲೋಕಾರ್ಪಣೆಗೊಳಿಸುವ ನೀರಿಕ್ಷೆಯಿದೆ. ವಾಟರ್ ಮೆಟ್ರೋ ಸರಯು ನದಿಯಲ್ಲಿ ಗುಪ್ತರ್ ಘಾಟ್ ಮತ್ತು ರಾಮ್ ಕಿ ಪೈಡಿ ನಡುವೆ ಸಂಚರಿಸಲಿದೆ.
ಇದು ಅಯೋಧ್ಯೆಯನ್ನು ಧಾರ್ಮಿಕ ಪ್ರವಾಸಿ ತಾಣವನ್ನಾಗಿ ಮಾಡಲು ಸಹಾಯಕವಾಗಿದ್ದು, ವಾಟರ್ ಮೆಟ್ರೋದಲ್ಲಿ ಏಕ ಕಾಲದಲ್ಲಿ 50 ಮಂದಿ ಪ್ರಯಾಣಿಸಬಹುದು. ಸೌರಶಕ್ತಿ (Solar Power) ನೆರವಿನಿಂದ ಈ ವಾಟರ್ ಮೆಟ್ರೋ ಚಲಿಸಲಿದ್ದು, ಪ್ರವಾಸಿಗರಿಂದ ಹೆಚ್ಚಿನ ಬೇಡಿಕೆ ಬಂದರೆ, ವಾಟರ್ ಮೆಟ್ರೋಗಳ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಿಸಲು ಇಲ್ಲಿನ ಆಡಳಿತ ತೀರ್ಮಾನ ಮಾಡಿದೆ ಎನ್ನಲಾಗಿದೆ.
ಶೀಘ್ರದಲ್ಲೇ ಅಯೋಧ್ಯೆಯಿಂದ ಆನಂದ್ ವಿಹಾರ್ಗೆ (ದೆಹಲಿ) ಲಕ್ನೋ ಮಾರ್ಗವಾಗಿ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ರೈಲು ಸಹ ಓಡಾಟ ನಡೆಸಲಿದೆ. ಈ ಸಂಬಂಧ ರೈಲ್ವೆ ಇಲಾಖೆಯು ಕೆಲವೇ ದಿನಗಳಲ್ಲಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದ್ದು, ಹೊಸ ರೈಲಿನ ರೇಕ್ಗಳನ್ನು (ಬೋಗಿಗಳು) ಡಿಸೆಂಬರ್ 16ರೊಳಗೆ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು, 8 ಗಂಟೆಗಳಲ್ಲಿ ಲಕ್ನೋ ಮಾರ್ಗವಾಗಿ ಅಯೋಧ್ಯೆಯಿಂದ ಆನಂದ್ ವಿಹಾರ್ ತಲುಪುತ್ತದೆ. ಸದ್ಯ, ಅಯೋಧ್ಯೆಯಲ್ಲಿ ಈ ರೈಲಿನ ನಿರ್ವಹಣೆಗೆ ಯಾವುದೇ ವ್ಯವಸ್ಥೆ ಇಲ್ಲದಿರುವುದರಿಂದ ಆನಂದ್ ವಿಹಾರ್ಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಅತ್ಯಾಧುನಿಕ ಸೌಕರ್ಯವನ್ನು ಹೊಂದಿದ್ದು, ಸಂಪೂರ್ಣ ಎಸಿ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲುಗಳನ್ನು ಒಳಗೊಂಡಿವೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications