Bangalore Tunnel Road: ಬೆಂಗಳೂರಿನಲ್ಲಿ 18 ಕಿ.ಮೀ ಸುರಂಗ ರಸ್ತೆ... ಟ್ರಾಫಿಕ್ ಕಿರಿಕಿರಿ ಇರಲ್ಲ, ಎಲ್ಲಿ ಬರುತ್ತದೆ?
ಬೆಂಗಳೂರು (Bangalore) ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸಲು 18 ಕಿ.ಮೀ ಉದ್ದದ ಸುರಂಗ ರಸ್ತೆ (Tunnel Road) ನಿರ್ಮಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿವಿಎಂಪಿ) ಮುಂದಾಗಿದೆ. ಈ ಕಾಮಗಾರಿ ನಡೆಸಲು ಬರೊಬ್ಬರಿ ರೂ.8,100 (ಪ್ರತಿ ಕಿಲೋಮೀಟರ್ಗೆ ರೂ. 450 ಕೋಟಿ) ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಜನವರಿ 1, 2025ರೊಳಗೆ ಯೋಜನೆಯನ್ನು ಪೂರ್ಣಗೊಳಿಸಲು ಬಿಬಿಎಂಪಿ ಯೋಜಿಸಿದೆ ಎಂದು 'ಇಂಡಿಯಾ ಟುಡೇ' ವರದಿ ಮಾಡಿದೆ.
ಸುರಂಗ ರಸ್ತೆಯು ಹೆಬ್ಬಾಳದಲ್ಲಿರುವ ಎಸ್ಟೀಮ್ ಮಾಲ್ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ಗೆ ಸಂಪರ್ಕವನ್ನು ಕಲ್ಪಿಸಲಿದ್ದು, ಐದು ಪ್ರವೇಶ (Entry) ಹಾಗೂ ನಿರ್ಗಮನ (Exit) ದ್ವಾರಗಳಿರಲಿವೆ. ಈ ಯೋಜಿತ ದ್ವಾರಗಳು ಸಿಲ್ಕ್ ಬೋರ್ಡ್ ಸಮೀಪದ ಕೆಎಸ್ಆರ್ಪಿ ವಸತಿ ಸಮುಚ್ಚಯ, ಲಾಲ್ಬಾಗ್, ಬೆಂಗಳೂರು ಗಾಲ್ಫ್ ಕ್ಲಬ್, ಅರಮನೆ ಮೈದಾನ ಹಾಗೂ ಹೆಬ್ಬಾಳದ ಎಸ್ಟೀಮ್ ಮಾಲ್ ಮುಂದಿನ ಸರ್ಕಾರಿ ಜಾಗದಲ್ಲಿರಲಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿಯ ಚೀಫ್ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಅವರು, 'ಕಾರ್ಯಸಾಧ್ಯತಾ ವರದಿ ಪ್ರಕಾರ, ಹೆಬ್ಬಾಳದ ಎಸ್ಟೀಮ್ ಮಾಲ್ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಡುವಿನ ರಸ್ತೆಯಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುತ್ತದೆ. ಅದನ್ನು ನಿವಾರಿಸಲು ಸುರಂಗ ರಸ್ತೆ ಉತ್ತಮ ಪರ್ಯಾಯವಾಗಿದೆ' ಎಂದು ಹೇಳಿದ್ದಾರೆ.
'ಎಲಿವೇಟೆಡ್ ಕಾರಿಡಾರ್ ಅನ್ನು ಬದಲಿ ಆಯ್ಕೆಯಾಗಿ ಪರಿಗಣಿಸಲಾಗುತ್ತದೆ. ಆದಾಗ್ಯೂ ಈ ರೀತಿಯ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಮರಗಳನ್ನು ಕಡಿಯಬೇಕು, ಭೂಸ್ವಾಧೀನ ಪ್ರಕ್ರಿಯೆ ಹಾಗೂ 3 ರಿಂದ 4 ವರ್ಷಗಳವರೆಗೆ ಸಂಚಾರ ಅಸ್ತವ್ಯಸ್ತದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಸುರಂಗ ರಸ್ತೆಯ ನಿರ್ವಹಣೆಗೆ ಬಳಕೆದಾರರಿಂದ ಶುಲ್ಕವನ್ನು ಸಹ ವಿಧಿಸಲಾಗುತ್ತದೆ. ನಿರ್ದಿಷ್ಟ ಮೊತ್ತವನ್ನು ಇನ್ನೂ ನಿರ್ಧರಿಸಿಲ್ಲ' ಎಂದು ಅವರು ತಿಳಿಸಿದ್ದಾರೆ.

ಸದ್ಯ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೆ ಪ್ರಯಾಣಿಸಲು 1 ಗಂಟೆಗೂ ಹೆಚ್ಚಿನ ಸಮಯಾವಕಾಶ ಬೇಕಾಗುತ್ತದೆ. ಸುರಂಗ ರಸ್ತೆ ನಿರ್ಮಾಣಗೊಂಡ ಬಳಿಕ, ಇದು 20 ರಿಂದ 25 ನಿಮಿಷಗಳಿಗೆ ಕಡಿಮೆಯಾಗಲಿದೆ. ಈ ಸುರಂಗದ ಎತ್ತರವು 10 ಮೀಟರ್ ಇರಲಿದೆ. ವಾಹನಗಳು ಗಂಟೆಗೆ 40 ರಿಂದ 60 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಓಡಾಟ ನಡೆಸಲು ಸಾಧ್ಯವಾಗುವಂತೆ ನಿರ್ಮಿಸಲಾಗುತ್ತಿದ್ದು, ಹೆಚ್ಚಿನ ಮರಗಳನ್ನು ಕಡಿಯುವ ಅನಿವಾರ್ಯತೆಯೂ ಇಲ್ಲ ಎಂದು ತಿಳಿದುಬಂದಿದೆ.
ಸುರಂಗ ರಸ್ತೆ ನಿರ್ಮಾಣಗೊಂಡ ಮೇಲೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಟ್ರಾಫಿಕ್ ಕಿರಿಕಿರಿಯು ದೂರವಾಗುತ್ತದೆ. ಆದರೆ ಈ ರಸ್ತೆ ಕಾಮಗಾರಿಯನ್ನು ಮಾಡಲು ಹೆಚ್ಚಿನ ಹಣ ವ್ಯಯಿಸಬೇಕಾಗಿದ್ದು, ಇದೇ ಖರ್ಚಿನಲ್ಲಿ ಮೆಟ್ರೋ (Metro) ಮಾರ್ಗಗಳನ್ನು ನಿರ್ಮಿಸಿದರೆ ಅಧಿಕ ಸಂಖ್ಯೆಯಲ್ಲಿ ಜನಸಾಮಾನ್ಯರು ಪ್ರಯಾಣಿಸಬಹುದು ಎಂದು ತಜ್ಞರು ಹೇಳುತ್ತಾರೆ.
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ಸಂಚಾರ ದಟ್ಟಣೆ ಸಮಸ್ಯೆಯನ್ನು ನಿವಾರಿಸಲು ಹೆಬ್ಬಾಳ ಹಾಗೂ ಬಸವೇಶ್ವರ ವೃತ್ತದ ನಡುವೆ ಉಕ್ಕಿನ ಮೇಲ್ಸೇತುವೆ (Steel Flyover) ನಿರ್ಮಿಸಲು ಪ್ರಸ್ತಾಪಿಸಲಾಗಿತ್ತು. ಈ ಮೇಲ್ಸೇತುವೆ ನಿರ್ಮಾಣದಿಂದ ಪರಿಸರಕ್ಕೆ ಹೆಚ್ಚಿನ ಹಾನಿಯಾಗುತ್ತದೆ ಎಂದು ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆ, ಈ ಯೋಜನೆಯನ್ನು ಕೈಬಿಡಲಾಗಿತ್ತು.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications