National highway: 'ಬಾಹುಬಲಿ' ಬೇಲಿಗೆ ಶೀಘ್ರ ಸಾಕ್ಷಿಯಾಗಲಿವೆ ಎಕ್ಸ್ಪ್ರೆಸ್ವೇ, ರಾಷ್ಟ್ರೀಯ ಹೆದ್ದಾರಿಗಳು
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ಜಾನುವಾರುಗಳ ಸಾವನ್ನು ತಡೆಯಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, 'ಬಾಹುಬಲಿ' ಬೇಲಿ ನಿರ್ಮಾಣಕ್ಕೆ ಮುಂದಾಗಿದ್ದು ಆ ಕೆಲಸದಲ್ಲಿ ನಿರತವಾಗಿದೆ. ಈ ಬಗ್ಗೆ ರಾಜ್ಯಸಭೆ ಸಂಸದರೊಬ್ಬರು ಕೇಳಿದ ಪ್ರಶ್ನೆವೊಂದಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉತ್ತರಿಸಿದ್ದಾರೆ.
ಎಕ್ಸ್ಪ್ರೆಸ್ವೇಗಳು (expressways) ಮತ್ತು ರಾಷ್ಟ್ರೀಯ ಹೆದ್ದಾರಿಗಳ (national highways) ಉದ್ದಕ್ಕೂ ಬಿದಿರಿನಿಂದ (bamboo) ಮಾಡಲಾಗಿರುವ 'ಬಾಹುಬಲಿ' ಬೇಲಿಯನ್ನು (Bahu Balli fences) ನಿರ್ಮಾಣ ಮಾಡಲಾಗುವುದು. ಛತ್ತೀಸ್ಗಢದಲ್ಲಿ ಪ್ರಾಯೋಗಿಕ ಯೋಜನೆಯ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬುಧವಾರ ರಾಜ್ಯಸಭೆಗೆ ತಿಳಿಸಿದ್ದಾರೆ. ಇದು, ಉಕ್ಕಿನ ಪರ್ಯಾಯವಾಗಿದ್ದು, ಪರಿಸರ ಸ್ನೇಹಿಯು ಆಗಿರಲಿದೆ ಎಂದಿದ್ದಾರೆ.

ಛತ್ತೀಸ್ಗಢದಲ್ಲಿ ಪ್ರಾಯೋಗಿಕವಾಗಿ ನಡೆಸುವ ಕಾಮಗಾರಿ ಯಶಸ್ವಿಯಾದರೆ, ಅದನ್ನು ದೇಶಾದ್ಯಂತ ವಿಸ್ತರಿಸಲಾಗುವುದು. ಮೊದಲ ಬಾರಿಗೆ ಬಾಹುಬಲಿ ಬೇಲಿಯನ್ನು ನಿರ್ಮಾಣ ಮಾಡುತ್ತಿರುವುದರಿಂದ ಅದಕ್ಕಾಗಿ ಎಲ್ಲ ರೀತಿಯ ಅಗತ್ಯ ಸಿದ್ಧತೆಯನ್ನು ನಡೆಸಲಾಗಿದೆ. ಇದು, ಸಂಪೂರ್ಣ ಪರಿಸರ ಸ್ನೇಹಿಯಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ಬಿದಿರಿನ ಉತ್ಪಾದನೆ ಅಧಿಕಗೊಳ್ಳಲಿದ್ದು, ಅಲ್ಲಿನ ಜನರ ಆದಾಯವು ದ್ವಿಗುಣಗೊಳ್ಳುತ್ತದೆ ಎಂದು ಹೇಳಿದ್ದಾರೆ.
ಈ ಬಾಹುಬಲಿ ಬೇಲಿ ಅಳವಡಿಕೆ ಮಾಡುತ್ತಿರುವ ಮುಖ್ಯ ಉದ್ದೇಶ, ಜಾನುವಾರುಗಳ ಪ್ರಾಣ ರಕ್ಷಣೆಯಾಗಿದೆ ಎಂದು ಹೇಳಿರುವ ನಿತಿನ್ ಗಡ್ಕರಿ ಅವರು, ಈಗ ಅಸ್ಸಾಂನ ಬಿದಿರಿನಿಂದ ಎಥನಾಲ್ ಇಂಧನವನ್ನು ಉತ್ಪಾದಿಸಲಾಗುತ್ತಿದ್ದು, ಇದು, ಅಲ್ಲಿನ ಜನರಿಗೆ ಪರ್ಯಾಯ ಉದ್ಯೋಗವಾಗಿದೆ. ಚೀನಾ ದೇಶದ ಆರ್ಥಿಕತೆಗೆ ಬಿದಿರಿನ ಉತ್ಪಾದನೆಯು ದೊಡ್ಡಮಟ್ಟದಲ್ಲಿ ಕೊಡುಗೆ ನೀಡುತ್ತದೆ. ಅದೇ ರೀತಿಯಲ್ಲಿ ಬಿದಿರು ಬೆಳೆಯುವುದರಿಂದ ದೇಶದ ಅರ್ಥ ವ್ಯವಸ್ಥೆ ಸುಧಾರಿಸುತ್ತದೆ ಉಕ್ಕನ್ನು ಉಳಿಸಿದಂತೆ ಆಗುತ್ತದೆ ಎಂದಿದ್ದಾರೆ.
ಬಾಹುಬಲಿ ಬೇಲಿ ನಿರ್ಮಾಣಕ್ಕೆ ಬಳಕೆ ಮಾಡುವ ಬಿದಿರನ್ನು ಕ್ರಿಯೋಸೋಟ್ ಎಣ್ಣೆಯಿಂದ ಸಂಸ್ಕರಿಸಿ, ಕೆಲವು ರಾಸಾಯನಿಕಗಳನ್ನು ಲೇಪಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಅದು ತುಂಬಾ ಗಟ್ಟಿಯಾಗುತ್ತದೆ. ಇದನ್ನು ಜಾನುವಾರುಗಳು ದಾಟಿ ಬರುವುದು ಅಥವಾ ಮುರಿಯುವುದು ಕಷ್ಟ. ಏಕೆಂದರೆ, ಬಿದಿರು ಅಷ್ಟು ಗಟ್ಟಿಯಾಗಿ ಬದಲಾಗಿರುತ್ತದೆ. ಜೊತೆಗೆ ಇದರಿಂದ ಜಾನುವಾರುಗಳಿಗೆ ತೀವ್ರತರದ ಗಾಯಗಳು ಆಗುವುದಿಲ್ಲ.
ಇನ್ನು, ನಿತಿನ್ ಗಡ್ಕರಿ ಅವರು, ಸಾರಿಗೆ ಸಚಿವರಾದ ನಂತರ ಹೆದ್ದಾರಿ ನಿರ್ಮಾಣಕ್ಕೆ ವಿಶೇಷ ಆಸಕ್ತಿಯನ್ನು ತೋರಿದ್ದು, ರಸ್ತೆ ನಿರ್ಮಾಣದಲ್ಲಿ ಕೇಂದ್ರ ಸರ್ಕಾರ ಐತಿಹಾಸಿಕ ಸಾಧನೆ ಮಾಡಿದೆ. ಪ್ರಸ್ತುತ ಭಾರತವು ರಸ್ತೆ ಜಾಲದ ವಿಸ್ತರಣೆಯಲ್ಲಿ ಚೀನಾವನ್ನು ಹಿಂದೆ ತಳ್ಳಿ ದ್ವಿತೀಯ ಸ್ಥಾನಕ್ಕೆ ಬಂದಿದೆ. ಮೊದಲ ಸ್ಥಾನದಲ್ಲಿರುವ ಅಮೆರಿಕದ ಸನಿಹದಲ್ಲಿದೆ. ಪ್ರಸ್ತುತ ದೇಶದಲ್ಲಿ 1.45 ಲಕ್ಷ ಕಿಲೋಮೀಟರ್ ಉದ್ದದ ರಸ್ತೆ ಇರುವುದು ಹೆಮ್ಮೆಯ ವಿಚಾರವಾಗಿದೆ.
2019ರ ಏಪ್ರಿಲ್ ನಿಂದ ಈವರೆಗೆ ದೇಶಾದ್ಯಂತ 30,000 ಕಿಲೋಮೀಟರ್ ಹೆದ್ದಾರಿಯನ್ನು ನಿರ್ಮಿಸಲಾಗಿದ್ದು, ಪ್ರಮುಖವಾಗಿ, ಬೆಂಗಳೂರು - ಮೈಸೂರು, ಮೀರತ್ - ದೆಹಲಿ, ಘಾಜಿಪುರ - ಲಕ್ನೋ ಎಕ್ಸ್ಪ್ರೆಸ್ವೇಗಳು ಸೇರಿವೆ. ಇದಿಷ್ಟೇ ಅಲ್ಲದೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ನಿರ್ಮಾಣದಲ್ಲಿ ಹಲವು ಸಾಧನೆಯನ್ನು ಮಾಡಿದ್ದು, ಏಳು ವಿಶ್ವ ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಟೋಲ್ ಸಂಗ್ರಹವು ಹಲವು ಪಟ್ಟು ಹೆಚ್ಚಳವಾಗಿದೆ.
ದೇಶದಲ್ಲಿ ಈ ಪರಿಪ್ರಮಾಣದಲ್ಲಿ ಹೆದ್ದಾರಿ ಅಭಿವೃದ್ಧಿಯಾಗುತ್ತಿದ್ದು, ಅದರ ಸುರಕ್ಷತೆಯು ಹೆಚ್ಚಿನ ಆದ್ಯತೆಯಾಗಿದೆ. ಆ ಕಾರಣಕ್ಕೆ ಪರಿಸರ ಸ್ನೇಹಿಯಾದ ಬಿದಿರಿನಿಂದ ಮಾಡಲಾಗಿರರುವ ಬಾಹುಬಲಿ ಬೇಲಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದು ಉತ್ತಮ ಬಳವಣಿಗೆಯಾಗಿದೆ. ಅದಕ್ಕಾಗಿ ಎಲ್ಲ ರೀತಿಯ ಪೂರ್ವ ಸಿದ್ಧತೆಗಳೊಂದಿಗೆ ಛತ್ತೀಸ್ಗಢದಲ್ಲಿ ಪ್ರಾಯೋಗಿಕ ಯೋಜನೆಯ ಕಾಮಗಾರಿಗಳು ಆರಂಭವಾಗುತ್ತವೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications